ವಿಶ್ವದ ಅತ್ಯಂತ ಹಿರಿಯ ಬ್ಲಾಗರ್‌ನಿಂದ ಕನ್ನಡಕ್ಕೆ ಕಾಮೆಂಟ್!

ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆಯುಳ್ಳ ಬೂಟಿ ಸಿಂಗ್ ಬಗ್ಗೆ ಕಳೆದ ವರ್ಷದ ಜೂನ್ 28ರಂದು ಒಂದು ಪೋಸ್ಟ್ ಹಾಕಿದ್ದೆ. ಹೆಚ್ಚಿನವರು ಓದಿರಲಿಕ್ಕಿಲ್ಲ. ಆ ಲೇಖನದ ಲಿಂಕ್ ಇಲ್ಲಿದೆ.

ಅವರು ಅದು ಹೇಗೋ ಹುಡುಕಿಕೊಂಡು ಬಂದು ನನ್ನ ಬ್ಲಾಗಿಗೂ ಕಾಮೆಂಟ್ ಹಾಕಿದ್ದಾರೆ. ಅದಕ್ಕಾಗಿ ಈ ದಿನ ಖುಷಿ.

ಅವರು ಹುಟ್ಟಿದ್ದು ಗಯಾನದ ಬಕ್ಸ್‌ಟನ್‌ನಲ್ಲಿ. ಭಾರತದಿಂದ ವಲಸೆ ಹೋದ ಕುಟುಂಬಕ್ಕೆ ಸೇರಿದವರಾಗಿದ್ದರೂ, ಎಂದಿಗೂ ಭಾರತಕ್ಕೆ ಭೇಟಿ ನೀಡಿಲ್ಲವಂತೆ. ಮಹಾತ್ಮಗಾಂಧಿಯ ಪರಮ ಅನುಯಾಯಿ. ಮಹಾತ್ಮ ಗಾಂಧಿ ಮೃತಪಟ್ಟಾಗ ಕಣ್ಣೀರಿಟ್ಟಿದ್ದರಂತೆ.

ಹೆಲೆನ್ ಕೆಲ್ಲರ್ ಜೀವನದಿಂದ ಪ್ರಭಾವಿತರಾಗಿ ಮೂರು ಕವನ ಸಂಕಲನ ಹೊರತಂದಿದ್ದಾರೆ. 96ರಲ್ಲೂ ಬತ್ತದ ಜೀವನೋತ್ಸಾಹ. ಹಿಂದಿ, ಉರ್ದು ಚೆನ್ನಾಗಿ ಗೊತ್ತಿದೆ. ಅದ್ಭುತ ಎನಿಸಬಹುದಾದ ಭಾಷಾ ಪ್ರೇಮಿ ಅವರು.
ಹೆಚ್ಚು ಹೇಳಿದರೆ ಅವರ ಬಗೆಗೆ ನಿಮ್ಮ ಅನಿಸಿಕೆಗಳು ಡೈವರ್ಟ್ ಆಗಲೂ ಬಹುದು. ಹೀಗಾಗಿ ನೀವೇ ನೋಡಿಬಿಡಿ. ಬ್ಲಾಗಿನ URL ಇಲ್ಲಿದೆ: http://randallbutisingh.wordpress.com/

ಸಿಂಗ್-ಜರ್ದಾರಿ ಭೇಟಿ: ಅಮೆರಿಕ ‘ಒತ್ತಡ’ ತಂತ್ರದ ಫಲವೇ?

ಇತ್ತೀಚಿನ ಕೆಲವೊಂದು ವಿದ್ಯಮಾನಗಳತ್ತ ಕಣ್ಣೋಟ ಹಾಯಿಸಿದರೆ, ಅಮೆರಿಕವು ಒಮ್ಮೆ ಭಾರತದತ್ತ, ಮಗದೊಮ್ಮೆ ಪಾಕಿಸ್ತಾನದತ್ತ ವಾಲುತ್ತಾ, ಈ ಜಾಗತಿಕ ಆರ್ಥಿಕ ಸಂಕಷ್ಟ ದಿನಗಳಲ್ಲಿಯೂ ಜಗತ್ತಿನ ಪ್ರಬಲ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಅಸ್ಥಿರಗೊಳಿಸಲು ಒಳಗಿಂದೊಳಗೆಯೇ ಕಾರ್ಯತಂತ್ರ ರೂಪಿಸುತ್ತಿದೆಯೇ ಎಂಬ ಬಗ್ಗೆ ಶಂಕೆ ಮೂಡುತ್ತಿವುದು ಸಹಜ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಅಮೆರಿಕದ ಆರ್ಥಿಕ ಸ್ಥಿತಿ ಸಪಾಟಾಗಿ ಹೋಗಿದೆ. ಅಲ್ಲಿನ ಕಂಪನಿಗಳ ಲಾಭಕೋರ ಮನಸ್ಥಿತಿಯಿಂದ, ಸ್ವಯಂಕೃತಾಪರಾಧದಿಂದಾಗಿ ಆರ್ಥಿಕ ಸಂಕಷ್ಟವು ಅಮೆರಿಕಕ್ಕೆ, ಆ ಮೂಲಕ ವಿಶ್ವಕ್ಕೇ ಹಂದಿ ಜ್ವರದ ವೈರಸ್ ರೀತಿ ಹರಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಅಮೆರಿಕ ಯಾವ ಪರಿ ಹೊಡೆತ ತಿಂದಿದೆಯೆಂದರೆ, ಅಲ್ಲಿ ಸಾವಿರಾರು ಜನ ಬೀದಿಗೆ ಬಿದ್ದಿದ್ದಾರೆ. ವಿಶ್ವದ ಹಿರಿಯಣ್ಣ ಎಂಬ ಪಟ್ಟವಂತೂ ಕುಸಿದು ಬಿದ್ದು ನರಳಾಡುತ್ತಿದೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಇದರ ಅರಿವಿದೆ. ಅಂತೆಯೇ, ತಮ್ಮ ರಾಷ್ಟ್ರಕ್ಕೆ ಈ ಪರಿ ಹೊಡೆತ ಬಿದ್ದರೂ ಚೀನಾ ಮತ್ತು ಭಾರತಗಳು ಎದೆ ಸೆಟೆದು ನಿಂತಿರುವುದನ್ನು ನೋಡುವುದು ಅಮೆರಿಕಕ್ಕೆ ಆಗುತ್ತಿಲ್ಲ. ಹೀಗಾಗಿ, ಏನಾದರೂ ಮಾಡಿ ಈ ಉಪಖಂಡದ ಬೆಳವಣಿಗೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕವೂ ಕಾರ್ಯತಂತ್ರ ಹೆಣೆಯುತ್ತಿದೆಯೇ ಎಂಬ ಪ್ರಶ್ನಾರ್ಥಕ ಚಿಹ್ನೆ ದಪ್ಪವಾಗಿಯೇ ಎದ್ದುಗಾಣುತ್ತಿರುವುದು ಸುಳ್ಳಲ್ಲ.

ಒಂದು ಬಾರಿ ಹಿಂದೆ ತಿರುಗಿ ನೋಡಿ. ಇತ್ತೀಚೆಗೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಬಾಯಿಂದ ದಿಟ್ಟ ನಿರ್ಧಾರವೊಂದು ಬಂದಿತ್ತು. ಪಾಕಿಸ್ತಾನವು ಭಾರತವಿರೋಧಿ ಭಯೋತ್ಪಾದಕ ಬಣಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮತ್ತಷ್ಟು ನಿಖರ ಸಾಕ್ಷ್ಯಾಧಾರ ದೊರೆಯದ ಹೊರತು, 26/11 ಮುಂಬೈ ದಾಳಿ ಬಳಿಕ ನಿಂತು ಹೋಗಿದ್ದ ಶಾಂತಿ ಮಾತುಕತೆ ಮುಂದುವರಿಕೆಯ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದರವರು.

ಮೊನ್ನೆ ಮೊನ್ನೆ ಅಮೆರಿಕದ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಭಾರತಕ್ಕೆ ಬಂದಿದ್ದರಲ್ಲ, ಅವರು ಬಂದು, ನಮ್ಮ ಪ್ರಧಾನಿ ಕೈಗೆ ಕೊಟ್ಟ ‘ಒಬಾಮ ಸಂದೇಶ’ ಪತ್ರದಲ್ಲಿ ಏನಿದ್ದಿರಬಹುದು ಎಂಬ ಕುತೂಹಲವೇ ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದನ್ನು ನಮ್ಮ ಪ್ರಿಯ ಓದುಗರೂ ಗಮನಿಸಿದ್ದಿರಬಹುದು. ಅದರಲ್ಲಿ ‘ಪಾಕಿಸ್ತಾನ ಜೊತೆಗೆ ಮಾತುಕತೆ ಮುಂದುವರಿಸಿ’ ಎಂಬ ಒತ್ತಡ ತಂತ್ರವೂ ಒಳಗೊಂಡಿತ್ತೇ ಎಂಬ ಬಗ್ಗೆ ಕೇಂದ್ರವೂ ಬಾಯಿ ಬಿಡುತ್ತಿಲ್ಲ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳುವ ಪ್ರಕಾರ, ಅದರಲ್ಲಿ ಕೆಲವೊಂದು “ಸಲಹೆ”ಗಳಿದ್ದವು. ಯಾವುದೇ ಒತ್ತಡ ಇರಲಿಲ್ಲವಂತೆ.

ಆ ಬಳಿಕದ ಬೆಳವಣಿಗೆ, ರಷ್ಯಾದಲ್ಲಿ ನಡೆದ ಬ್ರಿಕ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾಗಳ ಮೊದಲಕ್ಷರ) ರಾಷ್ಟ್ರಗಳ ಸಮಾವೇಶದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಪಾಕ್ ಅಧ್ಯಕ್ಷ ಜರ್ದಾರಿ ಕೈಕುಲುಕಾಟದ ಭೇಟಿ! ಮತ್ತೆ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು, ಹೋರಾಡಲು ಪಾಕಿಸ್ತಾನವು ಸಮಯಾವಕಾಶ ಕೇಳಿರುವುದರಿಂದ ನಾವು ಅದಕ್ಕೆ ಅವಕಾಶ ಕೊಟ್ಟಿದ್ದೇವೆ ಎಂದು ಬುಧವಾರ ಸಿಂಗ್ ರಷ್ಯಾದಿಂದ ಮರಳುವ ಹಾದಿಯಲ್ಲಿ ಘೋಷಿಸಿಬಿಟ್ಟಿದ್ದಾರೆ.

ಮಾತುಕತೆಯೇ ಇಲ್ಲ ಎಂದವರ ನಿಲುವು ಮೃದುವಾಯಿತೇ? ಎಂಬ ಶಂಕೆಗೂ ಕಾರಣವಿದೆ. ಸಿಂಗ್-ಜರ್ದಾರಿ ಮೊನ್ನೆ ಮಾತನಾಡಿದರು. ಮುಂದಿನ ತಿಂಗಳು ಈಜಿಪ್ಟ್‌ನಲ್ಲಿ ನಡೆಯುವ ಅಲಿಪ್ತ ರಾಷ್ಟ್ರಗಳ ಸಮಾವೇಶದ ಪಾರ್ಶ್ವದಲ್ಲಿ ಮತ್ತೊಮ್ಮೆ ಭೇಟಿಯಾಗಲು ಇಬ್ಬರೂ ನಿರ್ಧರಿಸಿದ್ದಾರೆ, ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯೂ ರಷ್ಯಾದಲ್ಲಿ ನಡೆದಿದ್ದು, ಅದು ಕೂಡ ಮುಂದುವರಿಯಲಿದೆ. ಇದು ಭಾರತ-ಪಾಕ್ ನಡುವಣ ಶಾಂತಿ ಮಾತುಕತೆಯ ಮುಂದುವರಿಕೆಯೇ ಅಲ್ಲವೇ? ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ನೀಡಿದ ಉತ್ತರ ‘ಅಲ್ಲ’. ಪಾಕಿಸ್ತಾನ ಏನು ಮಾಡಿದೆ, ನಾವೇನು ಮಾಡಬಹುದು ಎಂಬುದರ ಕುರಿತು ಮಾಹಿತಿ ವಿನಿಮಯ ಮಾತ್ರವಂತೆ.

2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಕಷ್ಟಪಟ್ಟು ಸಂಗ್ರಹಿಸಿದ್ದ ಸ್ಪಷ್ಟ ಸಾಕ್ಷ್ಯಾಧಾರಗಳನ್ನೆಲ್ಲಾ ಪಾಕಿಸ್ತಾನವು, ಒಪ್ಪಿಕೊಳ್ಳುವಂತೆ ಜಾಗತಿಕ ಒತ್ತಡದ ಹೊರತಾಗಿಯೂ, ‘ಇದು ಸಾಕಾಗುವುದಿಲ್ಲ’ ಎಂದು ಝಾಡಿಸಿ ಒದ್ದುಬಿಡುವಷ್ಟರ ಮಟ್ಟಕ್ಕೆ ತಲೆ ಎತ್ತಿ ನಿಂತದ್ದು ಹೇಗೆ? ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಒಬಾಮ ನಡುವೆ ನಡೆದ ಮಾತುಕತೆಯ ಫಲಶ್ರುತಿ ಇದು ಆಗಿರಬಹುದೇ?

ಭಾರತದ ಬಳಿ ದಿಟ್ಟವಾದ, ಬಲವಾದ ಸಾಕ್ಷ್ಯಾಧಾರಗಳಿವೆ. ಹೀಗಾಗಿ, ಮೊನ್ನೆ ಮೊನ್ನೆಯಷ್ಟೇ ರಚನೆಗೊಂಡ ಯುಪಿಎ-II ಸರಕಾರವು, “ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸದೆ ಮಾತುಕತೆಯೇ ಇಲ್ಲ” ಎಂದು ಸ್ಪಷ್ಟ ಶಬ್ದಗಳಲ್ಲಿ ಉಚ್ಚರಿಸಿತ್ತು. ಇದು ಪಾಕಿಸ್ತಾನವನ್ನು ಕಂಗೆಡಿಸಿತು. ಅಮೆರಿಕಕ್ಕೆ ದೂರು ಹೋಗಿದ್ದಿರಲೂಬಹುದು. ಕಾಶ್ಮೀರ ವಿವಾದ ಪ್ರಸ್ತಾಪಿಸಿ, ಉಭಯ ರಾಷ್ಟ್ರಗಳ ನಡುವೆ ಕಾಶ್ಮೀರ ವಿವಾದವೇ ದೊಡ್ಡ ಅಡ್ಡಿ ಎಂದು ಈ ಸಮಸ್ಯೆಯನ್ನು ಅಂತಾರಾಷ್ಟ್ರೀಕರಣಗೊಳಿಸಲು ಮತ್ತೊಮ್ಮೆ ಪ್ರಯತ್ನವನ್ನೂ ಪಾಕ್ ಮಾಡಿತು.

ಭಾರತ ಈ ಬಾರಿ ಬಿಡುವುದಿಲ್ಲ ಎಂಬುದು ಬಹುಶಃ ಅಮೆರಿಕಕ್ಕೂ ಮನದಟ್ಟಾಗಿದ್ದಿರಬಹುದು. ತನ್ನ ಬಳಿ ಬೇರೆ ದೇಶಗಳಿಗೆ ಉದಾರ ‘ನೆರವು’ ನೀಡುವಷ್ಟು ನಿಧಿ ಇಲ್ಲ ಎಂಬ ಅರಿವಿದ್ದರೂ, ಪಾಕಿಸ್ತಾನದಲ್ಲಿ ತಾಲಿಬಾನ್, ಅಲ್ ಖಾಯಿದಾ ಮುಂತಾದ ಅದೆಷ್ಟೋ ರಾಶಿ ರಾಶಿ ಉಗ್ರರನ್ನು ಮಟ್ಟ ಹಾಕಲು ಪಡೆಗಳನ್ನು ಮತ್ತು ಹಣಕಾಸು ಪ್ಯಾಕೇಜ್‌ಗಳನ್ನು ಕೂಡ ಘೋಷಿಸತೊಡಗಿತು. ಅಂದರೆ ಮುಂದಿನ ಐದು ವರ್ಷಗಳ ಕಾಲ ಪಾಕಿಸ್ತಾನಕ್ಕೆ ವಾರ್ಷಿಕವಾಗಿ ಒಂದೂವರೆ ಶತಕೋಟಿ ಡಾಲರ್ ಹಣ! (ಪಾಕಿಸ್ತಾನ ಜೊತೆಗೆ ಸಂವರ್ಧಿತ ಪಾಲುದಾರಿಕೆ ಕಾಯ್ದೆ, ಇದು ಸೆನೆಟರ್‌ಗಳಾದ ಜಾನ್ ಎಫ್.ಕೆರಿ ಮತ್ತು ರಿಚರ್ಡ್ ಲೂಗರ್ ಸಿದ್ಧಪಡಿಸಿರುವುದರಿಂದ ಕೆರಿ-ಲೂಗರ್ ಕಾಯ್ದೆ ಎಂಬ ಹೆಸರೂ ಇದೆ). ಒಂದು ಮಾಹಿತಿಯ ಪ್ರಕಾರ, ಅಮೆರಿಕವು ಪಾಕಿಸ್ತಾನಕ್ಕೆ ಈಗಾಗಲೇ 3.2 ಶತಕೋಟಿ ಡಾಲರ್ ನೆರವು ರವಾನಿಸಿ ಆಗಿದೆ.

ಅದೆಲ್ಲ ಒತ್ತಟ್ಟಿಗಿರಲಿ. ಭಾರತ-ಪಾಕ್ ನಡುವೆ ಶಾಂತಿ ನೆಲಸುವುದು ಅಮೆರಿಕಕ್ಕೆ ಬೇಕಿಲ್ಲ. ಶಾಂತಿ ನೆಲೆಸಿದ್ದೇ ಆದಲ್ಲಿ, ಭಾರತವಂತೂ ವಿಶ್ವ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಈ ಸಂಭಾವ್ಯ ರಾಜತಾಂತ್ರಿಕ ಒಗ್ಗಟ್ಟಿನ ಬಲವನ್ನು ಮೂಲದಲ್ಲೇ ಚಿವುಟಬೇಕಿದ್ದರೆ ಇಂಥ ರಾಜಕೀಯ ಆಟಗಳನ್ನು ಆಡಲೇಬೇಕು ಎಂಬುದು ಅಮೆರಿಕಕ್ಕೆ ತಿಳಿದಿದೆ ಎಂಬ ವಾದಕ್ಕೆ ಹುರುಳಿಲ್ಲದಿಲ್ಲ.

ಭಾರತದ ಧ್ವನಿ ಜೋರಾಗುತ್ತಿದೆ ಎಂದಾದಾಗ ಪಾಕಿಸ್ತಾನವು ಒಮ್ಮೆ ತಾಲಿಬಾನ್ ಜೊತೆ ಶಾಂತಿ ಒಪ್ಪಂದ ನಡೆಸಿ ಗಮನ ಬೇರೆಡೆ ಸೆಳೆದರೆ, ಮತ್ತೊಂದು ಬಾರಿ ತಾಲಿಬಾನ್ ಮೇಲೆ ಮುಗಿಬೀಳುವುದಾಗಿ ಘೋಷಿಸುತ್ತಿದೆ. ಒಮ್ಮೆ ಜಮಾತ್ ಉದ್ ದಾವಾ ಮುಖ್ಯಸ್ಥ, ಮುಂಬೈಯ ಪ್ರಧಾನ ಸಂಚುಕೋರ ಹಫೀಸ್ ಸಯೀದ್ ಮತ್ತಿತರ ಉಗ್ರರನ್ನು ಬಂಧಿಸುತ್ತದೆ, ಬಳಿಕ ಬಿಡುಗಡೆ ಮಾಡುತ್ತದೆ. ಸಹಾಯ ಮಾಡೀ ಎಂದು ಅಮೆರಿಕದೆದುರು ಹೋಗಿ ಕೈ-ಬಾಯಿ ಬಿಟ್ಟು ನಿಲ್ಲುತ್ತದೆ. ಅಲ್ಲಿಗೆ ಮುಂಬೈ ದಾಳಿ ಎಂಬ ವಿಷಯದ ಸದ್ದು ಮೂಲೆಗೆ ಸರಿಯುತ್ತದೆ. ಭಾರತವು ಮುಂಬೈ ದಾಳಿ ವಿಷಯ ಎತ್ತಿದಾಗಲೆಲ್ಲಾ, ಪಾಕಿಸ್ತಾನವು “ನಾವು ಕೂಡ ಭಯೋತ್ಪಾದನೆ-ಪೀಡಿತರು, ತಾಲಿಬಾನ್‌ಗಳು ನಮಗೆ ತೀರಾ ಕಿರಿಕಿರಿ ಮಾಡುತ್ತಿದ್ದಾರೆ” ಎನ್ನುತ್ತಾ, ವಿಷಯಾಂತರ ಮಾಡುತ್ತಲೇ ಇದೆ, ಅದರಲ್ಲಿ ಯಶಸ್ವಿಯೂ ಆಗುತ್ತಿದೆ.

ಅತ್ತ ಅಮೆರಿಕವೂ ಕೂಡ, ತಾಲಿಬಾನ್, ಅಲ್ ಖಾಯಿದಾ ಮೇಲೆ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಒಮ್ಮೆ ಎಚ್ಚರಿಕೆಯ ಗಂಟೆ ಬಾರಿಸುತ್ತದೆ. ಆ ಮಾತು ಮುಗಿಸುವ ಮುನ್ನವೇ ಪಾಕಿಸ್ತಾನದ ಬಗ್ಗೆ ಮೃದು ನಿಲುವು ತಳೆದು, ಸಹಾಯಧನ, ನೆರವಿನ ಮಹಾಪೂರ ಹರಿಸುತ್ತಾ, ಭಾರತವು ನೇರಾನೇರ ಎಗರಿಬೀಳದಂತೆ ನೋಡಿಕೊಳ್ಳುತ್ತದೆ. ಪಾಕಿಸ್ತಾನ ಹಾಗೂ ಈ ಅಮೆರಿಕದ ದ್ವಂದ್ವ ನಿಲುವುಗಳ ಬಗ್ಗೆ ಯುಪಿಎ ಸರಕಾರ ಎಚ್ಚೆತ್ತುಕೊಂಡೀತೇ? ಯಾವುದೇ ಕಾರಣಕ್ಕೂ ಮುಂಬೈ ದಾಳಿಯ ಸಂಚುಕೋರರು ಪಾಕಿಸ್ತಾನದಲ್ಲಿದ್ದಾರೆ ಎಂಬ ಅಂಶದಿಂದ ವಿಷಯಾಂತರ ಮಾಡದಂತೆ ನೋಡಿಕೊಳ್ಳಬೇಕಾಗಿದೆ.

ಮುಂಬೈ ದಾಳಿ ನಡೆದು ಏಳೆಂಟು ತಿಂಗಳುಗಳೇ ಕಳೆದರೂ, ಪಾಕಿಸ್ತಾನಿ ಮೂಲದ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಒತ್ತಡ ಹೇರಲು ಭಾರತ ಸರಕಾರ ವಿಫಲವಾಗಿದೆಯಲ್ಲಾ ಎಂದು ಭಾರತೀಯರಂತೂ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.

ಇದು ನಮ್ಮನ್ನಾಳುವವರಿಗೆ ಕೇಳಿಸುತ್ತದೆಯೇ?
(ವೆಬ್‌ದುನಿಯಾ)

ವಿರೋಧಿಗಳನ್ನು ನಿರುತ್ತರರಾಗಿಸೋದು ಹೇಗೆ?

ಗಾಂಧಿಗಿರಿ ಬಗ್ಗೆ ಕೇಳಿದ್ದೀರಿ. ಎದುರಾಳಿಯನ್ನು ಮತ್ತು ವಿರೋಧಿಸುವವರನ್ನು ಪ್ರೀತಿಯಿಂದಲೇ ಗೆಲ್ಲುವುದು ಹೇಗೆಂಬುದು ಈ ಗಾಂಧಿಗಿರಿಯ ಹಿಂದಿನ ಮರ್ಮ. ಆದರೆ, ಚಾಣಾಕ್ಷತೆಯಿದ್ದರೆ ಎದುರಾಳಿಗಳ ಮನ ಗೆಲ್ಲಲಾಗದಿದ್ದರೂ, ಅವರಿಂದ ಮೇಲುಗೈ ಸಾಧಿಸಬಹುದಲ್ಲವೇ?

ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರ ಬಗ್ಗೆ, ಪ್ರಸಿದ್ಧಿಗೆ ಬಂದವರ ಬಗ್ಗೆ ಸಹವರ್ತಿಗಳಲ್ಲಿ, ಕುಟುಂಬಿಕರಲ್ಲಿ, ನಾನೂ ಆ ಮಟ್ಟಕ್ಕೇರಲಿಲ್ಲವಲ್ಲಾ ಎಂದು ಹಲುಬುವವರು ಬಹಳಷ್ಟು ಮಂದಿ. ಯಾಕೆಂದರೆ ಹೊಟ್ಟೆ ಕಿಚ್ಚು, ಅಸೂಯೆ, ಮತ್ಸರ ಎಂಬಿತ್ಯಾದಿಗಳು ಮಾನವಸಹಜ ಗುಣಗಳು ಅಲ್ವಾ?

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಕೇಳಿದ್ದೀರಿ. ಇದು ನೆನಪಾದಾಗ ಅಕ್ಬರ-ಬೀರಬಲ್ಲರ ಕಥೆಯೊಂದು ಕೂಡ ನೆನಪಿಗೆ ಬರುತ್ತದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಓದಿ:

ಅಕ್ಬರನ ಆಸ್ಥಾನದಲ್ಲಿ ಬೀರಬಲ್‌ನ ಚಾಣಾಕ್ಷ ತಂತ್ರಗಳು ಸರ್ವ ವಿದಿತ. ಬೀರಬಲ್ಲನ ಸಿದ್ಧಿ-ಪ್ರಸಿದ್ಧಿಯನ್ನು ಸಹಿಸದೆ ಒಳಗಿಂದೊಳಗೆ ಕುದಿಯುತ್ತಿರುವವರಿಗೇನೂ ಕೊರತೆಯಿರಲಿಲ್ಲ. ದರ್ಬಾರಿನಲ್ಲಿದ್ದ ಮುಸ್ತಾಫನಿಗೂ ಬೀರಬಲ್ಲನನ್ನು ಕಂಡರೆ ಹೊಟ್ಟೆ ಕಿಚ್ಚು. ಆಸ್ಥಾನದಲ್ಲಿ ಅವನ ನಿರ್ಭಾವುಕ ಮುಖವು ಸ್ವತಃ ಅಕ್ಬರನಿಗೂ ಅಚ್ಚರಿ ತಂದಿತ್ತು. ಒಂದು ದಿನ ಆತ ಆಸ್ಥಾನದಲ್ಲಿ ಘೋಷಿಸಿದ. ಮುಸ್ತಾಫ ಏನು ಯೋಚಿಸುತ್ತಿದ್ದಾನೆ ಎಂಬುದನ್ನು ಹೇಳಿದವರಿಗೆ ಐನೂರು ವರಹಗಳನ್ನು ಬಹುಮಾನವಾಗಿ ನೀಡುತ್ತೇನೆ ಅಂತ.

ಊಹೂಂ, ಆಸ್ಥಾನ ವಿದ್ವಾಂಸರೆಲ್ಲರಿಗೂ ಇದು ಅಸಾಧ್ಯದ ಮಾತು. ಯಾರೂ ಉತ್ತರಿಸಲಾರದ್ದನ್ನು ಕಂಡು ಅಕ್ಬರನ ಮುಖ ಬಾಡುವಷ್ಟರಲ್ಲಿ, ಬೀರಬಲ್ಲ ಎದ್ದುನಿಂತ. ಬೀರಬಲ್ ಎದ್ದು ನಿಂತದ್ದು ನೋಡಿ ಮುಸ್ತಾಫನಿಗೆ ಖುಷಿಯೋ ಖುಷಿ. ಬೀರಬಲ್ ಏನು ಹೇಳುತ್ತಾನೋ, ಅದನ್ನು ನಿರಾಕರಿಸಿದರಾಯಿತು ಎಂದುಕೊಂಡು ಮುಖವನ್ನು ಮತ್ತಷ್ಟು ಗಂಟಿಕ್ಕಿಕೊಂಡ.

ಬೀರಬಲ್ ಹೇಳಿದ: “ಬಾದಷಾ, ಮುಸ್ತಾಫ ಏನು ಯೋಚಿಸ್ತಾನೆ ಎಂಬುದು ನನಗೊತ್ತಿದೆ” ಎಂದ.

ಇಡೀ ಆಸ್ಥಾನದಲ್ಲಿ ಕುತೂಹಲಭರಿತ ಮೌನ. ಎಲ್ಲರೂ ಬೀರಬಲ್ಲನನ್ನೇ ತದೇಕಚಿತ್ತರಿಂದ ನೋಡುವವರೆ. ಅವನನ್ನು ಕಂಡರೆ ಹೊಟ್ಟೆಯುರಿಯುತ್ತಿದ್ದವರೆಲ್ಲರೂ, ಈ ಬಾರಿ ಬೀರಬಲ್ಲನಿಗೆ ಸೋಲು ಕಾದಿದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತಿದ್ದರು.

ಆತ್ಮವಿಶ್ವಾಸದಿಂದ ದಿರಿಸು ಸರಿಪಡಿಸಿಕೊಳ್ಳುತ್ತಾ ಬೀರಬಲ್ಲ, ‘ಸ್ವಾಮಿನ್, ಇವನೇನೂ ಯೋಚಿಸ್ತಾನೆಂದರೆ…. ನೀವು ಯಾವತ್ತೂ ಆರೋಗ್ಯವಂತರಾಗಿ, ಸದಾ ಖುಷಿಯಿಂದಿರಬೇಕು. ಮತ್ತು ನೀವು ದೀರ್ಘಾಯುಷಿಯಾಗಬೇಕು ಎಂದು ಯೋಚಿಸುತ್ತಿದ್ದಾನೆ’!

ಇಡೀ ಸಭೆಯಲ್ಲಿ ವ್ಹಾ ವ್ಹಾ ಎಂಬ ಘೋಷಣೆಯೇ ಜೋರಾಗಿ ಕೇಳಿಬಂತು! ಮುಸ್ತಾಫನ ಮುಖವಂತೂ ತೀರಾ ಬಿಳಿಚಿಕೊಂಡಿತ್ತು, “ಇಲ್ಲ ಇಲ್ಲ, ಬೀರಬಲ್ ಹೇಳಿದ್ದು ಸುಳ್ಳು” ಎಂದು ಹೇಳೋಣವೆಂದು ಬಾಯ್ತೆರೆದು ನಿಂತಿದ್ದವನಿಗೆ ಬಾಯಿ ಕಟ್ಟಿಯೇ ಹೋಯಿತು.

“ಇ…ಇ… ಹೌದು ಸ್ವಾಮಿ, ಬೀರಬಲ್ ಸರಿಯಾಗಿಯೇ ಹೇಳಿದ್ದಾನೆ” ಎಂದುತ್ತರಿಸಿ, ಬೆವರೊರೆಸಿಕೊಳ್ಳುತ್ತಾ ಕೂತನವ. ಅಬ್ಬಾ, ಇಲ್ಲ ಎಂದುಬಿಟ್ಟರೆ, ನಾನು ಬಾದಶಹಾರ ಒಳಿತನ್ನೇ ಬಯಸುತ್ತಿರಲಿಲ್ಲ ಎಂದಾಗುತ್ತಿತ್ತಲ್ಲವೇ? ಎಂದು ನೆನಪಿಸಿಕೊಂಡ ಆತ ಥರಗುಟ್ಟಿಹೋಗಿದ್ದ.

ಅಕ್ಬರನಂತೂ ಬೀರಬಲ್ಲನ ಬುದ್ಧಿಮತ್ತೆಗೆ ವಂದಿಸಿದ. ಎಷ್ಟು ಚತುರತೆಯಿಂದ ಮುಸ್ತಾಫನನನ್ನು ಮಟ್ಟ ಹಾಕಿದನಲ್ಲ ಎಂದುಕೊಂಡ. ಆದರೂ, ಬೀರಬಲ್ಲನನ್ನು ಮತ್ತಷ್ಟು ಪರೀಕ್ಷಿಸಬೇಕೆನಿಸಿತು.

ಕೇಳಿದ: “ಹಾಗಿದ್ರೆ ಈಗ ಹೇಳು, ನಾನೇನು ಯೋಚಿಸುತ್ತಿದ್ದೇನೆ ಅಂತ”…

ಬೀರಬಲ್ಲ ಬಹುಶಃ ಇಂಥಹ ಪ್ರಶ್ನೆ ನಿರೀಕ್ಷಿಸಿದ್ದನೇನೋ… ಒಂದಿಷ್ಟೂ ವಿಚಲಿತನಾಗದೆ ಉತ್ತರಿಸಿದ:

“ಬಾದಶಹಾ, ಸ್ವರ್ಗ ಲೋಕದಲ್ಲಿರುವ ನಿಮ್ಮ ಎಲ್ಲಾ ಪಿತೃಗಳು ಆರಾಮವಾಗಿ ನೆಮ್ಮದಿಯ ಜೀವನ ಸವೆಸುತ್ತಿರಬೇಕೆಂದು ಯೋಚಿಸಿದ್ದೀರಲ್ಲಾ” ಎಂದು ಕೇಳಿಬಿಟ್ಟ.

ಅಕ್ಬರ್ ಮನಸ್ಸಿನಲ್ಲೇ ಶಹಭಾಸ್ ಎಂದುಕೊಂಡು ಮರು ಮಾತಾಡದೆ ಐನೂರು ವರಹಗಳನ್ನು ನೀಡಿದ.

ಮೌನವಾಗಿಯೇ ಕೆಲಸ ಸಾಧಿಸುವುದು ಹೀಗೆ! ಏನಂತೀರಿ?

ಒಂದ್ನಿಮಿಷ ಪ್ಲೀಸ್…!

ಈಗ್ಬಂದೆ ಒಂದ್ನಿಮಿಷ, ಒಂದ್ನಿಮಿಷ ಕೂತ್ಕೊಳ್ಳಿ ಮುಂತಾದ ಪದಸಮೂಹಗಳೊಂದಿಗೆ ‘ಒಂದು ಕ್ಷಣ’ ಅನ್ನೋ ಶಬ್ದವನ್ನು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವಲ್ಲಾ?

ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ! ಆ ಕ್ಷಣದ ನಿರ್ಧಾರ ತಪ್ಪಿದರೆ ಒಂದೋ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ, ಅಥವಾ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಜೀವನವಿಡೀ ಮನಸಾ ಸ್ಮರಿಸಿಕೊಳ್ಳುತ್ತಿರಬಹುದು.

ಇಂಥ ಈ ‘ಕಾಲ’ನ ಆ ಕ್ಷಣಕ್ಕೆ ಎಷ್ಟೊಂದು ಮಹತ್ವವಿದೆ. ಒಂದು ಕ್ಷಣ ತಡವಾದರೆ ರೈಲೋ, ವಿಮಾನವೋ, ಬಸ್ಸೋ ಕೈತಪ್ಪಿಹೋಗಬಹುದು.

ಅದೇ ರೀತಿ ಸಂಬಂಧಗಳೂ. ಅತ್ಯಂತ ಆತ್ಮೀಯರಾದಾಗ ಸಲುಗೆ ಸಹಜವಾಗಿಯೇ ಬೆಳೆಯುತ್ತದೆ. ಆ ಸಲುಗೆಯಿಂದಾಗಿಯೇ ಲೋಕಾಭಿರಾಮ ಹರಟೆ, ಕಷ್ಟ ಸುಖ ಹಂಚಿಕೆ ಸಂದರ್ಭದಲ್ಲಿ ಒಂದು ಕ್ಷಣ ಮೈಮರೆತೋ ಅಥವಾ ಅತಿ ಸಲುಗೆಯಿಂದಲೋ ಒಂದು ಮಾತು ನಮ್ಮ ಬಾಯಿಯಿಂದ ಉದುರಿದರೆ ಅನಾಹುತವೇ ಆಗಿ ಹೋದೀತು. ಆ ಮಾತನ್ನು ಆತ್ಮೀಯರು ಅಪಾರ್ಥ ಮಾಡಿಕೊಂಡರೆ, ಸಂಬಂಧ ಕೆಡುತ್ತದೆ. ಇದಕ್ಕೆ ಬೆಸುಗೆ ಹಾಕಿ ಜೋಡಿಸುವುದು ಒಂದು ನಿಮಿಷದಲ್ಲಿ ಖಂಡಿತಾ ಸಾಧ್ಯವಿಲ್ಲ. ಅಷ್ಟು ವರ್ಷಗಳ ಕಾಲ ಪೋಷಿಸಿಕೊಂಡು ಬಂದಿದ್ದ ಆತ್ಮೀಯತೆ ಕರಗಿ ನೀರಾಗಿ ಹೋಗಲು ಆ ಒಂದು ಕ್ಷಣವಷ್ಟೇ ಸಾಕಲ್ಲವೇ? ಅದೇ ರೀತಿ ಎಷ್ಟೋ ವರ್ಷಗಳ ಕಠಿಣ ಪರಿಶ್ರಮದ ಫಲವೆಲ್ಲಾ ನಾಶವಾಗಲೂ ಇಂಥದ್ದೇ ಒಂದು ಕ್ಷಣ ಸಾಕಲ್ಲವೇ?

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬುದು ಪ್ರಸ್ತುತವಾಗುವುದು ಈ ಕ್ಷಣದಲ್ಲಿಯೇ. ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾಯಕಕ್ಕೆ ಎಷ್ಟು ಕಾಲ ತಗುಲುತ್ತದೆಯೋ, ಆ ಬೆಸುಗೆ ಮುರಿದು ಬೀಳಲು ಒಂದು ಕ್ಷಣ ಸಾಕು.

ಅದೇ ರೀತಿ ಆ ಕ್ಷಣದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಬಿಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಆ ಒಂದು ಕ್ಷಣವೇ ತಳಹದಿಯಾಗುತ್ತದೆ.

ಎಲ್ಲರ ಬಾಯಲ್ಲೂ ಹರಿದಾಡುತ್ತಾ ಹರಿದಾಡುತ್ತಾ ಈಗ ಅರ್ಥ ಕಳೆದುಕೊಂಡಂತಾಗಿರುವ ಅಥವಾ ಬಾಯಿಮಾತಿಗಷ್ಟೇ ಸೀಮಿತವಾಗಿಬಿಟ್ಟಿರುವ ‘ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ’ ಎಂಬ ಉಕ್ತಿಯೂ ಇದನ್ನೇ ಅಲ್ಲವೇ ಹೇಳಿದ್ದು? ಸಣ್ಣ ಮಕ್ಕಳಿಗೆ ಗಾದೆ ಮಾತು ಎಂಬ ಕಾರಣಕ್ಕೆ ಇದನ್ನು ಶಾಲೆಗಳಲ್ಲಿ ಹೇಳಿಕೊಟ್ಟಿರುತ್ತಾರೆ. ಆದರೆ ಅದು ಗಾದೆ ಮಾತು ಎಂಬ ಅಂಕ (Mark) ತಂದುಕೊಡುವ ವಾಕ್ಯವಾಗುತ್ತದೆಯೇ ಹೊರತು, ಈ ಮಕ್ಕಳಿಗೆ ಅದರ ಅರ್ಥ ಗ್ರಹಿಸಿಕೊಳ್ಳಬಲ್ಲ ರೀತಿಯಲ್ಲಿ ಬೋಧಿಸಲಾಗುವುದಿಲ್ಲ. ಆದರೆ ಮುಂದೆ ಜೀವನ ರೂಪಿಸಲು, ಜೀವನದಲ್ಲಿ ಔನ್ನತ್ಯ ಸಾಧಿಸಲು, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಎರಡೆರಡು ಬಾರಿ ಯೋಚನೆ ಮಾಡಲು ಇದೇ ವಾಕ್ಯವೇ ತಳಹದಿಯಾಗುತ್ತದೆ ಎಂಬುದು ಈ ಮಕ್ಕಳಿಗೇನು ಗೊತ್ತಿರುತ್ತದೆ?

ಅವರಿಗೆ ಬುದ್ಧಿ ತಿಳಿದಾಗಲೊಂದು ದಿನ ‘ಹೌದು, ಇಂಥ ವಾಕ್ಯ ಬರೆದು ನನಗೆ ಇಂತಿಷ್ಟು ಅಂಕ ಬಂದಿದೆ’ ಎಂದಷ್ಟೇ ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅದರ ಅರ್ಥ ಗ್ರಹಿಸಿರುವುದಿಲ್ಲ.

ಒಂದು ಅರೆಕ್ಷಣದಲ್ಲಿ ನಾವು ಕೈಗೊಳ್ಳುವ ನಿರ್ಧಾರವು ಹೇಗೆ ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತವೋ, ಅದೇ ರೀತಿ ಒಂದರೆಕ್ಷಣ ಮೈಮರೆತು ನಾವು ಆಡಿದ ನುಡಿಗಳೋ, ಮಾಡಿದ ಕೃತ್ಯಗಳೋ ಜೀವನದ ಬಂಡಿಯ ಗಾಲಿಯನ್ನು ಎತ್ತೆತ್ತಲೋ ತಿರುಗಿಸಿಬಿಡಬಹುದಲ್ಲಾ…

ಆದಕಾರಣ, ‘ಒಂದ್ನಿಮಿಷ ಪ್ಲೀಸ್’ ಅನ್ನೋದು ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮ ಜತೆಗಿರಲಿ. ಕೋಪಾವಿಷ್ಟರಾಗಿದ್ದಾಗಲೂ ಒಂದ್ನಿಮಿಷ ಪ್ಲೀಸ್ ಅಂದ್ಬಿಡಿ. ಬದಲಾವಣೆ ನೋಡಿ!

ಅಮ್ಮ ನೀನು ನಕ್ಕರೆ, ನಮ್ಮ ಬಾಳು ಸಕ್ಕರೆ!

ಸಪ್ತಸಾಗರ ದಾಟಿ ಹುಡುಕಾಡಿದರೂ ಬೇರೊಬ್ಬರಿಗೆ ನಿನ್ನಂತಹ ಅಮ್ಮ ದೊರೆಯುವುದು ಖಂಡಿತಾ ಸಾಧ್ಯವಿಲ್ಲ!

ಈ ಮೇಲಿನ ವಾಕ್ಯವನ್ನು ಮಗದೊಮ್ಮೆ ಯೋಚಿಸಿ ನೋಡಿ. ಹೌದಲ್ವಾ… ಅಮ್ಮ ಎಂಬುದೊಂದು ಯುನೀಕ್ ಐಡೆಂಟಿಟಿ. ಬಹುಶಃ ದೇವರು ಕೂಡ ಆ ಅಮ್ಮನಿಗೆ ಸಾಟಿಯಲ್ಲ ಎಂದರೂ ತಪ್ಪಾಗಲಾರದು.

ಬದುಕಿನ ತಲ್ಲಣಗಳ ನಡುವೆ ಪ್ರತಿಯೊಂದು ಕ್ಷಣ ಪಾತ್ರ ಬದಲಿಸುತ್ತಾ, ಅಮ್ಮನಾಗಿ, ಅನಿವಾರ್ಯತೆ ಬಂದಾಗ ಅಪ್ಪನಾಗಿಯೂ, ಅಕ್ಕನಾಗಿ, ಮಗಳಾಗಿ, ತಂಗಿಯಾಗಿ, ಅಪ್ಪನ ಸಿಡುಕಿನ ನಡುವೆ ಮಗುವಿಗೆ ಗೆಳತಿಯಾಗಿ ಎಲ್ಲ ಪಾತ್ರಗಳಿಗೂ ಜೀವ ತುಂಬುವ ಕರುಣಾಮಯಿ ಮಾತೆಗೆ, ಸದಾ ಇನ್ನೊಬ್ಬರ ಏಳಿಗೆಗಾಗಿಯೇ ಶ್ರೀಗಂಧದಂದದಲಿ ಜೀವ ಸವೆಸುವ ಅಮ್ಮನಿಗೆ ತನ್ನದೇ ಅಂತ ಒಂದು ದಿನವಾದರೂ ಬೇಡವೇ? ಬಹುಶಃ ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮನಿಗಾಗಿ ಮೀಸಲಿಡುವ ಕಲ್ಪನೆ ಮೊಳಕೆಯೊಡೆದದ್ದು ಇದೇ ಕಾರಣಕ್ಕೆ. ಅಮ್ಮಂದಿರಿಗಾಗಿಯೇ ಮೀಸಲಾದ ಈ ದಿನ ಆ ಮಹಾ ಮಮತಾಮಯಿ ಮಾತೆಗೆ ಅಕ್ಕರೆಯ ಅಕ್ಷರಾಂಜಲಿ.

ಹೌದು. ಅನಿವಾರ್ಯತೆ ಎಂಬುದೊಂದಿದೆಯಲ್ಲ, ಅದುವೇ ಅದೆಷ್ಟೋ ಮಂದಿಯ ಜೀವನದ ಜಂಜಡಗಳಿಗೆ, ಸಾಹಸಕ್ಕೆ, ಛಲಕ್ಕೆ ಮೂಲ ಹೇತು. ಅಂಥ ಸಂದರ್ಭ ಬಂದಾಗ ಹೆತ್ತ ಕರುಳ ಕುಡಿಯನ್ನು ಹೊತ್ತು ಸಲಹಲು, ಅದು ಮುಂದೆ ಔನ್ನತ್ಯಕ್ಕೇರಲು ಆ ಮಹಾತಾಯಿ ಬದುಕಿನ ಎಲ್ಲ ಕಾಠಿಣ್ಯಗಳನ್ನೂ ಸಹಿಸಿಕೊಳ್ಳಬಲ್ಲಳು. ಅಮ್ಮನೆಂಬ ದೇವತೆ ಎಲ್ಲವೂ ಆಗಬಲ್ಲಳು.

ನಾವು ನಡೆಯುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಆ ಅಮ್ಮ ಬಾಳ ದೀವಿಗೆಯಾಗುತ್ತಾಳೆ, ಅಥವಾ ಆಕೆ ಹಾಕಿಕೊಟ್ಟ ಹೂವಿನ ಹಾಸು ನಮಗೆ ದಾರಿ ದೀವಿಗೆಯಾಗುತ್ತದೆ. ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಆ ಅಮ್ಮನೆಂಬ ತ್ಯಾಗಮಯಿಯ ಬೆವರು, ಕಣ್ಣೀರು, ರಕ್ತವಿರುತ್ತದೆ, ಆ ಕರುಣಾಮಯಿಯ ಛಾಪು ಖಂಡಿತಾ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ನನ್ನ ಮಗು ಮುಂದೆ ಚೆನ್ನಾಗಿ ಬೆಳೆದು ಸಮಾಜದಲ್ಲಿ ಗೌರವಯುತವಾಗಿ ಬಾಳುವಂತಾಗಬೇಕೆಂಬ ಅದಮ್ಯ ತುಡಿತವಿರುತ್ತದೆ.

ನಾವು ಇಂದು ಜೀವನದಲ್ಲಿ ನಮ್ಮ ಕಾಲ ಮೇಲೆ ನಿಲ್ಲುವಂತಾಗಲು, ಸನ್ಮಾರ್ಗದಲ್ಲಿ ಸಾಗಿ ಜೀವನದ ನದಿಯಲ್ಲಿ ಯಶಸ್ವೀ ಈಜುಗಾರರಾಗುವಂತಾಗಲು, ನಮ್ಮೆಲ್ಲ ಯಶಸ್ಸು, ಕೀರ್ತಿ, ಸಾಧನೆಗಳ ಕ್ರೆಡಿಟ್ಟು ಸಲ್ಲಬೇಕಾಗಿದ್ದೆಲ್ಲವೂ ಅಮ್ಮನಿಗೆ. ಮಕ್ಕಳ ನೋವುಗಳಿಗೆ ಕಿವಿಯಾಗುವ, ನಲಿವುಗಳಿಗೆ ದನಿಗೂಡಿಸುವ, ಕರುಳ ಕುಡಿ ನಕ್ಕಾಗ ಅಕ್ಕರೆಯಿಂದ ಸಂಭ್ರಮಿಸುವ, ಮುಖ ಬಾಡಿಸಿದಾಗ ಒಳಗೊಳಗೇ ಮುದುಡುವ, ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ? ಆಕೆ ಹರಿಸುವ ವಾತ್ಸಲ್ಯದ ಸಾಗರದಲ್ಲಿ ಮಿಂದೇಳುವುದು ಅನಿರ್ವಚನೀಯ ಆನಂದದಾಗರ.

ಮಾತೇ ಮೌನವಾಗುವ ಅಮ್ಮ, ಒಮ್ಮೊಮ್ಮೆ ಮೌನವೇ ಮಾತಾಗುವ ಅಮ್ಮ. ಆದರೆ ಅಮ್ಮ ಅಮ್ಮನೇ. ಆಕೆ ಹರಿಸುವ ನಿರ್ವ್ಯಾಜ ಪ್ರೇಮ, ಅಕಳಂಕ ಪ್ರೀತಿಯ ಧಾರೆ… ಅದಕ್ಕೆ ಎಂದಾದರೂ ಸಾಟಿಯುಂಟೇ? ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳ ಮರೆಯಬೇಡ ಎಂಬ ನಾಣ್ಣುಡಿ ಹುಟ್ಟಿಕೊಂಡದ್ದಕ್ಕೆ ಕಾರಣ ಹುಡುಕುವ ಬದಲು, ಈ ನಾಣ್ಣುಡಿಯ ಅಗತ್ಯವೇ ಇಲ್ಲವೆಂಬಷ್ಟರ ಮಟ್ಟಿನ ಕ್ಷಮಯಾಧರಿತ್ರಿ ಅಮ್ಮ. ಇದು ಅಲಂಕಾರಿಕ ವಾಕ್ಯವಲ್ಲ. ಸದಾ ಮಗನ ಒಳಿತಿಗಾಗಿ ಹಂಬಲಿಸುವ ತಾಯಿಮನದ ಸಾರಸರ್ವಸ್ವವೇ ಸಾಲಿನಲ್ಲಿದೆ.

ಬದುಕಿನ ಯಾವುದೋ ಒಂದು ಹಂತದಲ್ಲಿ, ಮ್ಲಾನವದನರಾಗಿ ಯೋಚಿಸುತ್ತಾ, ನನ್ನ ಬಳಿ ಏನಿದೆ ಅಂತ ಒಂದು ಕ್ಷಣ ಯೋಚಿಸಿದರೆ ಥಟ್ಟಂತ ನೆನಪಾಗುವುದು – ಮೇರೇ ಪಾಸ್ ಮಾ ಹೈ ಎಂಬ ವಾಕ್ಯವೇ ಅಲ್ಲವೇ?

ಈ ಭೂಮಿಯಲ್ಲಿ ಒಳ್ಳೆಯವರಿರುತ್ತಾರೆ, ಕೆಟ್ಟವರು, ಕೊಲೆಗಡುಕರು, ಅಪರಾಧಿಗಳು ಇರುತ್ತಾರೆ. ಆದರೆ ಭೂಮಿ ತಾಯಿ ಕೆಟ್ಟವಳು ಎಂದು ದೂಷಿಸುತ್ತಾರೆಯೇ? ಅದಕ್ಕೇ ಹೇಳುವುದು ಅಮ್ಮ ಕ್ಷಮಯಾ ಧರಿತ್ರಿ ಅಂತ. ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರುವುದು ಸಾಧ್ಯವೇ ಇಲ್ಲ. ತಾಯಿ ಬರೇ ತಾಯಿಯಲ್ಲ, ಆಕೆ ಎಲ್ಲ ರೀತಿಯ ಪಾಪ ಕರ್ಮಗಳಿಗೆ ಈಡಾಗಿಯೂ, ದೌರ್ಜನ್ಯಕ್ಕೆ ತುತ್ತಾಗಿಯೂ, ಅವನ್ನೆಲ್ಲಾ ಒಡಲೊಳಗೆ ಅದುಮಿಕೊಂಡು, ಹೊರಗೆ ಕಳೆಗಟ್ಟುವ ಭೂಮಿ ತಾಯಿಯಂತೆ ಕ್ಷಮಾಗುಣಸಾಗರಿ.

ಬದುಕಿನಲ್ಲಿ ಯಾವುದೇ ಯಶಸ್ಸಿನ ಮೆಟ್ಟಿಲೇರಿದರೂ, ಅಮ್ಮನ ಕೈಯಡುಗೆಯ ಸವಿಯನ್ನು ಮರೆಯಲಾದೀತೇ? ಊರಿಗೆ ಅರಸನಾದರೂ ತಾಯಿಗೆ ಆತ ಮಗನೇ ಸೈ. ಮಗು ತಿಂದನೇ, ಕುಡಿದನೇ, ಸರಿಯಾಗಿ ಸಕಾಲಕ್ಕೆ ನಿದ್ದೆ ಮಾಡಿದನೇ, ಉದ್ಯೋಗ ಕ್ಷೇತ್ರದಲ್ಲಿ ಎಷ್ಟು ಒತ್ತಡಗಳಿರುತ್ತವೆಯೋ ಏನೋ ಎಂದು ಬೆಳೆದ ತನ್ನ ಕಾಲ ಮೇಲೆ ನಿಂತ ಮಗನಲ್ಲಿಯೂ ತಾನು ಎತ್ತಿಯಾಡಿಸಿದ ಮಗುವನ್ನೇ ಕಾಣುವ, ಅವನಿಗ್ಯಾವುದೇ ಒತ್ತಡಗಳಿರಬಾರದು ಎಂದು ನೋಡಿಕೊಳ್ಳುವ, ಸದಾ ಹಾರೈಸುವ, ಮಸುಕಿದೀ ಮಬ್ಬಿನಲಿ ಕೈಹಿಡಿದು ಮುನ್ನಡೆಸುವ ಮಮತಾಮಯಿ ಈ ತಾಯಿ.

ರಾತ್ರಿ ತಡವಾಗಿ ಬಂದರೆ, ನಿದ್ದೆ ಹಾಳಾಯಿತೆಂದು ಮುನಿಸಿಕೊಳ್ಳದೆ ಬಾಗಿಲು ತೆಗೆದು, ಮಗು ಸುಸ್ತಾಗಿರಬಹುದು ಅಂತ ಆರೈಕೆ ಮಾಡುವ ಕೈಗಳು, ಪರೀಕ್ಷೆ ಬಂದಾಗ ಕರುಳ ಕುಡಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಪ್ರತಿದಿನ ಬೆಳಗ್ಗೆ ಅಲಾರಂನಂತೆ ಪ್ರೀತಿಯಿಂದ ಎಬ್ಬಿಸುವ ಕೈಗಳು, ಪರೀಕ್ಷೆಯ ಫಲಿತಾಂಶ ದಿನದಂದು ಮಗನಿಗಿಂತ ಹೆಚ್ಚು ತಳಮಳಗೊಳ್ಳುವ, ಮಗ ಮಾಡಿದ ಸಾಧನೆಗೆ ‘ಇದಕ್ಕೆಲ್ಲ ನಾನೇ ಕಾರಣ’ ಎಂದು ಎಂದಿಗೂ ಕ್ರೆಡಿಟ್ ತೆಗೆದುಕೊಳ್ಳಲು ಎಳಸದ ಮನಸ್ಸು, ಕರುಳ ಕುಡಿಯ ಹೃದಯ ನುಚ್ಚುನೂರಾಗಿ, ಆಕಾಶವೇ ಕಳಚಿ ಬಿದ್ದಂತೆ ಆದಾಗ, ತನಗೆ ತಲೆಬುಡ ತಿಳಿಯದಿದ್ದರೂ ಮಗುವಿಗೇನೋ ಆಗಿದೆ ಅಂತ ತಲೆ-ಮನಸ್ಸು ನೇವರಿಸುವ, ಸಾಂತ್ವನಗೈಯುವ ಈ ಅಮ್ಮನಿಗೆ, ಮಗುವಿನ ಮನಸ್ಸು ಕಣ್ಣರಿಯದಿದ್ದರೂ ಕರುಳರಿಯದೇ? ಆಕೆಯ ಆ ಹಂಬಲ, ಆಕಾಂಕ್ಷೆ, ಸ್ವಾರ್ಥವಿಲ್ಲದ ಮಹದಾಸೆಯೇ ಆ ಮಗುವಿನ ಉನ್ನತಿಗೆ ಮೂಲಾಧಾರವಾಗುತ್ತದೆ, ಪ್ರೇರಣೆಯಾಗುತ್ತದೆ, ಚೈತನ್ಯವೂ ಆಗುತ್ತದೆ.

“ಒಬ್ಬ ಗಂಡಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿ ಸುಶಿಕ್ಷಿತನಾದಂತೆ, ಆದರೆ ಹೆಣ್ಣೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಸುಶಿಕ್ಷಿತವಾದಂತೆ” ಎಂಬ ಮಾತು ಸುಮ್ಮನೇ ಹೇಳಿದ್ದಲ್ಲ. ಮಗುವಿನ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುವವಳು ತಾಯಿ. ಆದರೆ ಆಕೆಯ ಕೈಗಳನ್ನು ಕಟ್ಟಿ ಹಾಕಿದರೂ, ಅವರಿವರಿಂದ ಕೇಳಿ ತಿಳಿದುಕೊಂಡು, ತನ್ನ ಮಗು ದೊಡ್ಡವನಾಗಬೇಕೆಂಬ ಹಂಬಲ, ತುಡಿತ ಸದಾ ಆಕೆಯ ಮನದೊಳಗಿರುತ್ತದೆ.

ಅಂಥದ್ದೊಂದು ಅಮ್ಮನೆಂಬ ಅಮ್ಮನನ್ನು ಪಡೆದ ನಾವೆಷ್ಟು ಧನ್ಯರು!
(ವೆಬ್‌ದುನಿಯಾ)

ಕೋಮುವಾದಿಗಳು, ಜಾತ್ಯತೀತರು ಮತ್ತು ಪಕ್ಷಾಂತರಿಗಳು!

ರಾಜಕೀಯ ಕ್ಷೇತ್ರದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ, ಅತ್ಯಂತ ಹೆಚ್ಚು ಟೀಕೆಗೆ, ನಿಂದನೆಗೆ, ವ್ಯಂಗ್ಯಕ್ಕೆ, ದೂಷಣೆಗೆ, ಛೀ-ಥೂಗಳಿಗೆ ಗುರಿಯಾಗಿದ್ದ ಸಂಪ್ರದಾಯವೊಂದು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಅದೇ ಪಕ್ಷಾಂತರ. ಅಲ್ಲಿಂದಿಲ್ಲಿಗೆ ಜಿಗಿಯುತ್ತಾ ರಾಜಕೀಯದಲ್ಲಿ ಪಕ್ಷ-ಸಿದ್ಧಾಂತಗಳೆಲ್ಲ “ಹೇಳಲು ಮಾತ್ರ” ಎಂಬ ಭಾವನೆ ಮೂಡಿಸುವಲ್ಲಿ ಈ ಪಕ್ಷಾಂತರಿಗಳ ಪಾತ್ರ ಮಹತ್ವದ್ದು. ಯಾವ ರಾಜಕೀಯ ಪಕ್ಷದಲ್ಲಿಯೂ ತತ್ವ ಸಿದ್ಧಾಂತಗಳೆಂಬ ಪದಗಳಿಲ್ಲ, ರಾಜಕೀಯ ಕ್ಷೇತ್ರವು “ವಸುಧೈವ ಕುಟುಂಬಕಂ” ಎಂಬಂತೆ. ಎಲ್ಲರೂ ಇಲ್ಲಿ ಒಂದೇ, ಜಾತಿ-ಮತ ಭೇದಗಳಿಲ್ಲ. ತಪ್ಪು-ಒಪ್ಪುಗಳ ಮಧ್ಯೆ ವ್ಯತ್ಯಾಸವಿಲ್ಲ, ಪ್ರಾಮಾಣಿಕರು-ಅಪ್ರಾಮಾಣಿಕರಿಗೆ ಭಿನ್ನತೆ ಇಲ್ಲ, ಪಕ್ಷದ್ರೋಹಿಗಳು-ಪಕ್ಷ ನಿಷ್ಠರ ಮಧ್ಯೆ ಯಾವುದೇ ವೈಪರೀತ್ಯಗಳಿಲ್ಲ. ಇಂತದ್ದೊಂದು ಭಾವನೆ ಮತದಾರರ ಮನದಲ್ಲಿ ಅಚ್ಚಳಿಯದೆ ಮೂಡುವಂತಾಗಿದೆ.

ಮಾಜಿ ಮುಖ್ಯಮಂತ್ರಿ, ರಾಜ್ಯದಲ್ಲಿ ಹಲವು ಪಕ್ಷಗಳ ಮುಖಂಡರಾಗಿ ಮೆರೆದು ತಮ್ಮತನವನ್ನು ಕಾಯ್ದುಕೊಂಡ ಎಸ್.ಬಂಗಾರಪ್ಪ ಅವರ ಇತಿಹಾಸವೇ ನಮ್ಮ ಕಣ್ಣ ಮುಂದಿದೆ. ಕಾಂಗ್ರೆಸ್, ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಾರ್ಟಿ, ಬಿಜೆಪಿ, ಸಮಾಜವಾದಿ ಪಕ್ಷ… ಹೀಗೆ ಎಲ್ಲ ಪಕ್ಷಗಳಾಗಿ ಇದೀಗ “ಮತ್ತೊಂದು ಬಾರಿ” ಮರಳಿದ್ದಾರೆ ಕಾಂಗ್ರೆಸಿಗೆ. ಅವರ ವರ್ಣಮಯ ಅಲ್ಲಲ್ಲ ವೈವಿಧ್ಯಮಯ ರಾಜಕೀಯ ಜೀವನದ ತಿರುಳೇ ಅದು.

ಇಂಥದ್ದೇ ಸಂಪ್ರದಾಯಕ್ಕೆ ಹೆಚ್ಚು ಕಾವು ದೊರೆತಿದ್ದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಾಗ. ಅಧಿಕಾರಕ್ಕಾಗಿ ಅತ್ತಿಂದಿತ್ತ ಜಿಗಿಯುವ ಸಂಪ್ರದಾಯ ಅಂದಿನಿಂದ ಇಂದಿನವರೆಗೂ ‘ಆಪರೇಶನ್ ಕಮಲ’ ಹೆಸರಿನಲ್ಲಿ ಮುಂದುವರಿದಿದೆ. ಅಲ್ಲಿ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ಬಂದವರ ಮಧ್ಯೆ ತೀವ್ರ ಗೊಂದಲದಲ್ಲಿ ಸಿಲುಕಿರುವುದು ಕರ್ನಾಟಕದ ಮತದಾರರು. ಈಗಲೂ ಕೂಡ, ಚುನಾವಣಾ ಕಣದಲ್ಲಿರುವ ಹೆಚ್ಚಿನ ಮುಖ ಪರಿಚಯ ಮತದಾರರಿಗಿದೆ. ಆದರೆ “ಈಗ” ಯಾರು, ಯಾವ ಪಕ್ಷದಲ್ಲಿದ್ದಾರೆ ಎಂಬುದೇ ಗೊಂದಲದ ಸಂಗತಿ. ಚುನಾವಣೆ ಸಮೀಪಿಸುತ್ತಿರುವಂತೆಯೇ ವಿಧಾನಸಭೆಗೆ ರಾಜೀನಾಮೆ ನೀಡಿ ಪಕ್ಷಾಂತರ ಮಾಡುತ್ತಾ ಇರುವವರ ಸಂಖ್ಯೆಯೂ ಹೆಚ್ಚಾಗತೊಡಗಿದೆ.

ಕಟ್ಟಾ “ಜಾತ್ಯತೀತ”ವಾದಿಗಳು ನಾವು ಎಂದು ಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಕೆಲವೇ ಕ್ಷಣದ ಹಿಂದಿನವರೆಗೂ “ಕೋಮುವಾದಿ” ಎಂದು ತೆಗಳುತ್ತಿದ್ದ ಪಕ್ಷದಲ್ಲಿ ದಿಢೀರ್ ಆಗಿ “ಹಿರಿಯ ಮುಖಂಡ”ರಾಗಿಬಿಡುತ್ತಾರೆ! ಕಾಂಗ್ರೆಸಿಗೆ ಗುಡ್ ಬೈ ಹೇಳಿದ್ದ ಮತ್ತೆ ಕೆಲವರು, “ಕೋಮುವಾದಿ” ಪಕ್ಷ ಬದಲಾಗಲೇ ಇಲ್ಲ ಎನ್ನುತ್ತಾ ಮಾತೃಪಕ್ಷಕ್ಕೆ ಮರಳುವುದನ್ನು ಕೂಡ ಭರ್ಜರಿಯಾಗಿಯೇ ಆಚರಿಸಿಕೊಂಡುಬಿಡುತ್ತಾರೆ. ಜಾತ್ಯತೀತ ಜನತಾ ದಳವನ್ನು ‘ತಂದೆ ಮಕ್ಕಳ ಪಕ್ಷ’ ಎನ್ನುತ್ತಾ ದೂರುತ್ತಿದ್ದವರಿಗೆ, “ಮಣ್ಣಿನ ಮಕ್ಕಳ ಕಲ್ಯಾಣಕ್ಕೆ, ಅಲ್ಪಸಂಖ್ಯಾತರ ರಕ್ಷಣೆಗೆ ಇರುವ ಏಕೈಕ ಪಕ್ಷವಿದು” ಎಂಬುದು ದಿಢೀರ್ ಆಗಿ ‘ಹೊಳೆದು’ಬಿಡುತ್ತದೆ!

ಒಟ್ಟಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರಿಂದಾಗಿ ತತ್ವ-ಸಿದ್ಧಾಂತವುಳ್ಳ ನಿಷ್ಠಾವಂತ ನಾಯಕರ ಕೊರತೆ ಎದ್ದುಗಾಣುತ್ತಿದೆ. ಈ ಜಿಗಿತಗಾರರನ್ನು ಅತೀ ಹೆಚ್ಚು ಬುಟ್ಟಿಗೆ ಹಾಕಿಕೊಂಡಿದ್ದೆಂದರೆ ಆಡಳಿತಾರೂಢ ಬಿಜೆಪಿ. ಬೇರೆ ಪಕ್ಷಗಳ ಹಲವು ಶಾಸಕರು ತಮ್ಮ ಶಾಸಕತ್ವವನ್ನು ತೊರೆದು, ಬಿಜೆಪಿ ಸೇರಿ, ಬಿಜೆಪಿ ಟಿಕೆಟಿನಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ, ಸ್ಪರ್ಧಿಸಲು ಹವಣಿಸುತ್ತಿದ್ದಾರೆ ಮತ್ತೆ ಕೆಲವರು ಲೋಕಸಭೆ ಟಿಕೆಟಿಗಾಗಿಯೂ ಈ ಹೈಜಂಪ್ ಮಾಡಿದ್ದಾರೆ. ಬಿಜೆಪಿ ಕೈಯಲ್ಲಿ ರಾಜ್ಯದಲ್ಲಂತೂ ಅಧಿಕಾರವಿದೆ, ರಾಷ್ಟ್ರದಲ್ಲಿಯೂ ಏನಾದರೂ ಇದೇ ರೀತಿ ಸಿಕ್ಕಿಬಿಟ್ಟರೆ ಎಂಬ ಆಶಾವಾದದಿಂದ ಈ ‘ಹೈಜಂಪರ್’ಗಳು ಬಿಜೆಪಿಯತ್ತ ಹೆಚ್ಚು ಹೆಚ್ಚು ಹಾರುತ್ತಿದ್ದಾರೆ.

ಅತ್ತ ಕಡೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಕೂಡ ಈ ರೀತಿಯಲ್ಲಿ “ಕೊಡು-ಕೊಳ್ಳುವಿಕೆ” ನಡೆದಿದೆ. ಅಲ್ಲಿ ಅಸಮಾಧಾನಗೊಂಡವರು ಇಲ್ಲಿಗೆ, ಇಲ್ಲಿ ಕೋಪಗೊಂಡವರು ಅಲ್ಲಿಗೆ ಲಾಂಗ್ ಜಂಪ್ ಕೈಗೊಂಡಿದ್ದಾರೆ.

ಅದರಲ್ಲಿ ತೀರಾ ಅಚ್ಚರಿ ಹುಟ್ಟಿಸುವಂತಹ ಕೆಲವು ಹೈ ಜಂಪ್‌ಗಳು ಕೂಡ ಇವೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸ್ಪರ್ಧಿಸಿ ಜಯಗಳಿಸಿದ್ದ ಬಂಗಾರಪ್ಪ, ಮತ್ತೆ ಸಮಾಜವಾದಿಯೂ ಆಗಿ ಸಂಸದರಾಗಿ, ಇದೀಗ ಮತ್ತೆ ಕಾಂಗ್ರೆಸ್ ಸಂಸದರಾಗಲು ಹವಣಿಸುತ್ತಿದ್ದಾರೆ.

ಇನ್ನು, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ಉತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ನೆಲಕಚ್ಚಿದ್ದಾಗ 1978ರ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಗಾಗಿ “ಸುರಕ್ಷಿತ ನೆಲೆ” ರೂಪದಲ್ಲಿ ಚಿಕ್ಕಮಗಳೂರು ಕ್ಷೇತ್ರ ತೆರವುಗೊಳಿಸಿದ್ದ, “ನಿಷ್ಠಾವಂತ ಕಾಂಗ್ರೆಸಿಗ”, ರಾಜ್ಯದ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಈಗ ಬಿಜೆಪಿ ಅಭ್ಯರ್ಥಿ! ಅವರು ಎದುರುಹಾಕಿಕೊಂಡಿರುವುದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸಿನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರನ್ನು. ಇತ್ತೀಚೆಗೆ ಶರೀಫ್ ಕೂಡ ಪಕ್ಷ ಬದಲಿಸುತ್ತಾರೆ ಎಂಬ ಊಹಾಪೋಹಗಳಿದ್ದದ್ದಂತೂ ನಿಜ.

ಬಿಜೆಪಿಯ ರಣಾಂಗಣಕ್ಕೆ ಹೊಸ ಸೇರ್ಪಡೆ ಎಂದರೆ ಮಾಜಿ ಶಾಸಕ, ಕಾಂಗ್ರೆಸಿಗ ವಿ.ಸೋಮಣ್ಣ. ಅವರ ಜಂಪಿಂಗ್ ಇತಿಹಾಸವೂ ತೀರಾ ದೊಡ್ಡದು. ಜನತಾ ಪಾರ್ಟಿ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದ್ದ ಅವರು, ಆ ಬಳಿಕ ಸಮಾಜವಾದಿ ಜನತಾ ದಳ ಸೇರಿದ್ದರು. ನಂತರ ಎಚ್.ಡಿ.ದೇವೇಗೌಡರನ್ನು ‘ಅಪ್ಪಾಜಿ’ ಎಂದೆ ಕರೆಯುತ್ತಿದ್ದ ಸೋಮಣ್ಣ ಜನತಾ ದಳದಲ್ಲಿ ಸುದೀರ್ಘ ಕಾಲ ಇದ್ದರು, ಮಂತ್ರಿಯೂ ಆದರು. 2000ರಲ್ಲಿ ದೇವೇಗೌಡರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದರು.

ಚಂದ್ರೇಗೌಡ ಅವರೊಂದಿಗೆ ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ಸಚಿವ ಎಲ್.ಶಿವರಾಮೇಗೌಡರಿಗೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕಿದೆ. ಅಲ್ಲಿ ಅಂಬರೀಶ್ ಅವರು ಕಾಂಗ್ರೆಸ್ ಹಾಲಿ ಸಂಸದರಾಗಿದ್ದು, ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿತ್ತು.

ಉತ್ತರ ಕರ್ನಾಟಕದ ಕಾಂಗ್ರೆಸ್ ನೇತಾರರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಕೂಡ ಜೆಡಿಎಸ್‌ನಲ್ಲಿಯೂ ಅಧಿಕಾರದ ಸವಿಯುಂಡವರು. ಈಗ ಬಿಜೆಪಿ ತೆಕ್ಕೆಯಲ್ಲಿ ಸೇರಿಕೊಂಡಿದ್ದಾರೆ ಮತ್ತು ಬೀದರಿನಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಎಂ.ಧರ್ಮ ಸಿಂಗ್ ವಿರುದ್ಧ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಮಗ ಸೂರ್ಯಕಾಂತ ನಾಗಮಾರಪಲ್ಲಿ ಕೂಡ ಬೀದರ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ

ಇನ್ನುಳಿದಂತೆ, ಕಾಂಗ್ರೆಸ್ ಮತ್ತು ವಿಧಾನಸಭಾ ಸದಸ್ಯತ್ವ ತ್ಯಜಿಸಿ ಬಿಜೆಪಿ ತೆಕ್ಕೆಗೆ ಬಂದವರೆಂದರೆ ನಟ, ನಿರ್ಮಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸಿ.ಪಿ.ಯೋಗೇಶ್ವರ್. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ನ ಲೋಕಸಭಾ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಹಾಲಿ ಸಂಸದೆ ತೇಜಸ್ವಿನಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ವಿಶೇಷವೇನೆಂದ್ರೆ, ಇದೇ ಯೋಗೇಶ್ವರ್ ಬೆಂಗಳೂರು ಹೊರವಲಯದ ಮೆಗಾ ಸಿಟಿ ಯೋಜನೆಯಲ್ಲಿ ಫ್ಲ್ಯಾಟ್ ನೀಡುವುದಾಗಿ ಜನರನ್ನು ನಂಬಿಸಿ ವಂಚಿಸಿದ್ದಾರೆ ಎಂದು ಇದೇ ಬಿಜೆಪಿಯು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ಈಗ ಎಲ್ಲವೂ ಠುಸ್.

ಬಿಜೆಪಿಯಿಂದ ಕಾಂಗ್ರೆಸ್ ತೆಕ್ಕೆಗೆ ಜಾರಿಕೊಂಡಿದ್ದೆಂದರೆ ಬೆಂಗಳೂರಿನ ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಸಂಸದರೂ ಆಗಿದ್ದ ಎಚ್.ಟಿ.ಸಾಂಗ್ಲಿಯಾನ. ಬೆಂಗಳೂರು ಉತ್ತರದಲ್ಲಿ ಅವರು ಬಿಜೆಪಿ ಟಿಕೆಟಿನಲ್ಲಿ ಕಳೆದ ಬಾರಿ ಸ್ಪರ್ಧಿಸಿ ಜಯಿಸಿದ್ದರು. ಆ ನಂತರ ಸಮಾಜವಾದಿ ಪಕ್ಷದಿಂದ ಮರಳಿ ಗೂಡಿಗೆ ಬಂಗಾರಪ್ಪ ಬಂದಿದ್ದು, ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಪುತ್ರ, ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಆದರೆ ಜೆಡಿಎಸ್‌ಗೆ ಹೇಳಿಕೊಳ್ಳಬಹುದಾದ ಬಲಾಢ್ಯ ನಾಯಕರು ಯಾರೂ ವಲಸೆ ಬಂದಿಲ್ಲ. ಸಣ್ಣ ಪುಟ್ಟ ಮುಖಂಡರು ಅಲ್ಲಲ್ಲಿ ಸೇರಿಕೊಂಡಿದ್ದಾರಷ್ಟೆ.

ಜನರ ಹಣವನ್ನು ಅಷ್ಟೊಂದು ಪ್ರಮಾಣದಲ್ಲಿ ಖರ್ಚು ವೆಚ್ಚ ಮಾಡಿ, ಚುನಾವಣೆ ನಡೆಸಿ ಆರಿಸಿ ಕಳುಹಿಸಿದರೆ, ಇವರೆಲ್ಲರೂ ಸುಲಭವಾಗಿ ಪಕ್ಷಕ್ಕೆ, ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ, ಮರಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಾರೆ. ಅದಕ್ಕೆ ಮತ್ತಷ್ಟು ತೆರಿಗೆದಾರರ ಹಣ! ಕಳೆದ ಬಾರಿ ಎಂಟು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಬೇಕಾಯಿತು. ಈ ವರ್ಷದಲ್ಲಿ ಇನ್ನೆಷ್ಟು ಉಪ ಚುನಾವಣೆಗಳು ನಡೆಯಬೇಕೋ… ತೆರಿಗೆದಾರರ ಹಣ ಇದಕ್ಕಾಗಿ ವ್ಯರ್ಥ ಮಾಡಬೇಕೋ… ಬಲ್ಲವರಾರು?

ಇಷ್ಟಕ್ಕೂ ಬಿಜೆಪಿಯಿಂದ ಹೋಗಿ ಕಾಂಗ್ರೆಸ್ಸೋ, ಜೆಡಿಎಸ್ಸೋ ಸೇರಿಕೊಂಡು ಮರಳಿ ಬಿಜೆಪಿಗೆ ಬಂದವರು ಎಂಥೆಂಥ ದ್ರೋಹಗಳನ್ನು ಮಾಡಿಹೋಗಿದ್ದಾರೆ! ಅಂಥವರನ್ನು ಬಿಜೆಪಿ ಕೂಡ ಕ್ಷಮಿಸಿ ‘ಕ್ಷಮಯಾಧರಿತ್ರಿ’ ಅನ್ನಿಸಿಕೊಂಡು ಒಪ್ಪಿಕೊಂಡುಬಿಟ್ಟಿದೆ, ಅಪ್ಪಿಕೊಂಡುಬಿಟ್ಟಿದೆ.

ಒಟ್ಟಿನಲ್ಲಿ ಇವರು ಇಂತಹ ಪಕ್ಷ ಎಂದುಕೊಂಡು ಯಾರು ಕೂಡ ಮತ ಹಾಕದ ಪರಿಸ್ಥಿತಿ. ಜನ ನೋಡಿ ಮತಹಾಕಲು ಅಥವಾ ಅವರ ಕೆಲಸ ನೋಡಿ ಮತ ಹಾಕಲು ಇದು ಮತದಾರರಿಗೆ ಸಕಾಲ ಎಂದಷ್ಟೇ ತೃಪ್ತಿಪಟ್ಟುಕೊಳ್ಳಬಹುದು. ಯಾರು ಯಾವ ಪಕ್ಷದಲ್ಲಿದ್ದಾರೆ ಎಂದು ಹೇಳುವುದೇ ಕಷ್ಟವಾದಂತಹ ಪರಿಸ್ಥಿತಿ. ಒಟ್ಟಿನಲ್ಲಿ ಮತದಾರನಿಗೆ ಕೋಮುವಾದಿಗಳು ಯಾರು, ಜಾತ್ಯತೀತರು ಯಾರು, ಪಕ್ಷಾಂತರಿಗಳು ಯಾರು ಎಂದು ಪತ್ತೆ ಹಚ್ಚುವ, ಮೆದುಳಿಗೆ ಮೇವು, ಮೇಧಾಶಕ್ತಿಗೆ ಕಸರತ್ತು ನೀಡುವ ಅತ್ಯುತ್ತಮ ಪಝಲ್ ಗೇಮ್ ಈ ಬಾರಿಯ ಚುನಾವಣೆ!
(ವೆಬ್‌ದುನಿಯಾದಲ್ಲಿ ಪ್ರಕಟ)

ದಕ್ಷಿಣೆ-ವರದಕ್ಷಿಣೆ

ದಕ್ಷಿಣೆ
ಆತ ನಗ ತಾರದಿದ್ದರೆ
ಆಕೆ ನಗಲಾರಳು!

ಆತ ನೀಡದಿದ್ದರೆ ನಗದು
ಈಕೆಯ ಮುಖವೆಂದಿಗೂ ನಗದು!

ಆತನ ಬಳಿ ಇಲ್ಲದಿದ್ದರೆ ನಗದು
ನಂಬಿ ಬಂದವಳ ಮುಖಾರವಿಂದವೂ ನಗದು

ವರದಕ್ಷಿಣೆ
ಈಕೆ ನಗ ತಾರದಿದ್ದರೆ
ಆತ ನಗಲಾರನು!

ಈಕೆ ನಗದು ತಾರದಿದ್ದರೆ
ಆತನ ಮುಖವೆಂದಿಗೂ ನಗದು!

ಆಕೆಯ ಕೈಗಳಲ್ಲಿ ಇಲ್ಲದಿರೆ ನಗದು
ಅತ್ತೆಯ ವದನವೆಂದಿಗೂ ನಗದು!

(ತೋಚಿದ್ದು ಗೀಚಿದ್ದು!)

‘ವಿರೋಧಿ’ಗಾಗಿ ಪ್ರಣಾಳಿಕೆ ಸಿದ್ಧಪಡಿಸೋಣ!

ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ.

ಮತ್ತೆ ಬಂದಿದೆ ನವ ಯುಗ. ಪ್ರತೀ ಹೊಸ ಯುಗದ ಆದಿಯಲ್ಲಿ ನಾವು ಹೇಳೋದು “ಕಳೆದ ವರ್ಷ ತೀರಾ ಚಿಂತಾಜನಕವಾಗಿತ್ತು. ಸಿಹಿಗಿಂತ ಕಹಿಯೇ ಹೆಚ್ಚಿತ್ತು”!. ಈ ಬಾರಿಯೂ ಹೇಳುವುದು ಅದನ್ನೇ. ಬೇಕಿದ್ದರೆ ಒಂದಷ್ಟು ಜೋರಾಗಿಯೇ.

ಯಾಕೆ? ಸರ್ವಧಾರಿ ಸಂವತ್ಸರದತ್ತ ಕಣ್ಣು ಹಾಯಿಸಲು ಭಯಾತಂಕ. ಉಗ್ರರ ದಾಳಿಗಳು, ಹಿಂಸೆ, ಸಾವು ನೋವಿನ ಜೊತೆಗೆ ಈ ಬಾರಿ ಬಂದೆರಗಿತಲ್ಲ… ಬುಡಕ್ಕೇ ಕೊಡಲಿಯೇಟು! ಅದೇ ಆರ್ಥಿಕ ಹಿಂಜರಿತವೆಂಬ ಮಹಾಮಾರಿ. ಅದೆಷ್ಟು ಮಂದಿ ಉದ್ಯೋಗ ಕಳೆದುಕೊಂಡರು, ಅದೆಷ್ಟು ಮಂದಿಯ ವೇತನ ಕಡಿತವಾಯಿತು, ಅದೆಷ್ಟು ನಷ್ಟವಾಯಿತು! ಛೆ, ಛೆ… ಇದ್ದದ್ದೇ ಇದೆಲ್ಲಾ…ಮರೆತು ಬಿಡೋಣ ಅವನ್ನು…

ಪರಸ್ಪರ ಸಂಘರ್ಷಮಯ, ತದ್ವಿರುದ್ಧ ಗುಣಗಳ ಪ್ರತೀಕವಾಗಿರುವ ಬೇವು ಮತ್ತು ಬೆಲ್ಲದ ಬಗ್ಗೆ ಒಂದು ಮಾತು. ಬೇವನ್ನು ನೋವು ಎಂದೂ ಬೆಲ್ಲವನ್ನು ಗೆಲುವೆಂದೂ ನಿಜಜೀವನದಲ್ಲಿ ಪರಿಗಣಿಸಿ ನೋಡಿದರೆ, ಬೆಲ್ಲದ ಪಕ್ಕದಲ್ಲಿ ಬೇವು ಇದ್ದಾಗ ಮಾತ್ರವಷ್ಟೇ ಬಲ್ಲವನೇ ಬಲ್ಲ ಬೆಲ್ಲದಾ ರುಚಿಯ! ಹಂದಿಯಿದ್ದರಷ್ಟೇ ಕೇರಿ ಎನಿತು ಶುದ್ಧಿಯೋ ಹಾಗೆ, ಶುದ್ಧಾಚಾರಕ್ಕೆ ಮಹತ್ವ ಬರುವುದು ಅಲ್ಲೇ ಎಂದು ದಾಸರು ಹೇಳಿದ್ದೂ ಇದೇ ಕಾರಣಕ್ಕೆ. ಯುಗಾದಿಯ ಬೇವು-ಬೆಲ್ಲ, ವಿರಸ-ಸರಸದ ಪ್ರತೀಕವೂ ಹೌದು. ಅದಕ್ಕಲ್ಲವೇ ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂದಿದ್ದು ತಿಳಿದವರು!

ಯುಗದ ಆದಿಯ ದಿನ ಕೆಟ್ಟ ಘಳಿಗೆಗಳನ್ನೆಲ್ಲಾ ಬೇವು ಎಂಬಂತೆ ಮರೆತು ವಿರೋಧಿಯನ್ನು ಸ್ವಾಗತಿಸಲು ಸಿದ್ಧರಾಗೋಣ. ವಾಸ್ತವಿಕ ಪ್ರಪಂಚದಲ್ಲಿಯೂ ನಿಜ ವೈರಿಗಳನ್ನು ಪ್ರೀತಿಯಿಂದಲೇ ಗೆಲ್ಲಬಹುದಲ್ಲವೇ? ಸ್ವಾಗತಿಸೋಣವಂತೆ. ಆ ಒಂದು ಅನರ್ಘ್ಯ ನಿಯಮವನ್ನು ಅನುಸರಿಸಲು ಸಿದ್ಧರಾಗಬೇಕಿದೆ ಜನ. ಹೊಸ ವರ್ಷ, ಹೊಸ ಹರ್ಷ, ಹೊಸ ಆಶಾವಾದ, ನವ ಭರವಸೆಗಳ ಒಸಗೆ, ಸರ್ವರ ಜೀವನದಲ್ಲಿಯೂ ಚಿಗುರೊಡೆಯಬೇಕು. ಆಶಾವಾದವೇ ಮನುಷ್ಯನ ಜೀವನೋತ್ಸಾಹಕ್ಕೆ, ಬೆಟ್ಟದಷ್ಟು ಕನವರಿಕೆಗಳಿಗೆ ಮೂಲ ಪ್ರೇರಣೆಯಾಗುತ್ತದೆ. ಹೀಗಿರಲು, ಯುಗಾದಿ ಹಬ್ಬದಂದು ನೋವ ಮರೆತು ನಲಿವಿಗಾಗಿ ಕಾತರಿಸೋಣ. ಈ ಮೂಲಕ ತುಕ್ಕು ಹಿಡಿದಂತಿರುವ ಮನಸ್ಸಿಗೆ ಒರೆ ಹಚ್ಚಿ ಶುಭ್ರಗೊಳಿಸಿ, ಹೊಸ ಸಂವತ್ಸರಕ್ಕೆ ಸಿದ್ಧಗೊಳಿಸೋಣ.

ಬೇವು ಬೆಲ್ಲವು ಬೇಕು ಸುಖದ ಬಾಳುವೆಗೆ, ಬಾಳುವೆಯಾ ಆ ಸುಖಕೆ. ಅನಿವಾರ್ಯವೆನಿಸೋ ಕಹಿಯೊಡಗೂಡಿ ಬಾಳಲು ಕಲಿತು, ಸಿಹಿಯ ಬಾಳುವೆಗಾಗಿ ಹಂಬಲಿಸೋಣ. ಎಲ್ಲಕ್ಕೂ ಮಿಗಿಲಾಗಿ, ನವ ನವೋನ್ಮೇಷಕ್ಕಾಗಿ ಕಾತರಿಸುತ್ತಾ, ಹೊಸ ವರುಷದಲ್ಲಿ ಏನೆಲ್ಲಾ ಮಾಡಬಹುದೆಂಬುದರ ಪ್ರಣಾಳಿಕೆ ಸಿದ್ಧಪಡಿಸಿ, ‘ವಿರೋಧಿ’ಯನ್ನು ಎದುರುಗೊಳ್ಳೋಣ…

ವಿರೋಧಿ ಸಂವತ್ಸರವು ವಿರೋಧಿಗಳ ಮನ ಗೆಲ್ಲುವಲ್ಲಿ ಪೂರಕವಾಗಿರಲಿ, ಸಂಭ್ರಮ ಪಡುವ ಹೊಸ ಅವಕಾಶಗಳನ್ನು ಹೆಚ್ಚಿಸಲಿ. ಸಂತಸವುಳ್ಳ ಪ್ರತಿ ದಿನವೂ ಹೊಸ ಯುಗವಾಗಲಿ, ಆದರೆ ಬೇಸರವಿರುವ ಪ್ರತಿ ದಿನ ಮಾತ್ರ ಯುಗವಾಗಿ ಭಾಸವಾಗದಿರಲಿ..!

ಕೊರಡು ಕೊನರಲಿ, ಬರಡು ಹಯನು ಆಗಲಿ… ಸರ್ವರಿಗೂ ಒಳಿತಾಗಲಿ…

ಕೌನ್ ಬನೇಗಾ ಪ್ರಧಾನ ಮಂತ್ರಿ…?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮಾತ್ರ ಇದು ಸಾಧ್ಯ. ಇಲ್ಲಿ ದೇಶದ ಪ್ರಧಾನ ಅಧಿಕಾರ ಕೇಂದ್ರವಾದ ಪ್ರಧಾನಮಂತ್ರಿ ಹುದ್ದೆಯನ್ನು ಯಾರು ಬೇಕಾದರೂ ಬಯಸಬಹುದು. ಅದಕ್ಕೇ ಕೇಂದ್ರ ಪಂಚಾಯತ್ ರಾಜ್ ಸಚಿವ ಮಣಿಶಂಕರ್ ಅಯ್ಯರ್ ಹೇಳಿದ್ದು :”ಪ್ರಧಾನಿ ಹುದ್ದೆ ಎಂಬುದು ಟಿವಿಯಲ್ಲಿ ಬರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಂತಾಗಿದೆ-ಕೌನ್ ಬನೇಗಾ ಪ್ರಧಾನಮಂತ್ರಿ!”.

ಪ್ರಧಾನಿ ಹುದ್ದೆಗೇರಬೇಕಾದರೆ ದೇಶ ಮುನ್ನಡೆಸುವ ಸಾಮರ್ಥ್ಯ, ರಾಜತಾಂತ್ರಿಕ ಪರಿಣತಿ, ದೇಶದ ಸಮಗ್ರ ಸಮಸ್ಯೆಗಳ ಅರಿವು, ಅಸ್ಖಲಿತ ವಾಕ್ಚಾತುರ್ಯ, ಸಮಸ್ಯೆಗಳಿಗೆ- ಪ್ರಶ್ನೆಗಳಿಗೆ ತತ್‌ಕ್ಷಣ ಉತ್ತರ ಕೊಡುವ ಚಾಣಾಕ್ಷತೆ, ಎಲ್ಲಕ್ಕೂ ಮುಖ್ಯವಾಗಿ ನಾಯಕತ್ವದ ಗುಣವಿರಬೇಕು. ಆದರೋ ಇಲ್ಲಿ ಇವೆಲ್ಲ ಅರ್ಹತೆಗಳು ಗೌಣ. ಹಣ ಬಲ, ಸಂಖ್ಯಾ ಬಲ, ರಾಜಕೀಯ ಬಲ- ಇವುಗಳೇ ಸಾಕು ಪ್ರಧಾನಿಯಾಗಲು. ಅಥವಾ ಇವ್ಯಾವುವೂ ಬೇಕಾಗಿಯೂ ಇಲ್ಲ, ಒಂದಿಷ್ಟು ರಾಜಕೀಯ ಅನುಭವವಿದ್ದರೆ ಸಾಕು ಎಂಬುದು ಈ ಹಿಂದಿನ ಕೆಲವೊಂದು ಆಕಾಂಕ್ಷಿಗಳ ಚರಿತ್ರೆಯನ್ನು ನೋಡಿದರೆ ತಿಳಿದುಬರುತ್ತದೆ.

ಅಮೆರಿಕಕ್ಕೆ ಹೋಲಿಸಿದರೆ, ಅಲ್ಲಿ ಅಧ್ಯಕ್ಷೀಯ ಪದ್ಧತಿಯಿದೆ. ರಾಷ್ಟ್ರಾಧ್ಯಕ್ಷನೇ ಮುಖ್ಯ. ಭಾರತದಲ್ಲಿ ಸಂಸದೀಯ ಪ್ರಜಾಸತ್ತೆಯಿದ್ದು, ಇಲ್ಲಿ ಪ್ರಧಾನಿಗೆ ಆದ್ಯತೆ. ಅದರೆ ಅಲ್ಲಿ, ರಾಷ್ಟ್ರಾಧ್ಯಕ್ಷ ಪದವಿಗೆ ಆಯ್ಕೆ ನೆರವೇರುವ ವಿಧಾನವಿದೆಯಲ್ಲ, ಅತ್ಯಂತ ಅದ್ಭುತ, ಅನೂಹ್ಯ. ದೇಶವನ್ನು ಯಾರ ಕೈಗಿಡಬೇಕೆಂದು ಜನರು ಎಚ್ಚರಿಕೆಯಿಂದ ನಿರ್ಧರಿಸಲು ಅಲ್ಲಿ ಅವಕಾಶವಿರುತ್ತದೆ.

ಹೆಚ್ಚೆಂದರೆ ಎರಡ್ಮೂರು ಪಕ್ಷಗಳು ತಮ್ಮ ಪಕ್ಷದೊಳಗೇ ಉಮೇದುವಾರರನ್ನು ಮತದಾನದ ಮೂಲಕ ಆರಿಸುತ್ತವೆ. ಅಂದರೆ ಈ ಪದವಿಗೆ ತಮ್ಮ ಪಕ್ಷದಿಂದ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆಯೇ ಒಂದು ಪಕ್ಷದೊಳಗೆ ಚುನಾವಣೆ. ಅವರಲ್ಲಿ ಆಯ್ಕೆಯಾದವ, ವಿರುದ್ಧ ಪಕ್ಷದಿಂದಲೂ ಇದೇ ರೀತಿ ಆಯ್ಕೆಯಾಗಿ ಬಂದ ಅಭ್ಯರ್ಥಿಯನ್ನು ಮಹಾ ಮತದಾನದಲ್ಲಿ ಎದುರಿಸಬೇಕು. ಈ ಪದವಿಗೆ ಚುನಾವಣೆಗಳು ನಡೆಯುವ ಮುನ್ನ ಆ ಅಭ್ಯರ್ಥಿಗಳ ಮಧ್ಯೆ ಅಲ್ಲಲ್ಲಿ ಮುಖಾಮುಖಿ ಚರ್ಚೆ ಏರ್ಪಡಿಸಲಾಗುತ್ತದೆ. ಒಂದು ನಿರ್ದಿಷ್ಟ ಸಮಸ್ಯೆಗೆ ಪರಿಹಾರ ಹೇಗೆ ಕಂಡುಹುಡುಕುತ್ತೀರಿ (ಉದಾಹರಣೆಗೆ ಈಗ ಜಗತ್ತನ್ನೇ ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟು) ಎಂಬ ಬಗ್ಗೆ ಅಭ್ಯರ್ಥಿಗಳಿಗಿರುವ ಜ್ಞಾನವೆಷ್ಟು ಎಂಬುದನ್ನೆಲ್ಲಾ ಅಳೆದು ತೂಗಲು ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ಅಭ್ಯರ್ಥಿಗಳ ಮಧ್ಯೆ ನೇರಾನೇರ ಪ್ರಶ್ನೋತ್ತರ ಕಲಾಪ ನಡೆಯುತ್ತದೆ.

ಅವರಲ್ಲಿ ಈತ ನಮ್ಮ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಎಂಬುದು ಜನರಿಗೆ ಮನದಟ್ಟಾಗುವ ವೇದಿಕೆ ಸಿದ್ಧವಾಗಿರುತ್ತದೆ. ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮ ಅವರು ರಿಪಬ್ಲಿಕನ್ ಪ್ರತಿಸ್ಪರ್ಧಿ ಜಾನ್ ಮೆಕೇನ್ ಎದುರು ಗೆದ್ದದ್ದು ಇದೇ ವಿಧಾನದ ಮೂಲಕ.

ಇಲ್ಲಿ ಈ ಸಂಗತಿಯನ್ನೇಕೆ ಪ್ರಸ್ತಾಪಿಸಿದ್ದು ಎಂದರೆ, ಚುನಾವಣೆ ಘೋಷಣೆಯಾಗುವ ಮುನ್ನವೇ ಮುಂದಿನ ಪ್ರಧಾನಿ ಹುದ್ದೆಗೆ ನಾನು ಅಭ್ಯರ್ಥಿ, ನಾನು ಅಭ್ಯರ್ಥಿ ಎಂಬ ಹೇಳಿಕೆಗಳು ಕೇಳಿಬರತೊಡಗಿದ್ದವು ನಮ್ಮಲ್ಲಿ. ಹೊಸ ಸೇರ್ಪಡೆ ಎಂದರೆ ಹಾಸ್ಯನಟ ಜಸ್ಪಾಲ್ ಭಟ್ಟಿ. ಚಂಡೀಗಢದಿಂದ ತಾವು ಹೊಸದಾಗಿ ಸ್ಥಾಪಿಸಿರುವ ‘ರಿಸೆಶನ್ ಪಾರ್ಟಿ’ ಮೂಲಕ ಪ್ರಧಾನಿಯಾಗುವ ಏಕೈಕ ಉದ್ದೇಶದಿಂದ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ. ಅವರ ಮಾತಿನಲ್ಲಿ ವ್ಯಂಗ್ಯದ ಮೊನಚಿದ್ದರೂ ಅದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಅಂತೆಯೇ, ಈ ಪರಮ ಪವಿತ್ರ ಹುದ್ದೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಯುಪಿಎಯ ಅಭ್ಯರ್ಥಿ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಇದ್ದಾರೆ, ಹಲವು ಸಮಯದಿಂದ ಕಾಯುತ್ತಿರುವ ಎಲ್.ಕೆ.ಆಡ್ವಾಣಿ ಇದ್ದಾರೆ, ನರಸಿಂಹರಾವ್ ಕಾಲದ ಬಳಿಕ ಇತ್ತ ಒಂದು ಕಣ್ಣು ನೆಟ್ಟಿದ್ದ ಶರದ್ ಪವಾರ್, ಈಗ ಬೇಡ ಎನ್ನುವ ರಾಹುಲ್ ಗಾಂಧಿ, ನಾನೂ ಯಾಕಾಗಬಾರದು ಎನ್ನುವ ಲಾಲೂ ಪ್ರಸಾದ್ ಯಾದವ್ ಮತ್ತು ರಾಮ ವಿಲಾಸ್ ಪಾಸ್ವಾನ್, ಇಲ್ಲ ಇಲ್ಲ ಎನ್ನುತ್ತಲೇ ಇರುವ ಎಚ್.ಡಿ.ದೇವೇಗೌಡ, ಅತ್ತಕಡೆಯಿಂದ ಚಂದ್ರಬಾಬು ನಾಯ್ದು, ‘ಸದ್ಯಕ್ಕೆ ಇಲ್ಲ’ ಎನ್ನುವ ಜಯಲಲಿತಾ, ನಂಗೂ ಒಂದು ಕೈನೋಡುವ ಆಸೆಯಿದೆ ಎಂದಿದ್ದ ಭೈರೋನ್ ಸಿಂಗ್ ಶೇಖಾವತ್… ಹೀಗೆ ಎಲ್ಲರೂ ಈ ಹಾಟ್ ಸೀಟ್ ಮೇಲೆ ಕಣ್ಣಿಟ್ಟವರೇ.

ಇಲ್ಲಿ ಅರ್ಹತೆ ಆಧಾರವಾಗುವುದಿಲ್ಲ, ಕಾರ್ಯಕ್ಷಮತೆ ಲೆಕ್ಕಕ್ಕೆ ಬರುವುದಿಲ್ಲ, ಅನುಭವಕ್ಕೆ ಬೆಲೆ ಇಲ್ಲ. ಇಲ್ಲಿರುವುದು ಚೌಕಾಶಿ ಸಾಮರ್ಥ್ಯಕ್ಕೆ ಬೆಲೆ ಮಾತ್ರ. ಇದಕ್ಕೆ ಕಾರಣವೂ ಇಲ್ಲದಿಲ್ಲ, ಯಾವುದೇ ಪಕ್ಷಕ್ಕೆ ಕೂಡ ನಾವಾಗಿಯೇ ಪರಿಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಬಲ್ಲೆವು ಎಂಬ ಆತ್ಮವಿಶ್ವಾಸವಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳದೇ ಕಾರು ಬಾರು. ಹತ್ತು ದಿಕ್ಕು, ನೂರು ದನಿ ಈ ಒಂದು ಪ್ರಧಾನಿ ಪದವಿಗೆ.

ಒಂದು ಪಂಗಡಕ್ಕೆ, ಒಂದು ಜಾತಿಗೆ, ಒಂದು ಕೋಮಿಗೆ, ಒಂದು ಪ್ರದೇಶಕ್ಕೆ, ಒಂದು ನಿರ್ದಿಷ್ಟ ಹಿತಾಸಕ್ತಿಗೆ ಸೀಮಿತವಾಗಿರುವ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಫಳ ಫಳನೆ ಹೊಳೆಯತೊಡಗುತ್ತವೆ. ಇದರಿಂದಾಗಿ ಯಾವುದೇ ಪ್ರಜೆ ಬೇಕಾದರೂ ಪ್ರಭುವಾಗುವ ಕನಸು ಕಾಣುತ್ತಿದ್ದಾರೆ. ಇದು ಅರಾಜಕತೆಗೆ ನಾಂದಿಯೇ? ಅಂದರೆ ನಮ್ಮ ಬಳಿ ಒಂದಷ್ಟು ಸಂಖ್ಯಾಬಲವಿದ್ದರೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣು ಇಡಬಹುದು. ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳ ಅಭಿವೃದ್ಧಿಗೆ ಅತ್ಯಗತ್ಯ ಎಂದು ಹೇಳಬಹುದಾದರೂ, ರಾಷ್ಟ್ರೀಯ ಮಟ್ಟದಲ್ಲಿ? ಹೆಚ್ಚು-ಕಡಿಮೆ ಅವುಗಳ ಅಜೆಂಡಾ ರಾಷ್ಟ್ರ ರಾಜಕಾರಣದಲ್ಲಿ ಅಪ್ರಸ್ತುತವಾಗಬಹುದು. ಈ ಬಗ್ಗೆ ಚಿಂತಿಸಬೇಕಾಗಿದೆ.

ಇನ್ನು, ಈಗಿನ ಪ್ರಧಾನಿ ಅಭ್ಯರ್ಥಿಗಳಲ್ಲಿ ಆ ಹುದ್ದೆಗೆ ತಕ್ಕುದಾದ ಛಾತಿ, ವರ್ಚಸ್ಸಿನ ಕೊರತೆ ಇರುವುದು ಎದ್ದುಕಾಣುತ್ತದೆ. ಇದು ಸಂಸತ್ಸದಸ್ಯ ಸ್ಥಾನಕ್ಕೆ ಟಿಕೆಟ್ ಯಾರಿಗೆ ಕೊಡುವುದು ಎಂಬಲ್ಲಿಂದ ತೊಡಗಿ ಪ್ರಧಾನಿ ಹುದ್ದೆವರೆಗೂ ಈ ನಾಯಕರ ಕೊರತೆ ವ್ಯಾಪಿಸಿದೆ. ಓಟು ಕೊಡುವುದು ಜನರಾದರೂ, ಯಾವುದಾದರೊಂದು ಪಕ್ಷದ ಅಧ್ಯಕ್ಷರು ಪ್ರಧಾನಿಯನ್ನು ‘ನೇಮಕ’ ಮಾಡುತ್ತಾರೆ. ಅಂದರೆ ಪ್ರಧಾನಿಯಾಗಬೇಕಿದ್ದವರು ಪ್ರಜಾಸತ್ತಾತ್ಮಕವಾಗಿ ಚುನಾಯಿಸಿ ಬರಬೇಕಾಗಿಲ್ಲ. ಹುದ್ದೆಗೆ ಏರಿದ ಬಳಿಕ ಚುನಾವಣೆ ಎದುರಿಸಿದರೂ ಸಾಕು! ಕಳೆದ ಲೋಕಸಭೆಯಲ್ಲಿ ಆಗಿದ್ದೂ ಇದೇ. ಭಾರತದ ಸಂಸದೀಯ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹುಶಃ ತೀರಾ ನಿರಾಶಾದಾಯಕ ಬೆಳವಣಿಗೆಯೂ ಹೌದಾಗಿದ್ದರೂ, ಪ್ರಧಾನಿ ಯಾರಾಗುವರು ಎಂಬುದು ಕೊನೆಯವರೆಗೂ ಸಸ್ಪೆನ್ಸ್ ಆಗಿಯೂ, ಥ್ರಿಲ್ಲರ್ ಆಗಿಯೂ ಮಾರ್ಪಡುವ ಪ್ರಕ್ರಿಯೆಯಿದೆಯಲ್ಲ, ಅಲ್ಲಿ ಸಾಕಷ್ಟು ಮನೋರಂಜನೆಯೂ ಇರುತ್ತದೆ ಎಂಬುದು ಅಷ್ಟೇ ದಿಟ.

ಯಾರೇ ಆದರೂ ಪ್ರಧಾನಿ ಆಗಬಹುದು ಎಂಬುದು ಒಂದು ರೀತಿಯಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ನೀತಿಗೆ ತಾರ್ಕಿಕವಾಗಿ ಪೂರಕವಾದರೂ, ಪ್ರಜಾಸತ್ತೆಗೆ ಹಿನ್ನಡೆಯೂ ಹೌದು. ಯಾಕೆಂದರೆ ಜನ ಯಾರಿಗೋ ಮತ ಹಾಕುತ್ತಾರೆ, ಯಾರೋ ಒಬ್ಬರು ಪ್ರಧಾನಿಯಾಗುತ್ತಾರೆ. ಇಲ್ಲಿ ಸಂಖ್ಯೆಗಳೇ ಮುಖ್ಯವಾಗಿಬಿಡುತ್ತವೆ. ಪ್ರಧಾನಿಯಾಗುವವರಿಗೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಎಂದರೇನು, ಪರಮಾಣು ಒಪ್ಪಂದವೇಕೆ, ದೇಶದ ಭಯೋತ್ಪಾದನೆ ನಿಗ್ರಹಿಸುವುದು ಹೇಗೆಂಬ ದೂರದೃಷ್ಟಿಯಿರಬೇಕಿಲ್ಲ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟರ ಮಟ್ಟಿಗೆ ಪಾವಿತ್ರ್ಯ ಕಳೆದುಕೊಂಡಿದೆಯೆಂದರೆ, ಇಲ್ಲಿ ಕ್ರಿಮಿನಲ್ ಕೇಸುಗಳಿದ್ದರೂ ಉನ್ನತ ಹುದ್ದೆಗೇರಬಹುದು. ಇದು ಕೆಲವು ರಾಜ್ಯಗಳ ಮುಖ್ಯಮಂತ್ರಿ ಪಟ್ಟದವರೆಗೆ ಹೋಗಿದೆ, ಅಷ್ಟೇಕೆ ಕೇಂದ್ರದ ಸಚಿವ ಪದವಿವರೆಗೂ ಕ್ರಿಮಿನಲ್‌ಗಳು ತಲುಪಿದ್ದಾರೆ. ಭಾರತಾಂಬೆಯ ಪುಣ್ಯ, ಪ್ರಧಾನಿ ಹುದ್ದೆ ಆ ಮಟ್ಟಕ್ಕೆ ಇನ್ನೂ ಇಳಿದಿಲ್ಲ.

ಹಾಗಿದ್ದರೆ, ಪ್ರಾದೇಶಿಕ ಪಕ್ಷಗಳ ಈ ಪರಿಯ ಬೆಳವಣಿಗೆಯು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದೆಯೇ? ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಹಂಗಿಗೆ ಬೀಳುವಂತಾಗಿರುವುದೇಕೆ? 20-30 ಸಂಸದರನ್ನಿಟ್ಟುಕೊಂಡು 545 ಸದಸ್ಯಬಲದ ಲೋಕಸಭೆಯಲ್ಲಿ ಪ್ರಧಾನಿಯಾಗಬಹುದಾದರೆ, ಅಥವಾ ಯಾವುದಾದರೂ ಅಧಿಕಾರಕ್ಕೇರಿದ ರಾಷ್ಟ್ರೀಯ ಪಕ್ಷವನ್ನು ಗಡಗಡನೆ ನಡುಗಿಸಬಹುದಾದರೆ (ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಎಡಪಕ್ಷಗಳು ಮಾಡಿದಂತೆ) ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವೇ ಅಥವಾ ಅಣಕವೇ? ಬಹುಶಃ ನಮ್ಮ ಸಂವಿಧಾನವನ್ನು ರಚಿಸಿದವರಿಗೆ ಇಂಥದ್ದೊಂದು ಪರಿಸ್ಥಿತಿಯ ಕಲ್ಪನೆಯೇ ಇದ್ದಿರಲಾರದು.

ಒಟ್ಟಾರೆ ಪರಿಣಾಮ? ಒಬ್ಬ ಯಾವುದೇ ಅಧಿಕಾರವಿಲ್ಲದ ದುರ್ಬಲ ಪ್ರಧಾನಮಂತ್ರಿ! ಏನೇ ನಿರ್ಧಾರ ಕೈಗೊಳ್ಳಬೇಕಿದ್ದರೂ, ಪರಿಸ್ಥಿತಿಯ ಕೈಗೊಂಬೆಯಾಗಿರುವ ಆತನಿಗೆ ಎಡದಿಂದ, ಬಲದಿಂದ, ಮೇಲಿಂದ, ಕೆಳಗಿಂದ ‘ಬೆಂಬಲ ಹಿಂತೆಗೆದುಕೊಳ್ತೀವಿ’ ಎಂಬ ಬೆದರಿಕೆ ಯಾವುದೇ ಕ್ಷಣ ಎದುರಾಗಬಹುದು. ಒಂದು ಸಮಷ್ಟಿಯ ಹಿತಕ್ಕಾಗಿ ಅಲ್ಲೊಂದು ಸರ್ವಸಮ್ಮತ ನಿರ್ಧಾರ ಮೂಡಬೇಕಿದ್ದರೆ ಆಕಾಶ ಭೂಮಿ ಒಂದು ಮಾಡಬೇಕಾಗುತ್ತದೆ.

ಈ ಬಾರಿಯ ಚುನಾವಣಾ ದೃಶ್ಯಾವಳಿಗಳನ್ನು ಗಮನಿಸಿದರೆ, ಒಂದು ಪಕ್ಷಕ್ಕೆ, ಒಂದು ಪ್ರಧಾನಿ ಅಭ್ಯರ್ಥಿಗೆ ಪೂರ್ಣ ಬಹುಮತ ದೊರೆಯುವುದೇ ಕಷ್ಟ. ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್‌ಗಳಾಗುತ್ತವೆ ಮತ್ತು ಕಿಂಗ್ ಕೂಡ ಆಗಬಹುದಾಗಿದೆ. ಹಾಗಿದ್ದರೆ ರಾಷ್ಟ್ರೀಯ ಮಟ್ಟದಲ್ಲಿ ದ್ವಿ-ಪಕ್ಷ ಸಿದ್ಧಾಂತ ಒಳ್ಳೆಯದೇ? ನೀವೇನಂತೀರಿ?
[ವೆಬ್‌ದುನಿಯಾದಲ್ಲಿ ಪ್ರಕಟ]

ಇಲ್ಲದ ಚಾಪ್ಲಿನ್ ಪ್ರತಿಮೆ ಮೇಲೆ ದಾಳಿ!

ಬ್ರೇಕಿಂಗ್ ನ್ಯೂಸ್ ಆವಾಂತರಗಳ ಸಾಲಿಗೆ ಮತ್ತು ಇದೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಚಾರ ಗಳಿಸುವವರ ತಂತ್ರಗಾರಿಕೆಗೆ ಇದು ಮತ್ತೊಂದು ಸೇರ್ಪಡೆ. ಹಾಗೆಯೇ ಮಾಧ್ಯಮಗಳ ವಸ್ತುನಿಷ್ಠತೆಗೆ, ಅದರ ವಿಶ್ವಾಸಾರ್ಹತೆಗೆ ಸವಾಲು ಕೂಡ. ಈ ಕಾರಣಕ್ಕೆ, ನಿನ್ನೆಯ ಲೇಖನವನ್ನು ಮತ್ತೆ ಮುಂದುವರಿಸಬೇಕಾಯಿತು, ಮತ್ತಷ್ಟು ಮಾಹಿತಿಗಳೊಂದಿಗೆ.

ಮಾಧ್ಯಮವನ್ನು ತಮ್ಮಿಚ್ಛೆಗಾಗಿ ಯಾವೆಲ್ಲಾ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ಅಥವಾ ಮಾಧ್ಯಮಗಳು ಯಾವ ರೀತಿ ಒಂದು ವಿಷಯದ ಮೇಲೆ ಪ್ರಭಾವ ಬೀರಬಹುದು (!) ಎಂಬುದಕ್ಕೂ ಇದೇ ಉದಾಹರಣೆಯಾಗಲೂಬಹುದು. ದೇವಸ್ಥಾನದ ಸಮೀಪ 67 ಅಡಿ ಎತ್ತರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು (ಯಾವುದೇ ಅನುಮತಿ ಇಲ್ಲದೆ) ಬಂದವರನ್ನು ತಡೆದ ಪ್ರಕರಣವನ್ನು, ವಿವೇಚಿಸದೆ (ಅಥವಾ ವಿವೇಚನೆಯಿಂದಲೇ, ಉದ್ದೇಶವೊಂದರ ಸಾಧನೆಗಾಗಿ) ಮುಖಪುಟದಲ್ಲಿ ‘ಕ್ರಿಶ್ಚಿಯನ್’ ಚಾಪ್ಲಿನ್‌ಗೆ ದಾಳಿ ಎಂದೆಲ್ಲಾ ಬ್ಯಾನರ್ ಹೆಡ್ಡಿಂಗ್ ಹಾಕಿ ಪ್ರಕಟಿಸಿಬಿಟ್ಟಿತು. ನೆನಪಿಡಿ. ಇದು ಇಲ್ಲದ ಪ್ರತಿಮೆಯ ಮೇಲೆ ಬಿಜೆಪಿ ದಾಳಿ! ಖಂಡಿತ ಇದು ಕೋಮು ಭಾವನೆ ಕೆರಳಿಸುವ ಹುನ್ನಾರ.

ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಸಾಮಾಜಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳುವುದು ಮಾಧ್ಯಮಗಳ ಧರ್ಮ. ಸಮಾಜದ ಏಕತೆಗೆ ಭಂಗ ಬಾರದಂತೆ ವರ್ತಿಸುವುದು, ಜನರ ಭಾವನೆಗೆ ಧಕ್ಕೆಯಾಗದಂತೆ ಕಾಳಜಿ ವಹಿಸುವುದು ಅವುಗಳ ಕರ್ತವ್ಯವೂ ಹೌದು. ಹೀಗಿರುವಾಗ ಸಮಸ್ಯೆ ಏನೆಂಬುದನ್ನು ವಿವೇಚಿಸದೆ, ಅದನ್ನು ದೊಡ್ಡಕ್ಷರಗಳಲ್ಲಿ ಪ್ರಕಟಿಸಿ, ಅದು ಕೂಡ ದೆಹಲಿಯ ಆವೃತ್ತಿಯಲ್ಲಿ ಮಾತ್ರ ‘ಕ್ರಿಶ್ಚಿಯನ್ ಚಾಪ್ಲಿನ್‌ಗೆ ಬಿಜೆಪಿ ಅಡ್ಡಿ’ ಎಂದೆಲ್ಲಾ ಡಂಗೂರ ಸಾರಿರುವುದು ಯಾವ ದೆಹಲಿ ದೊರೆಗಳನ್ನು ಮೆಚ್ಚಿಸುವುದಕ್ಕೋಸ್ಕರ? ಹೀಗಾಗಿ ಸಂಪಾದಕರ ಜವಾಬ್ದಾರಿ ಇಲ್ಲಿ ಪ್ರಶ್ನಾರ್ಹವಾಗುತ್ತದೆ.

ದೇವಸ್ಥಾನದ ದೈವಿಕತೆಗೆ ಭಂಗವಾಗದಂತೆ, ಭಕ್ತಾದಿಗಳಿಗೆ ತೊಂದರೆಯಾಗದಂತೆ ಸ್ಥಳೀಯರು ಪ್ರತಿಭಟಿಸಿದ್ದಿರಬಹುದಲ್ಲವೇ? ಅವರಿಗೆ ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಅಂತ ಹೇಳಿಕೊಟ್ಟವರಾರು? ಮುಗ್ಧತೆಯಿಂದಲೇ ಹಳ್ಳಿಗರು, ‘ಯಾರೋ ಚಾಪ್ಲಿನ್ ಪ್ರತಿಮೆ ಮಾಡ್ತಾರಂತೆ, ದೇವಸ್ಥಾನದೆದುರು ಇದು ಮಾಡೋದು ತಪ್ಪು’ ಅಂದಿದ್ದಿರಬಹುದು. ನಾವು ಕೂಡ ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂದು “ಅರಿತು”ಕೊಂಡದ್ದು ಈಗಲೇ!

ಇಲ್ಲಿ ಜಾತಿ-ಧರ್ಮವನ್ನು ಎಳೆದು ಹಾಕಿದ್ದೇಕೆ ಎಂಬುದು ಪ್ರಶ್ನೆ. ಜೀವನದಲ್ಲಿ ಶ್ರೇಷ್ಠತೆ ಮೆರೆದವರನ್ನು ಜಾತಿಯಲ್ಲಿ ಗುರುತಿಸಲು ಹೇಳಿಕೊಟ್ಟವರಾರು? ಅಬ್ದುಲ್ ಕಲಾಂ ಅವರನ್ನು ಮುಸಲ್ಮಾನ ಅಂತನೋ, ಇಂದಿರಾ ಗಾಂಧಿ ಹಿಂದೂ ಅಂತಾನೋ ನಾವು ಗುರುತಿಸುತ್ತೇವೆಯೋ?

ದೇವಸ್ಥಾನದ ಎದುರೇ ಮೂರ್ನಾಲ್ಕು ಅಂತಸ್ತಿನಷ್ಟು ಎತ್ತರದಲ್ಲಿ ಶಾಶ್ವತ ಪ್ರತಿಮೆ ಕಟ್ಟುವ ಉದ್ದೇಶವೇಕೆ? ಅದರ ಔಚಿತ್ಯ ಏನು ಅಂತ ಸ್ವಲ್ಪ ಯೋಚಿಸಬೇಕು. ಮೊದಲೇ ಇತ್ತೀಚಿನ ಬೆಳವಣಿಗೆಗಳಿಂದಾಗಿ ಆ ಪ್ರದೇಶದಲ್ಲಿ ಪ್ರತಿಯೊಬ್ಬರ ಮನದಲ್ಲಿಯೂ ಕೆರಳಿದ ಭಾವನೆ ಇದೆ. ಹೀಗಾಗಿ ಹಿಂದೂ ಭಾವನೆಗಳನ್ನು ಕೆರಳಿಸಿದರೆ, ಅಂದರೆ ಅವರಿಗೆ ಸೂಜಿ ಚುಚ್ಚಿದರೆ (ಸಣ್ಣಪುಟ್ಟ ಸಂಗತಿಗಳಿಗೆಲ್ಲ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಗೊತ್ತಿದ್ದೂ) ತಮ್ಮ ಉದ್ದೇಶ ಈಡೇರುತ್ತದೆ ಎಂಬ ತಂತ್ರಗಾರಿಕೆಯ ಫಲ ಈಗ ಇಡೀ ಕರಾವಳಿಯ ಜನತೆಯ ಮುಖಕ್ಕೆ ಮಸಿ ಬಳಿದಿರುವುದು.

ಚಾಪ್ಲಿನ್ ಮೊದಲು ಚರ್ಚ್ ಆಫ್ ಇಂಗ್ಲೆಂಡ್‌ನಿಂದ ಕ್ರೈಸ್ತ ಧರ್ಮ ದೀಕ್ಷೆ ಸ್ವೀಕರಿಸಿದ್ದರೂ, ಆ ಬಳಿಕ ತನ್ನನ್ನು ನಾಸ್ತಿಕ ಎಂದು ಘೋಷಿಸಿಕೊಂಡವನು. ಸ್ಥಳೀಯರು ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಆಕ್ಷೇಪಿಸಿದ್ದು ಖಂಡಿತಾ ಅಲ್ಲ ಎಂಬುದು ಆ ಸ್ಥಳದಲ್ಲಿದ್ದ ನನ್ನ ಗೆಳೆಯರೊಬ್ಬರು ಹೇಳಿದ ಮಾತು. ಅವರು ಆಕ್ಷೇಪಿಸಿದ್ದು ದೇವಸ್ಥಾನದ ಎದುರು ಇಷ್ಟು ದೊಡ್ಡ (62 ಅಡಿ ಎಂದರೆ ಸಾಧಾರಣ ಮೂರ್ನಾಲ್ಕು ಮಹಡಿ ಮನೆಯೆತ್ತರದಷ್ಟು) ಪ್ರತಿಮೆ ನಿರ್ಮಿಸುವುದಕ್ಕೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಬೈಲೈನ್ ಸಹಿತವಾದ ವರದಿಯೊಂದಿದೆ ನೋಡಿ. ಅಂತೆಯೇ ಆಡಳಿತದಿಂದ ಎನ್ಒಸಿ ಪಡೆದುಕೊಂಡಿಲ್ಲ, ಅದು ಪಡೆಯಲು ಕಷ್ಟ ಎಂದು ಸ್ವತಃ ನಿರ್ದೇಶಕರೇ ಒಪ್ಪಿಕೊಂಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಹೇಮಲತಾ ಕೂಡ “ನಾವು ಶೂಟಿಂಗ್‌ಗೆ ಅನುಮತಿ ನೀಡಿದ್ದೆವು, ಆದರೆ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿ ದೊರೆಯುವವರೆಗೆ ಕಾಯಬೇಕು” ಎಂದಿದ್ದರು. ಅಂತೆಯೇ ಪಡುವರಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ ಅವರ ಹೇಳಿಕೆಯೂ ಇಲ್ಲಿದೆ. ಆ ಸ್ಥಳದಲ್ಲಿ ಬೇಡ, ಬೇರೆ ಸ್ಥಳ ನೋಡುವಂತೆ ಚಿತ್ರ ತಂಡಕ್ಕೆ ಹೇಳಿದ್ದೇವೆ, ಅನುಮತಿ ಪಡೆಯುವಂತೆ ಸೂಚಿಸಿದ್ದೇವೆ ಎಂದಿದ್ದಾರವರು.

ಗ್ರಾಮಸ್ಥರು ದೇವಸ್ಥಾನದ ಎದುರು ಇಷ್ಟೆತ್ತರದ ಪ್ರತಿಮೆ ಸ್ಥಾಪಿಸಿದ್ದಕ್ಕೆ ಆಕ್ಷೇಪಿಸಿದ್ದಾರೆ. ಚರ್ಚಿನ ಸಮೀಪ ಅದರ ಗೋಪುರಕ್ಕಿಂತಲೂ ಎತ್ತರದ ಹಿಂದೂ ಪುಣ್ಯ ಪುರುಷನೊಬ್ಬನ ಪ್ರತಿಮೆ ಸ್ಥಾಪಿಸುತ್ತೇವೆ ಎಂದರೆ ಯಾರಾದರೂ ಬಿಡುತ್ತಾರೆಯೇ? ಆಕ್ಷೇಪಿಸ್ತಾರೆ ಅನ್ನೋದು ಖಂಡಿತ. ಇದು ಲಾಜಿಕ್ಕು. ಇದು ಧಾರ್ಮಿಕವಾಗಿ ಸೂಕ್ಷ್ಮ ವಿಚಾರ. ಧಾರ್ಮಿಕ ಸ್ವಾತಂತ್ರ್ಯ ಹಿಂದೂಗಳಿಗಿಲ್ಲವೇ?

ಒಟ್ಟಿನಲ್ಲಿ ಇದು ದೇಶದ ಹೆಸರಿಗೆ, ಕರ್ನಾಟಕದ ಹೆಸರಿಗೆ, ಕರಾವಳಿಯ ಶಾಂತಿಪ್ರಿಯ ಮಣ್ಣಿನ ಜನರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಂತೂ ಖಂಡಿತ. ದೇಶದ ಹೆಸರಿಗೆ ಮಸಿ ಬಳಿದರೂ ಪರವಾಗಿಲ್ಲ, ನನ್ನ ಚಿತ್ರಕ್ಕೆ ಪ್ರಚಾರ ಸಿಗಬೇಕು ಎಂಬ ಧೋರಣೆಯ ಪ್ರತೀಕವಿದು.

ಇದರ ಪರಿಣಾಮವೇನಾಯ್ತು? ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತೆ ತಲೆ ತಗ್ಗಿಸುವಂತಾಯಿತು. ಇಲ್ಲಿ ಬ್ರಿಟನ್‌ನ ಪತ್ರಿಕೆ ಪ್ರಕಟಿಸಿರುವ ಸುದ್ದಿ ನೋಡಿ… ಹಿಂದೂ ಜಾಗರಣ ವೇದಿಕೆಯ ಹೆಸರು ಅವರಿಗೆ ಎಲ್ಲಿಂದಲೋ ಸಿಕ್ಕಿದೆ. ಅರ್ದಂಬರ್ಧ ವರದಿ, ಸುತ್ತಿ ಬಳಸಿ ಬರುವ ಸುದ್ದಿಯ ಒಟ್ಟಾರೆ ಸಾರಾಂಶವೆಂದರೆ, “ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಕ್ರಿಶ್ಚಿಯನ್ನರನ್ನು ಮಟ್ಟ ಹಾಕಲಾಗುತ್ತಿದೆ”

ಅದರಲ್ಲಿ Karnataka has one of the poorest records for anti-Christian violence in the country. According to the Global Council of Indian Christians, at least 112 anti-Christian attacks were recorded in the state last year. ಅಂತಾನೂ ಇದೆ!

ನಮ್ಮ ಬಗ್ಗೆ ಛೀಥೂ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಳಿದುಕೊಳ್ಳಲು ನಮಗೆ ಹೇಸಿಗೆಯಿಲ್ಲ… ನಾವು ತಾಲಿಬಾನೀಕರಣಗೊಳ್ಳುತ್ತಿದ್ದೇವೆ, ಹಿಂದೂ ಉಗ್ರಗಾಮಿಗಳು ಹುಟ್ಟಿಕೊಂಡಿದ್ದಾರೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.

ಇಲ್ಲೊಂದು ತೀರಾ ಸರಳ ಪ್ರಶ್ನೆ. ದೇಶದಲ್ಲಿ ಎಲ್ಲಿಯೂ ಇಲ್ಲದ, ದೇಶಕ್ಕೆ ದೇಶವೇ ಹೆಮ್ಮೆ ಪಡುವಂತಹ ಮಹಾನ್ ಹಾಸ್ಯ ನಟ ಚಾಪ್ಲಿನ್‌ನ ಬೃಹತ್ ಪ್ರತಿಮೆ ನಿರ್ಮಾಣವಾಗುತ್ತದೆಂದರೆ ಎಲ್ಲರೂ ಹೆಮ್ಮೆ ಪಡುವ ವಿಚಾರವೇ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ, ಹಾಡಿನ ಚಿತ್ರೀಕರಣ ಮುಗಿದ ಬಳಿಕ ಪ್ರತಿಮೆಯನ್ನು ಪ್ರವಾಸೋದ್ಯಮ ಇಲಾಖೆಗೆ ಬಿಟ್ಟು ಕೊಡುವುದು ನಮ್ಮ ಉದ್ದೇಶವಾಗಿತ್ತು ಎಂಬ ಚಿತ್ರ ತಂಡದ ಹೇಳಿಕೆ ಒಳ್ಳೆಯ ಉದ್ದೇಶವೇ. ದೇಶಕ್ಕೇ ಹೆಮ್ಮೆಯಾಗಬಹುದಾದ ಈ ಪ್ರತಿಮೆ ನಮ್ಮಲ್ಲಿದೆ ಎಂಬುದು ಅಲ್ಲಿನ ಪಡುವರಿ ಗ್ರಾಮಸ್ಥರೂ ಎದೆತಟ್ಟಿಕೊಂಡು ಹೇಳಬಹುದು. ಯಾರೂ ಆಕ್ಷೇಪಿಸುತ್ತಲೂ ಇರಲಿಲ್ಲ. ಆದರೆ ದೇವಸ್ಥಾನದ ಸಮೀಪವೇ ಆಗಬೇಕು ಎಂಬುದೇಕೆ? ಮತ್ತು ಆ ಊರಿನ ಮಿತ್ರರೊಬ್ಬರು ಹೇಳುವಂತೆ, ಈ ಚಿತ್ರ ತಂಡವು ಗುದ್ದಲಿ-ಹಾರೆ ಹಿಡಿದುಕೊಂಡು ಅಲ್ಲಿ 67 ಅಡಿಯ ಬೃಹತ್ ವಿಗ್ರಹ ಸ್ಥಾಪನೆಗೆ ಒಂದು ತೆಂಗಿನ ಸಸಿ ನೆಡುವುದಕ್ಕೆ ತೋಡಿದಂತೆ ಗುಂಡಿ ತೋಡಲು ಸಜ್ಜಾಗಿತ್ತಂತೆ! ಅದನ್ನು ಆಕ್ಷೇಪಿಸಿದ್ದಕ್ಕೆ ಪತ್ರಿಕೆ ಬರೆದದ್ದು ಇಲ್ಲದ “ಚಾಪ್ಲಿನ್ ಪ್ರತಿಮೆಗೆ ಬಿಜೆಪಿ ದಾಳಿ”!

ಇಂಥದ್ದೊಂದು ದೊಡ್ಡ ಯೋಜನೆ, ಲಕ್ಷಾಂತರ ರೂಪಾಯಿ ವೆಚ್ಚದ ಒಳ್ಳೆಯ ಪ್ರವಾಸೋದ್ಯಮಕ್ಕೆ ಪೂರಕವಾಗಬಹುದಾದ ಯೋಜನೆ, ಇದಕ್ಕೆ ಜಿಲ್ಲಾಡಳಿತ, ಸ್ಥಳೀಯ ಪಂಚಾಯತ್ ಇತ್ಯಾದಿಗಳಿಂದ ಮೊದಲೇ ಒಪ್ಪಿಗೆ ಪಡೆದು, ಯೋಜಿತ ರೀತಿಯಲ್ಲಿ ಮುಂದುವರಿದಿಲ್ಲವೇಕೆ? ಈಗಾಗಲೇ ಶೇ.90 ಚಿತ್ರೀಕರಣ ಮುಗಿದಾಗಿದೆ, ಈ ಒಂದು ಪ್ರತಿಮೆಗಾಗಿ 35 ಲಕ್ಷ ಖರ್ಚು ಮಾಡುತ್ತಾರೆ ಎಂದಾದರೆ ಹಣ ಎಲ್ಲಿಂದ ಎಂಬುದು ಯಾರೂ ಕೇಳಬಹುದಾದ ಸಾಮಾನ್ಯ ಪ್ರಶ್ನೆ. ಹಾಗಿದ್ದರೆ, 35 ಲಕ್ಷ ರೂ ಖರ್ಚು ಮಾಡದೆಯೇ ತಮ್ಮ ಚಿತ್ರಕ್ಕೆ ಅದಕ್ಕಿಂತಲೂ ಮಿಗಿಲಾದ ಪ್ರಚಾರ ದಕ್ಕಿಸಿಕೊಳ್ಳುವುದು ಉದ್ದೇಶವಾಗಿರಬಹುದೇ? ಎಲ್ಲ ಪತ್ರಿಕೆಗಳಲ್ಲಿಯೂ ಬರುತ್ತದೆ, ಜಾಹೀರಾತಿಗೆ ಹಣ ಖರ್ಚು ಮಾಡಬೇಕಾಗಿಲ್ಲ ಎಂಬ ಲಾಜಿಕ್ಕೇ?

ಇತ್ತೀಚೆಗೆ ಸ್ಥಳೀಯವಾಗಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಮಾಧ್ಯಮಗಳು ಅಂತಾರಾಷ್ಟ್ರೀಕರಣ ಮಾಡಲಾಗುತ್ತಿರುವುದೇಕೆ ಮತ್ತು ಮಾಧ್ಯಮಗಳ ಜವಾಬ್ದಾರಿ ಏನು ಎಂಬ ಬಗ್ಗೆ ಒಂದಿಷ್ಟು ಯೋಚಿಸಬೇಕಾಗಿದೆ.