ಬದಲಾವಣೆಯೇ ಜಗದ ನಿಯಮ

June 28, 2008

95ರ ಅಜ್ಜನ ಬ್ಲಾಗಿಂಗ್ ಉತ್ಸಾಹ!

Filed under: myworld — Avi @ 5:31 pm

ಹೀಗೇ ಅಂತರ್ಜಾಲದಲ್ಲಿ ಹುಡುಕಾಟ/ಪರದಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದ ಸಂಗತಿಯಿದು. ಅಮಿತಾಭ್, ಅಮೀರ್ ಖಾನ್ ಮುಂತಾದವರೆಲ್ಲ ಬ್ಲಾಗಿಂಗ್ ಮಾಡಿದ್ದಾರೆ ಎಂಬುದೆಲ್ಲಾ ಒತ್ತಟ್ಟಿಗಿಟ್ಟು…

ಹೆಚ್ಚಾಗಿ ಬದುಕಿನ ಮುಸ್ಸಂಜೆಯಲ್ಲಿರುವವರು ಒಂದೋ ತಮ್ಮ ಸಾಧನೆಗಳನ್ನು ಮೆಲುಕು ಹಾಕುತ್ತಲೋ, ಮಕ್ಕಳು-ಮರಿಗಳೊಂದಿಗೆ ಆಟವಾಡುತ್ತಲೋ… ಇಲ್ಲವೇ ಮನೆಯಲ್ಲಿ ಸಾಕಷ್ಟು ಆರ್ಥಿಕತೆಯಿಲ್ಲದವರು ದೇವರ ಜಪ ಮಾಡುತ್ತಾ ‘ಆ ದಿನಗಳನ್ನು’ ಎದುರು ನೋಡುತ್ತಲೋ… ಬದುಕಿನ ಎಲ್ಲ ವಿಷಯಗಳತ್ತಲೂ ಆಕರ್ಷಣೆ ಕಳೆದುಕೊಂಡು, ಆಧ್ಯಾತ್ಮಮುಖಿಗಳಾಗಿಯೋ, ನಿರಾಶೆಯಲ್ಲೋ ಕಾಲ ಕಳೆಯುತ್ತಾರೆ.

ಆದರೆ 96 ವರ್ಷದ ಹಣ್ಣು ಹಣ್ಣು ಮುದುಕರೊಬ್ಬರ ಜೀವನ ಪ್ರೀತಿ ನನ್ನನ್ನು ಆಕರ್ಷಿಸಿದ್ದು. ಇವರ ಹೆಸರು ರಾಂಡಾಲ್ ಬೂತಿ ಸಿಂಗ್ ಅಂತ. ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆ ಇವರದು. ಇವರ ಆಸಕ್ತಿಯ ಕ್ಷೇತ್ರಗಳೋ…. ಹತ್ತು ಹಲವು! ಜೀವನಪ್ರೀತಿ, ಜೀವನೋತ್ಸಾಹವೆಂದರೆ ಇದೆಯೇ?

ಕಳೆದ ಒಂಬತ್ತು ದಶಕಗಳಲ್ಲಿ ಅವರು ಜೀವನದ ಅದೆಷ್ಟೋ ವಿಕಲ್ಪಗಳನ್ನು ಕಂಡಿದ್ದಾರೆ, ಹೊಸತನದ ಬದಲಾವಣೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಅವರ ಬ್ಲಾಗಿನಲ್ಲಿ ಸಂಚರಿಸಿದರೆ ಅವರೇನು ಹೇಳ್ತಾರೆ ಅಂತ ಗೊತ್ತಾಗುತ್ತದೆ. ‘ನಾನೊಬ್ಬ ಕಲಿಕಾರ್ಥಿ. ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ, ಅಲ್ಲಿಗೆ ಜೀವನವೇ ನಿಲ್ಲುತ್ತದೆ. ಮತ್ತು ಕಲಿಯುವುದಕ್ಕೆ ಸಮಯದ ಮಿತಿ ಇಲ್ಲ’!

ಅವರ ಕಲಿಯುವಿಕೆಯ ತುಡಿತದ ಮೇಲೊಂದು ಇಣುಕು ನೋಟ:
* 80ರ ವಯಸ್ಸಿನಲ್ಲಿ ಅವರು ಅರೆಬಿಕ್ ಕಲಿತು ಖುರಾನ್ ಓದಲಾರಂಭಿಸಿದರು.
* 95 ವಯಸ್ಸಿನಲ್ಲಿ ಸ್ಪಾನಿಷ್ ಕಲಿಯಲಾರಂಭಿಸಿದರು.
* ಸದ್ಯಕ್ಕೆ ಅವರು ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಅಧ್ಯಯನ ನಿರತರಾಗಿದ್ದಾರೆ!

ಅವರ ಬ್ಲಾಗು ನೋಡಿದರೆ, ಅರ್ಥಶಾಸ್ತ್ರ, ರಾಜಕೀಯ, ಪರಿಸರ, ಚರಿತ್ರೆ, ತತ್ವಶಾಸ್ತ್ರ, ಕವನ, ಮನಃಶಾಸ್ತ್ರ, ಧರ್ಮ… ಹೀಗೆ ವಿಭಿನ್ನ ಆಯಾಮಗಳ ಮೇಲೆ ಅವರ ಬರವಣಿಗೆ ಸಾಗುತ್ತದೆ. ಇಲ್ಲಿ ಕವನಗಳಿವೆ, ಸುಭಾಷಿತಗಳಿವೆ… ಸುದೀರ್ಘ ಕಾಲದ ಅನುಭವಜನ್ಯ ಹಿತನುಡಿಗಳಿವೆ….

ಹುಟ್ಟಿದ್ದು ಗಯಾನದ ಬಕ್ಸ್‌ಟನ್‌ನಲ್ಲಿ. ಭಾರತದಿಂದ ವಲಸೆ ಹೋದ ಕುಟುಂಬಕ್ಕೆ ಸೇರಿದವರಾಗಿದ್ದರೂ, ಎಂದಿಗೂ ಭಾರತಕ್ಕೆ ಭೇಟಿ ನೀಡಿಲ್ಲವಂತೆ. ಮಹಾತ್ಮಗಾಂಧಿಯ ಪರಮ ಅನುಯಾಯಿ. ಮಹಾತ್ಮ ಗಾಂಧಿ ಮೃತಪಟ್ಟಾಗ ಕಣ್ಣೀರಿಟ್ಟಿದ್ದರಂತೆ.

ಹೆಲೆನ್ ಕೆಲ್ಲರ್ ಜೀವನದಿಂದ ಪ್ರಭಾವಿತರಾಗಿ ಮೂರು ಕವನ ಸಂಕಲನ ಹೊರತಂದಿದ್ದಾರೆ. 96ರಲ್ಲೂ ಬತ್ತದ ಜೀವನೋತ್ಸಾಹ. ಹಿಂದಿ, ಉರ್ದು ಚೆನ್ನಾಗಿ ಗೊತ್ತಿದೆ. ಅದ್ಭುತ ಎನಿಸಬಹುದಾದ ಭಾಷಾ ಪ್ರೇಮಿ ಅವರು.

ಹೆಚ್ಚು ಹೇಳಿದರೆ ಅವರ ಬಗೆಗೆ ನಿಮ್ಮ ಅನಿಸಿಕೆಗಳು ಡೈವರ್ಟ್ ಆಗಲೂ ಬಹುದು. ಹೀಗಾಗಿ ನೀವೇ ನೋಡಿಬಿಡಿ. ಬ್ಲಾಗಿನ URL ಇಲ್ಲಿದೆ: http://randallbutisingh.wordpress.com/

June 23, 2008

ನುಗ್ಗಿ ನಡೆ ಮುಂದೆ…!!!

Filed under: myworld — Avi @ 8:27 am

ನಿನ್ನೆ ರಜಾ ದಿನ. ಹೀಗೇ ಚೆನ್ನೈಯ ಶಾಪಿಂಗ್ ತಾಣವಾಗಿರುವ ಟಿ.ನಗರದ ರಂಗನಾಥನ್ ಸ್ಟ್ರೀಟ್ ಅತ್ಯಂತ ಜನಪ್ರಿಯ. ಅಲ್ಲಿಗೆ ಹೋಗೋಣ ಅಂತ ಮನಸ್ಸು ಮಾಡಿದವನೇ ಬೈಕನ್ನೇರಿ ಹೊರಟುಬಿಟ್ಟೆ. ವೆಸ್ಟ್ ಮಾಂಬಳಂ ರೈಲು ನಿಲ್ದಾಣ ಪಕ್ಕ ಬೈಕು ನಿಲ್ಲಿಸಿ, ರೈಲ್ವೇ ಬ್ರಿಜ್ ದಾಟಿದರೆ ಅದು ನೇರವಾಗಿ ಇಳಿಯೋದು ರಂಗನಾಥನ್ ಸ್ಟ್ರೀಟ್‌ಗೆ.

ಈ ದಾರಿ ಆಯ್ದುಕೊಳ್ಳಲು ಕಾರಣವೂ ಇದೆ. ಮಾಮೂಲಿಯಾಗಿ ಪಾನಗಲ್ ಪಾರ್ಕ್ ಮೂಲಕವಾಗಿ ಈ ಸ್ಥಳಕ್ಕೆ ಬರೋದಂದ್ರೆ ಆಗದ ಮಾತು. ಭಾನುವಾರವಾದುದರಿಂದ ಕಾಲಿಡಲು ಜಾಗವಿರೋದಿಲ್ಲ. ಚೆನ್ನೈಗರು ಶಾಪಿಂಗ್‌ಪ್ರಿಯರು. ಭಾನುವಾರವಂತೂ ಇಲ್ಲಿ… ಅದೇನೋ ಹೇಳ್ತಾರಲ್ಲ… ಸಾಸಿವೆ ಕಾಳು ಚಿಮ್ಮಿಸಿದರೆ ಕೆಳಗೆ ಬೀಳೋದಿಲ್ಲ ಅಂತ. ಹಾಗಿರುತ್ತೆ ಪರಿಸ್ಥಿತಿ.

ಅಗಲ ಕಿರಿದಾದ ರಸ್ತೆ. ಆ ರಸ್ತೆಯನ್ನೇ ಕಬಳಿಸಿಕೊಂಡು ತಮ್ಮ ಪೆಟ್ಟಿಗೆಯಿಟ್ಟು ಕೂಗಾಡುತ್ತಿರುವ ಬೀದಿಬದಿ ವ್ಯಾಪಾರಿಗಳು. ಮುಂದೆ ಹೋಗಬೇಕಿದ್ದರೆ ಇರುವೆ ಸಾಲಿನಂತೆ ಸಾಗಬೇಕು. ಮುಂದೆ ಹೋಗುತ್ತಾ ಇರುತ್ತಾರೆ, ಅವರನ್ನು ನಾವು ಹಿಂಬಾಲಿಸಬೇಕು. ಎದುರಿನಿಂದಲೂ ಬರ್ತಾ ಇರ್ತಾರೆ.

ಹಾಗೇ ಒಂದು ಯೋಚನೆ. ಸುಮ್ನೆ ನಮ್ಮ ಮುಂದಿರುವವರ ಹಿಂದೆಯೇ ಹೆಜ್ಜೆ ಹಾಕುತ್ತಾ ಹೋದರೆ ರಸ್ತೆಯ ಮತ್ತೊಂದು ತುದಿ ಮುಟ್ಟುವುದಕ್ಕೆ ಕನಿಷ್ಠ ಒಂದು ಗಂಟೆಯಾದರೂ ಬೇಕು. ಎಲ್ಲೋ ಯೋಚಿಸುತ್ತಾ, ಮುಂದಿದ್ದವರು ಹೆಜ್ಜೆ ಹಾಕುವುದನ್ನೇ ಅನುಸರಿಸುತ್ತಾ ಇದ್ದರೆ ಬೇಗಬೇಗನೇ ಹೋಗುವುದು ಸಾಧ್ಯವಿಲ್ಲ. ಏನೇನೋ ಆಲೋಚನೆಗಳನ್ನೆಲ್ಲಾ ಬಿಟ್ಟು ನಿಮ್ಮ ಗಮನವನ್ನೊಮ್ಮೆ ಗಮ್ಯ ಸ್ಥಾನ ತಲುಪುವುದರ ಮೇಲೇ ಕೇಂದ್ರೀಕರಿಸಿ ನೋಡಿ. ಒಂದು ಸ್ವಲ್ಪ ಎಡೆ ಸಿಕ್ಕರೂ ತೂರಿಕೊಂಡು ಬಿಡಿ… ಹತ್ತು ನಿಮಿಷದಲ್ಲಿ ಆ ರಸ್ತೆಯ ಮತ್ತೊಂದು ತುದಿ ತಲುಪಿರುತ್ತೀರಿ.

ಹೀಗೆಯೇ ಜೀವನವೂ ಅಲ್ಲವೇ? ಅಜ್ಜ ನೆಟ್ಟ ಆಲದ ಮರವನ್ನೇ ಜೋತು ಬೀಳುವುದಕ್ಕಿಂತ, ಒಂದಷ್ಟು ಡಿಫರೆಂಟಾಗಿ ಯೋಚಿಸಿ. ಮತ್ತೊಬ್ಬರು ಹಾಕಿಕೊಟ್ಟ ದಾರಿಯಲ್ಲೇ ನಡೆದು ಹೋದರೆ ಗಮ್ಯ ಸ್ಥಾನ ತಲುಪಬಹುದು. ಆದರೆ ಬೇಗನೇ ತಲುಪಲು ಶಾರ್ಟ್‌ಕಟ್ ಏನಾದರೂ ಇದೆಯೇ? ಬೇಗನೇ ಹೇಗೆ ಗುರಿ ತಲುಪಬಹುದು ಎಂದು ಭಿನ್ನವಾಗಿ ಯೋಚಿಸಿದರೆ…?

ಎಲ್ಲ ಕಾರ್ಯಗಳೂ ಹಾಗೆಯೇ. ಎಲ್ಲವೂ ನಮ್ಮ ಆಲೋಚನೆಯನ್ನೇ ಅವಲಂಬಿಸಿದೆ. ಒಂದು ತಂಡದ ನಾಯಕ ಏಕಪ್ರಕಾರವಾಗಿ ಯೋಚಿಸಿ, ಒಂದು ಕಾರ್ಯಯೋಜನೆ ರೂಪಿಸಿರಬಹುದು. ತಂಡದ ಸದಸ್ಯರೆಲ್ಲರೂ ಅದನ್ನು ಅನುಸರಿಸಲಿ ಅಂತ. ನಾವು ಅದಕ್ಕೇ ಜೋತು ಬೀಳದೆ, ಹೊಸ ಮಾರ್ಗವೇನಾದರೂ ಶೋಧಿಸಿದರೆ, ಒಂದಷ್ಟು ರಿಸ್ಕ್ ತೆಗೆದುಕೊಂಡು, ನುಗ್ಗಿ ನಡೆದರೆ… ಎಷ್ಟು ಬೇಗನೇ ಗಮ್ಯ ಸ್ಥಾನ ತಲುಪಬಹುದಲ್ಲ…

So… Think Differently, Act Differently!!!

June 18, 2008

ಕಪಿಲ್ ದೇವ್ ಟ್ವೆಂಟಿ -20 ಆಡಿದ್ದಕ್ಕೆ ರಜತ ಸಂಭ್ರಮ!

Filed under: myworld — Avi @ 6:12 pm

ಸ್ಕೋರ್ ಬೋರ್ಡ್ ತೋರಿಸುತ್ತಿದ್ದದ್ದು 9-4. ಇದೇನು ಟೆನಿಸ್ ಆಟದ ಸೆಟ್ ಗೆಲುವಿನ ಅಂತರವಲ್ಲ. ಕೇವಲ 9 ರನ್ನಿಗೆ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ದಿಂಡುರುಳಿದ್ದರು. ಎದುರಿಗಿದ್ದದ್ದು ಆಗಷ್ಟೇ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ್ದ ಜಿಂಬಾಬ್ವೆ. ಆ ಹಂತದಲ್ಲಿ ಕೈಯಲ್ಲಿ ಬ್ಯಾಟು ಹಿಡಿದು ‘ಹರ್ಯಾಣದ ಬಿರುಗಾಳಿ’ ಕಪಿಲ್ ದೇವ್ ಬಂದದ್ದೊಂದು ಗೊತ್ತು. ಆ ನಂತರ ಮೂರುವರೆ ಗಂಟೆಗಳಲ್ಲಿ ಸೃಷ್ಟಿಯಾಗಿದ್ದೊಂದು ಇತಿಹಾಸ.

ಕ್ರಿಕೆಟ್ ಜಗತ್ತಿನಲ್ಲಿ ಜೂನ್ 18ಕ್ಕೆ ವಿಶೇಷ ಮಹತ್ವವಿದೆ. 1983ರ ವಿಶ್ವ ಕಪ್ ಕ್ರಿಕೆಟ್ ಕೂಟದಲ್ಲಿ ಕಪಿಲ್ ದೇವ್ ಐದನೇ ವಿಕೆಟ್ ಆಡಲೆಂದು ಕಣಕ್ಕಿಳಿದು ಸಿಡಿಸಿದ ಬೌಂಡರಿ, ಸಿಕ್ಸರುಗಳ ಆರ್ಭಟವನ್ನು ನೆನಪಿಸಿಕೊಂಡರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಇಂದಿಗೂ ರೋಮಾಂಚನಗೊಳ್ಳುತ್ತಾರೆ. ಇದೇನು ಮ್ಯಾಜಿಕ್ಕೋ, ಪವಾಡವೋ, ಅದೃಷ್ಟವೋ… ಅಥವಾ ಕೇವಲ ಹೋರಾಟದ ಕೆಚ್ಚೋ… 138 ಎಸೆತಗಳಲ್ಲಿ ಅಜೇಯವಾಗಿಯೇ ಇದ್ದ ಕಪಿಲ್ ಬ್ಯಾಟಿನಿಂದ ಸಿಡಿದದ್ದು 175 ರನ್ನುಗಳು. ಇದರಲ್ಲಿ 16 ಬೌಂಡರಿಗಳು, ಆರು ಭರ್ಜರಿ ಸಿಕ್ಸರ್‌ಗಳಿದ್ದವು. ಆ ಪಂದ್ಯವನ್ನು 31 ರನ್ನುಗಳಿಂದ ಗೆದ್ದುಕೊಂಡ ಭಾರತವು ತನ್ನ ವಿಜಯ ಯಾತ್ರೆಯನ್ನು ಮುಂದುವರಿಸುತ್ತಲೇ, ಮುಂದಿನ ಒಂದು ವಾರದಲ್ಲಿ, ಅಂದರೆ ಜೂನ್ 25ರಂದು ಉರಿ ದಾಳಿಗೆ ಹೆಸರಾಗಿದ್ದ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿ ಹಾಕಿ ವಿಶ್ವ ಕ್ರಿಕೆಟ್ ಕಿರೀಟವನ್ನೇ ಧರಿಸಿಕೊಂಡ ಕ್ರಿಕೆಟ್ ಶಿಶು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಭಾರತವು ಅಂದು ಎರಡು ಬಾರಿಯ ವಿಶ್ವಚಾಂಪಿಯನ್ನರಾದ ವಿಂಡಿಗರನ್ನು ಫೈನಲಿನಲ್ಲಿ ಮಣಿಸಿ ಕ್ರಿಕೆಟ್ ಜಗತ್ತಿನಲ್ಲಿ ವಿಶ್ವ ಚಾಂಪಿಯನ್ ಆಗಿ ಮೆರೆಯಿತು. ಅದಾಗಿ ಈಗ 25 ವರ್ಷಗಳು ಸಂದಿವೆ. ಅದರ ರಜತ ಮಹೋತ್ಸವಕ್ಕೂ ಸಿದ್ಧತೆ ನಡೆಯುತ್ತಿದೆ.

ಜೂನ್ 18ರಂದು ಇಡೀ ವಿಶ್ವದ ಗಮನ ಸೆಳೆದ ಕಪಿಲ್ ದೇವ್ ಏಕಾಂಗಿ ಹೋರಾಟ ಮಾಡಿದ ಪಂದ್ಯದ ಒಂದು ಝಲಕ್ ಇಲ್ಲಿದೆ:

ಪ್ರುಡೆನ್ಷಿಯಲ್ ಕಪ್ ಕೂಟದ 20ನೇ ಪಂದ್ಯವಾಗಿದ್ದ ಬಿ ಗ್ರೂಪ್‌ನ ಪಂದ್ಯ ನಡೆದದ್ದು ಟನ್‌ಬ್ರಿಡ್ಜ್ ವೆಲ್ಸ್‌ನ ನೆವಿಲ್ ಮೈದಾನದಲ್ಲಿ. 60 ಓವರುಗಳ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತದ ನಾಯಕ ಕಪಿಲ್ ನಿರ್ಧಾರ ತಪ್ಪು ಎಂದು ಸಾಬೀತು ಮಾಡಿದಂತೆ ತೋರಿದವರು ಆರಂಭಿಕರಾದ ಸುನಿಲ್ ಗವಾಸ್ಕರ್ (0) ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್ (0). ಇಬ್ಬರೂ ಮಾಡಿದ್ದು ಶೂನ್ಯ ರನ್. ಭಾರತ ಖಾತೆ ತೆರೆಯುವ ಮುನ್ನವೇ ಗವಾಸ್ಕರ್ ನಿರ್ಗಮಿಸಿದರೆ, ಭಾರತದ ಮೊತ್ತ 6 ರನ್ ಆಗಿದ್ದಾಗ ಶ್ರೀಕಾಂತ್ ಮತ್ತು ಮೊಹಿಂದರ್ ಅಮರ್‌ನಾಥ್ (5) ಪೆವಿಲಿಯನ್ ದಾರಿ ಹಿಡಿದಿದ್ದರು. 9 ರನ್ ಆದಾಗ ಸಂದೀಪ್ ಪಾಟೀಲ್ (1) ಅವರೂ ವಿಕೆಟೊಪ್ಪಿಸಿದರು. ಇವರೆಲ್ಲರೂ ರಾಸನ್ (12 ಓವರ್, 47 ರನ್ ನೀಡಿ 3 ವಿಕೆಟ್) ಮತ್ತು ಕುರ್ರನ್ (12 ಓವರು, 65 ರನ್ನಿಗೆ 3 ವಿಕೆಟ್) ದಾಳಿಗೆ ನಲುಗಿದವರು.

ಆಗ ಬಂದರು ‘ಹರ್ಯಾಣದ ಹರಿಕೇನ್’ ಕಪಿಲ್. ಒಂದೆಡೆಯಿಂದ ಯಶಪಾಲ್ ಶರ್ಮಾ ತಂಡದ ಮೊತ್ತ 17 ಆಗಿದ್ದಾಗ (9), ರೋಜರ್ ಬಿನ್ನಿ (22) ತಂಡದ ಮೊತ್ತ 77 ರನ್ ಆಗಿದ್ದಾಗ ಮತ್ತು ರವಿ ಶಾಸ್ತ್ರಿ (1) ತಂಡದ ಮೊತ್ತ 78 ಆಗಿದ್ದಾಗ ತರಗೆಲೆಗಳಂತೆ ಉದುರಿ ಹೋಗುತ್ತಿದ್ದರೆ, ಕಪಿಲ್ ದೇವ್ ತಮ್ಮ ಬೀಸುಗೆಯನ್ನು ನಿಲ್ಲಿಸಲೇ ಇಲ್ಲ. ಸ್ವಲ್ಪ ಹೊತ್ತು ಮದನ್ ಲಾಲ್ (17) ನೆರವಿನಲ್ಲಿ 62 ರನ್ ಕೂಡಿ ಹಾಕಿದ ಈ ಜೋಡಿ ಬೇರ್ಪಟ್ಟಾಗ, ಕಪಿಲ್ ಅವರನ್ನು ಕೂಡಿಕೊಂಡವರು ಭಾರತ ಕಂಡ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲೊಬ್ಬರಾದ ಸಯ್ಯದ್ ಕೀರ್ಮಾನಿ. 9ನೇ ವಿಕೆಟಿಗೆ ಈ ಜೋಡಿ ಸೇರಿಕೊಂಡು ಮಾಡಿದ ಮೋಡಿಯಂತೂ ಇತಿಹಾಸವಾಗಿ ದಾಖಲಾಯಿತು. 72 ಎಸೆತಗಳಲ್ಲೇ ಶತಕ ಪೂರೈಸಿದ ತಕ್ಷಣ ಬ್ಯಾಟು ಬದಲಿಸಿದ ಕಪಿಲ್, ಮತ್ತಷ್ಟು ಉಗ್ರರಾದರು. 9ನೇ ವಿಕೆಟಿಗೆ ಕಪಿಲ್ ಮತ್ತು ಕೀರ್ಮಾನಿ ಅಜೇಯವಾಗಿ ಸೇರಿಸಿದ 126 ರನ್ನುಗಳು ಇಂದಿಗೂ ಕ್ರಿಕೆಟ್ ಇತಿಹಾಸವಾಗಿ ಉಳಿದಿದೆ.

ಕೀರ್ಮಾನಿ ಅವರು ಅಜೇಯವಾಗಿ ಮಾಡಿದ್ದು 24 ರನ್ನುಗಳಾದರೂ, ಕಪಿಲ್‌ಗೆ ಸಮರ್ಥ ಬೆಂಬಲ ನೀಡುತ್ತಾ ಬಂದರು. ಅಂತಿಮವಾಗಿ ಭಾರತ 60 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 266 ರನ್ ಸೇರಿಸಲು ಶಕ್ತವಾಗಿತ್ತು. ಇದರಲ್ಲಿ ಮೂರನೇ ಎರಡು ಭಾಗವೂ ಕಪಿಲ್‌ರದ್ದು.

60 ಓವರುಗಳಲ್ಲಿ 267 ರನ್ನುಗಳ ಬೆಂಬತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತಾದರೂ, ರೋಜರ್ ಬಿನ್ನಿ (11 ಓವರ್, 45 ರನ್ 2 ವಿಕೆಟ್) ಮತ್ತು ಮದನ್ ಲಾಲ್ (11 ಓವರ್ 42 ರನ್ 3 ವಿಕೆಟ್) ತೀಕ್ಷ್ಣ ದಾಳಿ ದಾಳಿ ಮತ್ತು ರನ್ ಗತಿ ನಿಯಂತ್ರಿಸಿದ ಕಪಿಲ್ (11 ಓವರು 32 ರನ್ 1 ವಿಕೆಟ್) ವೇಗಕ್ಕೆ ನಲುಗಿ 57 ಓವರುಗಳಲ್ಲಿ 235 ರನ್ನುಗಳಿಗೆ ಸರ್ವ ಪತನ ಕಂಡಿತು. ಭಾರತಕ್ಕೆ ಸ್ವಲ್ಪ ಭೀತಿ ಹುಟ್ಟಿಸಿದವರು ಅದೇ ಕುರ್ರನ್ (78). ಅದಕ್ಕಿಂತ ಮೊದಲು ಆರಂಭಿಕ ಬ್ರೌನ್ (35) ಸ್ವಲ್ಪ ಕಾಡಿದ್ದರು. ಅದು ಹೊರತಾಗಿ ಪೀಟರ್ಸನ್ (23) ಸ್ವಲ್ಪ ಚಿಗಿತುಕೊಂಡಿದ್ದರಷ್ಟೇ. ಉಳಿದವರ್ಯಾರಿಗೂ ಹೇಳಿಕೊಳ್ಳುವ ರನ್ ಮಾಡಲು ಭಾರತದ ಬೌಲರುಗಳು ಅವಕಾಶ ನೀಡಿರಲಿಲ್ಲ. ಉಳಿದಂತೆ ಸಂಧು ಮತ್ತು ಮೊಹಿಂದರ್ ತಲಾ ಒಂದು ವಿಕೆಟ್ ಕಿತ್ತಿದ್ದರು.

ಈ ಪಂದ್ಯವನ್ನು ಯಾವುದೇ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿರಲಿಲ್ಲವೆಂಬುದೊಂದು ದುರಂತ. ಆದರೂ, ಪ್ರೇಕ್ಷಕರೊಬ್ಬರು ಈ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿದಿದ್ದರು ಮತ್ತು ಕಪಿಲ್ ಅವರು ಅದನ್ನು ಭಾರೀ ಮೊತ್ತದ ಹಣ ನೀಡಿ ಕೊಂಡು ಕೊಂಡಿದ್ದರು. ಪಂದ್ಯ ಪ್ರಸಾರವಾಗದಿರುವುದಕ್ಕೆ ಪ್ರಧಾನ ಕಾರಣವೆಂದರೆ ಬಿಬಿಸಿ ಮುಷ್ಕರ ನಡೆಸುತ್ತಿತ್ತು. ಮಾತ್ರವಲ್ಲದೆ, ಅದೇ ದಿನ ಅದೇ ಸಮಯಕ್ಕೆ ಲಾರ್ಡ್ಸ್‌ನಲ್ಲಿ ವಿಂಡೀಸ್ ಮತ್ತು ಆಸ್ಟ್ರೇಲಿಯಾ ಪಂದ್ಯವೂ ನಡೆಯುತ್ತಿತ್ತು. ಇದು ಪುಟ್ಟ ರಾಷ್ಟ್ರಗಳ ಪಂದ್ಯವೆಂದು ಪರಿಗಣಿತವಾಗಿದ್ದರಿಂದ ಎಲ್ಲ ಕ್ಯಾಮರಾಮನ್‌ಗಳು ಲಾರ್ಡ್ಸ್ ಪಂದ್ಯವನ್ನೇ ನೆಚ್ಚಿಕೊಂಡಿದ್ದರು.

ಒಟ್ಟಿನಲ್ಲಿ ‘ಧೂಳಿನಿಂದೆದ್ದು ಬರುವುದು’ ಎಂಬ ಮಾತಿಗೆ ಸೂಕ್ತ ಉದಾಹರಣೆಯಾಗಬಲ್ಲ ಪಂದ್ಯವೊಂದು ಏರ್ಪಟ್ಟಿದ್ದು, ಈ ಸಂಭ್ರಮಕ್ಕೆ ಇಂದು ರಜತ ಸಡಗರ. ಆ ನಂತರ ಒಂದು ವಾರದಲ್ಲಿ ಲಾರ್ಡ್ಸ್ ಮೈದಾನದಲ್ಲಿ ದೈತ್ಯರನ್ನು ಬಗ್ಗು ಬಡಿದು ಭಾರತವು ಕಿರೀಟ ಮುಡಿಗೇರಿಸಿಕೊಂಡದ್ದು ಸುವರ್ಣಾಕ್ಷರದಲ್ಲಿ ದಾಖಲಾಗಿರುವ ಅಂಶ.

May 29, 2008

ರ್ಯಾಂಕ್ ಅನ್ನು ರ‌್ಯಾಂಕ್ ಆಗಿ ಟೈಪಿಸಿ!

Filed under: myworld — Avi @ 8:40 pm

ಆನ್‌ಲೈನ್ ಜಗತ್ತಿಗೆ ಬಂದಾರಭ್ಯ, ಯುನಿಕೋಡನ್ನು ಆತುಕೊಂಡವರಿಗೆಲ್ಲಾ ಕಾಡುತ್ತಿದ್ದ ಒಂದು ಪ್ರಶ್ನೆ ಎಂದರೆ ‘ರ‌್ಯಾಂಕ್’ ಬರೆಯುವುದು ಹೇಗೆ, ಸೂರ್ಯ ಎಂಬುದನ್ನು ಸೂ”ರ‌್ಯ” ಅಂತ ಕುಟ್ಟುವುದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

ಸಂಶೋಧನೆಗಳಿಗೆಲ್ಲಾ ಅಪಘಾತಗಳೇ ಕಾರಣ ಅಂತ ಬಲವಾಗಿ ನಂಬಿದವನು ನಾನು. ಇದೂ ಆದದ್ದು ಹಾಗೆಯೇ. ಮೊನ್ನೆ ಕಚೇರಿಯಲ್ಲಿ ಚುನಾವಣಾ ಸುದ್ದಿಗಳಲ್ಲೇ ಮುಳುಗಿದ್ದ ಸಂದರ್ಭದಲ್ಲಿ ಅನತಿ ದೂರದಲ್ಲಿ ಸುದ್ದಿ ಕುಟ್ಟುತ್ತಿದ್ದ ಗುಣವರ್ಧನ ಶೆಟ್ಟರು, ರ‌್ಯಾಂಕ್ ಅಂತ ಘೋಷಿಸಿದ್ದೇ ತಡ, ಮಂಡೆಯಲ್ಲಿ ಅದೇನಿತ್ತೋ… ಅಲ್ಲಿಗೆ ಧಾವಿಸಿದೆ. ‘ಯ’ ಒತ್ತಕ್ಷರವನ್ನು ‘ರಾ’ ಅಕ್ಷರಕ್ಕೆ ಸೇರಿಸುವುದು ಸಾಧ್ಯ ಎಂದು ಬಹುಶಃ ಅವರು ಹೇಳಿರಬೇಕೋ… ಇಲ್ಲವೋ… ಅಂತೂ ಪೂರ್ತಿ ಕೇಳಿಸಿಕೊಳ್ಳುವ ಮೊದಲೇ ಅತ್ತ ಓಡಿದ್ದೆನಲ್ಲ.

ಆದ್ರೆ, ಅಷ್ಟರಲ್ಲಾಗಲೇ ‘ರ’ ಗೆ ‘ಯ’ ಅಡಿ ಒತ್ತು ಹೇಗೆ ಕೊಟ್ಟದ್ದು ಎಂಬುದನ್ನವರು ಮರೆತಿದ್ದರು. ಅಂದ್ರೆ ಅದು ನಡೆದದ್ದು ಆಕಸ್ಮಿಕ. ಹೀಗಾಗಿ ಪಟ್ಟು ಬಿಡದಂತೆ ಪ್ರಯತ್ನಿಸಿ ಅಂತ ಸೂಚ್ಯವಾಗಿ ಹೇಳಿದೆ. ಮತ್ತೆ ಮತ್ತೆ ಹಲವಾರು ಕೀ ಕಾಂಬಿನೇಷನ್‌ಗಳನ್ನೆಲ್ಲಾ ಹಾಕಿ ನೋಡಿದರು… ಊಹುಂ… ಬರ್ತಾ ಇಲ್ಲ… ಛೆ… ಮಾಡಿದ್ನಲ್ಲಾ ಅಂದ್ರು… ಅಷ್ಟರಲ್ಲಾಗಲೇ ಸತೀಶ್ ಮತ್ತು ಚಂದ್ರಾವತಿ ಅವರ ಮೇಲೆ ಒತ್ತಡ ಹಾಕಲಾರಂಭಿಸಿದ್ದರು. ಹೇಗಾದ್ರೂ ಮಾಡಿ ಪತ್ತೆ ಹಚ್ಚಿ ಅನ್ನೋ ರೀತಿಯಲ್ಲಿ.

ಮತ್ತೆ ಮತ್ತೆ ಕುಟ್ಟಿ ನೋಡಿದಾಗ ಕೊನೆಗೆ ಸಿಕ್ಕಿಯೇ ಬಿಟ್ಟಿತು. ಆ ಮೇಲೆ ಮಾಮೂಲಿ ನಮ್ಮ ನಮ್ಮೊಳಗೆ ಯಾರು ಇದರ ಕ್ರೆಡಿಟ್ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಾಗ್ವಾದ ನಡೆಯಿತಾದರೂ ಹೊಡದಾಟದ ಮಟ್ಟಕ್ಕೆ ಹೋಗದೆ, ನಮ್ಮ ನಮ್ಮೊಳಗೆ ಸಂತೋಷ ಪಡುವಂತಾಯಿತು. :)

ಇದುವರೆಗೆ ರ್ಯಾಂಕ್ ಅಂತ ಬರುತ್ತಿದ್ದದನ್ನು ‘ರ‌್ಯಾಂಕ್’ ಆಗಿಸಲು ಅಥವಾ ಸೂರ್ಯ ಅಂತ ಬರುತ್ತಿರುವುದನ್ನು ಬೇಕಿದ್ದರೆ ಸೂರ‌್ಯ ಅಂತ ಆಗಿಸಲು ನೀವು ಮಾಡಬೇಕಾದುದಿಷ್ಟೇ.

1. ರ ಟೈಪ್ ಮಾಡಿ
2. ತಕ್ಷಣವೇ Zero Width Non-joiner (ZWNJ) ಸೇರಿಸಿ ಬಿಡಿ
3. ನಂತರ ಲಿಂಕಿಂಗ್ ಕ್ಯಾರಕ್ಟರ್ (Inscript Keyboard ಶೈಲಿಯವರಿಗಾದರೆ ‘d’ ಕೀಲಿ) ಒತ್ತಿರಿ.
4. ಅನಂತರ ಬೇಕಾದ ಸ್ವರಾಕ್ಷರವನ್ನು ಜೋಡಿಸಿದರೆ ಆಯಿತು.

ರ‌್ಯಾಂಕ್ ಅನ್ನು Inscript ನಲ್ಲಿ ಈ ಕೆಳಗಿನಂತೆ ಬರೆಯಬಹುದು:
j Shift+Ctrl 2 d / e x k d

ನುಡಿ ೪.೦ ಇನ್‌ಸ್ಟಾಲ್ ಮಾಡಿಕೊಂಡವರು ಕೂಡ, ಅದರಲ್ಲಿನ ಯುನಿಕೋಡ್ Option ಬಳಸಿ ರ‌್ಯಾಂಕ್ ಟೈಪಿಸಬಹುದು. ‘ರ’ ಬರೆದ ತಕ್ಷಣ Zero Width Non-joiner (ZWNJ) ಸೇರಿಸಿ. ನಂತರ ಲಿಂಕ್ ಕೀಲಿ ‘f’ ಒತ್ತಿ ಮುಂದುವರಿಯಿರಿ.
ಅಂದರೆ: r + ZWNJ + f + y + A + M + k

ಇನ್ನು ಬರಹ ಬಳಸುವವರಿಗೆ ಮಾತ್ರ ಈ ಬಗ್ಗೆ ಒಂದಷ್ಟು ನಿರಾಶೆ ಅಂತ ನನ್ನ ಅನಿಸಿಕೆ. ಯಾಕೆಂದರೆ ನಾನು ಬರಹ (ನುಡಿಯನ್ನೂ) ಬಳಸುವುದು ಕಡಿಮೆ. ಇಲ್ಲಿ ವ್ಯಂಜನಕ್ಕೆ ಸ್ವರಾ‍ಕ್ಷರ ಸೇರಿಸಿದರೆ ಮಾತ್ರ ಒಂದು ಪೂರ್ಣ ಅಕ್ಷರ ಮೂಡುತ್ತದೆ. ಯಾರಾದರೂ ಬರಹ ಬಳಸುತ್ತಿರುವವರಿಗೆ ಇದೇ ರೀತಿಯ Accident ಆಗುವ ಮೂಲಕ ಏನಾದರೂ ಸಂಶೋಧನೆಯೂ ಆಗಬಹುದು. ಪ್ರಯತ್ನಿಸಿ. ಯಶಸ್ವಿಯಾದರೆ ನನಗೂ ತಿಳಿಸಿಬಿಡಿ!

ಇನ್ನು, ಕನ್ನಡ ಯುನಿಕೋಡ್‌ನಲ್ಲಿ mU ಬರೆದರೆ ಮಾ ಬರೆದಂತೆಯೇ ತೋರುತ್ತದೆ, yo, yO ಗಳಿಗೆ ಒಂದು ಕೊಂಬು ಹೆಚ್ಚು ಬರುತ್ತದೆ ಎಂದೆಲ್ಲಾ ತೊಂದರೆ ಅನುಭವಿಸುತ್ತಿರುವವರಿಗೆ ಹೊಸ ತುಂಗಾ ಫಾಂಟ್‌ನಲ್ಲಿ ಪರಿಹಾರ ಲಭ್ಯವಿದೆ ಎಂಬುದು ಬಹುತೇಕರಿಗೆ ಗೊತ್ತಿದೆ ಅಂತ ನನ್ನ ಅಭಿಪ್ರಾಯ. ಹಳೆಯ ತುಂಗಾ ಫಾಂಟ್ ತೆಗೆದು, ಹೊಸದನ್ನು ಅಳವಡಿಸಿಕೊಂಡರೆ, ಸಮಸ್ಯೆ ಪರಿಹಾರ.

ಆದರೆ ಗಮನದಲ್ಲಿರಲಿ: ನಾನು ಸರಿ ಮಾಡಿದ್ದೇನೆ ಅಂತ ನಾನು ಕೂಡ ಬೀಗುವಂತಿಲ್ಲ. ಯಾಕೆಂದರೆ ಇದನ್ನು ಓದುತ್ತಿರುವವರ ಕಂಪ್ಯೂಟರಿನಲ್ಲಿ ಹೊಸ ತುಂಗಾ ಫಾಂಟ್ ಇದ್ದರಷ್ಟೇ mU, yo, yO, mo, mO ಸರಿಯಾಗಿ ಕಾಣಿಸಬಲ್ಲವು. ಇಲ್ಲವಾದಲ್ಲಿ ಎಲ್ಲರೂ ಮಾಕ ವಿಸ್ಮಿತರೇ ಆಗಬೇಕು! :)

ZWNJ ಬಳಕೆಯ ಬಗ್ಗೆ : ನೇರವಾಗಿ ನೋಟ್ ಪ್ಯಾಡ್‌ನಲ್ಲಿ ಮಾಡುವವರಿಗೆ ಇದು ಅತ್ಯಂತ ಸುಲಭ. MS Word ನಲ್ಲಿ ರೈಟ್ ಕ್ಲಿಕ್ ಮಾಡಿದರೆ ಇದರ option ಬರುವುದಿಲ್ಲ. ಶಿಫ್ಟ್ ಕಂಟ್ರೋಲ್ 2 ಒತ್ತಿದರೆ ಆಗುತ್ತದೆ.

May 27, 2008

ನಗರ ಬದುಕಿನ ಮಧ್ಯೆ ಮರೆಯಾದ ನಾಗರಿಕತೆ

Filed under: myworld — Avi @ 5:56 pm

ನಗರ ಜೀವನ ಶೈಲಿಯು ಮಾನವೀಯ ಸಂಬಂಧಗಳನ್ನು, ಕೌಟುಂಬಿಕ ಬೆಸುಗೆಯನ್ನು, ಮಾನವೀಯತೆಯನ್ನು ಕರಗಿಸುತ್ತದೆಯೇ? ಆಧುನಿಕತೆಯ ಅಲೆಗಳ ನಡುವೆ ಎಲ್ಲಿ ಮರೆಯಾಗುತ್ತಿದೆ ಮಾನವೀಯತೆ ಎಂಬುದು ಚರ್ಚಿಸಬೇಕಾದ ಸಂಗತಿ.

ಇದೇನು ನಗರ ಬದುಕಿನ ಸಂಕೀರ್ಣತೆಯೋ, ಮಧ್ಯಮವರ್ಗದ ಸುಶಿಕ್ಷಿತ ಜನಾಂಗವನ್ನು ಕಾಡುತ್ತಿರುವ ಕೆಲಸದೊತ್ತಡದ ಪರಿಣಾಮವೋ, ನಗರೀಕರಣದ ಮೋಜಿನ ಗೋಜಲಾದ ಪರಿಸ್ಥಿತಿಯೋ, ಸುಖ ಲೋಲುಪತೆಯ ತೀರದ ಬಯಕೆಯ ವಿಕ್ಷಿಪ್ತತೆಯೋ, ಅವಸರದ ಬದುಕಿನ ತಲ್ಲಣವೋ…

ದೆಹಲಿಯ ನೋಯಿಡಾದಲ್ಲಿ 14ರ ಹರೆಯದ ಅರುಷಿ ಎಂಬ ಹೆಣ್ಣುಮಗಳನ್ನು ತಂದೆಯೇ ಕೊಂದುಬಿಟ್ಟ, ಇತ್ತೀಚೆಗೆ ಬೆಂಗಳೂರಿನಲ್ಲಿ ಅಮಿತ್ ಎಂಬ ಟೆಕ್ಕೀಯೊಬ್ಬ ಪತ್ನಿಯನ್ನೇ ಕೊಂದ, ಮೊನ್ನೆ ಮೊನ್ನೆ ಮುಂಬಯಿಯಲ್ಲಿ ಟಿವಿ ನಿರ್ಮಾಪಕ ನೀರಜ್ ಗ್ರೋವರ್‌ನನ್ನು ಆತ್ಮೀಯರಾಗಿದ್ದವರೇ ಕೊಂದರು, ಅದಕ್ಕೆ ಮೊದಲು ತಲ್ಲಣಗೊಳಿಸಿದ್ದ ನಿಥಾರಿ ಹತ್ಯಾಕಾಂಡ… ಇವೆಲ್ಲಾ ಕೇವಲ ಇತ್ತೀಚಿನ ಉದಾಹರಣೆಗಳಷ್ಟೇ. ಇವೆಲ್ಲ ನಡೆದದ್ದು ನಿರಕ್ಷರಿಗಳು ಹೆಚ್ಚಿರುವ ಯಾವುದೋ ಕುಗ್ರಾಮದಲ್ಲಲ್ಲ. ಮೇಲ್ವರ್ಗದವರಿರುವ, ಸ್ವಲ್ಪ ಹೆಚ್ಚೇ ಅನಿಸುವಷ್ಟು ಓದು-ಬರಹ ಕಲಿತವರು ಕೇಂದ್ರೀಕೃತವಾಗಿರುವ ಜಗಮಗಿಸುವ ಪಟ್ಟಣಗಳಲ್ಲಿ.

ಭಾರತವು ತಾಂತ್ರಿಕವಾಗಿ ಎಷ್ಟೊಂದು ಮುಂದುವರಿಯುತ್ತಿದೆಯೋ, ಮಾನವ ಬದುಕಿನ ಲಾಲಸೆಗಳು, ಸುಖಜೀವನದ ತುಡಿತಗಳು ಕೂಡ ಅದಕ್ಕಿಂತಲೂ ಹೆಚ್ಚು ಧಾವಂತದಿಂದ ಚಿಗಿತುಕೊಳ್ಳುತ್ತಿವೆ. ಇಲ್ಲಿ ಕುಟುಂಬ, ಆತ್ಮೀಯತೆ ಮುಂತಾದ ಸೂಕ್ಷ್ಮ ಬೆಸುಗೆಗಳಿಗೆ ಬೆಲೆ ಇರುವುದಿಲ್ಲ. ಭಾವನೆಗಳು ಮನದಂತರಾಳದಲ್ಲಿ ಗುಪ್ತಗಾಮಿನಿಯಾಗಿರುತ್ತವೆ. ಅದ್ಯಾವುದೋ ಕೆಟ್ಟ ಕ್ಷಣದಲ್ಲಿ ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಮಾನವ, ಏನೇನೋ ಅನಾಹುತ ಮಾಡುತ್ತಾನೆ. ಅದು ಘಟಿಸಿದ ಬಳಿಕ ಬಹುಶಃ ಒತ್ತಡವೆಲ್ಲಾ, ಉದ್ವಿಗ್ನತೆಯೆಲ್ಲಾ ಶಮನವಾದಂತೆ ಪಶ್ಚಾತ್ತಾಪದ ಮುದ್ದೆಯಾಗಿಬಿಡುತ್ತಾನೆ.

ಕಾರಣಗಳು?

ಕೆಲಸದೊತ್ತಡ ಮತ್ತು ಭಾವನಾತ್ಮಕ ಅವಲಂಬನೆಯ ತುಡಿತ ಇವೆರಡು ಇಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಅನ್ನುವುದು ಗಮನಿಸಬೇಕಾದ ಸಂಗತಿ. ಇದರೊಂದಿಗೆ ಬಡವ ಮತ್ತು ಶ್ರೀಮಂತರ ನಡುವಣ ಅಂತರ ಹೆಚ್ಚಾಗುತ್ತಿದ್ದು, ನಗರೀಕರಣದಿಂದಾಗಿ ಅರ್ಥವ್ಯವಸ್ಥೆಯು ಧ್ರುವೀಕರಣಗೊಂಡು ಜನರಲ್ಲಿ ಹತಾಶೆ, ಸಿಟ್ಟು ಹೆಚ್ಚಾಗುತ್ತಿದೆ. ಈ ಹತಾಶೆಯು ಹೊರಬರುವ ರೀತಿ ಮಾತ್ರ ಭಯಾನಕ ಪರಿಣಾಮಕ್ಕೆ ಕಾರಣವಾಗುತ್ತಿದೆ.

ಇವೆಲ್ಲದರ ಮೇಲೆ ಕಿರೀಟವಿಟ್ಟಂತೆ ಮತ್ತೊಂದು ಕಾರಣವನ್ನೂ ನಾವು ಪಟ್ಟಿ ಮಾಡಬಹುದು. ಅದು ನಮ್ಮ ಪೊಲೀಸ್ ವ್ಯವಸ್ಥೆ. ಹಿಂದೆ ಪೊಲೀಸರೆಂದರೆ ಭಯಪಡುವ ಸ್ಥಿತಿ ಇತ್ತು. ಅಷ್ಟರ ಮಟ್ಟಿಗೆ ಶಿಸ್ತು ಬೆಳೆಸಿಕೊಂಡಿದ್ದರವರು. ಇಂದೇನಾಗಿದೆ? ಕಾನೂನು ರಕ್ಷಕರ ಕೈಯೇ ಕೊಳೆ ಮೆತ್ತಿಕೊಂಡಿದೆ. ಲಂಚ-ಭ್ರಷ್ಟಾಚಾರಗಳಿಂದಾಗಿ ಪೊಲೀಸ್ ವ್ಯವಸ್ಥೆಯ ಮೇಲೆ ಜನರ ಪಾಸಿಟಿವ್ ನಂಬಿಕೆಯ ಮಟ್ಟ ಧರಾಶಾಯಿಯಾಗಿದೆ. ಪೊಲೀಸರು ಕೂಡ ಆಮಿಷಗಳಿಗೆ ಸುಲಭವಾಗಿ ತುತ್ತಾಗಬಲ್ಲರು ಎಂಬ ಮನೋಭಾವ ಬೆಳೆದಿದೆ. ಹೀಗಾಗಿ ಇಂದು ಪೊಲೀಸರೆಂದರೆ ಹೆದರಬೇಕಾಗಿಲ್ಲವೆಂಬ ಸ್ಥಿತಿ. ಹತ್ತು ಹದಿನೈದು ವರ್ಷಗಳ ಹಿಂದಕ್ಕೆ ತಿರುಗಿ ನೋಡಿ. ಅಲ್ಲಿ ಪೊಲೀಸ್ ಎಂಬ ಪದಕ್ಕೆ ಯಾವ ರೀತಿಯ ಭಯಪೂರಿತ ಗೌರವವಿತ್ತು…!

ಈಗ, ಪೊಲೀಸರ ಕಾರ್ಯಕ್ಷಮತೆಯ ಮೇಲೆ ಈ ಕಪ್ಪು ಚುಕ್ಕೆ ಬರುವುದಕ್ಕೆ ಕಾರಣಗಳು ಕೂಡ ಹಲವು. ದುರಾಸೆ ಎಂಬುದು ಸರ್ವಾಂತರ್ಯಾಮಿ ಸತ್ಯ. ಇದರೊಂದಿಗೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಅವುಗಳ ತನಿಖೆಯ ಒತ್ತಡ. ಈ ಅಂಶವನ್ನೂ ನಾವು ಕಡೆಗಣಿಸುವಂತಿಲ್ಲ. ಇನ್ನೂ ಒಂದು ವಿಷಯವಿದೆ. ವಿಶ್ವಸಂಸ್ಥೆಯ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ 222ರಷ್ಟು ಪೊಲೀಸ್ ಬಲ ಬೇಕು. ಆದರೆ, ಭಾರತದಲ್ಲಿ ಇದರ ಪ್ರಮಾಣ ಲಕ್ಷಕ್ಕೆ 122 ಮಾತ್ರ ಎನ್ನುತ್ತದೆ ಒಂದು ಅಂಕಿ ಅಂಶ.

ಲವ್ ಮತ್ತು ಸೆಕ್ಸ್

ಅದು ಒತ್ತಟ್ಟಿಗಿರಲಿ. ಮಾನವ ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ನಗರ ಜೀವನ ಶೈಲಿಯ ಪರಿಣಾಮವೋ ಎಂಬುದು ಚಿಂತಿಸಬೇಕಾದ ಸಂಗತಿ. ಇತ್ತೀಚೆಗೆ ದೇಶದಲ್ಲಿ ನಡೆದ ಹತ್ಯಾ ಘಟನೆಗಳನ್ನು ಅವಲೋಕಿಸಿದಾಗ ವೇದ್ಯವಾಗುವ ಒಂದು ವಿಷಯವೆಂದರೆ ಈ ಹತ್ಯೆಗಳೊಂದಿಗೆ ಥಳುಕು ಹಾಕಿಕೊಂಡಿರುವ ಲವ್ ಮತ್ತು ಸೆಕ್ಸ್. ಗ್ರಾಮೀಣ ಪ್ರದೇಶಗಳಲ್ಲೂ ಲವ್ ಮತ್ತು ಸೆಕ್ಸ್ ಎಂಬುದು ಮರ್ಡರ್‌ನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯಾದರೂ, ನಗರ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಒತ್ತು. ಯಾಕೆಂದರೆ ಇಲ್ಲಿ ಪ್ರಚಾರವೂ ಹೆಚ್ಚು ದೊರೆಯುತ್ತದೆ, ಸುಶಿಕ್ಷಿತ ಸಮಾಜವೇ ಇದರಲ್ಲಿ ಭಾಗಿಯಾಗಿರುತ್ತದೆ.

ಕಳ್ಳ ಕಾಕರು ಆಧುನಿಕ ಯುಗಕ್ಕೆ ತಕ್ಕಂತೆ ತಮ್ಮ ಕದಿಯುವ ಪ್ರಮಾಣವನ್ನೂ, ವಿಧಾನವನ್ನೂ ಅಭಿವೃದ್ಧಿಪಡಿಸಿಕೊಂಡು ದರೋಡೆಕೋರರು ಎಂಬ ಮಟ್ಟಿಗೆ ತಮ್ಮನ್ನು ‘ಬಡ್ತಿ’ ಮಾಡಿಕೊಂಡಿದ್ದಾರೆ. ಆದರೆ ಅಶಿಕ್ಷಿತ ವರ್ಗದಲ್ಲೇ ಹೆಚ್ಚಾಗಿ ಕಂಡುಬರುತ್ತಿದ್ದ ಕೊಲೆ ಎಂಬ ಜೀವ ತೆಗೆಯುವ ಕಾಯಕವೊಂದು ಸುಶಿಕ್ಷಿತ ವರ್ಗಕ್ಕೂ ಬಿಡಲಾಗದಂತೆ ಅಂಟಿಕೊಳ್ಳಲಾರಂಭಿಸಿದೆ ಎಂದರೆ, ಆಧುನೀಕರಣದ ತುಡಿತದಲ್ಲಿ ಸಂಬಂಧಗಳು ಕರಗುತ್ತಿವೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ.

ಧಾವಂತದ ಯುಗ

ಅವಿಭಕ್ತ ಕುಟುಂಬ ಎಂಬ ಭಾರತೀಯ ಸಂಪ್ರದಾಯವೊಂದು ಸದ್ದಿಲ್ಲದೆ ಮರೆಯಾಗುತ್ತಾ ನಾನು, ನನ್ನದು ಎಂಬಷ್ಟರ ಮಟ್ಟಿಗೇ ಕುಟುಂಬ ಜೀವನ ಪದ್ಧತಿ ಸಂಕುಚಿತಗೊಂಡಿತು. ಬಹುಶಃ ಆಧುನಿಕತೆಯ ಅನಿವಾರ್ಯತೆಯೂ ಅನ್ನಬಹುದು. ಅಲ್ಲೇ ಮಾನವೀಯ ಸಂಬಂಧಗಳ ಕೊಂಡಿಯೊಂದು ಕಳಚಿಕೊಂಡಿತ್ತು. ನಗರೀಕರಣದಲ್ಲಿ ಎಲ್ಲರೂ ನನ್ನವರೇ - ‘ವಸುಧೈವ ಕುಟುಂಬಕಂ’ ಎಂಬ ಮನೋವೃತ್ತಿ ಬೆಳೆಸುವುದು ಅನಿವಾರ್ಯವಾಯಿತು. ದುಡಿತದ ತುಡಿತ ಇನ್ನಿಲ್ಲದಂತೆ ಬೆಳೆಯಿತು. ನಮಗಾಗಿ, ನಮ್ಮವರಿಗಾಗಿ ಸಮಯವಿಲ್ಲದಂತಾಯಿತು. ನನಗದು ಬೇಕು, ಅದನ್ನು ಪಡೆದೇ ಸಿದ್ಧ, ಅದಕ್ಕಾಗಿ ಏನು ಮಾಡಲೂ ಸಿದ್ಧ ಎಂಬ ಹಂಬಲ ಪ್ರ-ಬಲವಾಗತೊಡಗಿತು. ಏನಿದ್ದರೂ ಫಟಾಫಟ್ ಸಿಗಬೇಕು ಎಂಬ ಮಹದಾಕಾಂಕ್ಷೆ ಬೆಳೆಯಿತು.

ಅವಸರದ ಯುಗದಲ್ಲಿ ಕಾರ್ಯದೊತ್ತಡ ಖಂಡಿತವಾಗಿಯೂ ಹೆಚ್ಚು. ಈ ಮನೋದ್ವೇಗವೆಂಬುದು ಹೇಗೆ ನಮ್ಮ ಆರೋಗ್ಯವನ್ನು ಸದ್ದಿಲ್ಲದೆ ಹಾಳುಗೆಡಹುತ್ತಿದೆಯೋ, ಮನದೊಳಗಿನ ಆಕಾಂಕ್ಷೆಗಳನ್ನೂ, ಬಯಕೆಗಳನ್ನೂ ಹತ್ತಿಕ್ಕಿಕೊಳ್ಳಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಯಿತು. ಅದು ಲಾಲಸೆಯೋ, ದುರಾಸೆಯೋ ಆಗಿ ಪರಿವರ್ತನೆಗೊಂಡು ಅಂದುಕೊಂಡದ್ದು ಕೈಗೆ ಸಿಗದಿದ್ದಾಗ, ಕೈಗೆ ಸಿಕ್ಕರೂ ಮಾನಮರ್ಯಾದೆ ಹರಾಜಾಗುವ ಪ್ರಸಂಗ ಬಂದಾಗ, ಮನದೊಳಗೆ ಸುಪ್ತವಾಗಿದ್ದ ಲಾಲಸೆಯಿ ಘಟಸ್ಫೋಟವಾಗಿ ಆಗಬಾರದ್ದು ಆಗಿಹೋಗುತ್ತದೆ. ಅಲ್ಲಿಗೆ ಲಾವಾರಸ ಶಾಂತ! ಬಹುಶಃ ಇತ್ತೀಚೆಗೆ ನಡೆಯುತ್ತಿರುವ ಕೌಟುಂಬಿಕ ಕೊಲೆ ಪ್ರಕರಣಗಳನ್ನು ಈ ರೀತಿ ವಿಶ್ಲೇಷಿಸಬಹುದೇನೋ.

ನರಕಜೀವನವಾಗುತ್ತಿದೆಯೇ ನಗರಜೀವನ?

ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದ ವರದಿ ನೋಡಿದರೆ ತಿಳಿಯುತ್ತದೆ. 2006ರಲ್ಲಿ ದೇಶದಲ್ಲಿ ನಡೆದ ಕೊಲೆಗಳ ಹಿಂದೆ ಪ್ರೇಮ ವ್ಯವಹಾರಗಳು ಮತ್ತು ಲೈಂಗಿಕ ಕಾರಣದ ಪಾಲು ಅತ್ಯಧಿಕ. ಪಂಜಾಬ್, ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಂತೂ ಕೊಲೆಗಳಿಗೆ ಇವುಗಳ ಪಾಲು ಅತ್ಯಧಿಕ.

ಅಖಿಲ ಭಾರತ ಮಟ್ಟದಲ್ಲಿ ನಡೆದ ಕೊಲೆಗಳಲ್ಲಿ ವೈಯಕ್ತಿಕ ದ್ವೇಷದ ಪ್ರೇರಣೆಯ ಪ್ರಮಾಣ ಶೇ.10, ಆಸ್ತಿ ವಿವಾದದ ಪ್ರಮಾಣ ಶೇ.8 ಮತ್ತು ಪ್ರೇಮ-ಲೈಂಗಿಕ ಕಾರಣಗಳಿಗಾಗಿ ನಡೆದ ಕೊಲೆಗಳ ಪ್ರಮಾಣ ಶೇ.7. ಶೇ.64ರಷ್ಟು ಕೊಲೆಗಳು ಇತರ ಬೇರೆ ಬೇರೆ ಕಾರಣಗಳಿಗಾಗಿ ನಡೆದವುಗಳು ಎನ್ನುತ್ತದೆ ಲಭ್ಯವಿರುವ ದಾಖಲೆಗಳು.

ಕಾಮಲಾಲಸೆ ಮತ್ತು ಪ್ರೇಮ ವ್ಯವಹಾರದಿಂದ ಪ್ರೇರಣೆ ಪಡೆದು ನಡೆದ ಶೇ.10ಕ್ಕೂ ಹೆಚ್ಚು ಕೊಲೆಗಳಿಗೆ ಕಾರಣವೆಂದರೆ ನಗರೀಕರಣ ಅಂತ ಪರಿಭಾವಿಸಬಹುದು. ಯಾಕೆಂದರೆ, ಹೆಚ್ಚು ನಗರೀಕರಣವಾಗಿರದ ರಾಜ್ಯಗಳಾದ ಬಿಹಾರ, ಅಸ್ಸಾಂ, ಚತ್ತೀಸ್‌ಗಢ ಅಥವಾ ಒರಿಸ್ಸಾಗಳಲ್ಲಿ ಆಸ್ತಿ ವಿವಾದ ಇಲ್ಲವೇ ವೈಯಕ್ತಿಕ ದ್ವೇಷದಿಂದ ಹೆಚ್ಚು ಹತ್ಯೆಗಳು ನಡೆದಿವೆ. ದೆಹಲಿ, ಪಂಜಾಬ್, ಗುಜರಾತ್, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಪ್ರೇಮ-ಕಾಮದ ಕೊಲೆಗಳ ಸಂಖ್ಯೆ ಹೆಚ್ಚಾಗಿದ್ದರೆ, ತಮಿಳುನಾಡು, ಗೋವಾ, ದಾದ್ರ ಮತ್ತು ನಗರ್ ಹವೇಲಿ, ಸಿಕ್ಕಿಂ ಮತ್ತು ಮಧ್ಯಪ್ರದೇಶದಲ್ಲಿ ನಡೆದ ಕೊಲೆಗಳಿಗೂ ಶೇ.10ರಷ್ಟು ಕಾರಣ ಇದೇ ಪ್ರೇಮ-ಕಾಮ.

ಇನ್ನೊಂದೆಡೆ, ಉತ್ತರಾಂಚಲ, ರಾಜಸ್ಥಾನ ಹಾಗೂ ಬಿಹಾರದಲ್ಲಿ ಶೇ.4, ಅಸ್ಸಾಂನಲ್ಲಿ ಶೇ.2, ಜಮ್ಮು ಕಾಶ್ಮೀರ, ಪ.ಬಂಗಾಳ, ಕೇರಳ, ಮೇಘಾಲಯಗಳಲ್ಲಿ ತಲಾ ಶೇ.1 ಹಾಗೂ ಇತರ ರಾಜ್ಯಗಳಾದ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಅಂಡಮಾನ್-ನಿಕೋಬಾರ್, ದಾಮನ್ ಮತ್ತು ಡಿಯು, ಪಾಂಡಿಚೇರಿ, ಚಂಡೀಗಢಗಳಲ್ಲಿ ನಗಣ್ಯ ಎನಿಸುವಷ್ಟರ ಪ್ರಮಾಣದಲ್ಲಿ ಈ ಪ್ರೇಮ-ಕಾಮಕ್ಕೆ ಸಂಬಂಧಿಸಿದ ಹತ್ಯೆಗಳು ನಡೆದಿವೆ.

ಇದನ್ನು ಗಮನಿಸಿದರೆ ನಗರೀಕರಣಕ್ಕೂ ಈ ಕೊಲೆಗೂ ಸಂಬಂಧವಿದೆ ಎಂಬುದು ಅರಿವಿಗೆ ಬರುವ ಸಂಗತಿ. ಹಾಗಾದರೆ ನಗರ ಜೀವನ ಶೈಲಿಯು ಮಾನವೀಯ ಸಂಬಂಧಗಳನ್ನು, ಕೌಟುಂಬಿಕ ಬೆಸುಗೆಯನ್ನು, ಮಾನವೀಯತೆಯನ್ನು ಕರಗಿಸುತ್ತದೆಯೇ? ಆಧುನಿಕತೆಯ ಅಲೆಗಳ ನಡುವೆ ಎಲ್ಲಿ ಮರೆಯಾಗುತ್ತಿದೆ ಮಾನವೀಯತೆ ಎಂಬುದು ಚರ್ಚಿಸಬೇಕಾದ ಸಂಗತಿ.

May 19, 2008

ಕನ್ನಡ ಕನ್ನಡ ಅಂತ ಹೋರಾಡಬೇಕಿರುವುದೇಕೆ?

Filed under: myworld — Avi @ 5:24 pm

ಹೌದು… ‘ಕನ್ನಡ ಉಳಿಸಿ, ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ, ಅವರಿಗೆ ಸುಮ್ಮನಿರಲಾಗುವುದಿಲ್ಲವೇ’ ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ. ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು, ದಾಂಧಲೆ ಮಾಡಿದರು ಎಂಬೆಲ್ಲಾ ವರದಿಗಳನ್ನೂ ಓದುತ್ತಾ ಬಂದಿದ್ದೇವೆ.

ಕರ್ನಾಟಕದಲ್ಲಿ ಕನ್ನಡಕ್ಕೆ ಅನ್ಯಾಯ ಆದಾಗ ಜನರು ಧ್ವನಿಯೆತ್ತುವುದು ಸಹಜವೇ. ಆದರೆ ಆಕ್ರೋಶವನ್ನೆಲ್ಲಾ ಅವುಡುಗಚ್ಚಿ ಸುಮ್ಮನೆ ಕುಳಿತರೆ ಅದು ಅಪಾಯಕಾರಿಯೇ. ಯಾವಾಗ ಈ ರೋಷದ ಕಟ್ಟೆ ಉಕ್ಕಿ ಒಡೆಯುದು ಧುಮ್ಮಿಕ್ಕುವುದೋ ಎಂಬುದನ್ನು ಊಹಿಸುವುದು ಅಸಾಧ್ಯವೇ.

ರಾಜ್ಯ ರಾಜಧಾನಿಯಲ್ಲಿ ಕನ್ನಡದ ಈ ಸ್ಥಿತಿಗೆ ಕಾರಣರು ಯಾರು ಎಂಬುದನ್ನು ಪರಾಮರ್ಶಿಸುವ ಮೊದಲು ಒಂದು ಪುಟ್ಟ ಘಟನೆ.

ಇತ್ತೀಚೆಗೆ ತುರ್ತು ಕಾರ್ಯ ನಿಮಿತ್ತ ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿಯಬೇಕಾಗಿತ್ತು. ವಿಮಾನ ನಿಲ್ದಾಣದಿಂದ ಹೊರಬಂದು ಮುಂದಿನ ವಿಮಾನಕ್ಕೆ ಸಾಕಷ್ಟು ಸಮಯವಿದ್ದುದರಿಂದ ಮಧ್ಯಾಹ್ನದೂಟ ಪೂರೈಸೋಣವೆಂದು ದೊಮ್ಮಲೂರಿಗೆ ಟ್ಯಾಕ್ಸಿ ಹಿಡಿಯಲು ತೆರಳಿದೆ. ಅಲ್ಲಿ ನಾಲ್ಕೈದು ಮಂದಿ ಟ್ಯಾಕ್ಸಿವಾಲಾರನ್ನು ವಿಚಾರಿಸಿದಾಗ (ಬಾಯಿಗೆ ಬಂದ ರೇಟು… ಚರ್ಚೆ ಮಾಡೋದು ನಮ್ಮ ಕರ್ಮ!) ಅವರೆಲ್ಲಾ ಮಾತನಾಡಿದ್ದು ಅಚ್ಚ ತಮಿಳಿನಲ್ಲಿ! ಯಾಕಂದ್ರೆ ಚೆನ್ನೈ ವಿಮಾನದಲ್ಲೇ ಬಂದಿಳಿದದ್ದು ಅಂತ ಅವರಿಗೆ ಖಚಿತವಾಗಿ ಗೊತ್ತಿತ್ತು.

ಊಟ ಮುಗಿಸಿ, ಮಂಗಳೂರಿನತ್ತ ಪ್ರಯಾಣ ಬೆಳೆಸಲು ಮರಳಿ ವಿಮಾನ ನಿಲ್ದಾಣಕ್ಕೆ ಹೋಗಲೆಂದು ಆಟೋ ರಿಕ್ಷಾವೊಂದನ್ನು ನಿಲ್ಲಿಸಿದೆವು.

‘ಕಹಾಂ ಜಾನಾ ಹೈ ಸಾಬ್’ ಅಂತ ಆಟೋ ಚಾಲಕನಿಂದ ಪ್ರಶ್ನೆ ಎದುರಾಯಿತು. ಬಹುಶಃ ನನ್ನನ್ನು ನೋಡಿ ಆತ ಯಾರೋ ಮಾರ್ವಾಡಿಯೋ, ಉತ್ತರ ಭಾರತೀಯನೋ ಇರಬೇಕೂಂತ ತೀರ್ಮಾನ ಮಾಡಿರಬೇಕು. ಯಾಕಂದ್ರೆ ಆಟೋ ರಿಕ್ಷಾದವರಿಗೆ ಚಹರೆ ನೋಡಿ ತಮ್ಮ ಸಂಭಾವ್ಯ ಗಿರಾಕಿಯನ್ನು ಕೈತಪ್ಪಿ ಹೋಗದಂತೆ ಮಾಡುವ ಕಲೆ ಬಹುಶಃ ಗೊತ್ತಿರಬೇಕು.

‘ಏರ್ ಪೋರ್ಟ್’ ಅಂತ ಹೇಳಿದೆ… ವಿಮಾನ ನಿಲ್ದಾಣ ಅಂತ ಹೇಳಿದರೆ ಅರ್ಥವಾಗಲಾರದು ಎಂಬ ಶಂಕೆಯಿಂದ. ಹಿಂದಿ ಚೆನ್ನಾಗಿ ಬರುತ್ತಿತ್ತಾದ್ದರಿಂದ ಆಟೋದವನು ಕೇಳಿದ 60 ರೂಪಾಯಿಯನ್ನು ಕೊನೆಗೆ 40 ರೂಪಾಯಿಗೆ ಇಳಿಸುವಷ್ಟು ಚರ್ಚೆ ಮಾಡಬೇಕಾಯಿತು. (ಬೆಂಗಳೂರಿನ ಹೆಚ್ಚಿನ ಆಟೋದವರ ಪರಿಸ್ಥಿತಿ ಗೊತ್ತಲ್ಲ… ಮೀಟರ್ ಇದ್ದರೂ ಹಾಕಲೊಪ್ಪರು… ಹೊರಗಿನವರು ಅಂದ ತಕ್ಷಣ ಬಾಯಿಗೆ ಬಂದ ದರ ಹೇಳಿಬಿಡುತ್ತಾರೆ. ಹಾಗಾಗಿ ಚರ್ಚೆ ಮಾಡೋದು ಅಭ್ಯಾಸವಾಗಿದೆ).

ಆಟೋದಲ್ಲಿ ಕುಳಿತ ಮೇಲೆ, ಕೌನ್ಸಾ ಫ್ಲೈಟ್ ಹೈ ಸಾಬ್ ಅಂತ ಕೇಳಿದಾಗ, ಮಂಗಳೂರು ಅಂತ ಅಚ್ಚಕನ್ನಡದಲ್ಲಿ ಉದ್ದೇಶಪೂರ್ವಕವಾಗಿ ಹೇಳಿದೆ. ಆಗ ಆತನಿಗೆ ಇವರು ಕನ್ನಡದವರೇ ಅಂತ ಜ್ಞಾನೋದಯವಾಯಿತು. ಮತ್ತೆ ಕನ್ನಡದಲ್ಲೇ ಮಾತು ಮುಂದುವರಿಸಿದೆವು.

ನಾನು ಕೇಳಿದೆ… ‘ಯಾಕಪ್ಪಾ ಬೆಂಗಳೂರಲ್ಲಿದ್ದುಕೊಂಡೂ ಕನ್ನಡದಲ್ಲಿ ಮಾತನಾಡಿಸೋದಿಲ್ಲ?’. ಅದಕ್ಕೆ ಅವನಿಂದ ಬಂದ ಉತ್ತರ ಕೇಳಿ ನಾನು ಕೆಲವು ಲೇಖನಗಳಲ್ಲಿ ಓದಿದ್ದು ಕಣ್ಣೆದುರಿಗೆ ಬಂತು, ಅಲ್ಲಿ ಉತ್ಪ್ರೇಕ್ಷೆ ಇರಲಿಲ್ಲ ಎಂಬುದೂ ಖಚಿತವಾಯಿತು.

ಆತ ಹೇಳಿದ್ದು: ‘ಸಾರ್, ನಾನು ಕನ್ನಡದೋನೇ. ಆದ್ರೆ ನನ್ನ ಆಟೋ ಏರೋರು ಯಾರು ಕೂಡ ಕನ್ನಡ ಮಾತಾಡಲ್ಲ. ಕನ್ನಡದವರೇ ಆದ್ರೂ ವಿಮಾನ ನಿಲ್ದಾಣಕ್ಕೆ ಹೋಗೋವಾಗಲಂತೂ ಅಪ್ಪಿತಪ್ಪಿಯೂ ಕನ್ನಡ ಮಾತಾಡಲೊಲ್ಲರು. ಯಾಕೆ ಗೊತ್ತೇ? ಅವರಿಗೆ ಕನ್ನಡ ಮಾತಾಡಿದ್ರೆ ತಮ್ಮ ಪ್ರೆಸ್ಟೀಜ್ ಕಡಿಮೆ ಅನ್ನೋ ಭಾವನೆ. ಠುಸ್ ಪುಸ್ ಇಂಗ್ಲೀಷೋ, ಹಿಂದಿನೋ… ಅಥವಾ ಕನ್ನಡ ಬಿಟ್ಟು ಬೇರಾವುದೇ ಭಾಷೆ ಮಾಡಿದ್ರೇನೇ ಆತ್ಮತೃಪ್ತಿ ಮತ್ತು ಪ್ರೆಸ್ಟೀಜ್ ವಿಷ್ಯ ಕೂಡ’.

ಇದನ್ನು ಕೇಳಿ ದಂಗು ಬಡಿದುಹೋಯಿತು. ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡದ ಸ್ಥಿತಿ ಗತಿಯಿದು!

ಕನ್ನಡ ನಾಡಿನಲ್ಲಿ ಕನ್ನಡವನ್ನು ರಕ್ಷಿಸಿ ಅಂತ ಹೋರಾಡೋದ್ರಲ್ಲಿ ತಪ್ಪಿಲ್ಲ ಅಂತನ್ನಿಸಿತು.

ಅದೇ ತಮಿಳುನಾಡು ನೋಡಿ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣವೇ ಆಟೋ ಅಥವಾ ಟ್ಯಾಕ್ಸಿಯವ ಮಾತಾಡೋದೇ ತಮಿಳಿನಲ್ಲಿ. ಅಲ್ಲಿ ಇದ್ದದ್ದು ಇಲ್ಲಿ ಯಾಕಾಗುವುದಿಲ್ಲ? ಯಾಕಾಗುತ್ತಿಲ್ಲ? ಯಾರಾದ್ರೂ ಉತ್ತರಿಸುವಿರಾ?

May 10, 2008

ಮತದಾರರಿಗೆ ನೀಡಿದ ಭರವಸೆಗಳು ಗಾಳಿಯಲ್ಲಿ!

Filed under: myworld — Avi @ 11:19 am

ಚುನಾವಣೆ ಬಂತೆಂದರೆ ಮತದಾರರಿಗೆ ಬಿಟ್ಟಿ ಮನರಂಜನೆ. ಅವರಿವರ ಹೇಳಿಕೆಗಳನ್ನು ಕೇಳಿಸಿಕೊಳ್ಳೋದು… ಮನತುಂಬಿ ನಗೋದು. ಹಹ್ಹ… ಏನ್ ನಗಿಸ್ತಾರಪ್ಪಾ ಈ ರಾಜಕಾರಣಿಗಳು! ಅಷ್ಟೇ ಅಲ್ಲ, ಗೋಳೋ ಅಂತ ಅಳಲೂ ಗೊತ್ತಿದೆ ಅವರಿಗೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಲಿಲ್ಲ ಅಂತ ಯಾರಾದರೂ ಅತ್ತದ್ದನ್ನು ಕೇಳಿದ್ದೀರಾ ಅಥವಾ ನೋಡಿದ್ದೀರಾ?

ಚುನಾವಣೆ ಘೋಷಣೆಯಾದಂದಿನಿಂದ ಇದುವರೆಗೆ… ರಾಜಕಾರಣಿಗಳ ಬಾಯಲ್ಲಿ ಎಂಥೆಂಥಾ ಮಂತ್ರಗಳನ್ನು ಕೇಳಿದ್ದೇವೆ ನೋಡಿ. ಶಾಸಕನಾಗಿ ಆಯ್ಕೆಯಾದ ಬಳಿಕ ಅಪ್ಪಿ ತಪ್ಪಿಯೂ ಮಾಡದ ಎಲ್ಲಾ ಕೆಲಸಗಳೂ ಚುನಾವಣೆ ಸಂದರ್ಭ ಈ ರಾಜಕಾರಣಿಗಳಿಗೆ ಬುದ್ಧನಿಗೆ ಜ್ಞಾನೋದಯವಾದಂತೆಯೋ, ಅಥವಾ ಆರ್ಕಿಮಿಡಿಸನಿಗೆ ಸಾಪೇಕ್ಷ ಸಾಂದ್ರತೆಯ ಸಿದ್ಧಾಂತ ಪಕ್ಕನೆ ಹೊಳೆದಂತೆಯೋ ಅರಿವಿಗೆ ಬರುತ್ತದೆ.

ಬಣ್ಣ ಬಣ್ಣದ ಬಲೂನುಗಳು ತುಂಬಿರುವ ಚುನಾವಣಾ ಪ್ರಣಾಳಿಕೆಗಳನ್ನು ನೋಡಿದ್ದೀರಲ್ಲ? ಅವುಗಳೀಗಾಗಲೇ ಕರುನಾಡಿನ ಚುನಾವಣಾ ಬಾನಂಗಳದಲ್ಲಿ ಒಂದಕ್ಕಿಂತ ಒಂದು ಮಿಗಿಲೋ ಎಂಬಂತೆ ಎತ್ತರೆತ್ತರಕ್ಕೆ ಹಾರಾಡುತ್ತಿವೆ. ಬಹುಶಃ ಚುನಾವಣೆಗಳು ಮುಗಿಯುವ ಹೊತ್ತಿಗೆ ಖಂಡಿತವಾಗಿಯೂ ಅವುಗಳು ಕರುನಾಡಿನ ಬಡ ಪ್ರಜೆಗಳ ಕಣ್ಣಿಗೂ ಕಾಣದಷ್ಟು ಬಾನೆತ್ತರಕ್ಕೆ ಹೋಗಿಬಿಟ್ಟಿರುತ್ತವೆ!

ಹೌದು… ಒಂದೊಂದು ಭರವಸೆಯ ಬುಟ್ಟಿಯನ್ನೂ ನೋಡಿರಂತೆ… 2 ರೂಪಾಯಿಗೆ ಕಿಲೋ ಅಕ್ಕಿಯೇನು, ವಿದ್ಯುತ್ ಕಂಪನಿಗಳಿಗೆ ಜನತೆ ಹಿಡಿಶಾಪ ಹಾಕುವ ಪ್ರಕ್ರಿಯೆ ಓಬೀರಾಯನ ಕಾಲದಿಂದಲೂ ಮುಂದುವರಿದಿದ್ದರೂ ಉಚಿತ ಮತ್ತು ನಿರಂತರ ವಿದ್ಯುತ್ತು, ಸಾಲ ಮನ್ನಾವೇನು (ಮಾಡಿಯಾರು.. ಯಾಕಂದ್ರೆ ಗಣಿ ಧಣಿಗಳು, ರಿಯಲ್ ಎಸ್ಟೇಟ್ ದೊರೆಗಳು, ಕ್ರಿಮಿನಲ್ ಹಿನ್ನೆಲೆಯವರೆಲ್ಲ ಕಣದಲ್ಲಿದ್ದಾರಲ್ಲ)… ಕಲರ್ ಟೀವಿ… ಇವೆಲ್ಲಕ್ಕೂ ಕಳಶವಿಟ್ಟಂತೆ ಸಾರಾಯಿ ಕುಡಿಸುತ್ತೇವೆ ಎಂಬ ಮೊಯಿಲಿ ಭರವಸೆ… ಅಬ್ಬಬ್ಬಬ್ಬಾ… ಇವೆಲ್ಲವೂ ಜಾರಿಗೆ ಬಂದರೆ ರಾಜ್ಯದ ಜನತೆಗೆ ಈ ಲೋಕದಲ್ಲಿರುವುದೇ ಭಾಸವಾಗದು. ಖಂಡಿತವಾಗಿಯೂ ಸ್ವರ್ಗಕ್ಕೆ ಲೆಕ್ಕ ಹಾಕಿದರೆ ಮೂರೇ ಮೂರು ಗೇಣು!

ಪ್ರಣಾಳಿಕೆಗಳನ್ನಂತೂ ಖಂಡಿತವಾಗಿಯೂ ಓದಿದ್ದೀರಿ. ಅವುಗಳಿಗೆ ಮೀಸಲಾದ ದೊಡ್ಡ ದೊಡ್ಡ ಹೊರಲಾರದ ಮಣಭಾರದ ಪುಸ್ತಕವೇ ಇದೆ. ಈಗ ಚುನಾವಣೆಯೆಂಬ ಕೆಸರಿನಂಗಳದಲ್ಲಿ ಪರಸ್ಪರರ ವಿರುದ್ಧ ಕೆಸರೆರಚಾಡುತ್ತಾ ಇರುವ ಪಕ್ಷಗಳ ಬಗ್ಗೆಯೂ ಒಂದಷ್ಟು ನೋಡಿ.

ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದು ನೆನಪಿದೆ ತಾನೇ? ಜೆಡಿಎಸ್ ಬೆಂಬಲವಿಲ್ಲದೆ ಅದು ಹೇಗೆ ಯಾರು ಸರಕಾರ ರಚಿಸ್ತಾರೋ ನೋಡ್ತೀನಿ ಅಂದಿದ್ದರವರು. ಬಹುಮತ ಪಡೆಯುವ ಬಗ್ಗೆ ಜೆಡಿಎಸ್‌ಗೇ ವಿಶ್ವಾಸವಿಲ್ಲ, ಅದರ ಪ್ರತೀಕವೇ ಈ ಹೇಳಿಕೆ ಅಂತ ಪ್ರತಿಪಕ್ಷಗಳ ಮುಖಂಡರು ಟೀಕಿಸಿದ್ದರು. ಅದಿರಲಿ.

ಮೊನ್ನೆ ಮೊನ್ನೆ ಆಡ್ವಾಣಿ ಕರ್ನಾಟಕಕ್ಕೆ ಬಂದರಲ್ಲ, ಅವರು ಹೇಳಿದ್ದೇನು? ಬೇಕಾದರೆ ಪ್ರತಿಪಕ್ಷ ಸ್ಥಾನದಲ್ಲೇ ಕೂರುತ್ತೇವೆ, ಆದರೆ ಜೆಡಿಎಸ್ ಜತೆಗೆ ಮತ್ತೆ ಚುನಾವಣೋತ್ತರ ಮೈತ್ರಿಯೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳಿದರು. ಅಲ್ಲಿಗೆ ಬಿಜೆಪಿಗೂ ಬಹುಮತದ ಬಗೆಗೆ ವಿಶ್ವಾಸ ಹೊರಟು ಹೋದಂತಾಯಿತು ಎಂದು ಅದರ ಎದುರು ಪಕ್ಷಗಳು ಹೇಳಬಹುದು.

ಈಗ ಮುಖವುಳಿಸಿಕೊಳ್ಳಬೇಕಲ್ಲ, ಜೆಡಿಎಸ್ ಕೂಡ ಎಚ್ಚೆತ್ತುಕೊಂಡಿತು. ನಮ್ಮ ಮೈತ್ರಿ ಇಲ್ಲದೆ ಅದು ಹೇಗೆ ಬೇರೆಯವರು ಸರಕಾರ ರಚಿಸುತ್ತಾರೆ ನೋಡ್ತೀವಿ ಅಂತ ಹೇಳಿದವರೇ, ಚುನಾವಣೆ ಮುಗಿದ ಬಳಿಕ ಯಾವುದೇ ಪಕ್ಷದೊಂದಿಗೆ ನಾವು ಕೂಡ ಮೈತ್ರಿ ಮಾಡಿಕೊಳ್ಳುವುದಿಲ್ಲ ಅಂತ ಘೋಷಿಸಿದ್ದಾರೆ. ಇದಕ್ಕೆ ದೇವೇಗೌಡರು ನೀಡಿರುವ ಕಾರಣವೂ ಕೇಳಲು ತುಂಬಾ ಸಿಹಿಯಾಗಿದೆ: ‘ಧರಂ ಸರಕಾರಕ್ಕೆ ಬೆಂಬಲ ನೀಡಿ ಮತ್ತು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡು ಸಾಕಷ್ಟು ಅನುಭವಿಸಿದ್ದೇವೆ, ಅದು ಪುನರಾವರ್ತನೆಯಾಗಬಾರದು’ ಅಂತ. ಸಂದರ್ಭ: ಪಕ್ಷದ ಪ್ರಣಾಳಿಕೆ ಬಿಡುಗಡೆ ಸಂದರ್ಭ.

ಬಹುಶಃ ಕಾಂಗ್ರೆಸಿನಿಂದಲೂ ಇಂಥದ್ದೊಂದು ‘ಚುನಾವಣೆ ಬಳಿಕ ಯಾರೊಂದಿಗೂ ಮಿತ್ರತ್ವ ಇಲ್ಲ’ ಎಂಬೋ ಹೇಳಿಕೆ ಶೀಘ್ರದಲ್ಲೇ ಬರಬಹುದು. ಇದು ರಾಜಕೀಯ. ಪಕ್ಷ ನಿಷ್ಠೆ, ಜನಸೇವೆ, ತತ್ವ, ಸಿದ್ಧಾಂತ ಇತ್ಯಾದಿ ರಾಜಕೀಯವಾಗಿ ‘ಗೌಣ’ವಾಗಿರುವ ಪದಗಳೆಲ್ಲವೂ ಇಲ್ಲಿ ಟ್ವೆಂಟಿ-20 ಕ್ರಿಕೆಟಿನಲ್ಲಿ ಬೌಂಡರಿ, ಸಿಕ್ಸರ್ ಸಿಡಿದಂತೆ ಬೌಂಡರಿ ಗೆರೆಯಿಂದ ಸಿಡಿಯುತ್ತಲೇ ಇರುತ್ತವೆ.

ಮತದಾರ ಇಂಥ ಅದೆಷ್ಟೋ ಮಾತುಗಳನ್ನು ಕೇಳಿಸಿಕೊಂಡಿದ್ದಾನೆ. ಅಂತೂ ಚುನಾವಣೆ ಬಂತೆಂದರೆ ಮತದಾರರಿಗೆ ಬಿಟ್ಟಿ ಮನರಂಜನೆ. ಅವರಿವರ ಹೇಳಿಕೆಗಳನ್ನು ಕೇಳಿಸಿಕೊಳ್ಳೋದು… ಮನತುಂಬಿ ನಗೋದು. ಹಹ್ಹ… ಏನ್ ನಗಿಸ್ತಾರಪ್ಪಾ ಈ ರಾಜಕಾರಣಿಗಳು! ಅಷ್ಟೇ ಅಲ್ಲ, ಗೋಳೋ ಅಂತ ಅಳಲೂ ಗೊತ್ತಿದೆ ಅವರಿಗೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಲಿಲ್ಲ ಅಂತ ಯಾರಾದರೂ ಅತ್ತದ್ದನ್ನು ಕೇಳಿದ್ದೀರಾ ಅಥವಾ ನೋಡಿದ್ದೀರಾ? ಹಾಗಿದ್ರೆ ಇವರ ಅಳುವಿನ ಹಿಂದಿರುವ ಮರ್ಮವೇನೆಂಬುದು ಅರ್ಥವಾದೀತು.

ಚುನಾವಣಾ ಫಲಿತಾಂಶಗಳು ಮತ್ತೊಂದು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸುವುದು ಹೆಚ್ಚಿನ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಅದು ಹಾಗಾದರೆ, ಓಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಅಧಿಕಾರ ಸಿಗದವರು ಸುಮ್ಮನಿರುತ್ತಾರೆಯೇ? ಅಥವಾ ಹೇಗಾದರೂ ಮಾಡಿ ಸರಕಾರವೊಂದನ್ನು ಸ್ಥಾಪಿಸದಿರಲು ಅವರೇನು ಪೆದ್ದರೇ? ಖಂಡಿತಾ ಅಲ್ಲ. ಮತ್ತೆ ಮೈತ್ರಿಗೆ ಮುಂದಾಗುತ್ತಾರೆ. ‘ಜನತೆಯ ಮೇಲೆ ಚುನಾವಣೆ ಹೇರಲು ನಮಗೆ ಇಷ್ಟವಿಲ್ಲ, ಅದಕ್ಕೆ ಈ ಮೈತ್ರಿ ಅನಿವಾರ್ಯ’ ಎಂಬ ರಾಜಕೀಯ ಕ್ಷೇತ್ರದಲ್ಲಿ ಹಳಸಿಹೋದ ವಾಕ್ಯವೊಂದು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತದೆ. ಇದು ವ್ಯವಸ್ಥೆಯ ವ್ಯಂಗ್ಯ.

ಈಗಾಗಲೇ ಕರುನಾಡಿನಲ್ಲಿ ನಡೆದ ನಾಟಕಗಳನ್ನೆಲ್ಲಾ ಮತದಾರ ಗಮನವಿಟ್ಟು ನೋಡಿ ಮನರಂಜನೆ ಅನುಭವಿಸಿದ್ದಾನೆ. ಮತದಾರ ಎಚ್ಚೆತ್ತಿದ್ದಾನೆ. ಓಟು ಕೊಡಲು ಸಿದ್ಧನಾಗಿದ್ದಾನೆ. ಮತದಾರರೇ ಎರಡೆರಡು ಬಾರಿ ಯೋಚಿಸಿ ನಿಮ್ಮ ಹಕ್ಕು ಚಲಾಯಿಸಿ. ಅಸಮರ್ಥರನ್ನು ಆರಿಸಿದರೆ ನಿಮ್ಮ ಹಕ್ಕು ನಷ್ಟವಾದಂತೆಯೇ ಸರಿ.

ಅದು ಹೌದು, ಯೋಗ್ಯರನ್ನು ಆರಿಸಲು ಎಲ್ಲಿ ಹೋಗುವುದು ಎಂಬ ಬಗ್ಗೆ ಯೋಚಿಸುತ್ತಿದ್ದೀರಾ? ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳಬೇಕಷ್ಟೇ. ಅಂದರೆ ಇದ್ದುದರಲ್ಲಿ ಯೋಗ್ಯರಿಗೆ ಮತ ಚಲಾಯಿಸಬೇಕಷ್ಟೆ. ಅದು ನಮ್ಮ ಹಣೆಬರಹವೂ ಹೌದು, ಯಾರು ಬೇಕಾದರೂ ಓಟಿಗೆ ನಿಲ್ಲಬಹುದು ಎಂಬ ಉದಾರತೆಯ ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯವೂ ಹೌದು.

ಪ್ರಬುದ್ಧ ಮನಸ್ಸಿನ, ಅಭಿವೃದ್ಧಿ ಮಂತ್ರ ಜಪಿಸುವ, ಜನರ ಬಗ್ಗೆ ನೈಜ ಕಾಳಜಿ ಇರುವ ಸರಕಾರವೊಂದು ಬರಲಿ ಎಂಬುದು ನಮ್ಮೆಲ್ಲರ ಆಶಯ.

April 12, 2008

ಒಂದು ಜನ್ಮದಲ್ಲಿ ಒಂದೇ ಬಾಲ್ಯ, ನಮಗದಷ್ಟೇ ಏತಕೆ?

Filed under: myworld — Avi @ 12:28 pm

ಇದು ವಿಷು ಹಬ್ಬ (ಸೌರಮಾನ ಯುಗಾದಿಯೂ ಹೌದು) ಬಗ್ಗೆಯೂ ಮಾಹಿತಿ ನೀಡುವ ಪ್ರಸಂಗ. ಕಥೆ ಅಂತ ಹೆಸರಿಸಬಹುದೇ? ಅಂತ ಓದಿದ ನಂತರ ಹೇಳಿ! :)

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..

-ದ.ರಾ.ಬೇಂದ್ರೆ

“ಅಮ್ಮ ನಂಗೆ ಈ ಬಾರಿ ಯುಗಾದಿಗೆ ಹೊಸ ಅಂಗಿ ಚಡ್ಡಿ ತೆಗೆಸಿಕೊಡ್ತಾಳಂತೆ”

“ಹೌದಾ?”

“ನಿಂಗೆ ಇಲ್ವಾ?”

“ಇಲ್ಲ”

“ಯಾಕೆಯಾ?”

“ಅಪ್ಪನಲ್ಲಿ ಕೇಳಿದ್ದಕ್ಕೆ ಜೋರು ಮಾಡಿದ್ರು. ಕಣಿ ಇಡ್ಲಿಕ್ಕೆ ಅಕ್ಕಿಗೆ ದುಡ್ಡಿಲ್ಲ, ಹೊಸ ಬಟ್ಟೆಯಂತೆ ಹೊಸ ಬಟ್ಟೆ… ಅಂತ ಅಪ್ಪ ಕೂಗಾಡಿದ್ರು”

“ಹಾಗಾದ್ರೆ ಒಂದು ಕೆಲಸ ಮಾಡು. ಮೊನ್ನೆ ಶಾಲೆಗೆ ಹೊಲಿಸಿದ ಯುನಿಫಾರ್ಮ್ ಇದೆಯಲ್ಲ… ಅದು ಹೊಸದರ ಥರಾನೇ ಉಂಟು. ಅದನ್ನೇ ಹಾಕಿಕೋ.”

ಈ ಸಲಹೆ ಬಂದಾಗ ಒಂದು ಹನ್ನಿ ಕಣ್ಣೀರು ಕೆನ್ನೆಯನ್ನು ಒರಸಿಕೊಂಡು ನನಗರಿವಿಲ್ಲದಂತೆಯೇ ಜಾರಿತ್ತು.

ಹೌದಲ್ವಾ? ನನ್ನ ಅಕ್ಕ ಪಕ್ಕದ ಮನೆಯಲ್ಲಿ ನನ್ನ ವಯಸ್ಸಿನ ಹುಡುಗ್ರು ಯುಗಾದಿಯಂದು, ವಿಷು ಕಣಿ ನೋಡಿ ಹೊಸ ಬಟ್ಟೆ ತೊಟ್ಟು ನಲಿದಾಡುವುದಕ್ಕೆ, ಅವರ ಫ್ರೆಂಡ್ಸಿಗೆಲ್ಲಾ ತೋರಿಸೋದಿಕ್ಕೆ ಎಷ್ಟೊಂದು ಸಂಭ್ರಮದಲ್ಲಿದ್ದಾರೆ! ಸಡಗರ, ಪುಳಕ, ಮನಸ್ಸಿನ ತುಂಬಾ ಹೊಸ ಅಂಗಿ ಚಡ್ಡಿಯ ಕನಸು… ಯುಗಾದಿಗೆ ಒಂದು ವಾರ ಇರುವಾಗಲೇ ಅವರ ಕಣ್ಣುಗಳಲ್ಲದೇನು ಹೊಳಪು!

ನಾನು ಯೋಚಿಸಿಕೊಳ್ಳುತ್ತೇನೆ… ಈ ಹಬ್ಬ ಅಂದ್ರೇನು? ಬೆಂದ ಅನ್ನಕ್ಕೇ ಒಂದಷ್ಟು ಬೆಲ್ಲ ಹಾಕಿ, ತೆಂಗಿನ ಕಾಯಿ ಇದ್ದರೆ ಅದನ್ನು ಅರೆದು ಹಾಲು ತೆಗೆದು, ಅದನ್ನೂ ಸೇರಿಸಿದರೆ ಒಂದು ಮಧ್ಯಾಹ್ನದೂಟಕ್ಕೆ ಅರ್ಧ ಲೋಟದಲ್ಲಿ ಪಾಯಸ ಎಂಬ ಸಿಹಿ ಪದಾರ್ಥ ತಿಂದರೆ ಅದೇ ಹಬ್ಬವಾಗಿಬಿಡುತ್ತಿತ್ತು ನನಗೆ. ಹೊಸ ಅಂಗಿ-ಚಡ್ಡಿಯ ಬಗ್ಗೆ ನಾನಂತೂ ಕನಸು ಕಂಡದ್ದಿಲ್ಲ, ಕಾಣುವಂತೆಯೂ ಇರಲಿಲ್ಲ.

ಸದಾ ಕಾಲ ದುಡಿಯುವ ಅಪ್ಪ, ತಂದು ಹಾಕಿದ್ದನ್ನು ಅಚ್ಚುಕಟ್ಟಾಗಿ ಬೇಯಿಸಿ ಎಲ್ಲರಿಗೂ ಸಮಪಾಲು ವಿತರಿಸುತ್ತಿದ್ದ ಅಮ್ಮ, ಅದರ ಜತೆಗೆ, “ಮಗೂ, ನಾಳೆ ಯುಗಾದಿ ಹಬ್ಬ, ಆವತ್ತು ನೀನು ಯಾವುದಕ್ಕೂ ಹಠ ಮಾಡಬಾರದು, ದೊಡ್ಡವರಿಂದ ಬೈಸಿಕೊಳ್ಳಬಾರದು. ಯಾಕಂದ್ರೆ, ಹೊಸ ವರ್ಷದ ಮೊದಲ ದಿನವೇ ಬೈಸಿಕೊಂಡರೆ, ಇಡೀ ವರ್ಷ ಅದು ಮುಂದುವರೀತದೆ. ಹಾಗಾಗಿ ಹೇಗಾದ್ರೂ ಲೂಟಿ ಮಾಡ್ಬಾರ್ದು. ಆಯ್ತಾ ಪುಟ್ಟಾ…” ಅಂತ ಮನಸಿನೊಳಗಿನ ಆತಂಕದ ನಡುವೆಯೇ ಸಲಹೆ ನೀಡುತ್ತಿದ್ದ ದೊಡ್ಡಮ್ಮ…

ಇವರ ನಡುವೆ ಹಬ್ಬ ಎಂಬ ಅದೆಂಥದನ್ನೋ ಆಚರಿಸುತ್ತಿದ್ದ ನನಗೆ, ನೆರೆಕರೆಯ ನನ್ನ ಗೆಳೆಯರ ಸಂತಸವನ್ನು ಹಂಚಿಕೊಳ್ಳುವುದಷ್ಟೇ ಪರಮಾನ್ನವಾಗಿತ್ತು. ಇದ್ದದ್ದರಲ್ಲಿಯೇ ಅಮ್ಮ ಗುಡ್ಡೆಗೆ ಹೋಗಿ ಗೇರು ಹಣ್ಣು, ಮಾವಿನ ಕಾಯಿ, ಗೇರು ಬೀಜ, ಮುಳ್ಳುಸೌತೆ… ಸಿಕ್ಕಿದ್ರೆ ಬಾಳೆ ಹಣ್ಣು… ಮತ್ತು ಇದ್ದ ಒಂದೇ ಒಂದು ತೆಂಗಿನ ಮರದಲ್ಲಿದ್ದ ತೆಂಗಿನಕಾಯಿ ತೆಗೆದು, ಅದನ್ನು, ಹರಿವಾಣದಲ್ಲಿ ಹರಡಿದ್ದ ಅರೆಪಾವು ಅಕ್ಕಿಯ ಮೇಲಿರಿಸಿ, ಅದಕ್ಕೊಂದು ಕನ್ನಡಿ ಇರಿಸಿ, ಅವಳ ಮದುವೆ ಕಾಲಕ್ಕೆ ನನ್ನ ಸೋದರ ಮಾವ (ಅಮ್ಮನ ಅಣ್ಣ) ಕೊಟ್ಟ ಕಾಲು ಪವನಿನ ಚಿನ್ನದುಂಗುರವನ್ನೂ ಇರಿಸಿ ‘ವಿಷು ಕಣಿ’ ಪ್ರತಿಷ್ಠಾಪಿಸುತ್ತಿದ್ದಳು. ಅದಕ್ಕೆ ನಮ್ಮ ಮನೆಯಂಗಳದಲ್ಲಿ ಬೆಳೆಸಿದ್ದ ಅಬ್ಬಲ್ಲಿಗೆ (ಕನಕಾಂಬರ), ಗುಲಾಬಿ, ಕೇಪುಳ ಹೂವುಗಳನ್ನು ಅಚ್ಚುಕಟ್ಟಾಗಿ ಕೊಯ್ದು, ಬಾಳೆಯ ದಾರದಲ್ಲಿ ನೆಯ್ದ ಹೂವಿನ ಹಾರದ ಅಲಂಕಾರ. ಒಂದಷ್ಟು ಕುಂಕುಮ ಲೇಪನ. ಅಪ್ಪನ ಎಲೆ-ಅಡಿಕೆ ಪೆಟ್ಟಿಗೆಯಿಂದ ಎಬ್ಬಿಸಿದ ವೀಳ್ಯದೆಲೆ ಮತ್ತು ಅಡಿಕೆ ತುಂಡುಗಳು.

“ನೋಡು ಮಗಾ, ನಾಳೆ ಬೆಳಿಗ್ಗೆ ಎದ್ದ ತಕ್ಷಣ ವಿಷು ಕಣಿ ನೋಡು, ಕನ್ನಡಿಯಲ್ಲಿ ನಿನ್ನ ಮುಖ ನೋಡಿದ ನಂತ್ರವೇ ಹಲ್ಲುಜ್ಬೇಕು… ಎದ್ದ ಕೂಡ್ಲೇ ಬೇರೇನನ್ನೂ ನೋಡ್ಬಾರ್ದು… ಸೀದಾ ದೇವರ ಫೋಟೋದ ಹತ್ತಿರ ಹೋಗಿ ಅಲ್ಲಿಟ್ಟಿರುವ ಕಣಿಯನ್ನೇ ನೋಡ್ಬೇಕು ತಿಳೀತಾ…?” ಅಂತ ಅಕ್ಕರೆ ತುಂಬಿದ, ಮುಖದ ಮೂಲೆಯಲ್ಲೆಲ್ಲೋ ಸಡಗರದ ಭಾವ ಮಿಂಚಿಸುತ್ತಾ ಹೇಳ್ತಾ ಇದ್ದಳು.

“ಆಯ್ತಮ್ಮಾ… ಅದ್ರಲ್ಲಿರೋ ಗೋಂಕು… (ಗೇರು ಹಣ್ಣು) ನಂಗೆ ತಿನ್ಲಿಕ್ಕೆ ಕೊಡ್ತೀಯಲ್ಲ…” ಅಂತ ಕನ್ಫರ್ಮ್ ಮಾಡಿಕೊಂಡೇ ನಾನು ಶರ್ತಬದ್ಧವಾಗಿಯೇ ಒಪ್ಪಿಗೆ ಕೊಡುತ್ತಿದ್ದೆ.

“ಪುಟ್ಟಾ… ನಾಳೆ ತುಂಬಾ ಒಳ್ಳೇ ದಿನ. ಯಾರ ಹತ್ರಾನೂ ಜಗಳ ಆಡ್ಬಾರ್ದು, ನಗು ನಗ್ತಾ ಇರ್ಬೇಕು. ಅಳ್ಬಾರ್ದು…” ಇದು ದೊಡ್ಡಮ್ಮನ ಹಿತೋಪದೇಶ. ಆಯ್ದು ದೊಡ್ಡಮ್ಮ, ಆದ್ರೆ ಅಲ್ಲಿ ‘ಕಣಿ’ಗೆ ಇಟ್ಟಿರೋ ಗೇರು ಹಣ್ಣು ಮಾತ್ರ ನಂಗೆ ಕೊಡ್ಬೇಕು… ಆಯ್ತಾ… ಅಂತ ದೊಡ್ಡಮ್ಮನ ಕುತ್ತಿಗೆಯ ಸುತ್ತ ಎರಡೂ ಕೈ ಬಳಸಿ, ಒಂದು ಪ್ರೀತಿಯ ಅಪ್ಪುಗೆಯೊಂದಿಗೆ… ಆಡಲು ಕರೆದ ಪಕ್ಕದ್ಮನೆಯ ಮಾಣಿಯ ಜತೆ ಚೆಂಡಾಟಕ್ಕೆ ದೌಡಾಯಿಸ್ತಾ ಇದ್ದೆ. ಮನಸ್ಸಿನಲ್ಲಿ, ನಾಳೆ ಇಡೀ ದಿನ ಯಾರಿಂದ್ಲೂ ಬೈಸಿಕೊಳ್ಳದಿರುವುದು ಹೇಗೆ ಎಂಬ ಯೋಚನೆ ಕಾಡ್ತಾನೇ ಇತ್ತು.

ಅಂದು ಕತ್ತಲೆಯಾಗುತ್ತಿದ್ದಂತೆಯೇ, ಕೈಕಾಲು ತೊಳೆದು, ದೇವರ ದೀಪವನ್ನು ಚೆನ್ನಾಗಿ ಹುಣ್ಸೆ ಹುಳಿ ಹಾಕಿ ಉಜ್ಜಿ, ನಳನಳಿಸುವಂತೆ ಮಾಡಿ, ಅದಕ್ಕೆ ಎಂಟಾಣೆ ನೀಡಿ ಖರೀದಿಸಿ ತಂದಿದ್ದ ಎಳ್ಳೆಣ್ಣೆ ಹುಯ್ಡು ಹಚ್ಚಿದ ಅಮ್ಮ, ಹರಿವಾಣದಲ್ಲಿ ‘ವಿಷು ಕಣಿ’ ಜೋಡಿಸಲು ತೊಡಗುತ್ತಾಳೆ. ನಾನೂ, ಅಣ್ಣನೂ ಅಮ್ಮ ಏನು ಮಾಡ್ತಾಳೆ ಅಂತ ಬೆರಗುಗಣ್ಣಿನಿಂದಲೇ ನೋಡ್ತಾ… ಕೆಂಪು ಮತ್ತು ಹಳದಿ ಬಣ್ಣದಿಂದ ಕಂಗೊಳಿಸುತ್ತಾ, ಆಕರ್ಷಿಸುತ್ತಿದ್ದ ರಸ ತುಂಬಿದ್ದ ಗೇರು ಹಣ್ಣಿನ ರುಚಿಯ ಬಗ್ಗೆ ಮನದಲ್ಲೇ ಮಂಡಿಗೆ ಮೆಲ್ಲುತ್ತಿದ್ದೆವು.

ಅಷ್ಟು ಸಣ್ಣ ಕನ್ನಡಿಯಲ್ಲಿ ಮುಖ ನೋಡೋದು ಹೇಗೆ? ಅಂತ ನನ್ನ ಪ್ರಶ್ನೆ. ಹೇಯ್, ಸುಮ್ನಿರು… ಸರೀ ನೋಡು… ಕಾಣ್ತದೆ ಅಂತ ಅಮ್ಮನ ಸಮಜಾಯಿಷಿ. ‘ಈಗ್ಲೇ ನೋಡ್ಲಾ?’ ನನ್ನ ಕೀಟಲೆ ಮಾತಿಗೆ, ಅಮ್ಮ, ಥೋ… ಹೋಗಾಚೆ… ಅದು ನಾಳೆ ಬೆಳಿಗ್ಗೆ ನೋಡ್ಲಿಕ್ಕೆ… ಅಂತ ಜೋರು ಮಾಡಿದ್ಳು.

ಎಲ್ಲವೂ ಜೋಡಿಸಿದ ನಂತ್ರ… ‘ಅದೆಂತದ್ದಮ್ಮಾ?’ ಅಂತ ನಾನು ಕಣಿಯನ್ನು ತೋರಿಸಿ ಕೇಳಿದೆ. ಪಕ್ಕದಲ್ಲೇ ಅಮ್ಮನಿಗೆ ಸಹಾಯ ಮಾಡುತ್ತಿದ್ದ ದೊಡ್ಡಮ್ಮ ಹೇಳಿದ್ಳು- ಪುಟ್ಟೂ, ಅದು ದೇವರ ಇದ್ದ ಹಾಗೆಯೇ. ಹೊಸ ವರ್ಷ ಅಲ್ವಾ, ಹೊಸ ಬೆಳೆ, ಹೊಸ ಕಳೆ, ಒಟ್ನಲ್ಲಿ ಹೊಸ ಜೀವನದ ಸಂಕೇತ ಅದು ಅಂತ ನಮ್ಮ ತುಳುಭಾಷೆಯಲ್ಲೇ ದೊಡ್ಡಮ್ಮ ವಿವರಿಸಿದಾಗ, ಈ ಕಣಿಯ ಬಗೆಗೊಂದಿಷ್ಟು ಭಕ್ತಿಯ ಭಾವ. ಹೌದಾ ಅಂತ ಕೇಳಿ ಅಣ್ಣನತ್ತ ತಿರುಗಿದೆ.

ಅಮ್ಮ ಅವಳ ಕೆಲಸ ಮುಂದುವರಿಸ್ತಿದ್ಳು. ನಾನು-ಅಣ್ಣನ ಯೋಚನೆಯೇ ಬೇರೆ. ‘ಏ… ಆ ಹಳದಿ ಬಣ್ಣದ ಗೋಂಕು ನಂಗೆ’ ಅಂತ ನಾನಂದ್ರೆ, ‘ಬೇಡ… ಬೇಡ… ಅದು ನಂಗೆ, ನೀನು ಕೆಂಪಿದ್ದು ಇಟ್ಕೋ…’ ಅಂತ ಅಣ್ಣನ ಅಧಿಕಾರಯುತ ಆದೇಶ. ಏನ್ ಮಾಡೋದು… ಸಣ್ಣವನಾಗಿದ್ರಿಂದ… ಹೂಂ ಅಂತ ಒಪ್ಪಿಕೊಂಡೆ. ನಮ್ಮಿಬ್ಬರ ಈ ಮಾತುಕತೆಗಳು ಅಪ್ಪ-ಅಮ್ಮನ ಕಿವಿಗೆ ಬೀಳದಂತೆ ಎಚ್ಚರ ವಹಿಸಿದ್ದೆವು. ಏನೋ ಅದು… ಅಂತ ನಮ್ಮ ಗುಸುಗುಸು ಕೇಳಿದ ಅಮ್ಮ ನುಡಿದಾಗ, ಏನಿಲ್ಲಮ್ಮಾ… ಆ ಕೆಂಪು ಮತ್ತು ಹಳದಿ ಗೋಂಕು ಹಣ್ಣು ಎಷ್ಟು ಚೆನ್ನಾಗಿದೆಯಲ್ಲ… ಬಣ್ಣ ತುಂಬ ಚೆನ್ನಾಗಿದೆ ಅಂತ ಹೇಳಿ ಇಬ್ಬರೂ ಜಾರಿಕೊಂಡಿದ್ವು!

ಅಪ್ಪ, ಮುಂದಿನ ವರ್ಷಕ್ಕೇಂತ ಕೊಡಿಸಿದ್ದ ಶಾಲೆಯ ಯುನಿಫಾರ್ಮನ್ನು ನಾಳೆ ತೊಡಬೇಕಲ್ಲ… ಅದನ್ನು ತೊಟ್ಟು ನಲಿದಾಡಬೇಕು. ಹೊಸ ಅಂಗಿ-ಚಡ್ಡಿ… ಆ ನಂತ್ರ ಗೋಂಕು ಹಣ್ಣು ತಿನ್ಬೇಕು, ಅಮ್ಮ ಪರಮಾನ್ನ ಮಾಡಿರ್ತಾಳೆ… ಅಂತೆಲ್ಲಾ ಯೋಚಿಸಿ ಮೇಲೆಯೂ ಕೆಳಗೂ ಹರಿದಿದ್ದ ಚಾಪೆಯ ಮಧ್ಯೆ ಇರುವ ಜಾಗದಲ್ಲಿ, ಅಮ್ಮನ ಹಳೆ ಸೀರೆಯನ್ನೇ ಹೊದಿಕೆಯಾಗಿಸಿಕೊಂಡು ಅದರೊಳಗೆ ತೂರಿಕೊಂಡ ನನಗೆ ಇದೇ ಕನಸು. ನಿದ್ದೆ ಬಂದದ್ದು ತಿಳಿಯಲಿಲ್ಲವಾದರೂ, ಯಾವಾಗ್ಲೂ ಆರೇಳು ಗಂಟೆಗೆ ಏಳುತ್ತಿದ್ದ ನನಗೆ ಮರುದಿನ ಬೆಳಿಗ್ಗೆ ಐದು ಗಂಟೆಗೇ ಎಚ್ಚರಾಗಿತ್ತು.

‘ಆ ಮಕ್ಕಳನ್ನು ಎಬ್ಬಿಸು’ ಅಂತ ಅಮ್ಮನಿಗೆ ಅಪ್ಪ ಹೇಳ್ತಾ ಇದ್ದದ್ದು ಕೇಳಿಸಿತು… ಎಚ್ಚರವಾಗಿದ್ರೂ, ಅಮ್ಮನೇ ಪ್ರೀತಿಯಿಂದ ಎಬ್ಬಿಸಲಿ ಎಂಬ ಆಸೆ ನಂಗೆ. ಏಳಮ್ಮಾ ಅಂತ ಅಮ್ಮ ಕರೆದಾಗ, ಭರ್ಜರಿ ನಿದ್ದೆಯಲ್ಲಿದ್ದಂತೆ ಒಂದಷ್ಟು ನಾಟಕವಾಡಿ, ನಿಧಾನವಾಗಿ ಕಣ್ಣುಜ್ಜಿಕೊಂಡು, ಎಂತಮ್ಮ… ಇಷ್ಟು ಬೇಗ ಎಬ್ಬಿಸಿದ್ಯಾಕೆ ಅಂತ ಕೇಳಿದೆ! ಏಯ್, ಮೊದ್ಲು ಹೋಗಿ ವಿಷು ಕಣಿ ನೋಡು… ಆಮೇಲೆ ಮಾತು ಅಂತ ಅಮ್ಮನ ಹಿತನುಡಿ.

ನಿಧಾನವಾಗಿ ಎದ್ದು ವಿಷು ಕಣಿಯತ್ತ ನೋಡಿದೆ. ಪಕ್ಕದಲ್ಲಿದ್ದ ಗೇರು ಹಣ್ಣುಗಳೇ ಕಣ್ಣಿಗೆ ರಾಚುತ್ತಿದ್ದರೂ, ಎಳ್ಳೆಣ್ಣೆ ದೀಪದ ಹೊಂಬೆಳಕಿನಲ್ಲಿ ಕನ್ನಡಿಯ ಅಕ್ಕಪಕ್ಕ, ಸುತ್ತ ಮುತ್ತಲಿರುವ ಫಲ ವಸ್ತುಗಳು, ಅಕ್ಕಿ, ಹೂವು, ಒಂದು ಪುಟ್ಟ ಚಿನ್ನದುಂಗುರ… ಇವೆಲ್ಲವೂ ದೈವೀ ಸಾನ್ನಿಧ್ಯವನ್ನು ನೆನಪಿಸುವಂತಿತ್ತು. ಮೈಗರಿವಲ್ಲದಂತೆಯೇ ಮನಸು ತಲೆಬಾಗಿತು, ಕೈಗಳು ಜೋಡಿಸಿಕೊಂಡವು. ‘ಸ್ವಾsssಮಿ ದೇವ್ರೆ, ಒಳ್ಳೇದು ಮಾಡು’ ಅಂತ ಮನಸ್ಸು ನುಡಿಯಿತು.

ಅಪ್ಪ ಪೂಜೆ ಮಾಡ್ತಾ ಇದ್ದಾಗ, ಓಹ್! ವಿಷು ಕಣಿಯಲ್ಲಿ ಒಂದು ಪುಸ್ತಕವೂ ಇದೆ. ಅದೆಂತ ಅಂತ ದೊಡ್ಡಮ್ಮನಲ್ಲಿ ಕೇಳಿದಾಗ, ಅದು ಪಂಚಾಂಗ ಎಂಬ ಉತ್ತರ ಬಂತು.

‘ಅದೆಂತಕೆ?’

‘ಪ್ರತಿ ವರ್ಷ ಯುಗಾದಿ ಅಂದ್ರೆ ಹೊಸ ವರ್ಷದ ಆರಂಭದ ದಿನ, ಪಂಚಾಗ ಶ್ರವಣ ಮಾಡ್ತಾರೆ. ಅಂದ್ರೆ ಅದನ್ನು ಓದುತ್ತಾರೆ’ ಅಂತ ನಮ್ಮ ತಿಳಿಯದ ಮಂಡೆಗೆ ತನಗೆ ತಿಳಿದದ್ದನ್ನು ಹೇಳಿದಳು ದೊಡ್ಡಮ್ಮ.

ಚಕಚಕನೆ ಹಲ್ಲುಜ್ಜಿ, ಸ್ನಾನ ಮಾಡಿ, ಅಮ್ಮಾ ನನ್ನ ಹೊಸ ಅಂಗಿ ಎಲ್ಲಿ ಅಂತ ಕೂಗಿ ಕೇಳಿ, ಅದನ್ನು ತೊಟ್ಟುಕೊಂಡ ಮೇಲೆ, ಅದೇನೋ ಪುಳಕ. ಆತ್ಮವಿಶ್ವಾಸ ನೂರ್ಮಡಿ ಹೆಚ್ಚಾದಂತಿತ್ತು. ದೊಡ್ಡ ಜನ ಆದ ಅನುಭವ. ಪಕ್ಕದ್ಮನೆ ಹುಡುಗ್ರೆದುರು ‘ಮಿಂಚುವ’ ಹಿರಿದಾಸೆ. ಹಿರಿಯರಿಗೆ ನಮಸ್ಕಾರ ಮಾಡ್ರೋ ಅಂತ ದೊಡ್ಡಮ್ಮ ಹೇಳಿದ್ರು. ಅಪ್ಪ-ಅಮ್ಮ-ದೊಡ್ಡಮ್ಮನ ಕಾಲ ಬಳಿ ತಲೆ ಬಾಗಿಸಿದಾಗ, ‘ದೇವರು ಒಳ್ಳೇದು ಮಾಡ್ಲಿ’ ಅವರೆಲ್ಲಾ ಪ್ರೀತಿಯಿಂದ ತಲೆ ನೇವರಿಸಿದ್ರು.

ತಕ್ಷಣವೇ ನಾನು-ಅಣ್ಣ ಹೊರಗೋಡಿದೆವು. ನಮ್ಮ ಜೋಸ್ತಿ (ದೋಸ್ತ್)ಗಳಿಗೆ ಹೊಸ ಅಂಗಿ-ಚಡ್ಡಿ ತೋರಿಸ್ಬೇಕಲ್ಲ…! ಆದ್ರೆ, ಅವರೆಲ್ಲ ಬಣ್ಣ ಬಣ್ಣದ ಅಂಗಿ-ಚಡ್ಡಿ ತೊಟ್ಟಿದ್ದರು…

‘ಏನೋ, ಈಗ ರಜೆ ಅಲ್ವಾ, ಶಾಲೆಗೆ ಯಾಕೆ ಹೊರಟಿದ್ದೀ?’ ಅಂತ ಅವ್ರೆಲ್ಲಾ ರೇಗಿಸುವುದಕ್ಕೋ… ಅಥವಾ ತಿಳಿಯದೆಯೋ… ಕೇಳಿಯೇ ಬಿಟ್ರು… ಮನಸ್ಸು ಮುದುಡಿತಾದರೂ, ಸಾವರಿಸಿಕೊಂಡು… ಇಲ್ಲ, ಇದು ಹೊಸ ಅಂಗಿ-ಚಡ್ಡಿ. ಹಬ್ಬ ಅಲ್ವಾ ಅದ್ಕೆ ಹಾಕ್ಕೊಂಡೆ ಅಂತಂದು ಮತ್ತೆ ಮನೆಗೆ ಬಂದು… ‘ಅಮ್ಮಾ ಗೇರು ಹಣ್ಣು…’ ಅಂತ ಕೇಳಿದೆವು. ಪೂಜೆ ಎಲ್ಲಾ ಆಗ್ಲಿ, ಆಮೇಲೆ ಕೊಡ್ತೀನಿ… ಹೋಗಿ ಆಡ್ಕೊಳ್ಳಿ ಈಗ… ಬಟ್ಟೆ ಮಣ್ಣು ಮಾಡ್ಕೋಬೇಡಿ… ಅಮ್ಮನಿಂದ ಸಲಹೆ ಬಂತು.

ಮತ್ತೆ ನಿರಾಶೆಯಾಯಿತು. ತಿಂಡಿ ತಿಂದು ಮನೆ ಹಿಂದಿದ್ದ ಗುಡ್ಡೆಗೆ ಓಡಿದೆವು. ಅಲ್ಲಿ ಗೇರು ಹಣ್ಣು, ಮಾವಿನ ಕಾಯಿಗಳನ್ನು ಮನಸೋ ಇಚ್ಛೆ ತಿಂದೆವು. ಗೇರು ಮರದಲ್ಲಿ ಆಟ ಆಡ್ತಾ ಆಡ್ತಾ… ಮಧ್ಯಾಹ್ನವಾಯಿತು. ಪೂಜೆಗೇಂತ ಅಪ್ಪ ಕರೆದಾಗ ಹೋಗಲೇಬೇಕಾಯ್ತು… ಯಾಕಂದ್ರೆ, ವಿಷು ಕಣಿಯ ಮೇಲೆ ಇಟ್ಟಿದ್ದ ಗೇರು ಹಣ್ಣಿನ ಆಕರ್ಷಣೆ ಇನ್ನೂ ಮನಸ್ಸಿನಿಂದ ದೂರವಾಗಿರಲಿಲ್ಲ. ಇವತ್ತು ಬೈಸಿಕೊಳ್ಳಬಾರದೂಂತ ದೊಡ್ಡಮ್ಮ ಬೇರೆ ಮೊದ್ಲೇ ಹೇಳಿದ್ದರಲ್ಲ…

ಪೂಜೆ ಮುಗಿದು ಹೊರಗೆ ಬಂದಾಗ… ದಾನೆ ಬಾಣಾರ್ರೆ… ಪೊಸ ಅಂಗಿಯಾ? ಎಂಕ್ಲೆಗ್ ದಾಲ ಇಜ್ಜಾ? (ಏನು ಯಜಮಾನ್ರೆ, ಹೊಸ ಅಂಗಿಯಾ? ನಮಗೇನೂ ಇಲ್ವಾ) ಅಂತ ಪಕ್ಕದ ಮನೆಯ ತೋಟದ ಕೆಲಸಕ್ಕೆ ಬರ್ತಾ ಇದ್ದ ಚೀಂಕ್ರ ಕೇಳಿದ. ಅವನಿಗೆ ನಾವಂದ್ರೆ ತುಂಬಾ ಪ್ರೀತಿ. ಆಗಾಗ ಚಾಕ್ಲೇಟು, ಮಿಠಾಯಿ ತಂದುಕೊಡ್ತಾ ಇದ್ದ.

ಅವನತ್ತ ಒಂದು ನಗು ಚೆಲ್ಲಿ… ನಮ್ಮ ಪುಟಾಣಿ ಪಡೆಯನ್ನು ಸೇರಿಕೊಂಡೆ.

ಆಗ್ಲೇ ಹೇಳಲು ಏನೋ ಮರೆತಿದ್ದ ಅಮ್ಮ, ಏಯ್, ಇಲ್ಲಿ ಬನ್ರೋ… ಈವತ್ತು ಯುಗಾದಿಯಲ್ವ… ಹಾಗೇ ದೇವಸ್ಥಾನಕ್ಕೆ ಹೋಗ್ಬರ್ಬೇಕು. ಬನ್ನಿ ಬನ್ನಿ… ಅಂತ ಕರೆದ್ಳು… ಒಲ್ಲದ ಮನಸ್ಸಿಂದಲೇ ಹೋದೆವು. ಯಾಕಂದ್ರೆ ಹಿರಿಯರ ಆಜ್ಞಾ ಪರಿಪಾಲಕರಾಗಿದ್ದೆವು.

ಮಧ್ಯಾಹ್ನ ಊಟ ಮಾಡಿ ಮತ್ತೆ ಹೋದದ್ದು ಗುಡ್ಡೆಗೆ. ಅಲ್ಲಿ ಅಣ್ಣನಿಗಿಂತ ಹೆಚ್ಚು ಹಳದಿ ಗೇರು ಹಣ್ಣು ತಿನ್ಬೇಕು ಅನ್ನೋ ಹಠದಿಂದ, ಸಾಕಷ್ಟನ್ನು ಕೊಯ್ದು ಕೊಯ್ದು ತಿನ್ನುತ್ತಿದ್ದೆ.

ಗೇರು ಹಣ್ಣಿನಿಂದ ಸುರಿದ, ಒಗರು ಸಿಹಿಗಳ ಸಮ್ಮಿಶ್ರಣವುಳ್ಳ…

ರುಚಿಯಾದ ರುಚಿಯಾದ ರಸ…

ಕೆನ್ನೆಯಿಂದ ಜಾರಿದ ಕಂಬನಿಯಂತೆ….

ನನ್ನ ಅಚ್ಚ ಬಿಳಿ ಬಣ್ಣದ ಹೊಚ್ಚ ಹೊಸ ಶರ್ಟಿನ ಮೇಲೆ ಚಿತ್ತಾರ ಬಿಡಿಸಿತ್ತು…

ಬಾಲ್ಯದಂತಿಲ್ಲದ ಬಾಲ್ಯ ಕಳೆದು ಹೋದ ಆ ನೆನಪು ಎಂದೆಂದೂ ಅಚ್ಚಳಿಯದಂತೆ…

ಬಿಳಿ ಬಣ್ಣದ ಹೊಸ ಶರ್ಟಿನಲ್ಲಿ ಅಳಿದು ಹೋಗದ…

ಗೇರು ಕಲೆ!

April 10, 2008

ಐಪಿಎಲ್ ಕವರೇಜ್‌: ವೆಬ್‌ಸೈಟುಗಳಿಗೆ ಕಡಿವಾಣ!

Filed under: myworld — Avi @ 3:43 pm

ಟ್ವೆಂಟಿ20 ಕ್ರಿಕೆಟ್ ಪಂದ್ಯವೊಂದು ಎಷ್ಟು ವೇಗವಾಗಿ ಮುಕ್ತಾಯಗೊಳ್ಳುತ್ತದೆಯೋ, ಅಷ್ಟೇ ವೇಗದಲ್ಲಿ ಹಣದ ಹೊಳೆಯೂ ಹರಿಯುತ್ತದೆ. ತತ್ಫಲವಾಗಿ ಹುಟ್ಟಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟನ್ನು ಪಕ್ಕಾ ವ್ಯಾಪಾರವಾಗಿಸುತ್ತಿದೆ. ಕ್ರಿಕೆಟನ್ನು ಸಂಪೂರ್ಣ ಹಣಮಯವಾಗಿಸಿದ ಐಪಿಎಲ್, ಕ್ರಿಕೆಟ್ ಪಂದ್ಯಗಳನ್ನೂ, ಕ್ರಿಕೆಟಿಗರನ್ನೂ ಹರಾಜು ಹಾಕಿದೆ… ಕ್ರಿಕೆಟಿಗರೆಲ್ಲರೂ ಹಣದ ಹೊಳೆಯಲ್ಲಿ ತೇಲಾಡುತ್ತಿದ್ದಾರೆ.

ಆದರೆ ಕ್ರಿಕೆಟಿಗೆ ಸಂಬಂಧಿಸಿದ ಸುದ್ದಿಗಳನ್ನು, ಚಿತ್ರಗಳನ್ನು ಪ್ರಸಾರ ಮಾಡುವುದರ ಬಗ್ಗೆ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಲಾಗಿರುವುದು ಎಷ್ಟು ಸರಿ? ತಮ್ಮ ಹಕ್ಕುಗಳನ್ನು ರಕ್ಷಿಸುವ ನೆಪದಲ್ಲಿ ಮಾಧ್ಯಮಗಳಿಗೆ ಸಾಕಷ್ಟು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದ್ದು, ಅವುಗಳ ಪ್ರಕಾರ, ವೆಬ್‌ಸೈಟುಗಳು ಐಪಿಎಲ್ ಪಂದ್ಯಾವಳಿಯ ಕವರೇಜ್ ನೀಡುವಂತಿಲ್ಲ. ಪತ್ರಿಕೆಗಳು ಅಥವಾ ಸುದ್ದಿ ಏಜೆನ್ಸಿಗಳು ತೆಗೆದ ಚಿತ್ರಗಳನ್ನು ಕೂಡ ಆನ್‌ಲೈನ್‌ನಲ್ಲಿ ಅವುಗಳು ಬಳಸುವಂತೆ ಇಲ್ಲ ಎಂಬುದು ಮತ್ತೊಂದು ನಿರ್ಬಂಧ.

ಇದಲ್ಲದೆ, ಇಂತಿಷ್ಟೇ ಚಿತ್ರಗಳನ್ನು ಪ್ರಕಟಿಸಬೇಕು, ವೆಬ್‌ಸೈಟುಗಳು ಪಂದ್ಯಕ್ಕೆ ಮೊದಲು ಮತ್ತು ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯ ವರದಿಯನ್ನಷ್ಟೇ ಪ್ರಕಟಿಸಬೇಕು, ವೆಬ್‌ಸೈಟುಗಳ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಪ್ರೆಸ್ ಗ್ಯಾಲರಿಗೆ ಪ್ರವೇಶ ಇರುವುದಿಲ್ಲ, ಇತರ ಮಾಧ್ಯಮಗಳು ತಮ್ಮದೇ ಛಾಯಾಗ್ರಾಹಕರ ಮೂಲಕ ತೆಗೆದ, ತಮ್ಮದೇ ಎಕ್ಸ್‌ಕ್ಲೂಸಿವ್ ಛಾಯಾಚಿತ್ರಗಳನ್ನು ಐಪಿಎಲ್ ಕೇಳಿದರೆ ಯಾವುದೇ ಶುಲ್ಕವಿಲ್ಲದೆ, ತಮ್ಮದೇ ಖರ್ಚಿನಲ್ಲಿ ನೀಡಬೇಕು, ಸುದ್ದಿ ಏಜೆನ್ಸಿಗಳು ಕೂಡ ವೆಬ್‌ಸೈಟುಗಳಿಗೆ ಚಿತ್ರಗಳನ್ನು ವಿತರಿಸುವಂತಿಲ್ಲ…

ಇವೆಲ್ಲವೂ ಮಾಧ್ಯಮ ಸ್ವಾತಂತ್ರ್ಯದ ಮೇಲೆ ಹಿಡಿತ ಸಾಧಿಸುವ ಯತ್ನವೇ? ಯಾವ ಚಿತ್ರ ಅಥವಾ ಸುದ್ದಿ ಪ್ರಕಟಿಸಬೇಕು, ಯಾವುದನ್ನು ತಿರಸ್ಕರಿಸಬೇಕು ಎಂಬುದೆಲ್ಲಾ ಸಂಪಾದಕರ ವಿವೇಚನೆಗೆ ಬಿಟ್ಟ ವಿಷಯವಾಗಿರುವಾಗ, ಇಂಥ ನಿರ್ಬಂಧಗಳೇಕೆ? ಈ ಚಿತ್ರ ವಿಚಿತ್ರ ಷರತ್ತುಗಳ ಮೂಲಕ ಏನು ಸಾಧಿಸಲು ಯತ್ನಿಸಲಾಗುತ್ತಿದೆ? ಹಣವಿದ್ದರೆ ಏನೂ ಮಾಡಬಹುದು ಎಂಬುದು ಇದರರ್ಥವೇ?

ಭಾರತೀಯ ಸಂಪಾದಕರ ಗಿಲ್ಡ್ ಈ ಬಗ್ಗೆ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಗೆ ಪತ್ರ ಬರೆದು, ಈ ಷರತ್ತುಗಳು ಅಸ್ವೀಕಾರಾರ್ಹ ಎಂದು ತಿಳಿಸಿತ್ತು. ನಂತರ ಏಪ್ರಿಲ್ 7ರಂದು ದೇಶದ ಕ್ರೀಡಾ ಪತ್ರಕರ್ತರ ಫೆಡರೇಶನ್ ಪ್ರತಿನಿಧಿಗಳೊಂದಿಗೆ ಮುಂಬಯಿಯಲ್ಲಿ ಸಭೆ ನಡೆಸಿದ ಮೋದಿ, ಐಪಿಎಲ್ ಈ ನೀತಿಗಳ ಮರುಪರಿಶೀಲನೆ ಮಾಡಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಐಪಿಎಲ್‌ನ ವೆಬ್‌ಸೈಟಿನಲ್ಲಿ ಇರುವ ಪರಿಷ್ಕೃತ ನಿಬಂಧನೆಗಳು ಕೂಡ ಸಮ್ಮತಾರ್ಹವಲ್ಲ ಎಂದು ಇದೀಗ ಸಂಪಾದಕರ ಗಿಲ್ಡ್, ಮೋದಿಗೆ ಮತ್ತೊಮ್ಮೆ ಪತ್ರ ಬರೆದಿದೆ. ಗಿಲ್ಡ್ ಅಧ್ಯಕ್ಷ ಅಲೋಕ್ ಮೆಹ್ತಾ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಚ್ಚಿದಾನಂದ ಮೂರ್ತಿ ಬರೆದಿರುವ ಪತ್ರದ ಪ್ರತಿಯನ್ನು ಬಿಸಿಸಿಐ ಅಧ್ಯಕ್ಷ ಶರದ್ ಪವಾರ್‌ಗೂ ಕಳುಹಿಸಲಾಗಿದೆ.

ಒಟ್ಟಿನಲ್ಲಿ, ಮಾಧ್ಯಮಗಳ ಬೆಂಬಲ, ಸಹಕಾರವಿಲ್ಲದೆ ಯಾವುದೇ ವೃತ್ತಿಪರ ಕ್ರೀಡೆ ಹೇಗಿರಬಹುದು? ಮಾಧ್ಯಮಗಳ ಮೇಲೆಯೇ ನಿರ್ಬಂಧಗಳನ್ನು, ಷರತ್ತುಗಳನ್ನು ವಿಧಿಸುವ ದುರಾಸೆಗೂ ಒಂದು ಮಿತಿ ಇರಲಿ.

April 1, 2008

ನೀನಿರುವುದೇ ನನಗಾಗಿ ಮಾತ್ರ….!

Filed under: myworld — Avi @ 1:09 pm

‘ನಿನ್ನನ್ನು ಬೇರೆ ಯಾರಾದರೂ ನೋಡಿದರೆ ಹೊಟ್ಟೆ ಉರಿಯುತ್ತದೆ. ಭಾರೀ ಕಷ್ಟಪಟ್ಟು ನನ್ನ ಹೃದಯವನ್ನು ನಾನು ಸಮಾಧಾನ ಮಾಡಿಕೊಳ್ಳುತ್ತೇನೆ.’

ಹೌದು, ಹೆಚ್ಚಿನವರ ಪ್ರೇಮ-ಪ್ರೀತಿಯಲ್ಲಿ ಇದೇ ಪರಿಸ್ಥಿತಿ ಇರುತ್ತದೆ. ನನ್ನ ಪ್ರೀತಿ ನನಗೆ ಮಾತ್ರವೇ, ಕೇವಲ ನನಗಾಗಿ ಇರಬೇಕು ಅಂತ ಹಪಹಪಿಸುತ್ತದೆ ಮನಸ್ಸು. ಅವಳು/ನು ಬೇರೆಯವರೊಡನೆ ನಗು ನಗುತ್ತಾ ಮಾತನಾಡಿದರಂತೂ ಅಷ್ಟೇ. ಮುಗಿದೇ ಹೋಯಿತು. ಅವಳನ್ನು ಕೊಂದೇಬಿಡುವಷ್ಟು ಕೆಟ್ಟ ಕೋಪ.

ಹಾಗಂತ ಇದು ದ್ವೇಷವಲ್ಲ. ಪ್ರೀತಿಯ ಪರಾಕಾಷ್ಠೆಯೋ…? ಗೊತ್ತಿಲ್ಲ.

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಪರಸ್ಪರರ ಮೇಲೆ ತನಗೆ ಅಧಿಕಾರ ಇದೆ ಎಂಬ ಭಾವನೆ ಬರುವುದು ಸಹಜವೇ. ಆದರೆ ಈ ಅಧಿಕಾರದ ಭಾವನೆಯಿದೆಯಲ್ಲ, ಅದಕ್ಕೊಂದು ಗಡಿ, ಸೀಮೆ ಇದ್ದರೆ ಚೆನ್ನ. ಈ ಪ್ರೀತಿ ಅಥವಾ ಈ ಸ್ವಯಂ ಅಧಿಕಾರವು ಯಾರದೇ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ ಅಂದಾಕ್ಷಣ ತಿಳಿದುಕೊಳ್ಳಿ… ಮುಂದೆ ಅಪಾಯ ಕಾದಿದೆ.

ಯಾವುದೇ ಸಂಬಂಧಗಳ ನಡುವೆ ಉಸಿರಾಡುವಷ್ಟು ಜಾಗ ಇರಬೇಕು. ಅದುವೇ Breathing space. ಇದು ಎಲ್ಲರಿಗೂ ಅತ್ಯಗತ್ಯ. ಈ ಅವಕಾಶಕ್ಕೆ ಜಾಗ ಇಲ್ಲ ಎಂದಾದರೆ, ಸಂಬಂಧದಲ್ಲಿ ಬಿರುಕು ಮೂಡಲಾರಂಭಿಸುತ್ತದೆ. ಅದೂ ಹೌದು. ಯಾರಾದರೂ ನಿಮ್ಮನ್ನು ಪ್ರೀತಿಸಿ, ಇಡೀ ಜಗತ್ತಿನೊಂದಿಗೆ ಸಂಬಂಧ ಕಳಚಿಕೊಳ್ಳಬೇಕು ಅಂತ ಬಯಸುವುದರಲ್ಲಿ ಏನರ್ಥವಿದೆ? ಸಂಬಂಧವನ್ನು ಕಾಯ್ದುಕೊಳ್ಳುವಲ್ಲಿ ಸ್ವಾತಂತ್ರ್ಯ ಮತ್ತು ಅಧಿಕಾರದ ಭಾವನೆಯಲ್ಲಿ ಸಮತೋಲನ ಇರಬೇಕು ಅನ್ನುತ್ತಾರೆ ಮನಃಶಾಸ್ತ್ರಜ್ಞರು. ಈ ಸಮತೋಲನ ಯಾವಾಗ ತಾಳ ತಪ್ಪುತ್ತದೋ, ಸಂಬಂಧವೂ ಲಟಪಟ ಮುರಿಯುವ ಸದ್ದು ಕೇಳಿಸಲಾರಂಭಿಸುತ್ತದೆ.

ಈ ಪೊಸೆಸಿವ್‌ನೆಸ್ ಅನ್ನೋದಿದೆಯಲ್ಲಾ… ಅದು ಸಂಬಂಧಗಳನ್ನು ಯಾವಾಗಲೂ ಮುರಿಯಬೇಕೆಂದಿಲ್ಲ… ಸಂಬಂಧಗಳನ್ನು ಜೋಡಿಸುವಲ್ಲಿಯೂ ನೆರವಾಗುತ್ತದೆ. ಈ ಪೊಸೆಸಿವ್‌ನೆಸ್ ಭಾವನೆಯು ಒಬ್ಬರಿಗೆ ಮತ್ತೊಬ್ಬರ ಬಗೆಗಿನ ಅಭಿಮಾನವನ್ನೂ ಪ್ರಕಟೀಕರಿಸುತ್ತದೆ. ಪ್ರತಿಯೊಬ್ಬರಿಗೂ ತನ್ನ ಬಗ್ಗೆ ಮತ್ತೊಬ್ಬರು ಕಾಳಜಿ ತೋರಬೇಕು, ವಿಶೇಷ ಆಸ್ಥೆ ಹೊಂದಿರಬೇಕು ಎಂಬಿತ್ಯಾದಿ ಭಾವನೆಗಳಿರುತ್ತವೆ. ಮತ್ತೊಬ್ಬರಿಗೆ ಯಾವ ಸಮಯದಲ್ಲಿ ಈ ರೀತಿಯ ಗಮನ ನೀಡಬೇಕಾದ/ಪಡೆಯಬೇಕಾದ ಅವಶ್ಯಕತೆಯಿದೆ ಎಂಬುದನ್ನಷ್ಟೇ ನಾವು ತಿಳಿದುಕೊಂಡಿರಬೇಕು.

ಸಂಬಂಧಗಳು ಯಾವುದೇ ರೀತಿಯಾಗಿರಲಿ. ಈ ಅಧಿಕಾರ ಚಲಾವಣೆ ಎಂಬುದು ಅತ್ಯಂತ ಸೂಕ್ಷ್ಮ ವಿಚಾರ. ಸಮತೋಲನೆ ಮಾಡಿಕೊಂಡು ಮುಂದುವರಿಯುವುದು ಅತ್ಯಂತ ಅವಶ್ಯಕ. ಅವರ ಪೊಸೆಸಿವ್‌ನೆಸ್‌ನಲ್ಲಿ ಸಾಕಷ್ಟು ಪ್ರೀತಿಯೂ ಅಡಗಿರಬಹುದು. ಆದರೆ ಈ ಭಾವನೆಯು ಸಂಬಂಧವೊಂದಕ್ಕೆ ಸಂಬಂಧಿಸಿ ನಕಾರಾತ್ಮಕವಾಗಿಯೂ ಪರಿಣಮಿತವಾಗಬಹುದು. ಈ ಪ್ರೀತಿಯ ಸಂಬಂಧಗಳ ಬಗ್ಗೆ ಹೇಳುವುದಾದರೆ, ಈ ಸಂಬಂಧದಲ್ಲಿ ಪೊಸೆಸಿವ್‌ನೆಸ್ ಎಂಬುದು ಸಾಮಾನ್ಯ. ಯಾಕೆಂದರೆ ಇಲ್ಲಿ ಬೇರೊಬ್ಬರು ತಮಗೆ ಮತ್ತು ಕೇವಲ ತಮಗೆ ಮಾತ್ರ ಸೀಮಿತವಾಗಿರಬೇಕು ಎಂಬ ಭಾವನೆ ಇರುತ್ತದೆ. ಆದರೆ ಇಲ್ಲಿ, ಬೇರೊಬ್ಬರ ಕುರಿತಾಗಿನ ಕಾಳಜಿಯು ಮೇರೆ ಮೀರುವಷ್ಟು ಆಗುತ್ತಿದೆಯೇ ಎಂಬುದನ್ನು ಮಾತ್ರ ಆಗಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು.

ಸಂಬಂಧಗಳು ಪ್ರೀತಿ-ಪ್ರೇಮದ್ದಾಗಿರಲಿ, ಅಥವಾ ಬೇರಾವುದೇ ಇರಲಿ, ಅದು ಮುಷ್ಟಿಯೊಳಗಿಟ್ಟುಕೊಂಡಿರುವ ಮರಳಿನಂತೆ. ಈ ಮರಳನ್ನು ತೆರೆದ ಕೈಗಳಲ್ಲಿ ಹಿಡಿದುಕೊಂಡರೆ ಅದು ಕೈಯಲ್ಲೇ ಇರುತ್ತದೆ. ಆದರೆ ಅದನ್ನು ಬಲವಾಗಿ ಮುಷ್ಟಿ ಬಿಗಿಹಿಡಿದು ಮುಚ್ಚಿಕೊಂಡಿರಲು ಬಯಸಿದರೆ, ಮರಳಿನ ಕಣಗಳು ಕೈಯಿಂದ ತೂರಿಕೊಂಡು ಸೋರಿ ಹೋಗುತ್ತವೆ. ಸಂಬಂಧಗಳು ಕೂಡಾ ಹೀಗೆಯೇ. ತುಂಬಾ ನಾಜೂಕು. ಗೌರವ ಮತ್ತು ಸ್ವಾತಂತ್ರ್ಯದ ಮುಕ್ತ ಕರಗಳಿಂದ ಸಂಬಂಧಗಳನ್ನು ನಿಭಾಯಿಸಿದರೆ ಅವುಗಳು ಸರಿಯಾಗಿ ಉಳಿಯುತ್ತವೆ. ಬಲ ಪ್ರಯೋಗ ಮಾಡಿದರೆ, ಕೈಯಲ್ಲಿದ್ದ ಮರಳು ಚೆಲ್ಲಿಹೋಗುವಂತಿರುತ್ತವೆ. ಹಾಗಾಗಿ, ಪ್ರೇಮ ಸಂಬಂಧದಲ್ಲಿ ಪೊಸೆಸಿವ್‌ನೆಸ್ ಇರಲಿ. ಆದರೆ ಅದಕ್ಕೊಂದು ಪರಿಮಿತಿ ಇರಲಿ.

Next Page »

Blog at WordPress.com.