ಗಣಿಧಣಿ, ಸಿಎಂ ಗೆಲ್ಲಲಿಲ್ಲ; ಮತದಾರ, ಬಿಜೆಪಿ ಸೋತರು!

ಕಳೆದ ಎರಡು ವಾರಗಳಿಂದ ರಾಜ್ಯ ಬಿಜೆಪಿಯ ಮೇಲೆರಗಿದ್ದ ಗಣಿ ಪ್ರವಾಹದಲ್ಲಿ ಸಿಎಂ ಬದುಕು ಮೂರಾಬಟ್ಟೆಯಾಗಿ ಹೋಯಿತು – ಭಾರೀ ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆಯ ಬದುಕಿನಂತೆ! ಯಡಿಯೂರಪ್ಪ ಇನ್ನು ಮುಂದೆ ಕೇವಲ ‘ಮುಖ್ಯಮಂತ್ರಿ’ ಎಂಬ ಪದವಿಗಷ್ಟೇ ಸೀಮಿತ. ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ, ಗಣಿ ಧಣಿಯನ್ನೊಳಗೊಂಡ ಸಮನ್ವಯ ಸಮಿತಿಯೇ ಇನ್ನು ಮುಖ್ಯಮಂತ್ರಿಯ ಪವರ್ ಹೊಂದಿರುತ್ತದೆ! ಯಾವುದೇ ಪ್ರಮುಖ ನಿರ್ಣಯಗಳು, ಅಧಿಕಾರಿಗಳ ವರ್ಗಾವಣೆ, ಖಾತೆ ಹಂಚಿಕೆ ಮುಂತಾದವೆಲ್ಲವೂ ಈ ಸಮನ್ವಯ ಸಮಿತಿಯದ್ದೇ ಕೆಲಸ. ನೂರಾರು ಕೇಸ್ ಎದುರಿಸುತ್ತಿರುವವರು ‘ಗೌರವಾನ್ವಿತ’ ಸಚಿವರಾಗಿ ಮುಂದುವರಿಯುತ್ತಾರೆ, ಒಂದೇ ಒಂದು ಕ್ರಿಮಿನಲ್ ಕೇಸ್ ಇಲ್ಲದ ಶೋಭಾ ಕರಂದ್ಲಾಜೆ ಸಚಿವ ಪದವಿ ತ್ಯಾಗ ಮಾಡಬೇಕಾಗುತ್ತದೆ ಮತ್ತು ಇಂಥದ್ದನ್ನೆಲ್ಲಾ ಕರ್ನಾಟಕದ ಜನತೆ ಸಹಿಸಿಕೊಳ್ಳಬೇಕಾಗುತ್ತದೆ!

ಇದರೊಂದಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರಕ್ಕೆ ಹೆಬ್ಬಾಗಿಲು ತೆರೆದಿಟ್ಟ ಕರ್ನಾಟಕದಲ್ಲಿಯೂ ಬಿಜೆಪಿ ಭವಿಷ್ಯ ಮಸುಕಾಗುವ ಸಾಧ್ಯತೆಗಳಿಗೆ ಭದ್ರ ಬುನಾದಿಯೊಂದನ್ನು ತೋಡಲಾಗಿದೆ!

ತಥಾಕಥಿತ ‘ಹೈಕಮಾಂಡ್’ ಹೆಸರಿನಲ್ಲಿ ದೆಹಲಿಗೆ ಹೋಗಿ ಸಂಧಾನ ಮಾಡಿಸಿಕೊಂಡು, ಭಿನ್ನಮತದ ಬೆಂಕಿಗೆ ತಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಯಲ್ಲಿ ಹಾಗೂ ಹೀಗಾ ವಾಪಸಾಗಿದ್ದಾರೆ. ಆದರೆ, ಇದು ಸಂಧಾನವಲ್ಲ, ಮುಖ್ಯಮಂತ್ರಿ ಸ್ಥಾನಕ್ಕಾದ ಅವಮಾನ. ರಾಜ್ಯದ ಒಂದು ಶ್ರೇಷ್ಠ ಹುದ್ದೆಯಲ್ಲಿರುವ ಮುಖ್ಯಮಂತ್ರಿ, ತನ್ನ ‘ಭಿನ್ನ ಮತ’ವುಳ್ಳ ಸಚಿವರನ್ನು ‘ಬನ್ನಿ, ಸಮಸ್ಯೆ ಪರಿಹರಿಸಿಕೊಳ್ಳೋಣ’ ಅಂತ ಮಾತುಕತೆಗೆ ಕರೆದರೆ ಅವರು ಬರಲೊಲ್ಲರು, ಬಿಜೆಪಿಯ ಕೇಂದ್ರೀಯ ನಾಯಕಮಣಿಗಳು ನೇರಾನೇರ ಸಂಧಾನ ಮಾಡಿಸಲು ವಿಫಲರಾದರು, ಆದರೆ ‘ತಾಯಿ’ ಸುಷ್ಮಾ ಸ್ವರಾಜ್ ಒಂದು ಮಾತು ಹೇಳಿದ ತಕ್ಷಣ ಬಂದರು, ಮಾತುಕತೆ ನಡೆಸಿದರು, ಸಮಸ್ಯೆ ಪರಿಹಾರವಾಯ್ತು. ಅದು ಹೇಗೆ ಸಾಧ್ಯ?

ರಾಜ್ಯದಲ್ಲಿ ಅವರೇ ಮುಖ್ಯಮಂತ್ರಿ ಎಂದು ಚುನಾವಣೆಯಲ್ಲಿ ಬಿಂಬಿಸಿದ್ದ, ತಮ್ಮ ಮನೆಯೊಡೆಯನೇ ಆಗಿರುವ ಯಡಿಯೂರಪ್ಪರ ಮಾತಿಗೆ ಬೆಲೆ ನೀಡಿಲ್ಲ, ಕೇಂದ್ರದಲ್ಲಿಯೂ ಪಕ್ಷದ ಪರಮೋಚ್ಚ ನಾಯಕ ರಾಜನಾಥ್ ಸಿಂಗ್ ಮಾತಿಗೆ ಸೊಪ್ಪಿಲ್ಲ, ಹಿರಿಯ ತಲೆ ಆಡ್ವಾಣಿ ದನಿಗೆ ಬಲವಿಲ್ಲ, ರಾಜ್ಯದ ಬಿಜೆಪಿ ವ್ಯವಹಾರಗಳ ಉಸ್ತುವಾರಿ ಅರುಣ್ ಜೇಟ್ಲಿಯ ನುಡಿಗೆ ಕಿವಡೆ ಕಾಸಿನ ಕೀಮತ್ತಿಲ್ಲ. ಹಾಗಿದ್ದರೆ ಸುಷ್ಮಾ ಮಾತಿನಿಂದ ಇದು ಹೇಗೆ ಸಾಧ್ಯವಾಯಿತು?

ತಮ್ಮನ ಕೈಯಲ್ಲಿ ಹೊಡೆಸಿಕೊಂಡ ಅಣ್ಣನ ಸ್ಥಿತಿ ಯಡಿಯೂರಪ್ಪರದು. ಅವರೇನೋ ಅವಮಾನ ಸಹಿಸಿಕೊಂಡು ವಾಪಸಾಗಿದ್ದಾರೆ. ರೆಡ್ಡಿಗಳ ಬೇಡಿಕೆಗಳಲ್ಲಿ ಒಂದಾಗಿದ್ದ ಶೋಭಾ ತಲೆದಂಡವೂ ಆಗಿದೆ. ಆದರೆ, ಅಧಿಕಾರಯುತವಾಗಿಯೇ ಮಾತನಾಡುತ್ತಿದ್ದ ಬಿಎಸ್‌ವೈ ಧ್ವನಿ ಮಾತ್ರ ಉಡುಗಿ ಹೋಗಿದೆ. ಇನ್ನು ಮುಂದೆ ಸರಿಯಾಗಿ ಕೆಲಸ ಮಾಡದ ಶಾಸಕರು, ಅಧಿಕಾರಿಗಳ ಮೇಲೆ ಅವರಿಗೆ ಯಾವುದೇ ಹಿಡಿತವಿರಲಾರದು, ಯಾವುದೇ ರೀತಿ ಕ್ಷಿಪ್ರ, ನಿಷ್ಠುರ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ. ಅದಕ್ಕೆ ‘ತಾಯಿ’ ನೇತೃತ್ವದ ಸಮನ್ವಯ ಸಮಿತಿಯ ಗೋಣು ಅಲ್ಲಾಡಬೇಕು!

ಹೌದು, ಯಾವುದಕ್ಕೂ ಜಗ್ಗದೇ ಇದ್ದ ಈ ಗಣಿ ಧಣಿಗಳು ಕೊನೆಗೊಂದು ಭಾನುವಾರದ ರಜಾ ದಿನದಂದು ಹೇಳಹೆಸರಿಲ್ಲದಂತೆ ‘ಏನಿಲ್ಲ, ಏನಿಲ್ಲ, ನಮ್ಮ ನಿಮ್ಮ ನಡುವೆ ಏನೇನಿಲ್ಲ’ ಅಂತ ಮುಖ್ಯಮಂತ್ರಿ ಜೊತೆ, ‘ತಾಯಿ’ ಸಮ್ಮುಖದಲ್ಲಿ ಕೈ ಕುಲುಕಿದ್ದೆಂತು?

ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುವ ಮೂಲಕ, ತಮ್ಮ ರಾಜಕೀಯ ಪ್ರಜ್ಞೆಗಿಂತಲೂ ವ್ಯಾವಹಾರಿಕ ಪ್ರಜ್ಞೆಯನ್ನು ಢಾಳಾಗಿ ಹರಿಯಬಿಡುತ್ತಿರುವ, 50 ಶಾಸಕರ ಬೆಂಬಲ ತಮ್ಮಲ್ಲಿದೆ ಎಂದುಕೊಳ್ಳುತ್ತಾ, ಮುಖ್ಯಮಂತ್ರಿ ಪದವಿಯ ಮೇಲೇ ಕಣ್ಣಿಟ್ಟಿರುವ ಬಳ್ಳಾರಿ ಸುತ್ತಮುತ್ತ ಕೋಟ್ಯಂತರ ರೂಪಾಯಿ ಗಣಿ ಉದ್ದಿಮೆ ನಡೆಸುತ್ತಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಅಣ್ಣ, ಕಂದಾಯ ಸಚಿವ ಕರುಣಾಕರ ರೆಡ್ಡಿ ಮತ್ತು ಸಂಬಂಧಿಕ, ಆರೋಗ್ಯ ಸಚಿವ ಶ್ರೀರಾಮುಲು, ಯಡಿಯೂರಪ್ಪ ಬದಲಾವಣೆ ಹೊರತು, ಉಳಿದೆಲ್ಲ ಬೇಡಿಕೆಗಳನ್ನೂ ಈಡೇರಿಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ತಾಯಿ’ಯ ಕೃಪಾ ಕಟಾಕ್ಷ.

ರಾಜ್ಯ ಬಿಜೆಪಿಗೆ ಹೊಸ ಹೈಕಮಾಂಡ್ – ‘ತಾಯಿ’!

ಗಣಿ ಧಣಿಗಳ ಬ್ಲ್ಯಾಕ್‌ಮೇಲ್ ರಾಜಕಾರಣ ಮತ್ತು ಅದಕ್ಕೆ ಕೇಂದ್ರದಲ್ಲಿರುವ ಬಿಜೆಪಿಯೊಳಗಿನ ಭಿನ್ನಮತದ, ಅವ್ಯವಸ್ಥೆಯ, ಗೊಂದಲ. ಎರಡೂ ಬೆರಕೆಯಾದರೆ ರಾಜಕೀಯ ಪರಿಸ್ಥಿತಿ ಹೀಗಾಗುತ್ತದೆ. ಅಷ್ಟೇ! ತಮ್ಮದೇ ಪಕ್ಷದ ಸರಕಾರವೊಂದು ಉರುಳುವ ಹಂತದಲ್ಲಿರುವಾಗ, ಅದರ ಪರಿಪೂರ್ಣ ಲಾಭ ಪಡೆದುಕೊಳ್ಳುವುದು ಹೇಗೆ ಎಂಬ ನಾಯಕಮಣಿಗಳ ಲೆಕ್ಕಾಚಾರವೂ ಇದರಲ್ಲಿ ಸೇರಿರಬಹುದೆಂಬ ಶಂಕೆ ಥಟ್ಟನೇ ಉದ್ಭವವಾಗಿದೆ.

ಹೈಕಮಾಂಡ್ ಎಂದರೆ ಯಾರು? ಅದರರ್ಥ ಏನು? ಎಂಬ ಪ್ರಶ್ನೆಯೂ ಉದ್ಭವಿಸಲು ಈ ‘ಬ್ಲ್ಯಾಕ್‌ಮೇಲ್ ರಾಜಕಾರಣ’ ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಎಂದರೆ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೇ? ಲೋಕಸಭೆಯ ಪ್ರತಿಪಕ್ಷ ನಾಯಕ, ಪಕ್ಷದ ಹಿರಿತಲೆ ಲಾಲ್ ಕೃಷ್ಣ ಆಡ್ವಾಣಿಯೇ ಅಥವಾ ಕರ್ನಾಟಕದ ವ್ಯವಹಾರಗಳ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಜೇಟ್ಲಿಯೇ? ಊಹೂಂ… ಅವರ‌್ನ ಬಿಟ್, ಇವರ‌್ನ ಬಿಟ್, ಇವರ‌್ಯಾರ್ ಸುಷ್ಮಾ ಸ್ವರಾಜ್ ಎಂಬ ‘ತಾಯಿ’?

“ನನ್ನನ್ನು ನಿಮ್ಮ ಮನೆಮಗಳೆಂದು ಮನೆ ತುಂಬಿ ಹರಸಿ, ವಿದೇಶೀ ಸೊಸೆಗೆ ಅವಕಾಶ ನೀಡಬೇಡಿ” ಎಂದು ಬಳ್ಳಾರಿಯಲ್ಲಿ ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿದು, ಕರ್ನಾಟಕ ರಾಜಕಾರಣ ರಂಗದಲ್ಲಿ, ರಾಜ್ಯದ ಜನತೆಯ ಮನದಲ್ಲಿ ಸ್ಥಾನ ಪಡೆಯಲು ಹವಣಿಸಿದ್ದರು ಸುಷ್ಮಾ ಸ್ವರಾಜ್. ಮೈತುಂಬಾ ಸೆರಗುಹೊದ್ದು, ಎರಡೂ ಕೆನ್ನೆಗಳಿಗೆ ಅರಶಿನ ಲೇಪಿಸಿಕೊಂಡು, ದೊಡ್ಡ ಕುಂಕುಮ ತಿಲಕವಿಟ್ಟು, ಮುಡಿ ತುಂಬಾ ಹೂವು ಮುಡಿದು, ನಾನು ಅಚ್ಚ ಭಾರತೀಯ ಮಹಿಳೆ, ನಾನು ಮುತ್ತೈದೆ ಮುತ್ತೈದೆ ಎನ್ನುತ್ತಾ ಚುನಾವಣಾ ಪ್ರಚಾರ ಸಭೆಗಳಲ್ಲಿ, ವಿಧವೆ ಸೋನಿಯಾ ಗಾಂಧಿಯನ್ನು ಅಣಕಿಸಿದ್ದು ಮಾತ್ರವಲ್ಲದೆ, ಸೋನಿಯಾ ಪ್ರಧಾನಿಯಾದರೆ, ತಲೆ ಬೋಳಿಸಿ ಬಿಳಿ ಸೀರೆಯುಡುತ್ತೇನೆಂದು ಹೇಳಿದ್ದ ಈ ಸುಷ್ಮಾ ಸ್ವರಾಜ್ ಮಾಡಿದ್ದು ಭಾರತೀಯ ನಾರಿ ಕುಲಕ್ಕೆ ಅವಮಾನ ಎಂಬ ಕೂಗು ಕೂಡಾ ಎದ್ದಿತ್ತು. ಇದೀಗ ಕರ್ನಾಟಕದ ಬಿಜೆಪಿಯ ಪಾಲಿಗೆ ಹೊಸ ‘ಅಧಿ ನಾಯಕಿ’ಯಾಗಿ ಮೂಡಿಬಂದಿದ್ದಾರೆ, ಅಥವಾ ಬಿಂಬಿಸಿಕೊಂಡಿದ್ದಾರೆ!

ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಇದೇ ಗಣಿ ಧಣಿಗಳು ಸುಷ್ಮಾಗೆ ಪರಿಪೂರ್ಣ ಸಹಕಾರ ನೀಡಿದ್ದರು. ಅಂದಿನಿಂದ ಈ ಗಣಿ ರೆಡ್ಡಿಗಳ ಮತ್ತು ಸುಷ್ಮಾ ಸಂಬಂಧ ಆತ್ಮೀಯವಾಗಿ ಬೆಳೆದಿತ್ತು. ರೆಡ್ಡಿಗಳು ಕೂಡ ಸುಷ್ಮಾರನ್ನು ‘ತಾಯೀ’ ಎಂದೇ ಸಂಬೋಧಿಸುತ್ತಾರೆ. ಅಂದಿನಿಂದ ಕರ್ನಾಟಕಕ್ಕೆ ಆಗೀಗ್ಗೆ ಭೇಟಿ ನೀಡುತ್ತಿದ್ದ ಸುಷ್ಮಾ, ವರ ಮಹಾಲಕ್ಷ್ಮೀ ಪೂಜೆಗೆ ಅಲ್ಲಲ್ಲಿ, ವಿಶೇಷವಾಗಿ ಬಳ್ಳಾರಿಯಲ್ಲಿ ಪ್ರತಿವರ್ಷ ಹಾಜರಾಗುತ್ತಿದ್ದರು, ಅಚ್ಚ ಭಾರತೀಯ ನಾರಿ ಎಂಬಂತಹ ಬಿರುದಿನೊಂದಿಗೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಲ್ಲಿ ಸುಷ್ಮಾ ಸೋಲಿನ ಆತಂಕ ಎದುರಿಸುತ್ತಿದ್ದಾಗ, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯು ನಾಮಪತ್ರ ಹಿಂತೆಗೆತದಲ್ಲಿಯೂ ಈ ಗಣಿ ಧಣಿಗಳ ಕೈವಾಡವಿತ್ತು ಎಂಬುದು ಮಧ್ಯಪ್ರದೇಶ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಈಗ ಕರ್ನಾಟಕ ಸಮಸ್ಯೆಯನ್ನು “ಕ್ಷಣ ಮಾತ್ರದಲ್ಲಿ” ಪರಿಹರಿಸಿದ ಖ್ಯಾತಿ ಹೊಂದಿರುವ ಸುಷ್ಮಾ ಸ್ವರಾಜ್, ರಾಜ್ಯ ಬಿಜೆಪಿಗೆ ಅಘೋಷಿತವಾಗಿ ಹೊಸ ಉಸ್ತುವಾರಿ.

ಆಪರೇಶನ್ ಕಮಲ ಫಲ?

ರಾಜ್ಯದಲ್ಲಿ ನಡೆದ ‘ಆಪರೇಶನ್ ಕಮಲ’ ಈಗ ಫಲ ಕೊಡುತ್ತಿದೆ. 2008 ಮೇ ಚುನಾವಣೆಗಳಲ್ಲಿ 110 ಸ್ಥಾನ ಗೆದ್ದಿದ್ದ ಬಿಜೆಪಿಗೆ ಬಹುಮತಕ್ಕೆ ಬೇಕಿದ್ದುದು ಇನ್ನು ಮೂರೇ ಸ್ಥಾನಗಳು. ಇದಕ್ಕಾಗಿ ಆರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲಕ್ಕೆ ಗಣಿ ಧಣಿಗಳ ಸಹಾಯ ಪಡೆದಿದ್ದ ಯಡಿಯೂರಪ್ಪ, ಸರಕಾರಕ್ಕೆ ಅಗತ್ಯ ಬೇಕಿರುವ ಸಂಖ್ಯಾಬಲ ಕೂಡಿಸಿಕೊಂಡು ಆಗಲೇ ಸುಮ್ಮನಿದ್ದು ಬಿಡಬಹುದಿತ್ತು.

ಆದರೆ, ಈ ಸಂಖ್ಯಾಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸರಣಿ ಅಪರೇಶನ್ ಕಮಲ ಮಾಡಿದ ಈ ಗಣಿ ಧಣಿಗಳು, ಬಳ್ಳಾರಿ ಸುತ್ತಮುತ್ತ ಮತ್ತು ಆಂಧ್ರದ ಆಸುಪಾಸಿನಲ್ಲಿ ಭೂಗರ್ಭವನ್ನೇ ಕೆದಕಿ ಗಣಿ ಅಗೆಯುವಂತೆ, ಬೇರೆ ಪಕ್ಷಗಳ ಶಾಸಕರನ್ನೆಲ್ಲಾ ಅಗೆದಗೆದು ತಂದು ತಂದು ಸುರುವಿದರು. ಅವರಿಗೆ ಮಂತ್ರಿಗಿರಿ ಕೊಡಿಸಿದರು.

ಇದರಿಂದಾಗಿ ಪಕ್ಷದೊಳಗೆ, ಸರಕಾರದೊಳಗೆ ಗಣಿ ರೆಡ್ಡಿಗಳ ವರ್ಚಸ್ಸು, ಪ್ರಭಾವ ಹೆಚ್ಚಿಸಿ, ಯಡಿಯೂರಪ್ಪ ಅವರ ತಲೆಗಿಂತಲೂ ಮೇಲೆ ಬೆಳೆದುಬಿಟ್ಟಿತು. ಯಡಿಯೂರಪ್ಪರೇ ಮುಖ್ಯಮಂತ್ರಿ ಎಂದು ಮತ ಯಾಚಿಸಿ ಗೆದ್ದಿದ್ದ ಇದೇ ರೆಡ್ಡಿ ಮತ್ತವರ 50ರಷ್ಟಿದೆ ಎಂದು ಹೇಳಲಾಗುತ್ತಿರುವ ಶಾಸಕರ ಗಡಣ, ಈಗ ಅವರನ್ನೇ ತೆಗೆಯಿರಿ ಎಂಬಷ್ಟರ ಮಟ್ಟಿಗೆ ಬೆಳೆದದ್ದು ಇದೇ ಹಣ ಬಲದಿಂದ.

ಸಮಸ್ಯೆಯೇ ಪರಿಹಾರ!

ಇದುವರೆಗೆ ‘ಶಿಸ್ತಿನ ಪಕ್ಷ’ ಎಂಬ ಹೆಸರು ಹೊತ್ತುಕೊಂಡಿದ್ದ ಬಿಜೆಪಿ, ಜಿನ್ನಾ ಬಗ್ಗೆ ಒಂದು ಪುಸ್ತಕ ಬರೆದಿದ್ದಕ್ಕಾಗಿ ಜಸ್ವಂತ್ ಸಿಂಗ್ ಅವರಂತಹ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷದಿಂದಲೇ ಉಚ್ಚಾಟಿಸಿದ್ದ ಬಿಜೆಪಿ, ಇಡೀ ಸರಕಾರವನ್ನೇ ಅಲ್ಲಾಡಿಸುತ್ತಿದ್ದ ರೆಡ್ಡಿ ಸಹೋದರರ ಅಶಿಸ್ತಿನ ನಡವಳಿಕೆ ವಿರುದ್ಧ ಕ್ರಮವನ್ನೇಕೆ ತೆಗೆದುಕೊಳ್ಳಲಾರದೇ ಹೋಯಿತು?

ಇದು ಕೇಂದ್ರೀಯ ನಾಯಕತ್ವದ ಎಡಬಿಡಂಗಿತನ. ಯಡಿಯೂರಪ್ಪ ಕೈಗೆ ಪೂರ್ಣಾಧಿಕಾರ ಕೊಡುವ ಬದಲು, ರಾಜಕೀಯ ಬ್ಲ್ಯಾಕ್‌ಮೇಲಿಂಗ್‌ಗೆ ಮತ್ತಷ್ಟು ಅವಕಾಶ ಮಾಡಿಕೊಟ್ಟು, ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕುವ ಮೂಲಕ, ರಾಜ್ಯದ ಜನತೆಯನ್ನೇ ಕತ್ತಲಲ್ಲಿಟ್ಟಿತು ಬಿಜೆಪಿ. ಅಶಿಸ್ತು ಎಂದು ಬಣ್ಣಿಸಲು ಸಕಲ ಪದಗಳು, ಸರ್ವ ಅರ್ಹತೆಗಳೂ ಇರುವ ‘ಮಹಾನ್ ಜನಸೇವಾ ಕಾರ್ಯ’ ಮಾಡಿದ್ದ ಈ ರೆಡ್ಡಿಗಳನ್ನು ಮೊದಲು ಸಚಿವ ಪಟ್ಟದಿಂದ ಕಿತ್ತು ಹಾಕಿ, ಆ ಮೇಲೆ ವಿಚಾರಣೆ ನಡೆಸಬಹುದಿತ್ತಲ್ಲ… ಹಾಗೆ ಯಾಕೆ ಆಗಲಿಲ್ಲ?

ಯಾವುದೇ ಶಾಸಕರು ಮತ್ತೊಂದು ಚುನಾವಣೆಗೆ ಸಿದ್ಧರಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ, ವಿಧಾನಸಭೆ ವಿಸರ್ಜನೆಗೂ ಸಿದ್ಧ, ಆದರೆ ಈ ರೀತಿಯ ಅಶಿಸ್ತು ಇರಬಾರದು ಎಂಬ ದಿಟ್ಟ ಎಚ್ಚರಿಕೆ ನೀಡಲು ಬಿಜೆಪಿಯ ಕೇಂದ್ರೀಯ ನಾಯಕತ್ವಕ್ಕೆ ಸಾಧ್ಯವಾಗಲಿಲ್ಲವೇಕೆ? ಈಗ ಸಮಸ್ಯೆಗೆ ಸಮಸ್ಯೆಯನ್ನೇ ಪರಿಹಾರ ಎಂದು ‘ಕಂಡು ಹುಡುಕಿರುವುದು’ ಖಂಡಿತವಾಗಿಯೂ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಈ ಸಂಧಾನವಲ್ಲದ ಸಂಧಾನದ ಹಿಂದಿನ ಮಸಲತ್ತೇನು?

ಸಾಂವಿಧಾನಿಕ ಅಧಿಕಾರ ಇದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಯಾಕೆ ಹತಾಶರಾದರು? ಎಲ್ಲ ಅಧಿಕಾರವಿದ್ದರೂ ರೆಡ್ಡಿಗಳ ಈ ಬ್ಲ್ಯಾಕ್‌ಮೇಲ್ ಎದುರು ಸೋತು, ನಿರಾಶರಾಗಿ, ‘ಅಬ್ಬ, ಹೇಗಾದರೂ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ’ ಎಂಬಂತಹ ಪುನೀತ ಭಾವ ಹೊಂದಿದರು? ಹೇಳಿ ಕೇಳಿ ನಿಷ್ಠುರ ನಡೆ-ನುಡಿಯ ಮುಖ್ಯಮಂತ್ರಿಯೇಕೆ ಇಷ್ಟು ದುರ್ಬಲರಾದರು? ಈ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿವೆ. ಒಟ್ಟಿನಲ್ಲಿ ಈ ರಾಜಿಯಿಲ್ಲದ, ಒಳಗೊಳಗೇ ಕುದಿಯುವಿಕೆ ಮುಂದುವರಿಸಲು ಅವಕಾಶ ಮಾಡಿಕೊಟ್ಟ ಸಂಧಾನದ ಹಿಂದಿರುವ ನಿಜವಾದ ಮಸಲತ್ತೇನಿತ್ತು? ಎಂಬುದನ್ನು ತಿಳಿಯಲು ರಾಜ್ಯದ ಮತದಾರರಿಗೆ ಅಧಿಕಾರವಿದೆ, ಹಕ್ಕಿದೆ.

ಒಂದಷ್ಟು ಹಣ ಬಲ ಹಿಡಿದುಕೊಂಡು, ಇಡೀ ರಾಜ್ಯ ಸರಕಾರವೊಂದನ್ನು ಬಹುತೇಕ ಎರಡು ವಾರಗಳ ಕಾಲ ನಿಷ್ಕ್ರಿಯವಾಗುವಂತೆ ಮಾಡಿದ್ದು ಸಣ್ಣ ‘ಸಾಧನೆ’ಯೇನಲ್ಲ. ಅತ್ತಕಡೆಯಿಂದ ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ನ ನಿಗೂಢವಾದ ‘ಮೌನ’ವೇ ಎಂದು ಹೇಳಬಹುದಾದ ಪ್ರತಿಕ್ರಿಯೆ, ಜೆಡಿಎಸ್‌ನ ‘ಎಚ್ಚರಿಕೆಯ’ ಪ್ರತಿಸ್ಪಂದನೆ, ಪ್ರವಾಹ ಸಂತ್ರಸ್ತರು ಅಶನ-ವಸನಕ್ಕಾಗಿ ಆಗಸಕ್ಕೆ ಕೈಮುಗಿದು ಬಯಲಲ್ಲೇ ಗೋಗರೆಯುತ್ತಿದ್ದ ಹೊತ್ತಿನಲ್ಲಿ ರಾಜ್ಯ ಸರಕಾರವೇ ರೆಡ್ಡಿಗಳ ಕೈಯಲ್ಲಿ ನಲುಗುತ್ತಿದ್ದಾಗ, ದಿವ್ಯ ಮೌನ ವಹಿಸಿದ್ದ ರಾಜ್ಯಪಾಲರು… ಇವೆಲ್ಲ ಬೆಳವಣಿಗೆಗಳನ್ನು ಕಂಡಾಗ ಖಂಡಿತಾ ಇದರ ಹಿಂದೆ ಏನೋ ಇದೆ ಎಂದು ಅನ್ನಿಸುತ್ತಿಲ್ಲವೇ?

ಕೇಂದ್ರೀಯ ಮಟ್ಟದಲ್ಲಿಯೂ ಬಿಜೆಪಿಯ ಪರಿಸ್ಥಿತಿ ಗೊಂದಲದ ಮುದ್ದೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಡ್ವಾಣಿ ಅವರು ಈ ವರ್ಷಾಂತ್ಯದಲ್ಲಿ ಬಿಜೆಪಿಗೆ ಹೊಸ ಅಧ್ಯಕ್ಷನ ಆಯ್ಕೆಯ ಬಳಿಕ ರಾಜೀನಾಮೆ ನೀಡುತ್ತಾರೆ ಎಂಬ ಸುಳಿವಿದೆ. ವಯಸ್ಸಾಯಿತು, ರಾಜಕೀಯ ಸಾಕು ಎಂಬ ಇರಾದೆ ಇದ್ದಿರಬಹುದು. ಈಗ ಆಡ್ವಾಣಿಯವರ ಸ್ಥಾನ ಮತ್ತು ರಾಜನಾಥ್ ಸಿಂಗ್ ಅವರ ಸ್ಥಾನ ತುಂಬಲು ಪಕ್ಷದಲ್ಲಿ ಒಳಗಿಂದೊಳಗೆ ಮೇಲಾಟ ಆರಂಭವಾಗಿದೆ. ಇದುವರೆಗೆ ರಾಜ್ಯದ ಉಸ್ತುವಾರಿ ವಹಿಸಿದ್ದ ಅರುಣ್ ಜೇಟ್ಲಿ ಮತ್ತು ಸುಷ್ಮಾ ನಡುವಿನ ವಿರಸ ಹೊಸದೇನಲ್ಲ. ಅವರಿಬ್ಬರೂ ಭವಿಷ್ಯದ ನಾಯಕರು ಎಂದೂ ಕರೆಯಲಾಗುತ್ತದೆ.

ಹೀಗಾಗಿ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರಕಾರದ ಮೇಲೆ ಹಿಡಿತ ಸಾಧಿಸಿದರೆ, ತನ್ನ ‘ಆ’ ಮಹತ್ವಾಕಾಂಕ್ಷೆಗೆ ಪೂರಕ ಎಂದು ಸುಷ್ಮಾ ಈಗಿಂದೀಗಲೇ ಇಟ್ಟಿಗೆ ಕಟ್ಟುತ್ತಿದ್ದಾರೆಯೇ? ಬಿಜೆಪಿ ಅಧಿಕಾರವಿರುವ ಗುಜರಾತ್ ಬಿಡಿ, ಅಲ್ಲಿ ನರೇಂದ್ರ ಮೋದಿ, ಆಡ್ವಾಣಿ ಇದ್ದಾರೆ, ಏನೂ ಮಾಡಲಾಗದು. ಇನ್ನು ಮಧ್ಯಪ್ರದೇಶ, ಅದು ತನ್ನದೇ ರಾಜ್ಯ. ಕರ್ನಾಟಕವನ್ನೂ ಸೆಳೆದುಕೊಂಡರೆ, ತನಗೇ ಹೆಚ್ಚು ಬಲ ಎಂಬ ಲೆಕ್ಕಾಚಾರವೇ ಕಾರಣವೇ? ಒಂದು ರಾಜ್ಯದ, ಸರಕಾರದ ಅಸ್ತಿತ್ವದ ಸಮಸ್ಯೆಯನ್ನು, ತನ್ನ ಪರವಾಗಿ ತಿರುಗಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೇನಾದರೂ ಬಂದರೆ ಇದಕ್ಕೆ ಕರ್ನಾಟಕದ ಪ್ರಹಸನ ಉತ್ತರವಾದೀತೇ?

ಗಣಿಧಣಿಗಳೂ ಗೆಲ್ಲಲಿಲ್ಲ, ಸಿಎಮ್ಮೂ ಗೆಲ್ಲಲಿಲ್ಲ, ಬಿಜೆಪಿ ಸೋತಿದೆ…

ಇಷ್ಟೆಲ್ಲ ಪ್ರಶ್ನೆಗಳ ನಡುವೆ, ‘ಇದೆಲ್ಲ ನಾಟಕ’ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿರುವುದರಲ್ಲಿ ಕೂಡ ಹುರುಳಿಲ್ಲದಿಲ್ಲ ಎಂಬ ಅನಿಸಿಕೆ ಬರುವುದಿಲ್ಲವೇ?

ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಸಂಸದ ಎಚ್.ವಿಶ್ವನಾಥ್ ಅವರ ಹೇಳಿಕೆಯನ್ನು ಗಮನಿಸಬೇಕು. ‘ರೆಡ್ಡಿಗಳನ್ನು ಮಟ್ಟಹಾಕಲೇಬೇಕು. ಇಲ್ಲದಿದ್ದಲ್ಲಿ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ಕ್ರಮಕ್ಕೆ ರಾಜ್ಯ ಸರಕಾರವನ್ನು ಎಲ್ಲರೂ ಬೆಂಬಲಿಸಬೇಕು’ ಎಂದವರು ಕಳೆದ ವಾರಾಂತ್ಯ ಮೈಸೂರಿನಲ್ಲಿ ನೀಡಿದ್ದರು. ಇದು ನೈತಿಕ ರಾಜಕಾರಣ. ರಾಜ್ಯದ ಅಭಿವೃದ್ಧಿ ಬಗೆಗಿನ ಚಿಂತನೆ.

ಮಾತೆತ್ತಿದರೆ ‘ನಮಗೆ ಜನ ಹಿತ ಮುಖ್ಯ, ಜನಸೇವೆಯೇ ನಮ್ಮ ಗುರಿ’ ಎಂಬಂತಹಾ ವಾಕ್ಯಗಳನ್ನು ಉದುರಿಸುತ್ತಿದ್ದ ರೆಡ್ಡಿ ಸಹೋದರರು, ಇದುವರೆಗೆ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗದಿರುವ ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡುವಂತೆ ಹಠ ಹೂಡಿದ್ದು, ಸ್ವತಃ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಎತ್ತಂಗಡಿ ಮಾಡಿಸುವಂತೆ ಒತ್ತಾಯಿಸಿದ್ದು, ಅದಿರು ಲಾರಿಗಳ ಮೇಲೆ ತಲಾ 1000 ರೂ. ಸುಂಕ ಹೇರಿದ್ದನ್ನು ವಿರೋಧಿಸಿದ್ದು (ಇದೇ ಹಣವನ್ನು ಅದಿರು ಲಾರಿಗಳು ಕುಲಗೆಡಿಸಿದ್ದ ರಸ್ತೆಗಳ ಅಭಿವೃದ್ಧಿಗೋ, ಅಥವಾ ಅವು ಎಸಗುವ ನಿತ್ಯ ಅಪಘಾತದಲ್ಲಿ ಕೊಂಚ ಪರಿಹಾರ ಹಣಕ್ಕೋ ಬಳಸಬಹುದು!) ಯಾವ ‘ಜನ ಹಿತ’ ಕಾರ್ಯ?

ಲೋಕಸಭೆ ಚುನಾವಣೆಯ ಸೋಲಿನ ಬಳಿಕವೂ ಬಿಜೆಪಿ ಯಾವುದೇ ರಾಜ್ಯಗಳಲ್ಲಿ ಚೇತರಿಸಿಕೊಳ್ಳದಿರುವುದಕ್ಕೆ ಪಕ್ಷದ ಇಂಥದ್ದೇ ಕ್ರಮಗಳು ಕಾರಣ ಎಂಬುದು ಅದರ ಕೇಂದ್ರೀಯ ನಾಯಕತ್ವದ ಅರಿವಿಗೆ ಬರುವಾಗ ಬಹುಶಃ ಸಮಯ ಮೀರಿರುತ್ತದೆ!

ಒಟ್ಟಿನಲ್ಲಿ, ಈ ರೀತಿ ಲಾಬಿ ನಡೆಸುವ, ಭೂಮಿಯ ಗರ್ಭ ಅಗೆಯುತ್ತಾ ಜೇಬು ತುಂಬಿಕೊಳ್ಳುವ, ನಾನೇ ಜನರ ಉದ್ಧಾರಕ ಎನ್ನುತ್ತಾ ಗರಿ ಗರಿ ನೋಟು ಹಂಚುವ ರಾಜಕಾರಣಿಗಳಾಗಿ ಪರಿವರ್ತನೆಗೊಳ್ಳುವ ಕಟ್ಟಾ ಉದ್ಯಮಿಗಳಿಗೆ, ಅವರ ಜನಮರುಳು ಮಾತುಗಳಿಗೆ, ಹೆಂಡ-ಸೀರೆ-ನೋಟಿಗೆ ಜನರು ಮರುಳಾಗುತ್ತಿರುವವರೆಗೆ ಮತದಾರನಿಗೆ ಮಾತ್ರ ಇದೇ ಅವಸ್ಥೆ ಕಟ್ಟಿಟ್ಟ ಬುತ್ತಿ.
[ವೆಬ್‌ದುನಿಯಾದಲ್ಲಿ ಪ್ರಕಟವಾಗಿದೆ]

ರಂಗಸ್ಥಳದಿಂದ ನಿರ್ಗಮಿಸಿದ ಯಕ್ಷಗಾನದ ‘ಮಹಾಬಲ’

ಕರ್ನಾಟಕದ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನದ ಅಗ್ರಗಣ್ಯ ಸರ್ವೋತ್ಕೃಷ್ಟ ಕಲಾವಿದರಲ್ಲೊಬ್ಬರಾದ ಕೆರೆಮನೆ ಮಹಾಬಲ ಹೆಗಡೆ ಅವರ ನಿಧನದೊಂದಿಗೆ ಬಡಗುತಿಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.

ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಲಾವಿದ ಅಳಿದರೂ ಕಲೆಗೆ ಅಳಿವಿಲ್ಲ ಎಂಬೊಂದು ಸತ್ಯವಾಕ್ಯದ ಹಿಂದೆ ಧಾವಿಸಿದರೆ ಧುತ್ತನೇ ಎದುರಾಗುವ ಹೆಸರು ಕೆರೆಮನೆ ಎಂಬ ಅಗ್ರಗಣ್ಯ ಯಕ್ಷಗಾನ ಕುಟುಂಬ. ಅಂಥ ಪರಂಪರೆಯ ಅನರ್ಘ್ಯ ಕೊಂಡಿಯಾಗಿದ್ದ, ಯಕ್ಷಗಾನ ಮಾತ್ರವಲ್ಲದೆ, ಸಂಗೀತ, ಭಜನೆ, ನಾಟಕ, ಭಜನೆ… ಹೀಗೆ ಜೀವನವನ್ನು ಬೆಳಗಬಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದು ಅವುಗಳಲ್ಲಿಯೂ ಮಹಾಬಲರೆನ್ನಿಸಿಕೊಂಡ ಕೆರೆಮನೆ ಮಹಾಬಲ ಹೆಗಡೆ ಇಂದು ನಮ್ಮನ್ನಗಲಿದ್ದಾರೆ.

ಸಿನಿಮಾ, ಟಿವಿ ಮುಂತಾದ ಆಧುನಿಕ ದೃಶ್ಯಮಾಧ್ಯಮಗಳಂತೆ ಉತ್ತೇಜಕ ಪರಿಕರಗಳನ್ನು ಬಳಸುವ ಸ್ವಾತಂತ್ರ್ಯವೂ, ಔಚಿತ್ಯವೂ ಇಲ್ಲದಂತಹ ಯಕ್ಷಗಾನ ರಂಗದಲ್ಲಿ ಪ್ರೇಕ್ಷಕವರ್ಗದ ಚಿತ್ತೋಭಿವ್ಯಕ್ತಿಯಲ್ಲಿ ಶಾಶ್ವತ ಸ್ಥಾನ ಪಡೆಯಬೇಕಿದ್ದರೆ, ಕಲಾವಿದನಾದವನೊಬ್ಬ ತನ್ನೆಲ್ಲ ಸಾಮರ್ಥ್ಯವನ್ನು, ಕೌಶಲ್ಯವನ್ನು ಒರೆಗೆ ಹಚ್ಚಬೇಕಾಗುತ್ತದೆ. ಕೆರೆಮನೆ ಮಹಾಬಲರು ರಂಗದಲ್ಲಿ ಸಾಕ್ಷಾತ್ಕರಿಸುತ್ತಿದ್ದ ಪೌರಾಣಿಕ ಪಾತ್ರಗಳಾದ ಅಶ್ವತ್ಥಾಮ, ಭೀಷ್ಮ, ಬಲರಾಮ, ದ್ರೋಣ, ದಶರಥ, ರಾವಣ, ಕಂಸ, ಕೌರವ, ಅರ್ಜುನ, ಸುಧನ್ವಗಳ ಪಾತ್ರ ಪೋಷಣೆಯ ಸವಿಯುಂಡವರಂತೂ, ಮಹಾಬಲರಿಗೆ ಮಹಾಬಲರೇ ಸಾಕ್ಷಿ ಎಂದುಕೊಳ್ಳಬಹುದು. ಅಂಥ ಛಾಪು, ಛಾತಿ ಮೂಡಿಸಿದ್ದರು ಕೆರೆಮನೆ ಮಹಾಬಲ ಹೆಗಡೆ.

ಪಾತ್ರ ಯಾವುದೇ ಇರಲಿ, ಆ ಪಾತ್ರದ ವ್ಯಕ್ತಿತ್ವವನ್ನು ಅಲುಗಾಡಿಸದೆ, ಸಮಕಾಲೀನ ಸಂದರ್ಭಕ್ಕೆ ಅದನ್ನು ಬೆಸೆಯುತ್ತಾ, ಪ್ರೇಕ್ಷಕವರ್ಗದಲ್ಲಿ ಜಾಗೃತಿ ಮೂಡಿಸಿ ಚಿಂತನೆಗೆ ಹಚ್ಚುವಂತೆ ಮಾಡುತ್ತಿದ್ದ ವಾಕ್ಪಟುತ್ವ, ಭಾವಾಭಿನಯ ಮತ್ತು ನೃತ್ಯಾಭಿನಯ, ಅದಕ್ಕೆ ತಕ್ಕುದಾದ ಕಂಠದ ಹೊಂದಾಣಿಕೆ. ಅದಕ್ಕೂ ಹೆಚ್ಚಾಗಿ ಪಾತ್ರವೊಂದರ ಪೂರ್ವಾಧ್ಯಯನದಲ್ಲಿ ಅವರಿಗಿದ್ದ ಆಸಕ್ತಿ, ಪಾತ್ರವೊಂದನ್ನು ಕಲಾಭಿಮಾನಿಗಳಿಗೆ ಹೇಗೆ ಉಣಬಡಿಸಬಹುದೆಂಬ ಕುರಿತಾದ ಅವರ ಚಿರಂತನ ಚಿಂತನೆ… ಇವೆಲ್ಲವೂ ಅವರೊಳಗಿನ ಕಲಾವಿದನನ್ನು ಒರೆಗೆ ಹಚ್ಚಿ, ರಂಗದ ಉತ್ತುಂಗಕ್ಕೇರಿಸಿತ್ತು.

ಕಲಾವಿದ ಎಂದರೆ ಕಲೆಯ ಕುಲುಮೆಯಲ್ಲಿ ಬೆಂದು ಬರಬಲ್ಲ ಹೊನ್ನಿನ ಆಭರಣವಿದ್ದಂತೆ. ಲಯಬದ್ಧ ಕುಣಿತ, ಪಾತ್ರಕ್ಕೆ ತಕ್ಕುದಾದ ಕಂಠ ಶ್ರುತಿ, ಪಾತ್ರ ಚಿತ್ರಣಕ್ಕೆ ಸೂಕ್ತವಾದ ನಡೆ-ನುಡಿ, ಒಟ್ಟಿನಲ್ಲಿ ಕಲಾ ಪ್ರೇಕ್ಷಕರನ್ನು ಯಕ್ಷಲೋಕಕ್ಕೇ ಕರೆದೊಯ್ಯಬಲ್ಲ, ಅಥವಾ ಆ ರೀತಿಯಲ್ಲಿ ಸಮ್ಮೋಹಿನಿಗೆ ಒಳಪಡಿಸಬಲ್ಲಂತಹಾ ಪಾತ್ರಾಭಿವ್ಯಕ್ತಿಯ ಸಾಮರ್ಥ್ಯ ಮೂಡುವುದು ಕಲಿತು ಬೆಳೆಯಬೇಕೆಂಬ ತುಡಿತದಿಂದ ಮತ್ತು ಅನುಭವಗಳ ಮೂಸೆಯಿಂದ. ಹೀಗಾಗಿಯೇ ಕೆರೆಮನೆಯಂತಹಾ ಕಲಾತಪಸ್ವಿಗೆ ಈ ಸಾಮರ್ಥ್ಯ ಸಿದ್ಧಿಸಿತ್ತು. ಅದಕ್ಕೆ ಪೂರಕವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಧ್ಯಯನ ನಡೆಸಿದ್ದ ಅವರು, ಭಾಗವತರಾಗಿ, ಮದ್ದಳೆವಾದಕರಾಗಿ, ಪುರುಷ ವೇಷಗಳನ್ನಷ್ಟೇ ಅಲ್ಲದೇ ಸ್ತ್ರೀ ಹಾಗೂ ಹಾಸ್ಯವೇಷಗಳಲ್ಲೂ ತಮ್ಮ ಕಲಾಭಿಜ್ಞತೆ ಮೆರೆದವರು. ಒಟ್ಟಿನಲ್ಲಿ ಯಕ್ಷಗಾನ ರಂಗದ ಸವ್ಯಸಾಚಿ.

ಸತ್ವಯುತವಾದ ಪಾತ್ರಪೋಷಣೆಯೊಂದಿಗೆ ನಾಟ್ಯದಲ್ಲಿ ಹಾಗೂ ಅರ್ಥಗಾರಿಕೆಯಲ್ಲಿನ ಸಮನ್ವಯತೆಯೇ ಬಹುಶಃ ಮಹಾಬಲರ ಪಾತ್ರಗಳಿಗೆ ವಿಶೇಷವಾಗಿ ಜೀವ ತುಂಬಿದ್ದು. ಇದಕ್ಕೆ ಪೂರಕವಾಗುವುದು ಬೇರೇನಲ್ಲ, ಪೂರ್ವಾಧ್ಯಯನ ಮತ್ತು ಒಲಿಯದ್ದನ್ನು ಕಲಿಯಬೇಕೆಂಬ ತುಡಿತ, ಹಠ. ಕಲೆಯೆಂದರೆ ಒಣ ಸರಕಲ್ಲ, ಕಬ್ಬಿನ ಜಲ್ಲೆಯಿಂದಲೂ ರಸ ಹಿಂಡಬಹುದಾದ ಪರಿಶ್ರಮದಿಂದ ಕಲೆ ಬೆಳಗುತ್ತದೆ ಮತ್ತು ಅಲ್ಲೊಬ್ಬ ಕಲಾವಿದ ರೂಪುಗೊಳ್ಳುತ್ತಾನೆ ಎಂಬುದನ್ನು ಸಮರ್ಥವಾಗಿ ಅರಿತುಕೊಂು ತೋರಿಸಿಕೊಟ್ಟವರು ಮಹಾಬಲರು.

ಅವರು ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಆದರೆ ಅವರಿಗಿದ್ದ ಪ್ರಪಂಚ ಜ್ಞಾನ, ಪೌರಾಣಿಕ ಜ್ಞಾನ ಅಗಾಧ. ಎಲ್ಲವನ್ನೂ ಓದಿಯೇ ಕರಗತ ಮಾಡಿಕೊಂಡವರು ಎಂದರೆ, ಯಕ್ಷಗಾನ ಕಲಾವಿದರು ಹೇಗಿರುತ್ತಾರೆ, ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ ನಿಲ್ಲುತ್ತಾರವರು. ಯಕ್ಷಗಾನದಲ್ಲಿ ವೇಷ ಮಾಡುವುದೆಂದರೆ, ಒಂದಷ್ಟು ಗಟ್ಟಿ ಮಾತಿನಿಂದ, ಚರ್ವಿತ ಚರ್ವಣ ಸೇರಿಸಿ ಮಾತು ಹೆಣೆದು, ಶಬ್ದಾಲಂಕಾರ ಬಳಸಿ ಪ್ರೇಕ್ಷಕರನ್ನು ಮೋಡಿ ಮಾಡುವುದು ಎಂದು ತಿಳಿದವರೇ ಹೆಚ್ಚು. ಆದರೆ ಕೆರೆಮನೆಯವರ ಪಾತ್ರಾಭಿವ್ಯಕ್ತಿಗಳನ್ನೇ ಗಮನಿಸಿದಲ್ಲಿ, ಅವರು ಕಥೆಯ ಭಾವದ ಹಿಂದೆ ಹೋಗಿರುವುದು ವೇದ್ಯವಾಗುತ್ತದೆ. ಈ ಭಾವ ಸಿದ್ಧಿಸಬೇಕಿದ್ದರೆ, ಅದಕ್ಕೆ ತಕ್ಕುದಾದ ಅಧ್ಯಯನವೂ ಅಗತ್ಯ.

ಹೆಗಡೆಯವರಿಗೆ ಈ ಕಲೆಯ ಮೇಲಿನ ಹಿಡಿತ ನೇರವಾಗೇನೂ ಸಿದ್ಧಿಸಿದ್ದಲ್ಲ. ಈ ಕಲಾವಿದನ ರಂಗ ಪಯಣದ ಅನುಭವಜನ್ಯ ಪ್ರಯೋಗಗಳೇ ಎಲ್ಲದಕ್ಕೂ ಮೂಲ ಹೇತು. ಚಿತ್ರಾಪುರದ ಶ್ರೀಪಾದರಾಯರಿಂದ ಪ್ರಾರಂಭಿಕ ಸಂಗೀತಾಭ್ಯಾಸ, ನಂತರ ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದರು. ಯಕ್ಷಗಾನದಲ್ಲಿ ಸಂಗೀತವನ್ನು ಪರಂಪರೆಗೆ ಭಂಗ ಬಾರದಂತೆ ಅಳವಡಿಸುವುದರ ಕುರಿತು ಸಾಕಷ್ಟು ಚಿಂತನೆ ಮಾಡಿರುವ ಅವರು, ಅತ್ಯುತ್ತಮ ವಿಮರ್ಶಕರೂ ಹೌದು. ತೂಕ ತಪ್ಪದ ಗತ್ತಿನ ಮಾತು, ಅದ್ಭುತ ರಸ ಸೃಷ್ಟಿಯ ರಂಗಾಭಿನಯ, ಪಾತ್ರೋಚಿತ ಮುಖವರ್ಣಿಕೆ, ಆಭರಣ ಮುಂತಾದವುಗಳ ಧಾರಣೆ ಬಗ್ಗೆ ಸೂಕ್ಷ್ಮಪ್ರಜ್ಞೆ, ರಂಗ ಪ್ರವೇಶ, ನಿಲುವು… ಈ ರೀತಿ ರಂಗಾಭಿವ್ಯಕ್ತಿಯ ಸಕಲ ಕ್ಷೇತ್ರಗಳಲ್ಲೂ ಅವರಿಗೆ ಅವರೇ ಸಾಟಿ.

ಕಲಾ ಕುಟುಂಬ: ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ತೆಂಕು ತಿಟ್ಟು ಮಾತ್ರವೇ ಯಕ್ಷಗಾನ ಎಂದುಕೊಂಡಿದ್ದ ದಕ್ಷಿಣ ಕನ್ನಡಿಗರಿಗೆ ಬಡಗು ತಿಟ್ಟಿನ ಕಲಾವೈಭವವನ್ನು ಉಣಬಡಿಸಿದ್ದು ಈಗ ವಜ್ರಮಹೋತ್ಸವ (75ನೇ ವರ್ಷ) ಆಚರಿಸುತ್ತಿರುವ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ. ಇದನ್ನು ಸ್ಥಾಪಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಕೆರೆಮನೆ ಕುಟುಂಬವೇ. ಕೆರೆಮನೆ ಶಿವರಾಮ ಹೆಗಡೆ ಸ್ಥಾಪಿಸಿದ್ದ ಈ ಮಂಡಳಿಯನ್ನು ಅವರ ಪುತ್ರ ಶಂಭು ಹೆಗಡೆ ಯಶಸ್ವಿಯಾಗಿ ನಿಭಾಯಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದರವರು (ಈಗ ಶಂಭು ಹೆಗಡೆ ಮಗ ಶಿವಾನಂದ ಹೆಗಡೆ ಅದನ್ನು ಮುಂದುವರಿಸುತ್ತಿದ್ದಾರೆ). ಅಂತಹಾ ತಂಡದಲ್ಲಿ ಮೆರೆದವರು ಮಹಾಬಲ.

1927ರಲ್ಲಿ ಜನಿಸಿದ ಇವರನ್ನು ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರೇ ಯಕ್ಷರಂಗಕ್ಕೆ ಎಳೆದು ತಂದವರು. ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು, ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ ಪ್ರಸಿದ್ಧಿ ಗಳಿಸಿದ್ದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗಳು ಅವರ ಕಲಾಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಯಕ್ಷ ರಾತ್ರಿಗಳ ಪರಮೋತ್ಕೃಷ್ಟ ವೈಭವದ ದಿನಗಳು ನೆನಪಾದರೆ ಕಣ್ಣೆದುರಲ್ಲಿ ಮಹಾಬಲ ಹೆಗಡೆಯವರ ಅಮೂರ್ತ ರೂಪ ಬಂದು ನಿಲ್ಲುತ್ತದೆ. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ, ಯಕ್ಷಲೋಕದಲ್ಲಿ ನಿಂತು ವರ್ತಮಾನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ ವಾಕ್ ಸಾಮರ್ಥ್ಯ, ಕಲಾಭಿಜ್ಞತೆ, ಚಿಕಿತ್ಸಕ ದೃಷ್ಟಿ ಎಲ್ಲವೂ ಸ್ಮರಣಾರ್ಹ.

ಇತ್ತೀಚೆಗಷ್ಟೇ ಕೆರೆಮನೆ ಕುಟುಂಬದ ಮತ್ತೊಂದು ಕಿರೀಟ ಕೆರೆಮನೆ ಶಂಭು ಹೆಗಡೆ ಬದುಕಿನ ವೇಷ ಕಳಚಿ, ಯಕ್ಷಗಾನ ಕ್ಷೇತ್ರಕ್ಕೆ ಅಗಾಧ ನಷ್ಟ ತಂದೊಡ್ಡಿದ್ದರು. ಇದೀಗ ಕೆರೆಮನೆಯ ಮತ್ತೊಂದು ಹಿರಿಯ ಕಿರೀಟ ಕಳಚಿಬಿದ್ದಿದೆ. ಯಕ್ಷಗಾನದ ವೈಭವಪೂರ್ಣ ಅಧ್ಯಾಯವೊಂದು ಕೊನೆಗೊಂಡಿದೆ. ಇಂತಹ ಮಹಾನ್ ಕಲಾವಿದನ ಬದುಕಿನ ಮತ್ತು ಕಲೆಯ ಆದರ್ಶಗಳು ಹೊಸ ಕಲಾವಿದರಿಗೆ ಸ್ಫೂರ್ತಿಯಾಗಲಿ, ಯಕ್ಷಗಾನದ ಸವ್ಯಸಾಚಿಯಾಗಿ ಮೆರೆದ ಮಹಾಬಲರ ಹೆಸರು ಚಿರಸ್ಥಾಯಿಯಾಗಲಿ.

ಯಕ್ಷಗಾನಂ ಗೆಲ್ಗೆ ||
(ವೆಬ್‌ದುನಿಯಾದಲ್ಲಿ ಪ್ರಕಟಿತ)

ರಾಜ್ಯ ಬಿಜೆಪಿಗೂ ಜಾಡ್ಯ: ಪ್ರವಾಹದಲ್ಲಿ ಸಿಲುಕಿದ ಕಮಲ

ಅಧಿಕಾರದ ಮದ ಅಂತೀರೋ ಅಥವಾ ಅಧಿಕಾರ ಚಲಾಯಿಸಲು ಅನುಭವ ಸಾಲದು ಅಂತೀರೋ… ಇಲ್ಲಾ ಅಧಿಕಾರದ ಅಮಲು ಅಂತೀರೋ… ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕೇಸರಿ ಧ್ವಜ ಊರಿದಾಗ, ಹೊಸ ಶಕೆ ಆರಂಭವಾಗುತ್ತದೆ, 60 ವರ್ಷಗಳಿಂದ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯ ಸರಿಯಾಗಬಹುದು ಎಂಬ ಮತದಾರರ ನಿರೀಕ್ಷೆ ಹುಸಿಯಾಗತೊಡಗಿದೆ. ಅಧಿಕಾರವೇರಿದ್ದ ಬಿಜೆಪಿ ಮಂದಿಗೆ ಅಧಿಕಾರವೇ ಶಾಪವಾಗುತ್ತಿದೆ ಮತ್ತು ಪಕ್ಷವನ್ನು ದುರಸ್ತಿ ಮಾಡುವ ಕೆಲಸದಲ್ಲಿ ಅವರಿಗೆ ರಾಜ್ಯದ ಹಿತ ಕಾಯಲು ಸಮಯ ಸಿಗುವಂತೆ ತೋರುತ್ತಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸಂಚು, ನಾಯಕತ್ವ ಬದಲಾವಣೆಯ ತಂತ್ರ, ದಿನಕ್ಕೊಂದು ಹೇಳಿಕೆ, ಮರುದಿನವೇ ನಿರಾಕರಣೆ, ಭಿನ್ನ ಮತ ಇದೆ ಎಂದು ಒಂದು ಕಡೆ, ಮತ್ತೊಂದೆಡೆ ಭಿನ್ನಮತವೇನಿಲ್ಲ ಎಂಬ ಸಮಜಾಯಿಷಿಗಳು, ಇಪ್ಪತ್ತನಾಲ್ಕು ಗಂಟೆ ಕರೆಂಟು ಕೊಡ್ತೀವಿ ಅಂತ ಹೇಳಿದ ಮರು ದಿನವೇ ಜನ ಕರೆಂಟಿಲ್ಲದೆ ಪರದಾಟ. ಇದು ಕರ್ನಾಟಕ ರಾಜಕೀಯದ ಸದ್ಯದ ಚಿತ್ರಣ.

ರಾಷ್ಟ್ರ ಮಟ್ಟದಲ್ಲಿಯೇ ಬಿಜೆಪಿ ಪರಿಸ್ಥಿತಿ ಅಯೋಮಯ. ಲೋಕಸಭೆ ಚುನಾವಣೆಯಿಂದಾರಭ್ಯ ಇತ್ತೀಚೆಗಿನ ಚುನಾವಣೆಗಳಲ್ಲೂ ಅದು ಎದ್ದು ಕಂಡಿದೆ. ಇದಕ್ಕೇ ಇರಬೇಕು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿರುವುದು – ಬಿಜೆಪಿಗೆ ಸರ್ಜರಿ ಮಾತ್ರವಲ್ಲ, ಕೀಮೋ ಥೆರಪಿಯೇ ಬೇಕಾಗಬಹುದು ಅಂತ. ಒಟ್ಟಿನಲ್ಲಿ ಆಂತರಿಕ ಗೊಂದಲಗಳು, ವ್ಯಕ್ತಿ ಪ್ರತಿಷ್ಠೆ… ಇವೆಲ್ಲವೂ ಬಿಜೆಪಿಯ ಅಸ್ತಿತ್ವಕ್ಕೇ ಕೊಡಲಿಯೇಟು ಹಾಕುತ್ತಿದೆ ಎಂಬ ಅಂಶದಿಂದ ರಾಜ್ಯ ಮುಖಂಡರು ಕೂಡ ಪಾಠ ಕಲಿತಿಲ್ಲ.

ಹೀಗಾಗಿಯೇ ಕೆಸರೆರಚಾಟ ನಡೆಯುತ್ತಲೇ ಇದೆ. ಇದೀಗ ಎರಚಾಡಿಕೊಳ್ಳುತ್ತಿರುವ ಕೆಸರಿನಲ್ಲಿಯೇ ಇರುವ ಕಮಲ, ರಾಜ್ಯದಲ್ಲಿಯೂ ಮುದುಡುವ ಲಕ್ಷಣಗಳು ದಟ್ಟವಾಗತೊಡಗಿದೆ. ರಾಷ್ಟ್ರೀಯ ಬಿಜೆಪಿಯ ವೈರಸ್ ರಾಜ್ಯ ಬಿಜೆಪಿಗೂ ತಗುಲಿದಂತಿದೆ.

ಅಭಿವೃದ್ಧಿಯೇ ಮೂಲಮಂತ್ರ ಎಂದು ಹೇಳುತ್ತಾ ಮುಖ್ಯಮಂತ್ರಿ ಯಡಿಯೂರಪ್ಪ ಆತ್ಮವಿಶ್ವಾಸದಲ್ಲಿಯೇ ಈ 17 ತಿಂಗಳು ಆಡಳಿತ ಮಾಡುತ್ತಿದ್ದರು. ನಾನು ಪ್ರಾಮಾಣಿಕವಾಗಿದ್ದೇನೆ, ಹೀಗಾಗಿ ಯಾರೇನೇ ಹೇಳಿದರೂ ಕೇರ್ ಮಾಡಲ್ಲ, ತಪ್ಪು ಆಗುವುದು ಸಾಧ್ಯವೇ ಇಲ್ಲ ಎಂಬಂತಹ ಮನೋಭಾವ ಯಡಿಯೂರಪ್ಪರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಅದಕ್ಕೆ ಉದಾಹರಣೆ, ಇತ್ತೀಚೆಗೆ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಟಿವಿ ಚಾನೆಲ್‌ಗಳ ಲೈವ್ ಕಾರ್ಯಕ್ರಮದಲ್ಲಿ, ಅನ್ಯಾಯವಾಗಿರುವುದರ ಕುರಿತು ದೂರುಗಳು ಬಂದಾಗ ಅವರು ಉತ್ತರಿಸುತ್ತಿದ್ದ ರೀತಿ. ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ, ವಾರದೊಳಗೆ ಫಲಿತಾಂಶ ಬಾರದಿದ್ದಲ್ಲಿ ನೋಡಿ ಅಂತ ಸವಾಲು ಕೂಡ ಹಾಕಿದ್ದರವರು. ಪತ್ರಿಕಾ ಗೋಷ್ಠಿಗಳಲ್ಲೂ ಇಂಥ ಆತ್ಮವಿಶ್ವಾಸದ ಮಾತುಗಳೇ ಕೇಳಿಬರುತ್ತಿದ್ದವು. ಇಂತಿಪ್ಪ ಯಡಿಯೂರಪ್ಪ ಈಗ ಕಂಗೆಟ್ಟಿದ್ದಾರೆ, ಮನದೊಳಗೆ ಅಳುಕಿದೆ, ಹತಾಶೆಯೂ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿದೆ.

ಭಿನ್ನಮತ ಇಲ್ಲವೆಂದಿಲ್ಲ, ಇದೆ, ಚರ್ಚಿಸಿ ಪರಿಹಾರ ಕೈಗೊಳ್ಳಬೇಕಾಗಿದೆ ಎನ್ನುತ್ತಿದ್ದಾರೆ. ಒಂದು ಕಾರ್ಯಕ್ರಮದಲ್ಲಂತೂ, ಒಳ್ಳೆಯ ಕೆಲಸ ಮಾಡುವುದು ಅಪರಾಧವೇ? ಪ್ರಾಮಾಣಿಕವಾಗಿರುವುದು ತಪ್ಪೇ ಎಂದು ಹೇಳಿಕೊಂಡು ಹತಾಶೆಯನ್ನೂ ಪ್ರದರ್ಶಿಸಿದ್ದರು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತರಿಗೆ ನೆರವು ವಿತರಣೆಯ ನಿಟ್ಟಿನಲ್ಲಿ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂಬ ಮಾತೂ ಅವರ ಬಾಯಿಂದಲೇ ಬಂದಿದೆ.

ನೆರೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ, ಸರಕಾರವನ್ನು ಬೈಪಾಸ್ ಮಾಡಿ, ನಾವೇ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂಬ ಕ್ರಮಕ್ಕೆ ಅಡ್ಡಿ ಮತ್ತು ಅದಿರು ಲಾರಿಗಳಿಗೆ ಸುಂಕ ಹೇರುವ ನಿರ್ಧಾರಗಳಿಂದಾಗಿ, ಸರಕಾರಕ್ಕೆ ‘ಆಪರೇಶನ್ ಕಮಲ’ ಮೂಲಕ ರಾಶಿ ರಾಶಿ ಎಂಎಲ್ಲೆಗಳನ್ನು ತಂದು ಹಾಕಿದ ರೆಡ್ಡಿ ಸಹೋದರರು ಕೆಂಗಣ್ಣು ಬೀರಿದ್ದಾರೆ. ಸರಕಾರದ ಉಳಿವಿಗೆ ತಮ್ಮೆಲ್ಲಾ ರೀತಿಯ ‘ಬಲ’ಗಳನ್ನು ಒಟ್ಟುಗೂಡಿಸಿದ್ದ ರೆಡ್ಡಿ ಸಹೋದರರ ಹಂಗಿನಲ್ಲಿದ್ದಾರೆ ಯಡಿಯೂರಪ್ಪ. ಏನೂ ಮಾಡಲಾರದ ಸ್ಥಿತಿ.

ಅದಿರು ಲಾರಿಗಳಿಗೆ ಹೆಚ್ಚುವರಿ ಸುಂಕ ಹೇರುವ ನಿರ್ಧಾರ ಜನಹಿತದ ದೃಷ್ಟಿಯಿಂದ ಸಂಪೂರ್ಣ ಸ್ವಾಗತಾರ್ಹ. ಯಾಕೆಂದರೆ, ಈ ಯಮಸದೃಶ ಲಾರಿಗಳು ಹೆದ್ದಾರಿಯಲ್ಲಿ ಮಾಡುವ ಅವಾಂತರ, ಅವಘಡಗಳು ಒಂದೇ ಎರಡೆ? ರಾಜ್ಯದ ರಸ್ತೆಗಳಂತೂ ಗಬ್ಬೆದ್ದು ಹೋಗಿದ್ದೇ ಈ ಭಾರದ ಅದಿರು ಲಾರಿಗಳಿಂದ. ಹೀಗಿರುವಾಗ ಆ ರಸ್ತೆಗಳ ಸುಧಾರಣೆಗೆ ಅದಿರು ಲಾರಿಗಳನ್ನೇ ಆಶ್ರಯಿಸಬೇಕಾದ್ದು ಸರಿ.

ಗಣಿ ಧಣಿಗಳೆಂದೇ ಖ್ಯಾತರಾಗಿರುವ ಶ್ರೀರಾಮುಲು, ಕಂದಾಯ ಸಚಿವ ಕರುಣಾಕರ ರೆಡ್ಡಿ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಇವರೆಲ್ಲರೂ ಸರಕಾರಕ್ಕೇ, ಮತ್ತು ವಿಶೇಷವಾಗಿ ಮುಖ್ಯಮಂತ್ರಿಗೇ ಸವಾಲೊಡ್ಡಿ, ತಾವೇ ಪರ್ಯಾಯ ಸರಕಾರವೆಂಬಂತೆ ನೆರೆ ಸಂತ್ರಸ್ತರಿಗೆ 500 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ಮನೆ ನಿರ್ಮಿಸಿಕೊಡುವ ಯೋಜನೆಗೆ ಚಾಲನೆ ನೀಡಿಯೇ ಸಿದ್ಧ ಎಂದು ಬಹಿರಂಗವಾಗಿ ತೊಡೆ ತಟ್ಟಿದ್ದಾರೆ. ಇದಕ್ಕೆ ಸಚಿವರಾದ ಗೂಳಿಹಟ್ಟಿ ಶೇಖರ್, ಆನಂದ ಅಸ್ನೋಟಿಕರ್, ಬಾಲಚಂದ್ರ ಚಾರಕಹೊಳಿ, ಶಿವನಗೌಡ ನಾಯಕ ಮತ್ತು ಶಿವರಾಜ್ ತಂಗಡಗಿ ದನಿಗೂಡಿಸಿದ್ದಾರೆ. ಇದು ಸರಕಾರದ ಕೆಲಸ. ಹೀಗಾಗಿ ಎಲ್ಲರೂ ಒಟ್ಟಾಗಿ ಮಾಡೋಣ ಎಂಬ ಮುಖ್ಯಮಂತ್ರಿ ಮಾತಿಗೆ ಬೆಲೆ ಕೊಡಲು ಅವರು ಸಿದ್ಧರಿಲ್ಲ. ತಮಗೆ ಬರುವ ಹೆಸರನ್ನು, ಖ್ಯಾತಿಯನ್ನು ತಗ್ಗಿಸಲು ಸಿಎಂ ಯತ್ನಿಸುತ್ತಿದ್ದಾರೆ ಎಂಬುದು ರೆಡ್ಡಿ ಸಹೋದರರ ಅಭಿಮತ. ಈ ಕಾರಣಕ್ಕೆ ಪಕ್ಷದಲ್ಲಿ, ಸರಕಾರದಲ್ಲಿ ಒಡಕು.

ಮತ್ತೊಂದೆಡೆ ರೇಣುಕಾಚಾರ್ಯ ಅವರ ನೇತೃತ್ವದ ಪುಟ್ಟ ಗಡಣವೊಂದು ಬೇರೆಯೇ ಮುಚ್ಚಿದ ಬಾಗಿಲ ಸಭೆ ನಡೆಸಿದೆ. ಹೊರಗೆ ಬಂದ ಮೇಲೆ ‘ಇಲ್ಲ, ಇಲ್ಲ, ಭಿನ್ನಮತ ಇಲ್ಲ’ ಎಂಬ ಸಮಜಾಯಿಷಿ. ಒಟ್ಟಿನಲ್ಲಿ ಬಿಜೆಪಿಯ ಪವರ್ ಸೆಂಟರ್ ಗೊಂದಲದ ಗೂಡಾಗಿದೆ. ಯಾರು ಯಾರ ಪರ ಎಂಬುದೇ ಗೊತ್ತಾಗುತ್ತಿಲ್ಲ. ಅಲ್ಲಲ್ಲಿ ಮುಚ್ಚಿದ ಬಾಗಿಲ ಸಭೆಯೂ ಸಂಧಾನ ಸಭೆಗಳೂ ನಡೆಯುತ್ತಿವೆ. ಹೊರಗೆ ಬಂದಾಗ ‘ಏನೂ ಇಲ್ಲ, ಇದು ಮಾಮೂಲಿ ಸಭೆ’ ಎಂಬುದೇ ಉತ್ತರ. ನಡು ನಡುವೆ, ಈಗಾಗಲೇ ಭಿನ್ನಮತದ ಕಹಳೆಯೂದಿದ್ದ ಜಗದೀಶ್ ಶೆಟ್ಟರ್, ಈಶ್ವರಪ್ಪ ಹೆಸರುಗಳೂ, ಸಂಸದ ಅನಂತ್ ಕುಮಾರ್ ಹೆಸರುಗಳೂ ಬಂದು ಹೋಗುತ್ತಿವೆ.

ರೆಡ್ಡಿ ಸಹೋದರರು ಮತ್ತು ಇತರ ಸಚಿವ-ಶಾಸಕರ ಅಸಮಾಧಾನಕ್ಕೆ ಕಾರಣವಾದ ಮತ್ತೊಂದು ಅಂಶವೆಂದರೆ ಯಡಿಯೂರಪ್ಪ ಅವರು ಶಾಸಕರನ್ನು ನಿರ್ಲಕ್ಷಿಸುತ್ತಿದ್ದಾರೆ, ಸೂಕ್ತ ಅಧಿಕಾರ ನೀಡುತ್ತಿಲ್ಲ ಎಂಬುದು. ನೆರೆ ಸಂತ್ರಸ್ತರಿಗಾಗಿ ರಾಜ್ಯದ ಜನ ಉದಾರವಾಗಿ ದಾನ ನೀಡುತ್ತಿದ್ದಾರೆ, ಅದು ಕೋಟಿ ಕೋಟಿ ಸಂಗ್ರಹವಾಗುತ್ತಿದೆ ಎಂಬುದನ್ನು ಮತ್ತು ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಏನು ಅಂದುಕೊಳ್ಳಬಹುದು? ಎಂಬುದು ಓದುಗರಿಗೆ ಬಿಟ್ಟ ವಿಚಾರ.

ಊರು ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬಂತಾಗಿದೆ ರಾಜ್ಯದ ಜನತೆಯ ಸ್ಥಿತಿ. ರಾಜ್ಯ ಹಿಂದೆಂದೂ ಕಂಡು ಕೇಳರಿಯದ ದುರಂತಕ್ಕೆ ಈಡಾಗಿರುವಾಗ ಈ ಕ್ಷುಲ್ಲಕ ರಾಜಕೀಯದಿಂದಾಗಿ ಸರಕಾರದ ಎಲ್ಲ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ, ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ. ಜನಹಿತ ಕಾರ್ಯಗಳ ಬದಲಾಗಿ, ಪಕ್ಷ ಹಿತ ಕಾರ್ಯಕ್ಕೇ ಸಮಯ ನೀಡಬೇಕಾದ ಅನಿವಾರ್ಯತೆ ಊರಿನ ದೊರೆಗೆ.

ಈ ಪರಿಸ್ಥಿತಿಯಿರುವಾಗ, ಒಂದು ರಾಜ್ಯದ ಜನರ ರಕ್ಷಣೆಯ ಬಹುಮೂಲ್ಯ ಜವಾಬ್ದಾರಿ ಇರುವ ಮಂತ್ರಿಗಳು, ಶಾಸಕರು ಈಗಲಾದರೂ ಜನಹಿತವೇ ಪರಮಗುರಿ ಎಂದು ಬರೇ ಬಾಯಲ್ಲಿ ಹೇಳಿಕೊಂಡು ತಿರುಗುತ್ತಿರುವ ಬದಲು, ಒಂದಿನಿತು ಹೊಣೆಯರಿತು ಕೈಯಲ್ಲಿ ಮಾಡಿ ತೋರಿಸಬೇಕಾಗಿದೆ. ನೆರೆ ಸಂತ್ರಸ್ತರೆಲ್ಲರಿಗೂ ಸೂಕ್ತ ಮನೆ-ಮಠ ದಯವಿಟ್ಟು ಕಲ್ಪಿಸಿಕೊಡಿ ರಾಜಕಾರಣಿಗಳೇ… ಅದೆಷ್ಟು ಜನ ಬೀದಿಗೆ ಬಿದ್ದಿದ್ದಾರೆ, ಅದೆಷ್ಟು ಜನ ಗುಳೆ ಹೊರಟಿದ್ದಾರೆ… ಅವರಿಗೆಲ್ಲಾ ಒಂದು ಸೂರು ಅಂತ ಮಾಡಿಕೊಡಿ, ಅಷ್ಟರವರೆಗೆ ನಿಮ್ಮ ಈ ಕ್ಷುಲ್ಲಕ ರಾಜಕೀಯ ದೂರವಿಡಿ. ಉಳಿದದ್ದೆಲ್ಲಾ ಆಮೇಲೆ. ಸ್ವಾರ್ಥಕ್ಕಾಗಿ ರಾಜ್ಯದ ಅಭಿವೃದ್ಧಿ ಬಲಿಯಾಗುವುದು ಸರ್ವಥಾ ಸಲ್ಲದು ಎಂಬುದು ಗಮನಕ್ಕೆ ಬಾರದೇ ಹೋದಲ್ಲಿ ಮತದಾರರು ಕೈಯಲ್ಲಿ ತಮ್ಮ ಅಸ್ತ್ರ ಹಿಡಿದುಕೊಂಡು ಕುಳಿತಿದ್ದಾರೆ, ಮತ್ತೊಂದು ಚುನಾವಣೆ ಬರಲಿ, ಇವರಿಗೆ ಪಾಠ ಕಲಿಸುತ್ತೇವೆ ಎಂಬ ಮನೋಭಾವದೊಂದಿಗೆ!
(ವೆಬ್‌ದುನಿಯಾದಲ್ಲಿ ಪ್ರಕಟಿತ)

ನೆರೆ ಚಿತ್ರಣ: ಕರ್ನಾಟಕದ ಬಗೆಗೆ ಯಾಕೀ ಅವಜ್ಞೆ?

ಕಳೆದ ಕೆಲವಾರು ದಿನಗಳಿಂದ ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು, ರಾಷ್ಟ್ರ ಮಟ್ಟದ ಪತ್ರಿಕೆಗಳನ್ನು, ಅಂತರಜಾಲ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಹೌದು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ನೂರು ವರ್ಷಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ಅತಿವೃಷ್ಟಿ, ಪ್ರವಾಹಕ್ಕೆ ತುತ್ತಾಗಿ ಅಪಾರ ಜೀವ ಹಾನಿಯಾಗಿದೆ ಮತ್ತು ಆಸ್ತಿ ಪಾಸ್ತಿ ನಷ್ಟವಾಗಿದೆ ಎಂಬುದನ್ನು ಎಲ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಹೆಚ್ಚಿನ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದರೆ, ಕರ್ನಾಟಕದ ಸಂಕಷ್ಟವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದಂತೆ ಕಂಡು ಬರುತ್ತದೆ.

ಸಮಗ್ರ ಸುದ್ದಿಯನ್ನು ಬಿತ್ತರಿದ ಅಥವಾ ಪ್ರಕಟಿಸಿದ ಸಂದರ್ಭ, ಕರ್ನಾಟಕಕ್ಕಿಂತ ಕಡಿಮೆ ನಷ್ಟ ಅನುಭವಿಸಿದ ಆಂಧ್ರಪ್ರದೇಶವನ್ನೇ ಪ್ರಮುಖವಾಗಿರಿಸಿ ವರದಿಯಾಗಿರುವುದನ್ನು ನೀವು ಗಮನಿಸಿರಬಹುದು. ಉದಾಹರಣೆಗೆ “ಆಂಧ್ರ ಸಹಿತ ದಕ್ಷಿಣ ಭಾರತದಲ್ಲಿ ಪ್ರವಾಹ, ಭಾರೀ ಸಾವು ನೋವು” ಅಥವಾ “ಭಾರೀ ನೆರೆ: ಆಂಧ್ರ, ಕರ್ನಾಟಕ ತತ್ತರ” ಎಂಬರ್ಥದ ತಲೆಬರಹಗಳ ಮೂಲಕ ನೆರೆಯ ರಾಜ್ಯಕ್ಕೆ ಪ್ರಾಧಾನ್ಯತೆ ನೀಡಿರುವ ವರದಿ ಗಮನಿಸಿದರೆ, ಖಂಡಿತವಾಗಿ ಕನ್ನಡಿಗರ ಮನಸ್ಸಿಗೆ ನೋವಾಗದಿರದು.

ಇಲ್ಲ ಸಲ್ಲದ ಸಣ್ಣ ಪುಟ್ಟ ವಿಷಯಕ್ಕೆಲ್ಲಾ ಬ್ರೇಕಿಂಗ್ ನ್ಯೂಸ್ ಎಂಬ ಕೆಂಪು ಪರದೆ ಹಾಕಿಕೊಂಡು, ಪದೇ ಪದೇ ತೋರಿಸಿದ್ದನ್ನೇ ತೋರಿಸುತ್ತಾ, ಜನರಲ್ಲಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದ ಮಾಧ್ಯಮಗಳು, ಕರ್ನಾಟಕದ ನೆರೆ ಪೀಡಿತ ಸ್ಥಳಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದೇಕೆ ಎಂಬುದು ಅರ್ಥವಾಗದ ಸಂಗತಿ.

ಹೌದು. ಮಾನವೀಯತೆ ದೃಷ್ಟಿಯಿಂದ ನೋಡಿದರೆ, ಆಂಧ್ರದಲ್ಲಿಯೂ ಸಾಕಷ್ಟು ಸಾವು ನೋವು ಸಂಭವಿಸಿದೆ, ಅಲ್ಲಿನ ಸಂತ್ರಸ್ತರಿಗೂ ಸಾಕಷ್ಟು ನೆರವು ದೊರೆಯಬೇಕು, ಅವರೂ ನಮ್ಮ ಅಣ್ಣ ತಮ್ಮಂದಿರಲ್ಲವೇ? ಅವರಿಗೂ ಸಹಾಯದ ಅಗತ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿನ ಸಾವು ನೋವನ್ನು ಸಚಿತ್ರವಾಗಿ ವರದಿ ಮಾಡುವ ಸಂದರ್ಭದಲ್ಲಿ ಅದಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ ಕರ್ನಾಟಕವನ್ನು ಕಡೆಗಣಿಸಿರುವುದು ಮಾತ್ರ ಸರ್ವಥಾ ತಪ್ಪು.

ಪ್ರವಾಹ ಪೀಡಿತರಿಗೆ ಅಂತಾರಾಷ್ಟ್ರೀಯ ಮಟ್ಟದ ನೆರವು ದೊರೆಯುವಲ್ಲಿ ಈ ರಾಷ್ಟ್ರೀಯ ಮಟ್ಟದ, ಅಂತಾರಾಷ್ಟ್ರೀಯ ಸಹಯೋಗವಿರುವ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸುತ್ತವೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.

ಈಚೆಗೆ ನಡೆದ ಕೆಲವು ಘಟನೆಗಳು ನೆನಪಿರಬಹುದು. ಪಬ್ ಮೇಲಿನ ದಾಳಿ ಪ್ರಕರಣವಿರಲಿ, ಚರ್ಚ್ ದಾಳಿಯ ಘಟನೆಗಳಿರಲಿ, ಆ ದಿನಗಳನ್ನು ನೆನಪಿಸಿಕೊಂಡರೆ, ನಮ್ಮ ಮಾಧ್ಯಮಗಳ ಶಕ್ತಿ ಎಷ್ಟಿತ್ತೆಂಬುದು ಜಗಜ್ಜಾಹೀರಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮಾತ್ರವಲ್ಲ, ಭಾರತವನ್ನೇ ಜನರು ಸಂಶಯ ದೃಷ್ಟಿಯಿಂದ ನೋಡುವಂತಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗಳು ಕೂಡ ಹರಿದುಬಂದಿದ್ದವು. ಕರ್ನಾಟಕದ ಹೆಸರೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿತ್ತು. (ಆದರೆ ಅದು ಬೇಡವಾದ ಕಾರಣಕ್ಕೆ ಎಂಬುದು ಬೇರೆ ವಿಷಯ.)

ಈಗ ಕರ್ನಾಟಕದ ಜನರ ಸಂಕಷ್ಟಗಳನ್ನು ಕೂಡ ಅದೇ ಮಾದರಿಯಲ್ಲಿ ಬಿಂಬಿಸಬಹುದಿತ್ತಲ್ಲ? ವಿದೇಶೀ ನೆರವು ಹರಿದುಬರಲು ನೆರವಾಗಬಹುದಿತ್ತಲ್ಲ? ಸರಕಾರೇತರ ಸಂಸ್ಥೆಗಳಿಂದ ಪರಿಹಾರ ಕೇಂದ್ರಗಳು, ಪರಿಹಾರ ಸಾಮಗ್ರಿಗಳು ಸಾಕಷ್ಟು ದೊರೆಯುತ್ತಿತ್ತಲ್ಲವೇ? ನಮ್ಮ ನೊಂದು ಬೆಂದ ಕನ್ನಡಿಗರಿಗೆ ಒಂದಿಷ್ಟು ಬಟ್ಟೆ ಬರೆ, ಹೊಟ್ಟೆಗೆ ಕೂಳು, ಮತ್ತೊಂದಿನಿತು ಸಾಂತ್ವನ ದೊರೆಯುತ್ತಿತ್ತು. ಯೋಚಿಸಿ ನೋಡಿದರೆ, ಹೌದು ಅನ್ನಿಸುವುದಿಲ್ಲವೆ?

ಕೇಂದ್ರ ಸರಕಾರ ಕೂಡ ಕರ್ನಾಟಕದಲ್ಲಿ ಸಂತ್ರಸ್ತರಿಗೆ ಪರಿಹಾರ ನಿಧಿ ವಿತರಣೆಯಲ್ಲಿ ಅನ್ಯಾಯ ಮಾಡಿದೆ, ತಾರತಮ್ಯ ಎಸಗಿದೆ ಎಂಬ ಆರೋಪಗಳ ನಡುವೆಯೇ, ಇದುವರೆಗೆ ಬಿಡುಗಡೆಯಾದ ಹಣ ಹಿಂದೆ ಕಾಡಿದ ಅನಾವೃಷ್ಟಿ ಪರಿಹಾರವೇ ಹೊರತು, ಈಗಿನ ನೆರೆ ಪರಿಹಾರ ಅಲ್ಲ ಎಂದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ಇದು ಈಗ ವಿವಾದವಾಗಿ ಉಳಿದಿಲ್ಲ. ಕಳೆದ ವಾರ ಕೇಂದ್ರವು ಆಂಧ್ರಕ್ಕೆ 420 ಕೋಟಿ ರೂ., ಕರ್ನಾಟಕಕ್ಕೆ 148 ಕೋಟಿ ರೂ. ಮತ್ತು ಬುಧವಾರ ಆಂಧ್ರಕ್ಕೆ 156.84 ಕೋಟಿ, ಕರ್ನಾಟಕಕ್ಕೆ 52.26 ಕೋಟಿ ರೂ. ಬಿಡುಗಡೆಗೊಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿರುವ ಹಣವನ್ನು, ಇದೀಗ ನೆರೆ ಪರಿಹಾರಕ್ಕೂ ಉಪಯೋಗಿಸಬಹುದೆಂಬ ಕಾರಣಕ್ಕೆ ಶೀಘ್ರವಾಗಿ ಬಿಡುಗಡೆ ಮಾಡಲಾಗಿದೆ. ಅದು ನೆರೆ ಪರಿಹಾರದ್ದಲ್ಲ, ಕೆಲವು ತಿಂಗಳ ಹಿಂದೆ ಕಾಡಿದ ಬರಕ್ಕೆ ಕೇಂದ್ರದ ಪರಿಹಾರ ಎಂಬ ಕಾರಣಕ್ಕೆ ನಮಗೆ ತಾರತಮ್ಯವಾಗಿಲ್ಲ ಎಂದು ನಾವು ತೃಪ್ತಿಪಟ್ಟುಕೊಳ್ಳಬಹುದು.

ಮಾಧ್ಯಮಗಳ ಈ ರೀತಿಯ ಪ್ರಚಾರದಿಂದಾಗಿಯೋ ಏನೋ, ಕರ್ನಾಟಕವೀಗ ನಿರ್ಲಕ್ಷಿತವಾಗಿದೆ. ಆಂಧ್ರ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಸೇನಾ ಸಿಬ್ಬಂದಿ, 23 ವಿಶೇಷ ದೋಣಿಗಳು, 11 ಮೋಟಾರು ದೋಣಿ, 11 ಪರಿಹಾರ ತಂಡಗಳು ಮತ್ತು 3 ವೈದ್ಯಕೀಯ ತಂಡಗಳು ಕಾರ್ಯಾಚರಣೆಗಿಳಿದಿದ್ದರೆ, ಕರ್ನಾಟಕಕ್ಕೆ 12 ವಿಶೇಷ ದೋಣಿ, 6 ಮೋಟಾರು ದೋಣಿ, 4 ಪರಿಣತ ಈಜುಗಾರರ ತಂಡಗಳು ಸೇರಿದಂತೆ ಹಲವು ಪರಿಹಾರ ಸಾಮಾಗ್ರಿಗಳನ್ನು ಕೇಂದ್ರ ನೀಡಿದೆ.

ನಷ್ಟದ ಅಂದಾಜು: ಆರಂಭಿಕ ಅಂದಾಜಿನ ಪ್ರಕಾರ, ರಾಜ್ಯದಲ್ಲಾಗಿರುವ ನಷ್ಟದ ಪ್ರಮಾಣ ಸುಮಾರು 16,500 ಕೋಟಿ ರೂ. ರಾಜ್ಯದ 15 ಜಿಲ್ಲೆಗಳಲ್ಲಿ ಸುಮಾರು ಒಂದೂವರೆ ಸಾವಿರ ಹಳ್ಳಿಗಳು ಪ್ರವಾಹದ ಭಯಾನಕತೆಗೆ ಸಾಕ್ಷಿಯಾಗಿದ್ದು, ಸುಮಾರು 3 ಲಕ್ಷ ಮನೆಗಳು ಪೂರ್ಣ ಅಥವಾ ಭಾಗಶಃ ಹಾನಿಗೀಡಾಗಿವೆ. 25 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ. ಸೇತುವೆಗಳು, ಕುಡಿಯುವ ನೀರಿನ ಟ್ಯಾಂಕುಗಳು, ವಿದ್ಯುತ್ ವಿತರಣೆ ಮುಂತಾದ ಮೂಲಸೌಕರ್ಯಗಳೆಲ್ಲವೂ ಬಹುವಾಗಿ ಹಾನಿಗೀಡಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 205 ದಾಟಿದೆ. ಅಂದಾಜು 20 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ನಷ್ಟದ ಅಂದಾಜು ಸುಮಾರು 16,500 ಕೋಟಿ ರೂ.

ಆಂಧ್ರದಲ್ಲಾದ ಹಾನಿಯ ಬಗ್ಗೆ ಗಮನ ಹರಿಸಿದರೆ, 5 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, 70ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಒಟ್ಟು 500ರಷ್ಟು ಹಳ್ಳಿಗಳು ಬಾಧೆಗೀಡಾಗಿವೆ. ಸುಮಾರು 15 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ನಷ್ಟದ ಅಂದಾಜು 12 ಸಾವಿರ ಕೋಟಿ ರೂ.

ಇನ್ನು, ನೆರೆ ಬಂದಾಗ ಪ್ರಧಾನಿ ಮತ್ತು ಕೇಂದ್ರದ ಸಚಿವರು ವೈಮಾನಿಕ ಸಮೀಕ್ಷೆ ನಡೆಸುವುದು ರೂಢಿ. ಆದರೆ, ಇದರಲ್ಲಿಯೂ ಮೊದಲು ಆಂಧ್ರ ಪ್ರದೇಶಕ್ಕೆ, ಆ ಬಳಿಕ ಕರ್ನಾಟಕಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಗೃಹ ಸಚಿವ ಚಿದಂಬರಂ ಮಾಡಿದ್ದೂ ಅದನ್ನೇ. ಅವಸರವಸರವಾಗಿ ಆಂಧ್ರದ ಎಲ್ಲ 5 ನೆರೆ ಪೀಡಿತ ಜಿಲ್ಲೆಗಳ ಸಮೀಕ್ಷೆ ನಡೆಸಿದ್ದ ಅವರು, ಕರ್ನಾಟಕದಲ್ಲಿ ಎರಡು ಜಿಲ್ಲೆಗಳಿಗೆ ಮಾತ್ರವೇ ಭೇಟಿ ನೀಡಿ, ಚುನಾವಣೆ ನಡೆಯುತ್ತಿರುವ ಮಹಾರಾಷ್ಟ್ರಕ್ಕೆ ಧಾವಿಸಿದ್ದರು.

ಇಷ್ಟು ಮಾತ್ರವಲ್ಲದೆ, ಈ ಪರಿ ಸಾವು-ನೋವು-ನಾಶ-ನಷ್ಟ ಸಂಭವಿಸಿದ್ದರೂ ಪ್ರಧಾನಮಂತ್ರಿಯವರ ಸಮೀಕ್ಷಾ ಕಾರ್ಯಕ್ರಮ ಮುಂದೂಡಲಾಗಿದೆ. ಅವರು ಹರ್ಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮದ ಪ್ರಕಾರ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಮೊದಲು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ, ಸಂಜೆ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸರ್ವೇಕ್ಷಣೆ ನಡೆಸಲಿದ್ದಾರೆ.

ಈ ಸಣ್ಣ ಪುಟ್ಟ ವಿಷಯಗಳೆಲ್ಲವೂ ಜನರ ಮನಸ್ಸಿನಲ್ಲಿ ‘ಆಂಧ್ರಕ್ಕೆ ಪ್ರಾಧಾನ್ಯತೆ’ ನೀಡಲಾಗುತ್ತಿದೆ ಎಂಬ ಭಾವನೆ ಬರಲು ಕಾರಣವಾಗುತ್ತಿದೆ.

ಇದನ್ನು ತಪ್ಪಿಸಬಹುದಾಗಿತ್ತಲ್ಲವೇ? ಮತ್ತು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಪ್ರಯತ್ನಕ್ಕೆ ರಾಜಕೀಯ ರಹಿತವಾಗಿ ಚಿಂತಿಸಿ ಕೈಜೋಡಿಸಬಹುದಿತ್ತಲ್ಲವೇ?

ಇನ್ನು ಪ್ರಾದೇಶಿಕ ಮಾಧ್ಯಮಗಳ ಬಗ್ಗೆ ಹೇಳಲೇಬೇಕು. ಆಂಧ್ರ ಮತ್ತು ತಮಿಳುನಾಡು ಮೂಲದ ಟಿವಿ ವಾಹಿನಿಗಳಾದರೂ, ಅವರವರ ಕನ್ನಡ ಚಾನೆಲ್‌ನಲ್ಲಿ ಕರ್ನಾಟಕಕ್ಕೇ ಪ್ರಾಧಾನ್ಯತೆ ನೀಡಿದ್ದವು ಎಂಬುದು ಮೆಚ್ಚುವ ಸಂಗತಿ. ಆದರೆ ಇದೇ ಧ್ವನಿ ಆಂಗ್ಲ ಚಾನೆಲ್‌ಗಳಲ್ಲಿಯೂ ಬಿತ್ತರವಾಗಿದ್ದಿದ್ದರೆ ಅದಕ್ಕೊಂದು ತೂಕ ಬರುತ್ತಿತ್ತು. ಶತಮಾನದಲ್ಲೇ ಅತ್ಯಂತ ಭೀಕರ ಎಂದು ಪರಿಗಣಿಸಲ್ಪಟ್ಟಿರುವ ಈ ಪ್ರಕೃತಿ ವಿಕೋಪವನ್ನು ನಿಭಾಯಿಸಲು ಕನ್ನಡಿಗರಿಗೆ ಶಕ್ತಿ ದೊರೆಯುತ್ತಿತ್ತು.
[ವೆಬ್‌ದುನಿಯಾದಲ್ಲಿ ಪ್ರಕಟಿತ]

ವಿರೋಧ ಪಕ್ಷವಾಗೋದು ಬೇಡ, ಪ್ರತಿ-ಪಕ್ಷವಾಗಿ!

ಜನ ಸಾಮಾನ್ಯರು ಬಹುಶಃ ರಾಜಕೀಯ ಅನ್ನುವುದನ್ನು ಅರ್ಥೈಸಿಕೊಂಡಿದ್ದೇ ಹೀಗೆ: ಹೊಲಸು, ಗಬ್ಬೆದ್ದು ಹೋದ, ನಾತ ಬೀರುತ್ತಿರುವ ರಾಜಕೀಯ ಮತ್ತು ಇಲ್ಲಿ ಸಭ್ಯರಿಗೆ ಪ್ರವೇಶ ಇಲ್ಲ, ಸಲ್ಲ. ಅದನ್ನೇ ಶಿಷ್ಟ ಭಾಷೆಯಲ್ಲಿ ಹೇಳಬಹುದಾದರೆ ಬೇಜವಾಬ್ದಾರಿ ಜನಪ್ರತಿನಿಧಿಗಳು ಲಂಗುಲಗಾಮಿಲ್ಲದ ನಾಲಿಗೆ ಹರಿಯಬಿಡುವ ಉದ್ಯೋಗ ತಾಣ.

ಹೌದೇ? ಈ ನಮ್ಮನ್ನಾಳುವವರ ಬಾಯಲ್ಲಿ ಕಳೆದೊಂದು ವಾರದಿಂದ ಏನೆಲ್ಲಾ ಪವಿತ್ರ ಶಬ್ದಗಳು ಹೊರಬರುತ್ತಿವೆ ಎಂಬುದನ್ನು ಗಮನಿಸಿದರೆ ಇವರ ವಾದದಲ್ಲಿ ಹುರುಳಿಲ್ಲದಿಲ್ಲ ಎಂಬುದಂತೂ ಮನಸ್ಸಿಗೆ ನಾಟುತ್ತದೆ.

ತಮ್ಮೆಲ್ಲಾ ನಡೆ-ನುಡಿಗಳನ್ನು ತಮ್ಮನ್ನಾರಿಸಿ ಕಳುಹಿಸಿದವರು ಗಮನಿಸುತ್ತಿರುತ್ತಾರೆ ಎಂಬುದನ್ನು ಒಂದಿನಿತು ಯೋಚಿಸುವ ವ್ಯವಧಾನವೂ ಇಲ್ಲವೇ? ಅಥವಾ ಅಧಿಕಾರವಿಲ್ಲದೆ ಒಂದರೆಕ್ಷಣವೂ ಇರಲಾಗದ ಚಡಪಡಿಕೆಯೇ ಇದು? ಇಂತಹ ಅಸಹನೆ ಯಾಕೆ? “ರ‌್ಯಾಸ್ಕಲ್ ಸರಕಾರ, ಚಪ್ಪಲಿಯಲ್ಲಿ ಹೊಡೀಬೇಕು, ಆತ ನಾಲಾಯಕ್, ನಾಲಿಗೆ ಬಿಗಿ ಹಿಡಿದು ಮಾತಾಡಿ, ಸುಳ್ಳುಗಳ ಮಹಾರಾಜ, ಸರಕಾರವೇನು ಅವರಪ್ಪಂದಾ?, ದೇಶ ಕಂಡ ಅತಿ ದುರ್ಬಲ ಮುಖ್ಯಮಂತ್ರಿ, ಪಾಪದ ಕೊಡ ತುಂಬಿದೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ (ವಾಸ್ತವಿಕವಾಗಿ ಹುಚ್ಚ ಎಂದೇ ಅರ್ಥ!)” ಅಬ್ಬಬ್ಬಾ…. ಎಂತೆಂತಹಾ ಅಲಂಕಾರಿಕ ಪದಗಳು! ನಾಚಿಕೆಯಾಗಬೇಕು.

ಅದು ಬಿಡಿ, ನಮ್ಮ ನಾಡಿಗೆ ನಾಡೇ ಹೆಮ್ಮೆ ಪಡುವ ವಿಶ್ವವಿಖ್ಯಾತ ಮೈಸೂರು ದಸರಾ ನಡೀತಿದೆ. ನಮ್ಮದೇ ನಾಡ ಹಬ್ಬ. ನಮಗೆ ನಾವೇ ಹೆಮ್ಮೆ ಪಡಬೇಕಾದ ರಾಜ್ಯದ ಹಬ್ಬದಲ್ಲಿ ಭಾಗವಹಿಸದ ಪ್ರತಿಪಕ್ಷದವರದು ಎಂಥಾ ರಾಜಕೀಯ?

ಹಾಗಿದ್ದರೆ ರಾಜ್ಯದ ರಾಜಕೀಯ ಎತ್ತ ಸಾಗುತ್ತಿದೆ? ಕಾಂಗ್ರೆಸ್ ಅಥವಾ ಜನತಾ ದಳ ಆಳ್ವಿಕೆಯ ಅವಧಿಯತ್ತ ಒಂದೊಮ್ಮೆ ಪೂರ್ವಗ್ರಹವಿಲ್ಲದೆ ಕಣ್ಣೋಟ ಹರಿಸಿ ನೋಡಿದರೆ, ಆಗಲೂ ಜನರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ ಎಂಬುದು ಪ್ರತಿಯೊಬ್ಬ ಜನ ಸಾಮಾನ್ಯ ಒಪ್ಪಿಕೊಳ್ಳಬಹುದಾದ ಸತ್ಯ.

ಕಾರಣವಿಷ್ಟೆ. ಇಲ್ಲಿನ ರಾಜಕಾರಣಿಗಳು ಬರೇ ಮೇಲೆ ಹೇಳಿರುವ ವ್ಯಾಖ್ಯಾನವಿರುವ ‘ರಾಜಕೀಯ’ ಮಾಡುತ್ತಾರೆಯೇ ಹೊರತು, ಯಾರಿಗೂ ಕೂಡ ರಾಜ್ಯದ ಹಿತ, ಜನರ ಏಳಿಗೆಯ ಬಗ್ಗೆ ಕಾಳಜಿಗಾಗಿ ಇರುವ ರಾಜಕೀಯದ ಪರಿಚಯ ಇಲ್ಲ.

ದಕ್ಷಿಣದ ರಾಜ್ಯದಲ್ಲಿ ಬಿಜೆಪಿ ನೆಲೆಯೂರಿದ್ದಕ್ಕೆ ಒಳಗಿನ ಅಸಹನೆ ಹತ್ತಿಕ್ಕಲಾಗುತ್ತಿಲ್ಲ. ಅದಕ್ಕೆ ತಮ್ಮೊಳಗಿನ ಯಾದವೀ ಕಲಹವೇ ಕಾರಣ ಎಂಬುದರ ಅರಿವೂ ಈ ವಿಪಕ್ಷಗಳಿಗಿಲ್ಲ. ಹೀಗಾಗಿ, ಸರಕಾರಕ್ಕೆ ಕಳಂಕ ತರಬೇಕು ಎಂಬ ಹತಾಶೆಯ ಪ್ರದರ್ಶನವಿದು ಎಂದೇ ಹೇಳಬಹುದು.

ಈ ಹಠವನ್ನು, ಈ ಹತಾಶೆಯನ್ನು, ಈ ಆಕ್ರೋಶವನ್ನು, ಅಸಹನೆಯನ್ನು ರಚನಾತ್ಮಕ ದಿಕ್ಕಿಗೆ ತಿರುಗಿಸಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರಕಾರದಿಂದ ರಾಶಿಗಟ್ಟಲೆ ಅನುದಾನಗಳನ್ನು ರಾಜ್ಯದ ಅಭಿವೃದ್ಧಿಗಾಗಿ ಹರಿದುಬರುವಂತೆ ಒತ್ತಡ ಹೇರಿ ನೋಡಲಿ. ಖಂಡಿತವಾಗಿಯೂ ಬಿಜೆಪಿ ಸರಕಾರಕ್ಕೆ ಸಾಕಷ್ಟು ನಿಧಿ ಒದಗಿಸಲು ಕೇಂದ್ರೀಯ ನಾಯಕರು ಹಿಂದೆ-ಮುಂದೆ ನೋಡುತ್ತಾರೆ ಎಂಬುದು ನಿಮಗೆ ತಿಳಿದಿದೆ. ಹೀಗಾಗಿ ಬಲವಂತವಾಗಿ ನಿಧಿ ತರಿಸಿಕೊಟ್ಟರೆ, ಅದರ ಶ್ರೇಯಸ್ಸು ಕೂಡ ಪ್ರತಿಪಕ್ಷಗಳಿಗೆ ಸಲ್ಲುತ್ತದೆ. ಅದರ ಸದುಪಯೋಗವಾಗದೇ ಹೋದಾಗ ಬಿಜೆಪಿ ಸರಕಾರದ ಕುತ್ತಿಗೆ ಪಟ್ಟಿ ಹಿಡಿಯಬಹುದು. ಇಂಥ ರಾಜಕೀಯವಿರಲಿ. ಜನರಿಗೂ ಒಳಿತು, ಪ್ರತಿಪಕ್ಷಗಳಿಗೂ ಹೆಮ್ಮೆ.

ಇದು ಬಿಟ್ಟು, ಯಾವ್ಯಾವುದೋ ನೆಪ ಮುಂದಿಟ್ಟುಕೊಂಡು, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಗೌರವಾನ್ವಿತ ರಾಜ್ಯಪಾಲರ ಮೂಲಕ ಹೇಳಿಕೆ ಕೊಡಿಸಿ, ‘ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದೆ, ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ’ ಎನ್ನುತ್ತಾ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ… ಇದೆಲ್ಲ ಯಾತಕ್ಕೆ? ಪ್ರತಿಭಟನೆ ಮಾಡಿ, ಅಲ್ಲಲ್ಲಿ ಸಭೆಗಳನ್ನು ಆಯೋಜಿಸಿ, ಜನರನ್ನು ಸೇರಿಸಿ, ಯಾತಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ಬಿಜೆಪಿ ಸರಕಾರದಿಂದ ಏನು ಅನ್ಯಾಯ ಆಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಆಂದೋಲನ ನಡೆಯಲಿ. ಆದರೆ, ಇಂತಹ, ಸುದ್ದಿಗಾಗಿ ಸದ್ದು ಮಾಡುವ ತಂತ್ರಗಳ ಮೂಲಕ, ಆ ಮೂಲಕ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಭಾವನೆ ಬರುವಂತೆ ಮಾಡುವ ತಂತ್ರಗಳು ಅರ್ಥಹೀನ. ಇವರು ಆಡುವ ಒಂದೊಂದು ಮಾತು ಕೂಡ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂಬ ಪರಿಜ್ಞಾನವೂ ಇಲ್ಲದಿದ್ದರೆ ಹೇಗೆ? ಇಷ್ಟೊಂದು ದಶಕಗಳಿಂದ ಇವರು ರಾಜಕೀಯದಲ್ಲಿದ್ದು ಸಾಧಿಸಿದ್ದಾದರೂ ಏನನ್ನು? ಈ ರೀತಿ ಅಸಭ್ಯ ಟೀಕೆ ಮಾಡುವುದನ್ನೇ? ಎಂದೇ ಪ್ರಶ್ನಿಸಬೇಕಾಗುತ್ತದೆ.

ಇನ್ನೊಂದು ವಿದ್ಯಮಾನ ಗಮನಿಸಿ. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವೇ ಹಲವಾರು ವರ್ಷಗಳ ಹಿಂದೆ ಜಾರಿಗೆ ತಂದಿರುವ ನೀತಿಯಾಗಿರುವ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಿದರೆ, ಅದು ‘ಸಮಾಜದ ಒಂದು ವರ್ಗವನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂಬ ಆರೋಪ ಬರುತ್ತದೆ. ಅಂದರೆ ಪ್ರತಿಯೊಂದು ವಿಷಯವನ್ನೂ ಕೋಮು ಭಾವನೆಯತ್ತ ಹೊರಳಿಸುವ ಹುನ್ನಾರವಿದೆಂದು ಅರ್ಥವಾಗದೇ?

ಆಹಾರ ಧಾನ್ಯ ಬೆಲೆ ಏರಿಕೆಯಿಂದಾಗಿ ತಿನ್ನಲು ಉಣ್ಣಲು ಜನ ತ್ರಾಸ ಪಡುತ್ತಿದ್ದಾರೆ. ಈ ಬಗ್ಗೆ ಈ ವಿರೋಧ ಪಕ್ಷಗಳೇಕೆ ಪ್ರತಿಭಟಿಸುತ್ತಿಲ್ಲ? ವಿಶ್ವದ ಹಣಕಾಸು ಬಿಕ್ಕಟ್ಟಿನ ಪರಿಣಾಮ ಇಲ್ಲಿದೆಯಾದರೂ, ಅಲ್ಲಲ್ಲಿ ಅಕ್ಕಿ, ಬೇಳೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡೋ, ಅಥವಾ ಪಡಿತರ ವಿತರಣೆಗೆ ರವಾನೆಯಾಗುವ ಆಹಾರವಸ್ತುಗಳ ಕಳ್ಳ ದಂಧೆಯೋ…. ಇತ್ಯಾದಿಗಳ ಮೂಲಕವೂ ‘ನಕಲಿ ಕೊರತೆ’ ಸೃಷ್ಟಿ ಮಾಡಿ, ಬೆಲೆ ಏರಿಕೆಯ ಬಿಸಿಗೆ ತುಪ್ಪ ಸುರಿಯಲಾಗುತ್ತಿದೆ. ಇದರ ಬಗ್ಗೆ ಹೋರಾಟ ಮಾಡಿದರೆ, ಜನ ಕೂಡ ಮೆಚ್ಚುತ್ತಾರೆ, ಪಕ್ಷಭೇದವಿಲ್ಲದೆ ಬೆಂಬಲವನ್ನೂ ಕೊಡಬಹುದು. ಮಂತ್ರಿಗಳು, ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ ಎನ್ನುವುದರ ಬಗ್ಗೆ ಪ್ರತಿಭಟಿಸಬಹುದಲ್ಲ… ಇನ್ನೊಂದೆಡೆ, ಹಂದಿ ಜ್ವರವು ದೇಶದಲ್ಲೇ ಅತೀ ಹೆಚ್ಚು ಬಲಿ ತೆಗೆದುಕೊಂಡದ್ದು ಬೆಂಗಳೂರಿನಲ್ಲಿ. ಅದಕ್ಕೇನು ಕ್ರಮ ಕೈಗೊಳ್ಳಲಾಗಿದೆ? ಸರಕಾರ ಎಲ್ಲಿ ಎಡವಿದೆ ಅಂತ ಕೂಗೆಬ್ಬಿಸಿ. ಅತ್ತ ಕಡೆ ಊರೂರಲ್ಲಿ ರಸ್ತೆಗಳು ಕುಲಗೆಟ್ಟು ಹೋಗಿವೆ, ಅದಕ್ಕೊಂದು ಪ್ರಬಲ ಪ್ರತಿಭಟನೆ ಮಾಡಿ. ಎಲ್ಲರೂ ಬೆಂಬಲಿಸುತ್ತಾರೆ.

ನಾಡಿನ ಅಭಿವೃದ್ಧಿಗೆ ಆಡಳಿತ ಪಕ್ಷಗಳು ಎಷ್ಟು ಮುಖ್ಯವೋ, ವಿರೋಧ ಪಕ್ಷಗಳಿಗೆ ಅದಕ್ಕಿಂತಲೂ ಹೆಚ್ಚು ಜವಾಬ್ದಾರಿಯಿದೆ. ಹದ್ದಿನ ಕಣ್ಣಿಟ್ಟಿರಬೇಕು ಅವುಗಳು- ಎಲ್ಲಿ ಖಜಾನೆ ಸೋರಿ ಹೋಗುತ್ತದೆ, ಎಲ್ಲೆಲ್ಲಿ ಜನರ ಬೆವರು ಸುರಿಸಿದ ಹಣ ವ್ಯಯವಾಗುತ್ತದೆ ಎಂಬುದನ್ನು ಗಮನಿಸಿ, ಸರಕಾರವನ್ನು ಸರಿದಾರಿಗೆಳೆಯುವ ಅತ್ಯಮೂಲ್ಯ ಕರ್ತವ್ಯವಿದೆ ಅವುಗಳಿಗೆ. ಆದರೆ ನಮ್ಮಲ್ಲೇನಾಗುತ್ತಿದೆ?

ರಾಜ್ಯದ ವಿರೋಧ ಪಕ್ಷಗಳು ಹೀಗಾದರೆ, ಕೇಂದ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಪ್ರಧಾನ ಪ್ರತಿಪಕ್ಷ ಬಿಜೆಪಿ ಎಂಬುದು ಹೆಸರಿಗೆ ಮಾತ್ರ. ಆಂತರಿಕ ವೈರುಧ್ಯಗಳಿಂದಾಗಿ ದೇಶದ ಆಡಳಿತ ಪಕ್ಷವನ್ನು ಸಮರ್ಥವಾಗಿ ಸರಿದಾರಿಗೆ ತರುವಲ್ಲಿ ಎಡವುತ್ತಿದೆ ಅದು. ಎಡಪಕ್ಷಗಳೇ ಒಂದಷ್ಟು ಪ್ರತಿಪಕ್ಷಗಳ ಕಾರ್ಯ ನಿಭಾಯಿಸುತ್ತಿವೆ. ಜನಪರ ವಿಷಯಗಳಿಗಾಗಿಯಾದರೂ ಅವುಗಳು ಆವಾಗಾವಾಗ ಎದ್ದು ನಿಲ್ಲುತ್ತವೆ.

ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ಆಡಳಿತ ಯಂತ್ರವು ಹಳಿ ತಪ್ಪಿದರೂ, ಅದನ್ನು ಸರಿದಾರಿಗೆ ತರುವ ಮನೋಭಾವ ವಿರೋಧ ಪಕ್ಷಗಳಿಗೆ ಇರುವುದಿಲ್ಲ, ಬದಲಾಗಿ ಕಾಲೆಳೆಯುವುದೇ ಪ್ರಮುಖ ಉದ್ದೇಶ ಎಂಬಂತಹ ಮನಸ್ಥಿತಿ ಇರುವುದು ಬೇಸರದ ವಿಷಯ.

ಜನಪ್ರತಿನಿಧಿಗಳು ನಮ್ಮ ನಾಯಕರು. ಭವಿಷ್ಯದ ನಾಯಕರೆಂದು ಪರಿಗಣಿಸಲ್ಪಟ್ಟಿರುವ ನಮ್ಮ ಮಕ್ಕಳು ಅವರನ್ನು ಅನುಸರಿಸುತ್ತಾರೆ. ಆದರೆ ಹೀಗಾದರೆ ಹೇಗೆ?
ಕರ್ನಾಟಕದ ಜನರ ತೆರಿಗೆ ಹಣದಿಂದ ಅವರಿಗೆ ವೇತನ ಕೊಡುವುದು ರಾಜ್ಯದ ಅಭಿವೃದ್ಧಿಗಾಗಿಯೇ ಅಲ್ಲವೇ? ‘ರಾಜಕೀಯ’ ಮಾಡಬೇಕಾದಲ್ಲಿ ಮಾಡಬೇಕು. ಆದರೆ ಅದು ರಚನಾತ್ಮಕವಾಗಿರಬೇಕು. ಹೀಗಾಗಿ ಬರೇ ರಾಜಕೀಯಕ್ಕಾಗಿ ರಾಜಕೀಯ ಬೇಡ, ವಿರೋಧಿಸಲೆಂದೇ ರಾಜಕೀಯ ಬೇಡ. ಜನರ ಹಿತ ಗಮನದಲ್ಲಿರಲಿ. ವಿರೋಧಿಸಲೆಂದೇ ಇರುವವರು ವಿರೋಧ ಪಕ್ಷದವರೇ? ಹೀಗಾಗಬಾರದು. ಅವರು ವಿರೋಧಿಗಳಲ್ಲ, ಆಡಳಿತ ಪಕ್ಷಕ್ಕೆ ಸಮರ್ಥವಾದ ಪ್ರತಿಪಕ್ಷವಾಗಬೇಕು. ರಚನಾತ್ಮಕ ಟೀಕೆಯಿರಬೇಕು. ವ್ಯಕ್ತಿಗತ, ಪಕ್ಷಗತವಾದ ಬದ್ಧತೆಗಳನ್ನು ಮೀರಿ ಕರ್ನಾಟಕದ ಪರಿಪೂರ್ಣ ಅಭಿವೃದ್ಧಿಯೇ ಮೂಲ ಮಂತ್ರವಾದಲ್ಲಿ ಜನ ಸಾಮಾನ್ಯರು ಮನಸ್ಸಿನೊಳಗೇ ಮರುಗುವ ಮತ್ತು ಆಕ್ರೋಶದ ಬೆಂಕಿಯನ್ನು ಒಳಗೊಳಗೇ ನುಂಗಿಕೊಳ್ಳಲೇಬೇಕಾದ ಪ್ರಮೇಯ ಬಾರದು. ಅದಕ್ಕೇ ಹೇಳಿದ್ದು, ವಿರೋಧ ಪಕ್ಷ ಆಗೋದು ಬೇಡ, ಆಡಳಿತ ಪಕ್ಷಕ್ಕೆ ಸಮದಂಡಿಯಾದ ಪ್ರತಿ-ಆಡಳಿತ ಪಕ್ಷವಾಗಲಿ!

ಇನ್ನೂ ತಿದ್ದಿಕೊಳ್ಳದಿದ್ದರೆ, ದಾಸರು ಹೇಳಿದ್ದಾರಲ್ಲ, “ನಿಂದಕರಿರಬೇಕು, ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ… ಹಾಗೆ”!
[ವೆಬ್‌ದುನಿಯಾದಲ್ಲಿ ಪ್ರಕಟಿತ]

ಇವರ ದುಂದುವೆಚ್ಚದ ‘ಮಿತ’ವ್ಯಯ ಅನಗತ್ಯ!

ಇವೆಲ್ಲ ಬೊಗಳೆ, ಬೂಟಾಟಿಕೆ, ಗಿಮ್ಮಿಕ್ ಅಥವಾ ಆಷಾಢಭೂತಿತನ. ಕಳೆದ ಸರಿ ಸುಮಾರು ಒಂಬತ್ತು ತಿಂಗಳಿಂದೀಚೆಗೆ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಎದುರಾದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಆ ಬಳಿಕ ದೇಶದ ಕೆಲವೆಡೆ ಅನಾವೃಷ್ಟಿಯೂ, ಮತ್ತೆ ಕೆಲವೆಡೆ ಅತಿವೃಷ್ಟಿಯೂ ಕಾಣಿಸಿಕೊಂಡು, ದೇಶದ ಬೆನ್ನೆಲುಬಾದ ಅನ್ನದಾತ ರೈತ ಕಂಗಾಲಾಗಿದ್ದಾನೆ. ಒಂದು ಹೊತ್ತಿನ ತುತ್ತು ಉಣ್ಣಲು ಮುಗಿಲು ಮುಟ್ಟಿದ ಅಕ್ಕಿ-ಬೇಳೆ-ತರಕಾರಿ ಬೆಲೆಗಳೇ ಅಡ್ಡಿ. ಇವೆಲ್ಲವುಗಳಿಂದ ಜನ ಜರ್ಝರಿತವಾಗಿರುವಾಗ, ಕೋಟ್ಯಂತರ ರೂಪಾಯಿ ದುಂದುವೆಚ್ಚದ ನಡುವೆ ನೂರಾರು ರೂಪಾಯಿ ಉಳಿಸುವ ಈ ರಾಜಕಾರಣಿಗಳ ‘ಇಕಾನಮಿ ಕ್ಲಾಸ್’ ಪ್ರಯಾಣ ಎಂಬ ಮಹಾನ್ ನಾಟಕ! ಅದಕ್ಕೆ ‘ಆಸ್ಟೆರಿಟಿ ಡ್ರೈವ್’ ಎಂಬೊಂದು ಭಯಂಕರ ಹೆಸರು!

ಜನರಿಗೆ ಹೇಗಾಗಬೇಡ! ವಿಮಾನ ಬಿಟ್ಟು ರೈಲಿನಲ್ಲಿ ಪ್ರಯಾಣಿಸುವುದು ಮಹಾನ್ ತ್ಯಾಗವೋ ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವಿಕವಾಗಿ ಇದು ತ್ಯಾಗವೇ ಅಲ್ಲ. ಜನಸೇವಕರು ಅನ್ನಿಸಿಕೊಳ್ಳುವವರ ಕರ್ತವ್ಯ. ದೇಶದ ಖಜಾನೆಯ ಹಣವನ್ನು ಐಷಾರಾಮದ ಬದಲು ಜನ ಕಲ್ಯಾಣಕ್ಕಾಗಿ ಉಪಯೋಗಿಸುವುದು ರಾಜಕಾರಣಿಗಳ ಬದ್ಧತೆಯ ಸೂಚಕ. ಆದರೆ ಪ್ರತಿ ವರ್ಷವೂ ವೇತನದ ಹೆಸರಲ್ಲಿ, ಭತ್ಯೆಯ ಹೆಸರಲ್ಲಿ ಲಕ್ಷ ಲಕ್ಷ ಆದಾಯ ಹೆಚ್ಚಿಸಿಕೊಳ್ಳುತ್ತಿರುವಾಗ, ನೂರಿನ್ನೂರೋ… ಹೆಚ್ಚೆಂದರೆ ಒಂದೈದು-ಹತ್ತು ಸಾವಿರ ರೂಪಾಯಿಯೋ… ಉಳಿಸುವ ಈ ಯೋಜನೆ ‘ಕಣ್ಣುಕಟ್ಟು’ ಅಷ್ಟೆ.

ಇದನ್ನು ಈ ರೀತಿ ವ್ಯಾಖ್ಯಾನಿಸದೆ ವಿಧಿಯೇ ಇಲ್ಲ. ಯಾಕೆಂದರೆ, ಸರಾಸರಿ ಹತ್ತು ಲಕ್ಷ ಮಂದಿಯನ್ನು ಪ್ರತಿನಿಧಿಸುವ ಸಂಸತ್ ಸದಸ್ಯನೊಬ್ಬ, ತನ್ನ ಕ್ಷೇತ್ರ ಹೇಗಿದೆ ಅಂತ ನೋಡಲು, ಅದರ ಸ್ಥಿತಿ-ಗತಿ ಬಗ್ಗೆ ತಿಳಿದುಕೊಳ್ಳಲು, ತನಗೆ ಓಟು ನೀಡಿ ಶಾಸನಸಭೆಗೆ ಕಳುಹಿಸಿದವರು ಹೇಗಿದ್ದಾರೆ ಎಂದು ತಿಳಿದುಕೊಳ್ಳಲು ಖಾಸಗಿ ವಿಮಾನ, ಖಾಸಗಿ ಹೆಲಿಕಾಪ್ಟರ್ ಬಳಕೆಯೇ ಅನಗತ್ಯ. ಇದೇನಿದ್ದರೂ ಕರ್ತವ್ಯ ನಿಭಾವಣೆಯಷ್ಟೆ.

ಕರ್ನಾಟಕದ ಅದೆಷ್ಟೋ ಹಳ್ಳಿಗಳನ್ನೇ ನೋಡಿ. ಅಲ್ಲಿಗೆ ರಸ್ತೆ ಮೂಲಕ ಹೋಗುವುದೂ ಅಸಾಧ್ಯ. ಇಂಥ ಪರಿಸ್ಥಿತಿಯಲ್ಲಿ ಜನಸೇವಕರು, ಜನ ನಾಯಕರು, ಜನಪ್ರತಿನಿಧಿಗಳು ಹೆಲಿಕಾಪ್ಟರ್ ಬಳಸಲೇಬೇಕೆಂಬ ಅನಿವಾರ್ಯತೆ. ಯಾಕೆಂದರೆ ಆ ರಸ್ತೆಗಳಲ್ಲಿ ಪ್ರಯಾಣಿಸಿದರೆ ಅವರು ಮರುದಿನ ಮತ್ತೊಂದೂರಿಗೆ ಹೋಗಬೇಕಲ್ಲ! ಅಂಥ ಪರಿಸ್ಥಿತಿ ರಸ್ತೆಗಳದು. (ಈಗ ಇಂಥವನ್ನೆಲ್ಲಾ ನೋಡಲು ಹಳ್ಳಿಗಳೇನೂ ಬೇಕಾಗಿಲ್ಲ, ಒಂದು ಬಾರಿ ಬೆಂಗಳೂರು-ಮಂಗಳೂರು ರಸ್ತೆ ಅಥವಾ ಮಂಗಳೂರು-ಉಡುಪಿ ರಸ್ತೆಯಲ್ಲಿ ಓಡಾಡಿದರೂ ಸಾಕು!) ಇದಕ್ಕೆ ಕಾರಣ ತಮ್ಮದೇ ನಿರ್ಲಕ್ಷ್ಯ ಎಂಬ ಭಾವನೆ ಜನಪ್ರತಿನಿಧಿಗಳಿಗೆ ಬಂದರೆ ಸಾಕು. ಅಲ್ಲಿಂದಲೇ ಲೋಕೋದ್ಧಾರ ಪ್ರಕ್ರಿಯೆ ಆರಂಭವಾಗಬಹುದೇನೋ…

ಮಿತವ್ಯಯ ಹೆಸರಲ್ಲಿ ದೇಶದ ಖಜಾನೆಯ ಹಣ ಉಳಿಸಲು ಸಾಕಷ್ಟು ಮಾರ್ಗಗಳಿವೆ. ಅದು ಬಿಟ್ಟು ವಿಮಾನ ಪ್ರಯಾಣ ತ್ಯಾಗ ಮಾಡುವುದು, ಹೆಲಿಕಾಪ್ಟರ್ ಯಾನವನ್ನು ‘ಬಲಿದಾನ’ ಮಾಡುವುದು ಎಂಬಿತ್ಯಾದಿಯೆಲ್ಲ ಶುದ್ಧ ಗಿಮಿಕ್. ನಿಮ್ಮ ಈ ರೀತಿಯ ಗಿಮಿಕ್‌ಗಳು, ಜನಮರುಳು ತಂತ್ರಗಳು ಜನರಿಗೆ ಬೇಕಾಗಿಲ್ಲ. ಮೊದಲು ಏರಿದ ಬೆಲೆಗಳ ಇಳಿಕೆಗೆ ಕ್ರಮ ಕೈಗೊಂಡರೆ ನಾವು ನಿಮ್ಮನ್ನು ಆರಿಸಿ ಕಳುಹಿಸಿದ್ದು ಸಾರ್ಥಕವಾಗುತ್ತದೆ ಎಂಬ ಕೂಗು ಪ್ರತಿಯೊಬ್ಬ ಜನಸಾಮಾನ್ಯನದು.

ನಮ್ಮ ಸಂಸದರು, ಶಾಸಕರು ಬೃಹತ್ ಬಂಗಲೆಯಂತಹ ಸರಕಾರಿ ಮನೆ ಪಡೆಯುತ್ತಾರೆ. ಅದರ ನವೀಕರಣಕ್ಕೆ, ಅದನ್ನು ತಮ್ಮ ಅಭಿರುಚಿಗೆ ಅನುಗುಣವಾಗಿ, ವಾಸ್ತು ಪ್ರಕಾರ, ಅಥವಾ ಬೇರಾವುದೋ ಕಾರಣಕ್ಕೆ ಬದಲಾಯಿಸಲು ಆಗಾಗ್ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ, ಅವರಿಗೆ ಪೆಟ್ರೋಲ್ ಭತ್ಯೆ, ಕಾರು ಚಾಲಕ, ಸಹಾಯಕರು, ದೂರವಾಣಿ, ಪ್ರಯಾಣ ಭತ್ಯೆ, ಊಟ-ವಸತಿ, ಪ್ರದೇಶಾಭಿವೃದ್ಧಿ ನಿಧಿ… ಹೀಗೆ ಅವರಿಗೆ ದೊರೆಯುವ ಭತ್ಯೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಇದರ ಮೇಲೆ ಇಷ್ಟು ಮಾತ್ರ ಎಂದು ಹೇಳಿಕೊಳ್ಳಲು ಒಂದಷ್ಟು ವೇತನ. ಇವೆಲ್ಲ ಸೌಲಭ್ಯ-ಸೌಕರ್ಯಗಳು ಅವರಿಗೆ ದೊರೆಯುವುದು ಜನ ಸಾಮಾನ್ಯರು ತೆರಿಗೆ ನೀಡಿದ ಹಣದಿಂದಾಗಿ ಮತ್ತು ನಾವು ಅವರನ್ನು ಆರಿಸಿ ಕಳುಹಿಸಿದ ಪರಿಣಾಮವಾಗಿ ಎಂಬುದನ್ನು ಅರಿತುಕೊಂಡರೆ ಸಾಕು.

ಸರಿ, ಇಷ್ಟೆಲ್ಲಾ ಸಕಲ ಸವಲತ್ತುಗಳಿದ್ದಾಗ್ಯೂ ಬಡ ಪ್ರಜೆಗಳಿಗೆ ಸಮಾಧಾನ ಎಂಬುದು ದೊರೆಯುತ್ತದೆಯೇ? ಒಂದೊಂದು ಕ್ಷೇತ್ರಕ್ಕೆ ಹೋದಲ್ಲಿ ಒಬ್ಬೊಬ್ಬನದು ಒಂದೊಂದು ಕಥೆ. ಇಲ್ಲಿಯೂ ರಾಜಕೀಯ ಮತ್ತು ಭ್ರಷ್ಟಾಚಾರ.

ಸಂಸತ್ತಿನ ಕಲಾಪಗಳ ಸಂದರ್ಭ ಇಲ್ಲ-ಸಲ್ಲದ ಆರೋಪ-ಪ್ರತ್ಯಾರೋಪಗಳಿಗಾಗಿ ಜಗಳ ಮಾಡಿ ಕಲಾಪ ಮುಂದೂಡಲಾಗುತ್ತದೆ. ಆದರೆ, ಸಂಸದರ ವೇತನ ಏರಿಕೆ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು, ಕೆಲವೇ ನಿಮಿಷಗಳಲ್ಲಿ ಆ ಕುರಿತ ಮಸೂದೆ ಮಂಡನೆಯಾಗುತ್ತದೆ, ಕಾಯಿದೆಯಾಗಿ ಪರಿವರ್ತನೆಯೂ ಆಗುತ್ತದೆ. ಯಾರೂ ಸೊಲ್ಲೆತ್ತುವುದಿಲ್ಲ. ಅಂದರೆ, ಸಂಸತ್ತಿನಲ್ಲಿ ಯಾವುದೇ ಚರ್ಚೆಯಾಗದೆ, ವಾಗ್ವಿವಾದಗಳಿಲ್ಲದೆ ಅಂಗೀಕಾರಗೊಳ್ಳುವ ಮಸೂದೆ ಜನಪ್ರತಿನಿಧಿಗಳ ವೇತನ-ಭತ್ಯೆ ಹೆಚ್ಚಳ ಮಸೂದೆ ಮಾತ್ರ.

ಸಂಸದರ ವೇತನ, ಭತ್ಯೆಯತ್ತ ಒಂದು ಇಣುಕುನೋಟ ಹರಿಸಿದರೆ:
ಮಾಸಿಕ ವೇತನ 12,000, ಕ್ಷೇತ್ರದ ಖರ್ಚುವೆಚ್ಚಕ್ಕೆ ತಿಂಗಳಿಗೆ 10 ಸಾವಿರ, ಕಚೇರಿ/ಸಿಬ್ಬಂದಿ ವೆಚ್ಚ ತಿಂಗಳಿಗೆ 14 ಸಾವಿರ, ಅಧಿವೇಶನ ಸಂದರ್ಭ ದಿನಕ್ಕೆ 500 ರೂ., ಎಲ್ಲಿಗೇ ಆದರೂ ಎಷ್ಟೇ ಬಾರಿ ಪ್ರಥಮ ದರ್ಜೆ ರೈಲ್ವೇ ಪ್ರಯಾಣ ಉಚಿತ,
ಬಿಸಿನೆಸ್ ಕ್ಲಾಸ್ ವಿಮಾನ ಪ್ರಯಾಣ ವರ್ಷಕ್ಕೆ ಪತ್ನಿ ಅಥವಾ ಸಹಾಯಕನೊಂದಿಗೆ 40 ಟ್ರಿಪ್ ಉಚಿತ, ದೆಹಲಿಯಲ್ಲಿ ಐಷಾರಾಮಿ ಬಂಗಲೆಗೆ ಕೇವಲ 2 ಸಾವಿರ ರೂ. ಮಾಸಿಕ ಬಾಡಿಗೆ, ಆದರೆ ಪೀಠೋಪಕರಣ, ಅವುಗಳ ನಿರ್ವಹಣೆಯೆಲ್ಲವೂ ಸರಕಾರಿ ವೆಚ್ಚದಲ್ಲಿ. ಮನೆಯ ವಿದ್ಯುತ್ ವೆಚ್ಚ 50 ಸಾವಿರ ಯುನಿಟ್‌ವರೆಗೆ ಉಚಿತ, 1.70 ಲಕ್ಷ ಸ್ಥಳೀಯ ದೂರವಾಣಿ ಕರೆಗಳು ಉಚಿತ
. ಒಟ್ಟಾರೆಯಾಗಿ ವರ್ಷಕ್ಕೆ ಸುಮಾರು 32 ಲಕ್ಷ, ಅಂದರೆ ತಿಂಗಳಿಗೆ ಅಂದಾಜು ಎರಡೂವರೆ ಲಕ್ಷ ರೂಪಾಯಿ ಪ್ರತೀ ಸಂಸದನ ಖರ್ಚು ವೆಚ್ಚ. ಇದರ ಜೊತೆಗೆ ತನ್ನ ಕ್ಷೇತ್ರದ ಉದ್ಧಾರಕ್ಕಾಗಿ, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ವಾರ್ಷಿಕ 2 ಕೋಟಿ ರೂ. ಪ್ರತ್ಯೇಕ (ಇದು ಸಂಬಂಧಿತ ಯೋಜನೆಗಳಿಗೆ ನೇರವಾಗಿ ಜಮೆಯಾಗುತ್ತದೆ).

ಇವೆಲ್ಲವೂ ಯಾಕಾಗಿ? ಜನರಿಗೆ ಸಹಾಯವಾಗಲು, ಜನರ ಉದ್ಧಾರವಾಗಲು, ದೇಶದ ಉದ್ಧಾರವಾಗಲು. ಹೀಗಾಗುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ನಿಮ್ಮ ನಿಮ್ಮ ಊರಿನ ಸ್ಥಿತಿ-ಗತಿ ನೋಡಿದರೆ ತಿಳಿಯಬಹುದು! ಮತ್ತೆ, ಇಷ್ಟೆಲ್ಲ ಸಕಲ ಸೌಲಭ್ಯಗಳು ಸಿಗೋದಿಕ್ಕೆ ಯಾವುದೇ ಅರ್ಹತೆಗಳು ಬೇಕಿಲ್ಲ ಎಂಬುದನ್ನೂ ನಾವು ಗಮನಿಸಬೇಕು. ಚುನಾವಣೆಯಲ್ಲಿ ಗೆಲ್ಲುವುದೊಂದೇ ಅರ್ಹತೆ. ಕಷ್ಟಪಟ್ಟು ಓದಿ, ಲಕ್ಷಗಟ್ಟಲೆ ಡೊನೇಶನ್ ಹೆಸರಿನ ಸುಲಿಗೆ ಶುಲ್ಕ ನೀಡಿ ಪದವಿ ಪಡೆದರೂ, ಸಾಕಷ್ಟು ಪ್ರತಿಭೆ ಇದ್ದರೂ ಇಂತಹ ಒಂದು ‘ಉದ್ಯೋಗ’ ದೊರೆಯುವುದು ಸಾಧ್ಯವೇ?

ಲಭ್ಯ ಮಾಹಿತಿ ಪ್ರಕಾರ, ರಾಷ್ಟ್ರಪತಿಯ ವೇತನ ವರ್ಷಕ್ಕೆ 12 ಲಕ್ಷ ಆದರೂ, ಮನೆಯ ನಿರ್ಹಹಣೆಗೆ ವಾರ್ಷಿಕ 7 ಕೋಟಿ, ಉದ್ಯಾನಕ್ಕೆ ವಾರ್ಷಿಕ 2 ಕೋಟಿ, ಕಚೇರಿ ಸಿಬ್ಬಂದಿ ವೇತನಕ್ಕೆ ವಾರ್ಷಿಕ 6 ಕೋಟಿ, ಲಾಂಡ್ರಿ ಕೆಲಸಕ್ಕೆ ತಿಂಗಳಿಗೆ 18 ಲಕ್ಷ, ಊಟ-ಉಪಚಾರಕ್ಕಾಗಿ ವಾರ್ಷಿಕ 64 ಲಕ್ಷ ಮತ್ತು ಹೈದರಾಬಾದ್ ಮತ್ತು ಸಿಮ್ಲಾಗಳಲ್ಲಿರುವ ರಾಷ್ಟ್ರಪತಿ ನಿವಾಸಗಳ ನಿರ್ವಹಣೆಗೆ ವಾರ್ಷಿಕ 1.5 ಕೋಟಿ ಸರಕಾರದಿಂದ ನೀಡಲಾಗುತ್ತದೆ.

ಈ ರೀತಿ ರಾಷ್ಟ್ರಪತಿ, ರಾಜ್ಯಪಾಲರು, ಸಂಸದರು, ಸಚಿವರು, ಶಾಸಕರು ಇವರೆಲ್ಲರ ವೇತನಗಳತ್ತ ಗಮನ ಹರಿಸಿದರೆ ಕಣ್ಣು ಕುಕ್ಕುವುದು ಸಹಜವೇ. ಹೌದು. ರಾಜಕೀಯ ಎಂಬುದು ಅಥವಾ ಜನಸೇವೆಯೆಂಬುದು ಯಥಾರ್ಥಕ್ಕೆ ಬೆಳಗ್ಗೆ 10ರಿಂದ ಸಂಜೆ 6ರವರೆಗಿನ ಉದ್ಯೋಗವಲ್ಲ. ಇದು 24×7 ಕೆಲಸ. ನಮ್ಮನ್ನು ಪ್ರತಿನಿಧಿಸುವವರಿಗೆ ದೇಶವನ್ನು ಕಟ್ಟುವ, ಉತ್ತಮ ಚಿಂತನೆಯ ಮೂಲಕ ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಹೊಣೆಗಾರಿಕೆ ಇದೆ. ಇದಕ್ಕಾಗಿ, ಅವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರೆ ಅವರಿಗೆ ಈ ಮಟ್ಟದ ಸೌಲಭ್ಯಗಳು ನೀಡಬೇಕಾದದ್ದು ಸಕಾರಣವೂ, ಸಮ್ಮತವೂ ಹೌದು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದಾರೆ? ಆರಿಸಿಹೋದವರೆಲ್ಲರೂ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇ ಆಗಿದ್ದರೆ, ದೇಶದ ಜನತೆ ಇಂತಹ ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಿತ್ತೇ? ಎಂದೊಮ್ಮೆ ಯೋಚಿಸಿ ನೋಡಿ.

ಇವರೆಲ್ಲ ದೇಶದ ಜನರ ರಕ್ತ, ಬೆವರು ಬಸಿದು ಬಂದ ಹಣವನ್ನು ವ್ಯಯ ಮಾಡುತ್ತಿರುವುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇವರು ಜನಸೇವಕರೇ ಹೊರತು, ಜನರ ಒಡೆಯರು ಅಲ್ಲ. ವಸ್ತು ಸ್ಥಿತಿ ಹೀಗಿರುವಾಗ, ಅವರು ಪಡೆಯುವ ವೇತನ, ಭತ್ಯೆ ಇತ್ಯಾದಿಗೆ ಹೋಲಿಸಿದರೆ ಪುಡಿಗಾಸು ಎಂದಷ್ಟೇ ಹೇಳಿಕೊಳ್ಳಬಹುದಾದ ವಿಮಾನ ಪ್ರಯಾಣದಲ್ಲಿ ಎಕಾನಮಿ ದರ್ಜೆಯಲ್ಲಿ ಪ್ರಯಾಣ ಮಾಡುತ್ತೇವೆ ಅಥವಾ ಮಾಡಬೇಕು ಎಂಬ ಹೇಳಿಕೆಗಳೆಲ್ಲ ಬರೇ ಬೂಟಾಟಿಕೆಯವು ಅಂತಲೇ ಪರಿಗಣಿಸಬೇಕಾಗುತ್ತದೆ.

ಇವರಿಗೆ ನಿಜಕ್ಕೂ ದೇಶ ಸೇವೆಯ ಬಗ್ಗೆ ಕಾಳಜಿ ಇದ್ದರೆ, ತಮ್ಮನ್ನು ಈ ಸ್ಥಾನಕ್ಕೆ ಏರಿಸಿ, ಆರಿಸಿ ಕಳುಹಿಸಿದ ಜನರು ಪಡಬಾರದ ಪಾಡು ಪಡುತ್ತಿರುವ ಬಗ್ಗೆ ಸ್ವಲ್ಪವಾದರೂ ಕನಿಕರ ಎಂಬುದು ಇದ್ದಿದ್ದರೆ, ಎಲ್ಲರೂ ಕೂಡ ದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕೈಗೊಂಡ ಸಣ್ಣ ಕ್ರಮವನ್ನು ಮತ್ತಷ್ಟು ಮುಂದುವರಿಸಿ ದೇಶದ ಬರ ಪೀಡಿತರಿಗೆ ನೆರವಾಗುವತ್ತ ಯೋಚಿಸಬಹುದು.

ತಮ್ಮೆಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಕನಿಷ್ಠಪಕ್ಷ ಮುಂದಿನ ಒಂದು ವರ್ಷದವರೆಗೆ ಸ್ವಯಂಸ್ಫೂರ್ತಿಯಿಂದ ಶೇ.20ರಷ್ಟು ವೇತನವನ್ನು ಕಡಿಮೆ ಪಡೆಯುವಂತೆ ಶೀಲಾ ದೀಕ್ಷಿತ್ ಸೂಚಿಸಿದ್ದಾರೆ. ಶಾಸಕರು, ಸಂಸದರ ಸುತ್ತಮುತ್ತ ನಡೆಯುವ ಕೋಟ್ಯಂತರ ರೂಪಾಯಿಯ ಭ್ರಷ್ಟಾಚಾರಕ್ಕೆ ಹೋಲಿಸಿದರೆ ಶೇ.20 ವೇತನ ಯಾವ ಲೆಕ್ಕಕ್ಕೂ ಇಲ್ಲ ಎಂಬುದು ಒತ್ತಟ್ಟಿಗಿರಲಿ. ಇಂಥದ್ದೊಂದು ಕ್ರಮವಿದೆಯಲ್ಲ, ಅದು ಮತ್ತಷ್ಟು ಪೂರಕ ಕ್ರಮಗಳಿಗೆ ನಾಂದಿಯಾಗಬೇಕು.

ಅದೆಷ್ಟೋ ದಶಕಗಳಲ್ಲಿ ಇಲ್ಲದೇಹೋದ, ಮನಬಂದಂತೆ ಶಾಸಕರು/ಸಂಸದರು/ಸಚಿವರ ವೇತನ ಹೆಚ್ಚಿಸುತ್ತಲೇ ಇದ್ದಾಗ ಒಂದಿಷ್ಟೂ ಸುಳಿವಿಲ್ಲದ ಈ ‘ಮಿತವ್ಯಯ’ ಎಂಬ ವೇದ ಮಂತ್ರ ಇದುವರೆಗೆ ಎಲ್ಲಿ ಹೋಗಿತ್ತು? ಈಗ ದಿಢೀರ್ ಆಗಿ ಈ ಮಂತ್ರ ಪಠಿಸುವುದೇತಕ್ಕೆ? ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಆಕ್ರೋಶದ ಬೆಂಕಿಯನ್ನು ಶಮನಗೊಳಿಸುವುದಕ್ಕಾಗಿಯೇ? ಮೊದಲು ಈ ಪ್ರಯಾಣದ ಐಷಾರಾಮ ತ್ಯಾಗದ ಬದಲು, ಉಳಿದ ಐಷಾರಾಮಗಳ ತ್ಯಾಗ ಆಗಬೇಕಿದೆ, ಭ್ರಷ್ಟಾಚಾರ ನಿಲ್ಲಬೇಕಿದೆ, ಬೆಲೆ ಏರಿಕೆ ತಡೆಯಬೇಕಿದೆ ಮತ್ತು ಜನಪ್ರತಿನಿಧಿಗಳಿಗೆ ದೇಶದ ಹಣದಲ್ಲಿ ಐಷಾರಾಮ, ದುಂದುವೆಚ್ಚಕ್ಕೆ ಅವಕಾಶವಿಲ್ಲ ಎಂಬ ಕುರಿತ ಕಾನೂನು ಜಾರಿಯಾಗಬೇಕಿದೆ. ಹಾಗಿದ್ದರೆ ಜನ ಒಪ್ಪುತ್ತಾರೆ.

ನೀವೇನಂತೀರಿ?
[ವೆಬ್‌ದುನಿಯಾದಲ್ಲಿ ಪ್ರಕಟಿತ]

ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ!

20 ಶತಮಾನಗಳಷ್ಟು ಹಿಂದೆಯೇ ಸಮಾನತೆ, ಸೌಹಾರ್ದತೆ ಬೋಧಿಸಿದ ತಮಿಳು ಸಂತ ಕವಿ ತಿರುವಳ್ಳುವರ್ ಮತ್ತು 16ನೇ ಶತಮಾನದಲ್ಲಿ ಇದೇ ಮೌಲ್ಯಗಳ ಬೋಧನೆ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿಬಿಟ್ಟಿರುವ ಸರ್ವಜ್ಞ ಕವಿಯ ಪ್ರತಿಮೆಗಳು ಕಾವೇರಿ ಸೇರಿದಂತೆ ಹಲವಾರು ವಿವಾದಗಳ ಸುಳಿಯಲ್ಲಿ ಕಚ್ಚಾಡುತ್ತಿರುವ ಕನ್ನಡಿಗ ಮತ್ತು ತಮಿಳರನ್ನು ಕೂಡಿಸಿ ಒಲಿಸಲಿ ಎಂಬ ಹಾರೈಕೆಯೊಂದಿಗೆ, ಚೆನ್ನೈಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕಿಂತಲೂ ಸುಂದರವಾಗಿಸುವುದೀಗ ಕನ್ನಡಿಗರಿಗೆ ದೊರೆತಿರುವ ಅವಕಾಶ. ಇದಕ್ಕಾಗಿ ಹೆಮ್ಮೆ ಪಡೋಣ. ಬೆಂಗಳೂರಲ್ಲಿ ತಿರುವಳ್ಳುವರ್ ಸ್ಥಾಪನೆಯಾಗಿದೆ, ಇನ್ನುಳಿದಿರುವುದು ಚೆನ್ನೈಯಲ್ಲಿ ಸರ್ವಜ್ಞನನ್ನು ಸಾಂಗೋಪಾಂಗವಾಗಿ ಪ್ರತಿಷ್ಠಾಪಿಸುವುದು. ರಾಜಕೀಯವನ್ನು ಒಂದು ಕ್ಷಣ ಮರೆತು, ಈ ಐತಿಹಾಸಿಕ ಹೆಮ್ಮೆಯ, ಗೌರವದ, ಅಭಿಮಾನದ ಕ್ಷಣಗಳನ್ನು ಯಶಸ್ವಿಯಾಗಿಸಲು ಸಕಲರೂ ಪ್ರಯತ್ನಿಸಬೇಕಾಗಿದೆ.

ನಮ್ಮಲ್ಲಿಲ್ಲದ್ದು ಅಲ್ಲಿ:
ಕನ್ನಡದ ಮನಸ್ಸುಗಳು ಹೆಮ್ಮೆ ಪಡುವ ಐತಿಹಾಸಿಕ ಕ್ಷಣಕ್ಕೆ ವೇದಿಕೆಯೊಂದು ತಮಿಳುನಾಡಿನಲ್ಲಿ ಸಿದ್ಧವಾಗುತ್ತಿರುವುದು ವಿಶೇಷ ಮತ್ತು ಹೆಗ್ಗಳಿಕೆಯೂ ಹೌದು. ತಮಿಳುನಾಡಿನಲ್ಲಿ ಅಲ್ಲಲ್ಲಿ ಮಹಾನ್ ಕವಿ ತಿರುವಳ್ಳುವರ್ ಪ್ರತಿಮೆಗಳಿವೆ (ಅದಕ್ಕಾಗಿಯೇ ಸ್ಥಾಪನೆಯಾಗಿರುವ ವಳ್ಳುವರ್ ಕೊಟ್ಟಂ ಎಂಬುದು ಚೆನ್ನೈಯ ಕೇಂದ್ರಸ್ಥಾನದಲ್ಲಿದೆ), ಅಂಥದ್ದೇ ಒಂದು ಪ್ರತಿಮೆಯು ಬೆಂಗಳೂರಿನಲ್ಲೂ ಸ್ಥಾಪನೆಯಾಯಿತು ಎಂದಷ್ಟೇ ಭಾವಿಸಿಕೊಳ್ಳಬಹುದಾದರೆ, ಕನ್ನಡಿಗರು ಈ ತಮಿಳರಿಗಿಂತಲೂ ಹೆಚ್ಚು ಹೆಮ್ಮೆ ಪಡುವ ಸಂಭ್ರಮಕ್ಕೊಂದು ಕಾರಣವಿದೆ. ಬೆಂಗಳೂರಲ್ಲಿಯೂ ಇಲ್ಲದ, ಕಳೆದ ಏಳು ವರ್ಷಗಳಿಂದ ಕನ್ನಡ ಭವನದ ನೆಲಮಾಳಿಗೆಯಲ್ಲಿ ಧೂಳಿನಲ್ಲಿ ಮುಳುಗಿ ಮಲಗಿದ್ದ ಸರ್ವಜ್ಞ ಪ್ರತಿಮೆಯು ತಮಿಳರ ರಾಜಧಾನಿಯಲ್ಲಿ ನೆಲೆಗೊಳ್ಳುತ್ತಿಲ್ಲವೇ? ಅದು ಕೂಡ ಮೂರ್ತಿ ಪೂಜೆಯನ್ನು ವಿರೋಧಿಸುತ್ತಲೇ ರಾಜಕೀಯ ಮಾಡುತ್ತಿರುವ ದ್ರಾವಿಡ ಪಕ್ಷಗಳ ತವರೂರಲ್ಲಿ! ಅದಕ್ಕಾಗಿಯೇ ಚೆನ್ನೈ ಕನ್ನಡಿಗರು ಎಲ್ಲ ನೋವುಗಳನ್ನು ನುಂಗಿ ಸಂಭ್ರಮಿಸುತ್ತಿದ್ದಾರೆ.

ಹೌದು. ಸರ್ವಜ್ಞನಿಗೆ ಅಯನಾವರಂ ಜಾಗ ಪ್ರಶಸ್ತವಲ್ಲ ಮತ್ತು ಚೆನ್ನೈ ಕನ್ನಡಿಗರಿಗೆ ತಮ್ಮ ಕನ್ನಡ ಘನತೆ ಎತ್ತಿ ಹಿಡಿದು ತೋರಿಸುವ ಅವಕಾಶವೊಂದನ್ನು ನೀಡಲಾಗಿಲ್ಲ ಎಂಬ ಕೊರಗು ಬಿಟ್ಟರೆ, ಚೆನ್ನೈ ಕನ್ನಡಿಗ ಹೆಮ್ಮೆಯಿಂದಿದ್ದಾನೆ. ಎದೆಯುಬ್ಬಿಸಿ ನಡೆಯುತ್ತಿದ್ದಾನೆ. ಮೇಲೆ ಹೇಳಿದ ಕಾರಣಕ್ಕೆ ಕನ್ನಡದ ರಾಜಧಾನಿಗಿಂತಲೂ ಹೆಚ್ಚು ಹೆಮ್ಮೆ ಪಡಬೇಕಾದವರು ನಾವು ಎಂದುಕೊಳ್ಳುತ್ತಿದ್ದಾನೆ. ಎಷ್ಟೇ ತಕರಾರು ಇದ್ದರೂ, ಈಗ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಇದೆ, ಆ ಕಾರಣಕ್ಕಾಗಿಯಾದರೂ ಚೆನ್ನೈಯಲ್ಲಿ ಸರ್ವಜ್ಞ ಇರಬೇಕು ಎಂಬ ಧೋರಣೆಯೂ ಜೊತೆಗಿದೆ.

ಕಾವೇರಿ ನೀರಿಗಾಗಿ ದಶಕಗಳ ಕಾಲದಿಂದ ಬಡಿದಾಡಿಕೊಳ್ಳುತ್ತಿದ್ದ ಉಭಯ ರಾಜ್ಯಗಳ ನಡುವೆ ಈ ಪ್ರತಿಮೆ ಸ್ಥಾಪನೆಯಿಂದ ಸೌಹಾರ್ದತೆಯ ಹೊಸ ಮಿಂಚು ಹರಿಯುತ್ತದೆ ಎಂದು ಸರಕಾರವು ಹೇಳುತ್ತಿದೆ ಎಂದಾದರೆ ಯಾರಿಗೆ ಬೇಡ? ಹಾಗಂತ, ತಿರುವಳ್ಳುವರ್ ಪ್ರತಿಮೆಗೆ ಬೆಂಗಳೂರಿನಲ್ಲಿ ವಿರೋಧ ಎದುರಾಗಿ ದೊಡ್ಡ ರಂಪಾಟವೇ ಆಗಿತ್ತು. ಆದರೆ ಚೆನ್ನೈಯಲ್ಲಿ? ತಮಿಳರ‌್ಯಾರೂ ಸರ್ವಜ್ಞ ಪ್ರತಿಮೆಯನ್ನು ವಿರೋಧಿಸಿಲ್ಲ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಮತ್ತು ಸ್ವತಃ ಕರುಣಾನಿಧಿಯೇ ಈ ಕುರಿತು ನೀಡಿರುವ ಭರವಸೆಯ ಮಾತುಗಳನ್ನೂ ಸದ್ಯಕ್ಕೆ ನಂಬಿಕೊಳ್ಳಬೇಕು.

ವಿಶಾಲ ಸ್ಥಳಕ್ಕೆ ಕಾರ್ಯಕ್ರಮ ವರ್ಗಾವಣೆ:

ಅಷ್ಟು ಮಾತ್ರವೇ ಅಲ್ಲ. ಬೆಂಗಳೂರಿಗೆ ಭೇಟಿ ನೀಡಿದಾಗ ಕನ್ನಡಿಗರು, ಕರ್ನಾಟಕ ಸರಕಾರ ತೋರಿದ ಆದರಾಭಿಮಾನಕ್ಕೆ ತಮಿಳುನಾಡು ಮುಖ್ಯಮಂತ್ರಿಯ ಮನಸ್ಸು ಕರಗಿದಂತೆ ತೋರುತ್ತಿದೆ. ಬೆಂಗಳೂರಿನಲ್ಲಿ ಕನ್ನಡಿಗರು ತೋರಿದ ಹೃದಯ ವೈಶಾಲ್ಯದಿಂದ ಅವರ ಮನಸ್ಸಿನಲ್ಲಿ ಬಹುಶಃ ತಪ್ಪಿತಸ್ಥ ಭಾವನೆ ಮೂಡಿರಬೇಕೇನೋ… ಅದಕ್ಕೇ ಚೆನ್ನೈಗೆ ಮರಳಿದ ತಕ್ಷಣ, ಸರ್ವಜ್ಞ ಪ್ರತಿಮೆ ಇರುವ ಜಾಗಕ್ಕೆ ಹೋಗಿ, ಇಲ್ಲಿ ಸಭಾ ಕಾರ್ಯಕ್ರಮ ನಡೆಸಲು ಜಾಗ ಸಾಲದು ಎಂದು ಅರಿತುಕೊಂಡಿದ್ದಾರೆ. ಇದಕ್ಕಾಗಿ ಜೀವಾ ಉದ್ಯಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಮತ್ತು ಸಾಕಷ್ಟು ವಿಶಾಲವಾದ ಐಸಿಎಫ್ ಮೈದಾನ (ಆರ್‌ಪಿಎಫ್ ಪೆರೇಡ್ ಮೈದಾನ)ದಲ್ಲಿ ಸಭಾ ಕಾರ್ಯಕ್ರಮಕ್ಕೆ ಏರ್ಪಾಡು ಮಾಡುವಂತೆ ತಕ್ಷಣವೇ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಸರ್ವಜ್ಞ ಪ್ರತಿಮೆಗೆ ಅಯನಾವರಂ ಯಾಕೆ ಪ್ರಶಸ್ತ ಅಲ್ಲ ಎಂದು ವೆಬ್‌ದುನಿಯಾ ಈ ಹಿಂದೆಯೇ ವಿಶ್ಲೇಷಿಸಿತ್ತು. ಇಕ್ಕಟ್ಟಾದ ಓಣಿಗಳ ನಡುವೆ ಬರುವ ಜನಸಂದೋಹ ನಿಯಂತ್ರಿಸುವುದು ಕೂಡ ಕಷ್ಟ ಎಂಬುದು ಕರುಣಾನಿಧಿಗೂ ಅರಿವಾಗಿದೆಯೆಂಬಂತೆ ತೋರುತ್ತಿದೆ. ಇದಕ್ಕಾಗಿ, ಅಗಲವಾದ ರಸ್ತೆಗಳಿಂದ ಆವೃತವಾಗಿರುವ ಪ್ರದೇಶವನ್ನು ಕರ್ನಾಟಕದಿಂದ ಬರುವ ಕನ್ನಡಿಗರೆದುರು ತಮ್ಮ ಹೃದಯವೈಶಾಲ್ಯವನ್ನು ಪ್ರಕಟಿಸಲು ಆಯ್ದುಕೊಂಡಿದ್ದಾರೆ ಕರುಣಾನಿಧಿ. ಅತ್ಯುತ್ತಮ ಕಾರ್ಯಕ್ರಮ ಎಂದು ಕನ್ನಡಿಗರು ಶ್ಲಾಘಿಸುವಂತಾಗಬೇಕು, ಆ ಮೂಲಕ ಜೀವಾ ಉದ್ಯಾನ ಪ್ರಶಸ್ತವಲ್ಲ ಎಂಬ ಕೊರಗನ್ನು ನಿವಾರಿಸಬೇಕೆಂಬ ಉದ್ದೇಶದಲ್ಲಿ ವಿಶಾಲವಾದ ಪೆಂಡಾಲ್ ಒಂದು ಐಸಿಎಫ್ ಮೈದಾನದಲ್ಲಿ ಸಿದ್ಧವಾಗುತ್ತಿದೆ.

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬಂದಷ್ಟೇ ಜನಸಾಗರವು ಈ ಅಯನಾವರಂ ಉದ್ಯಾನ ಪ್ರದೇಶದ ಪುಟ್ಟ ಜಾಗದಲ್ಲಿ ಸೇರುವುದು ಖಂಡಿತಾ ಸಾಧ್ಯವಿರಲಿಲ್ಲ ಮತ್ತು ನಮ್ಮ ತವರೂರಾಗಿರುವ ಕರ್ನಾಟಕದಿಂದ ಬರುವ ಕನ್ನಡಿಗರು, ತಮಿಳುನಾಡಿನ ಕನ್ನಡಿಗರನ್ನು ಸೇರಿಕೊಂಡು ಆ ಪ್ರದೇಶವನ್ನೇ ತುಂಬಿ ತುಳುಕುವಂತೆ ಮಾಡಬಲ್ಲರೇ ಎಂಬ ನಿರೀಕ್ಷೆಯೂ ಅವರದ್ದಿರಬಹುದು. ಹೀಗಾಗಿ ವಿಶಾಲ ಮೈದಾನದ ವ್ಯವಸ್ಥೆಯಾಗಿದೆ.

ಜೀವ ತಳೆದ ಜೀವಾ ಪಾರ್ಕ್:
ಕನಿಷ್ಠಪಕ್ಷ ಸರ್ವಜ್ಞನ ಹೆಸರಿನಲ್ಲಾದರೂ ಜೀವಾ ಪಾರ್ಕ್‌ಗೆ ಮರು ಜೀವ ಬಂದಿದೆ. ಕರ್ನಾಟಕದಿಂದ ಬರುವ ಕನ್ನಡಿಗರ ಮನ ತಣಿಸಲೆಂದು ಉದ್ಯಾನವು ಕೂಡ ಇನ್ನಿಲ್ಲದಂತೆ ಸಿಂಗಾರಗೊಳ್ಳುತ್ತಿದೆ. ಆ.11ರ ಮಂಗಳವಾರ ಅಲ್ಲಿಗೆ ಬೆಳಿಗ್ಗೆ ಭೇಟಿ ನೀಡಿದಾಗ ದೊರೆತ ಚಿತ್ರಾವಳಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ವಾಕಿಂಗ್ ಪಾತ್, ಹಚ್ಚಹಸುರಿನ ಹುಲ್ಲು ಹಾಸು, ದೀಪಾಲಂಕಾರ, ಕಬ್ಬಿಣದ ಫೆನ್ಸಿಂಗ್ ಇತ್ಯಾದಿ ಕಾರ್ಯಗಳು ಭರದಿಂದ ಸಾಗುತ್ತಿರುವುದನ್ನು ಕಾಣಬಹುದು.

ತಿರುವಳ್ಳುವರ್‌ಗೆ ದೊರೆತಂತಹ ಪ್ರೈಮ್ ಲೊಕೇಶನ್‌ನಲ್ಲಿ ನಾವು ಅವಕಾಶ ಕೊಟ್ಟಿಲ್ಲ ಎಂದು ಕೆಲವೇ ಕೆಲವು ತಮಿಳರು ಒಳಗಿಂದೊಳಗೇ ತಾವೇ ಗೆದ್ದೆವೆಂಬ ಹಮ್ಮಿನಿಂದ ಬೀಗಿದರೂ, 18 ವರ್ಷಗಳಿಂದ ಮುಸುಕು ಸರಿಸಲು ಕಾಯುತ್ತಿದ್ದ ತಿರುವಳ್ಳುವರ್ ಬೆಂಗಳೂರಿನಲ್ಲಿ ಕಣ್ಣು ಬಿಟ್ಟ ಕಾರಣದಿಂದಲಾದರೂ, ಏಳೆಂಟು ವರ್ಷಗಳಿಂದ ಮುಕ್ತಿ ಕಾಣದೆ ಬೆಂಗಳೂರಿನ ಕನ್ನಡ ಭವನದ ನೆಲ ಮಾಳಿಗೆಯಲ್ಲಿ ಬಿದ್ದಿದ್ದ ಸರ್ವಜ್ಞನ ಪ್ರತಿಮೆಗೆ ಕೊನೆಗೂ ಮದರಾಸಿನಲ್ಲಿ ನೆಲೆ ಸಿಕ್ಕಿದೆ ಎಂಬ ಸಂತೃಪ್ತಿಯೂ ಕನ್ನಡಿಗರಲ್ಲಿದೆ.

ಕನ್ನಡಿಗರು ಹೆಮ್ಮೆ ಪಡುವ ಕಾರ್ಯಕ್ರಮವಾಗಲಿ:

ರಾಜ್ಯಗಳ ಮಧ್ಯೆ ಇರುವ ವಿವಾದಗಳ ಹೊಗೆಯಲ್ಲಿ ಉಭಯ ಭಾಷಿಗರ ನಡುವಿನ ಸಂಬಂಧವೇಕೆ ಹದಗೆಡಬೇಕು ಎಂಬುದರತ್ತ ಯೋಚಿಸಿದರೆ, ಬೆಂಗಳೂರಿನಲ್ಲಾಗಲೀ, ಚೆನ್ನೈಯಲ್ಲಾಗಲೀ ಕನ್ನಡಿಗರು ಮತ್ತು ತಮಿಳರು ಸೌಹಾರ್ದತೆಯಿಂದಲೇ ಜೀವಿಸುತ್ತಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಹೀಗಾಗಿ, ಇದು ಮನಸ್ಸುಗಳ ನಡುವಣ ದ್ವೇಷವಲ್ಲ, ಇದರ ಹಿಂದೆ ರಾಜಕೀಯದ ಚೆಲ್ಲಾಟವೂ ಇದೆ ಎಂಬುದು ಸಾಮಾನ್ಯ ಕನ್ನಡಿಗನ ಅಭಿಮತ. ಇದೇ ಕಾರಣಕ್ಕೆ, ಕಳೆದ ಲೇಖನಕ್ಕೆ ಕಾಮೆಂಟ್ ಹಾಕಿದ್ದ ವೆಂಕಟೇಶ್ ಹೆಸರಿನ ಕನ್ನಡಿಗರೊಬ್ಬರು, ದಯವಿಟ್ಟು ಚೆನ್ನೈನ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೋಗಿ, ನಮ್ಮ ಕನ್ನಡದ ಪೆರ್ಮೆಯನ್ನು ಎತ್ತಿ ಹಿಡಿಯಿರಿ ಅಂತ ಕೋರಿಕೊಂಡಿದ್ದಾರೆ.

ಅವರು ಹೇಳಿರುವಂತೆ, ನಮ್ಮ ಅನೇಕ ಇಲ್ಲಗಳ ಪಟ್ಟಿ ಮಾಡಿ ನೋಡಿದರೂ, ಅತ್ತ ಬಹುಸಂಖ್ಯೆಯ ತಮಿಳರು ತಮಿಳುನಾಡಿನಿಂದ ಬರುತ್ತಿದ್ದಾರೆ. ನಮ್ಮ ಕನ್ನಡಿಗರು ಯಾರನ್ನೋ ಬೈಯುತ್ತಾ ಕಾಲಹರಣ ಮಾಡುತ್ತಿದ್ದೇವೆ. ಯಾರೂ ಕರೆಯುವ ಅಗತ್ಯವಿಲ್ಲ. ನಮ್ಮ ಕನ್ನಡದ ಕೆಲಸ. ಹೋಗಿ ಭಾಗವಹಿಸಿ. ಮುಖ್ಯಮಂತ್ರಿಗಳನ್ನು ಬೈದರೆ ಏನು ಉಪಯೋಗ? ಆಸಕ್ತಿಯೇ ಇಲ್ಲ ಅನ್ನೋ ನಗೆಪಾಟಲಿಗೆ ಗುರಿಯಾಗೋದನ್ನ ತಪ್ಪಿಸಿರಪ್ಪ. ನಮ್ಮ ದಮ್ಮಯ್ಯ. ಹೋಗಿ ಅಟೆಂಡ್ ಮಾಡಿ ಬನ್ನಿ ಅಂತಲೂ ಕಳಕಳಿಯಿಂದ ಕೇಳಿಕೊಂಡಿದ್ದಾರೆ.

ಮತ್ತೊಬ್ಬರು ನಾಗ್ ಹೆಸರಿನಲ್ಲಿ ಮಾಡಿದ ಕಾಮೆಂಟಿನಲ್ಲಿ, ಮೊದಲು ನಾವು ಕನ್ನಡಿಗರು 2 ಲಕ್ಷ ಮಂದಿ ಚೆನ್ನೈಗೆ ಹೋಗಬೇಕು ಮತ್ತು ನಮ್ಮ ಒಗ್ಗಟ್ಟು ತೋರಿಸಬೇಕು ಎಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಹೆಸರಿನ ಕಾಮೆಂಟಿಗರೊಬ್ಬರಂತೂ, “ಆತ್ಮೀಯ ಅನಿವಾಸಿ ಕನ್ನಡಿಗರೇ, ನಿಮ್ಮ ಕಷ್ಟ ಸುಖಕ್ಕೆ ನಿಮ್ಮ ನೆಲದ ನಿಮ್ಮ ಸಹೋದರರಾದ ನಾವಿದ್ದೇವೆ, ದೇವರು ನಮ್ಮ ಕನ್ನಡಿಗರಿಗೆ ಎಷ್ಟೇ ಕಷ್ಟ ಕೊಟ್ಟರು ತಾಯಿ ಭುವನೇಶ್ವರಿಯ ಆಶೀರ್ವಾದವಿದೆ” ಎಂದು ಸ್ಫೂರ್ತಿ ತುಂಬಿದ್ದಾರೆ.

ಈಗ ಆಗಿದ್ದು ಆಗಿದೆ, ದ್ವೇಷ ಮರೆತು ಹೊಸ ಯುಗಕ್ಕೆ ನಾಂದಿ ಹಾಡೋಣ. ಸರ್ವಜ್ಞ ಪ್ರತಿಮೆ ಅನಾವರಣವಾಯಿತೆಂದಾಕ್ಷಣ ಸೌಹಾರ್ದತೆ ಮೂಡಿತು ಎಂದಾಗುವುದಿಲ್ಲ. ಸರ್ವಜ್ಞನ ವಚನಗಳು ಈಗಾಗಲೇ ತಮಿಳಿಗೆ ಭಾಷಾಂತರವಾಗಿದೆ ಅಂತ ಕರುಣಾನಿಧಿ ಹೇಳಿದ್ದಾರೆ. ಅದು ತಮಿಳುನಾಡಿನ “ಐದನೇ ತರಗತಿವರೆಗೆ ಕಡ್ಡಾಯ ತಮಿಳು” ಭಾಷೆಯ ಪಠ್ಯದಲ್ಲಿ ಸೇರಿಕೊಳ್ಳಲಿ, ಆ ಬಳಿಕ ತಿರುವಳ್ಳುವರ್ ಅವರ ದ್ವಿಪದಿಗಳ ಸಂಗ್ರಹ ತಿರುಕ್ಕುರಳ್ ಕನ್ನಡಕ್ಕೆ ಭಾಷಾಂತರವಾಗಿ ಕನ್ನಡಿಗರೂ ಅದರ ಸಾರ-ಸತ್ವವನ್ನು ಅರಿತುಕೊಳ್ಳುವಂತಾಗಲಿ. ಹೀಗೆ ಮುಂದಿನ ಪೀಳಿಗೆಯಲ್ಲಿ ಉಭಯ ರಾಜ್ಯಗಳ ಸೌಹಾರ್ದತೆಗೆ ಪೂರಕ ವೇದಿಕೆಯೊಂದು ಅಡಿಪಾಯವಾಗಲಿ. ಬೈಬಲ್ ಮತ್ತು ಕುರಾನ್ ನಂತರ ಅತೀ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ತಿರುಕ್ಕುರಳ್ ಕೃತಿಯ ಮಹತ್ವ ಏನೆಂಬುದು ಕನ್ನಡಿಗರಿಗೂ ಅರಿವಾಗಲಿ.

ಆ ಮೇಲೆ ಇದ್ದೇ ಇದೆ ಹೋರಾಟ:
ಕರ್ನಾಟಕಕ್ಕೆ ಸಿಗಬಹುದಾದ ನೆರವಿಗೆ ತಮಿಳುನಾಡು ರಾಜಕಾರಣಿಗಳು ಅಡ್ಡಗಾಲು ಹಾಕುವುದು ನಿಂತರೆ ಮತ್ತು ಎಲ್ಲವೂ ತಮಿಳುನಾಡಿಗೇ ಬೇಕು, ಕರ್ನಾಟಕಕ್ಕೆ ಸಿಗಬಾರದು ಅಂತೆಲ್ಲಾ ಮನೋಭಾವದ ಹಿಂದೆಯೂ ಇರುವುದು ರಾಜಕಾರಣಿಗಳೇ. ಇದಕ್ಕೆ ಉಭಯ ರಾಜ್ಯಗಳ ಜನರ ನಡುವಣ ಸ್ನೇಹ-ಸೌಹಾರ್ದತೆ ಬಲಿಯಾಗಬಾರದು. ತಮಿಳು ರಾಜಕಾರಣಿಗಳು, ಅಧಿಕಾರಿಗಳು ಪಟ್ಟು ಹಿಡಿದು, ಕೇಂದ್ರದ ಕುತ್ತಿಗೆ ಪಟ್ಟಿ ಹಿಡಿದು, ತಮ್ಮ ರಾಜ್ಯಕ್ಕೆ ಬೇಕಾದ್ದನ್ನು ಮಾಡಿಸಿಕೊಳ್ಳುತ್ತಾರೆ. ಅದೇ ರೀತಿ ಕರ್ನಾಟಕಕ್ಕೂ ಸಕಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕಿರುವುದು ಕರ್ನಾಟಕ ರಾಜಕಾರಣಿಗಳು. ನಮಗೇನಾದರೂ ಅನ್ಯಾಯವಾಗಿದೆ ಎಂದಾದರೆ ಅದು ತಮಿಳು ರಾಜಕಾರಣಿಗಳಿಂದ ಮತ್ತು ಸುಮ್ಮನಿರುವ ನಮ್ಮ ಜನಪ್ರತಿನಿಧಿಗಳಿಂದಲೇ ಹೊರತು ಸಾಮಾನ್ಯ ತಮಿಳರಿಂದ ಅಲ್ಲ ಎಂಬುದನ್ನೂ ಗಮನಿಸಬೇಕು.

ಪ್ರತಿ ಬಾರಿಯೂ ಕಾವೇರಿ ವಿಷಯವು ಕಾವೇರಿದಾಗ ಮೊದಲು ಗುರಿಯಾಗುವುದು ಎರಡೂ ರಾಜ್ಯಗಳ ಬಸ್ಸುಗಳು, ಪರಭಾಷಾ ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳು. ಆದರೆ, ಈಗ ಹೊಸದೊಂದು ಸಾಧ್ಯತೆಯು ಸೇರ್ಪಡೆಯಾಗಿದೆ. ಈ ಪ್ರತಿಮೆಯೂ ಜನರ ಭಾವವಿಕಾರಕ್ಕೆ ಗುರಿಯಾಗದಿರಲಿ, ಪ್ರತಿಮೆಗಳ ರಕ್ಷಣೆಗಳ ಬಗ್ಗೆ ಉಭಯ ರಾಜ್ಯಗಳೂ ಬದ್ಧತೆಯಿಂದ ಕ್ರಮ ಕೈಗೊಳ್ಳಲಿ ಎಂದು ಹಾರೈಸೋಣ.

ಅದೆಲ್ಲ ಆದ ಬಳಿಕ, ನಮ್ಮ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಕಾವೇರಿ ವಿವಾದವಾಗಲೀ, ಹೊಗೇನಕಲ್ ವಿವಾದವಾಗಲೀ ಮತ್ತು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆ ಚೆನ್ನೈ ಹೈಕೋರ್ಟಿನಲ್ಲಿ ಹೂಡಿರುವ ದಾವೆಯ ಕುರಿತಾಗಲೀ, ಮಾತುಕತೆ ಮೂಲಕ ಪರಿಹಾರ ಕಂಡುಕೊಂಡು, ತಮ್ಮ ಕನ್ನಡದ ಬಗೆಗಿನ ಕಾಳಜಿಯನ್ನು ದೃಢಪಡಿಸಲಿ.

ಸರ್ವಜ್ಞ ಹೇಳಿದ್ದಾನಲ್ಲ….:

ಮಾತಿಂಗೆ ಮಾತುಗಳು | ಓತು ಸಾಸಿರವುಂಟು |
ಮಾತಾಡಿದಂತೆ ನಡೆದಾತ ಜಗವನ್ನು
ಕೂತಲ್ಲಿ ಆಳ್ವ | ಸರ್ವಜ್ಞ

ಇದರ ಅನುಸಾರ, ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕರುಣಾನಿಧಿ ಅವರು ಉಭಯ ರಾಜ್ಯಗಳ ನಡುವೆ ಕುದಿಯುತ್ತಿರುವ ವಿವಾದವನ್ನು ಮಾತಿನ ಮೂಲವೇ ನ್ಯಾಯಯುತವಾಗಿ ಶಮನಗೊಳಿಸಬಹುದು ಎಂಬ ಮಾತು ಕೊಟ್ಟಿದ್ದಾರೆ. ಮಾತು ಉಳಿಸಿಕೊಂಡರೆ ಅವರು ರಾಜ್ಯವನ್ನು ಆಳಬಹುದು.

ಕಾರ್ಯಕ್ರಮ ಮೊದಲು ಯಶಸ್ವಿಯಾಗಲಿ, ಅನ್ಯಾಯದ ವಿರುದ್ಧ ಹೋರಾಟ ಮತ್ತೆ ಮುಂದುವರಿಸೋಣ.

(ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟ)

ಸರ್ವಜ್ಞ ಪ್ರತಿಮೆ: ಈಗಿನ ತಾಜಾ ಚಿತ್ರಗಳು

ಸಂತ ಕವಿ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಚೆನ್ನೈಯ ಅಯನಾವರಂನಲ್ಲಿರುವ ಜೀವಾ ಉದ್ಯಾನವನವು ಸಿಂಗಾರಗೊಳ್ಳುತ್ತಿದ್ದು, ಇಂದು (ಆ.11) ಬೆಳಿಗ್ಗೆ ಆ ಸ್ಥಳಕ್ಕೆ ಹೋಗಿ ತೆಗೆದ ತಾಜಾ ಚಿತ್ರಗಳು ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟವಾಗಿದೆ.

ಅಯನಾವರಂನ ಜೀವಾ ಪಾರ್ಕ್ ಸರ್ವಜ್ಞನಿಗಾಗಿ ಸಿಂಗಾರಗೊಳ್ಳುತ್ತಿದೆ

ಅಯನಾವರಂನ ಜೀವಾ ಪಾರ್ಕ್ ಸರ್ವಜ್ಞನಿಗಾಗಿ ಸಿಂಗಾರಗೊಳ್ಳುತ್ತಿದೆ


ಇದೀಗ ಸಮಾರಂಭದ ಸ್ಥಳವನ್ನು ಬದಲಾಯಿಸಿದ್ದು, ಕಾರ್ಯಕ್ರಮವು ಉದ್ಯಾನವನದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವ ಐಸಿಎಫ್ ಮೈದಾನ ಎಂದೇ ಕರೆಯಲಾಗುವ ಆರ್‌ಪಿಎಫ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ. ವಿಶಾಲವಾದ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.

‘ಸರ್ವಜ್ಞ’ ಅನಾವರಣ ಕಾರ್ಯಕ್ರಮ ಸ್ಥಳ ಬದಲು

ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಚೆನ್ನೈ ಅಯನಾವರಂನ ಜೀವಾ ಉದ್ಯಾನವನ ಪ್ರಶಸ್ತ ಜಾಗವಲ್ಲ, ಅಲ್ಲಿ ಸ್ಥಳಾವಕಾಶ ತೀರಾ ಕಡಿಮೆ ಎಂದು ಈ ಹಿಂದೆಯೇ ಹೇಳಿದ್ದೆ.

ಅದಕ್ಕೆ ಪೂರಕವಾಗಿ, ಸ್ವತಃ ತಮಿಳುನಾಡು ಮುಖ್ಯಮಂತ್ರಿ ಸೋಮವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅರಿತುಕೊಂಡಿದ್ದಾರೆ. ಜ್ಞಾನೋದಯವಾಗಲು ಕಾರಣವೇನು ಗೊತ್ತಾಗಿಲ್ಲ. ಇದೀಗ ಪ್ರತಿಮೆ ಅನಾವರಣ ಕಾರ್ಯಕ್ರಮದ ಸ್ಥಳವನ್ನೇ ಬದಲಾಯಿಸಿದ್ದಾರೆ. ಇದೀಗ ಪಕ್ಕದ ವಿಲ್ಲಿವಾಕ್ಕಂ ಐಸಿಎಫ್ ಮೈದಾನಕ್ಕೆ ಈ ಕಾರ್ಯಕ್ರಮ ಸ್ಥಳಾಂತರವಾಗಿದೆ.

ಆದರೆ ಪ್ರತಿಮೆ ಮಾತ್ರ ಅದೇ ಜಾಗದಲ್ಲಿರುತ್ತದೆ.

ಇದರ ನಡುವೆ, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೆದರಿಕೆಗಳು ಇವೆ ಎಂಬ ಊಹಾಪೋಹಗಳಿರುವ ಹಿನ್ನೆಲೆಯಲ್ಲಿ, ಅವರನ್ನು ಈ ಕುರಿತಾಗಿಯೂ ಪ್ರಶ್ನಿಸಲಾಯಿತು. ಆದರೆ, ಬೆದರಿಕೆ ಕಾರಣದಿಂದಲ್ಲ, ಜಾಗದ ಕೊರತೆಯ ಕಾರಣದಿಂದ ಅಂತಾನೇ ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.

ಅಥವಾ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ವಿಶಾಲ ಜಾಗವನ್ನು ನೋಡಿ ಕರುಣಾನಿಧಿಯ ಮನಸ್ಸು ದಿಢೀರ್ ಆಗಿ ಬದಲಾಗಿರಬಹಬಹುದೇ?

ಲೊಕೇಶನ್ ಬದಲಾಗಿರುವ ಕುರಿತು ವೆಬ್‌ದುನಿಯಾ ವರದಿ ಇಲ್ಲಿದೆ.

ಸರ್ವಜ್ಞ: ನೋವಿನ ನಡುವೆಯೂ ಚೆನ್ನೈ ಕನ್ನಡಿಗರಿಗೆ ನಲಿವು

ಸರ್ವಜ್ಞ ಪ್ರತಿಮೆಯನ್ನು ಚೆನ್ನೈಯಲ್ಲಿ ಪ್ರಶಸ್ತವಲ್ಲದ ಜಾಗದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಓಕೆ, ತೀರ್ಮಾನ ಮಾಡಿಯಾಗಿದೆ. ಆದರೆ, ಚೆನ್ನೈ ಕನ್ನಡಿಗರನ್ನು ಈ ಪರಿ ನಿರ್ಲಕ್ಷಿಸಿದ್ದು ಸರಿಯೇ

ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರಿಗೆ ಅಟ್ಟಣೆ ನಡೆದಿದೆ. ಆದರೆ, ಚೆನ್ನೈಯಲ್ಲಿ? ಅಲ್ಲಿರುವ ಕನ್ನಡಿಗರಿಗೇ ಸರಿಯಾದ ಆಹ್ವಾನವಿಲ್ಲ. ಅರ್ಧ ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದ ಕನ್ನಡ ಸಂಘಗಳನ್ನೆಲ್ಲ ಉಪೇಕ್ಷಿಸಲಾಗಿದೆ.

ಛೆ! ಹೊರ ನಾಡ ಕನ್ನಡಿಗರಿಗೆ ಎಂಥ ದುರಂತ ಸ್ಥಿತಿ?

ಈ ಬಗೆಗೊಂದು ವಿಸ್ತೃತ ಲೇಖನ ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ.